ಸಾಮಾಜಿಕ ಜಾಲತಾಣಗಳ ಅತಿ ಬಳಕೆ ಬೇಡ: ಸಿಎಂ ಬೊಮ್ಮಾಯಿ

By Kannadaprabha NewsFirst Published Jan 19, 2023, 6:02 AM IST
Highlights

ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದುದು. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಬೇಡ. ವಿದ್ಯೆಯ ಜೊತೆಗೆ ಶಾರೀರಿಕ ಸ್ವಾಸ್ಥ್ಯಕ್ಕೂ ಗಮನ ಹರಿಸಿ. ಅಭ್ಯಾಸದ ಸಮಯದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯ ಗೊಡವೆ ಏಕೆ? ಓದನ್ನು ಆನಂದಿಸಿ ಸಾಧಿಸಿ.

ಬೆಂಗಳೂರು (ಜ.19): ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದುದು. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಬೇಡ. ವಿದ್ಯೆಯ ಜೊತೆಗೆ ಶಾರೀರಿಕ ಸ್ವಾಸ್ಥ್ಯಕ್ಕೂ ಗಮನ ಹರಿಸಿ. ಅಭ್ಯಾಸದ ಸಮಯದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯ ಗೊಡವೆ ಏಕೆ? ಓದನ್ನು ಆನಂದಿಸಿ ಸಾಧಿಸಿ... ಜೆಪಿ ನಗರದ ಆರ್‌.ವಿ.ಡೆಂಟಲ್‌ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ‘ಈ ಸಲ ಕ್ವಶ್ಚನ್‌ ನಮ್ದೇ’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ವಿದ್ಯಾರ್ಥಿಗಳಿಗೆ ಹೇಳಿದ ಹಿತನುಡಿಗಳಿವು.

ಈಗಲೂ ನನಗೆ ವಿದ್ಯಾರ್ಥಿ ಆಗಿರಬೇಕು ಎಂದು ಇಷ್ಟ. ವಿದ್ಯಾರ್ಥಿ ಜೀವನದ ನೆನಪುಗಳೇ ಚೆಂದ. ಜೀವನದಲ್ಲಿ ಅತ್ಯಂತ ಖುಷಿ ತಂದಿರುವುದೂ ವಿದ್ಯಾರ್ಥಿ ಜೀವನದ ದಿನಗಳೇ. ಕೊನೆಯ ಬೆಂಚ್‌ನಲ್ಲಿ ಕೂರುವ ವಿದ್ಯಾರ್ಥಿಯ ದಿನಗಳು ಅತ್ಯಂತ ಖುಷಿ ನೀಡಿವೆ. ಈ ದೇಶದ ಸಾಧ್ಯತೆಗಳು, ಅವಕಾಶಗಳು ಬೇರೆಲ್ಲೂ ಇಲ್ಲ. ನಮ್ಮ ಕರ್ತವ್ಯ ಕಾಲವಿದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಲ್ಲರೂ ಸೇರಿ ರಾಜ್ಯ, ದೇಶಕ್ಕೆ ಕೀರ್ತಿ ತರೋಣ ಎಂದು ಕರೆ ನೀಡಿದರು. 

ಗಾರ್ಮೆಂಟ್ಸ್‌ ನೌಕರರ ವೇತನ ಶೇ.14 ಹೆಚ್ಚಳ: 8800ರಿಂದ 13200 ಕನಿಷ್ಠ ವೇತನ ನಿಗದಿ

ಪರಿಪೂರ್ಣ ವ್ಯಕ್ತಿತ್ವದ ಮೋದಿ: ಮೋದಿಯವರ ಜೊತೆ ಯಾರಾದರೂ ಕೆಲ ಸಮಯ ಕಳೆದರೂ ಅವರ ಅಭಿಮಾನಿಯಾಗುತ್ತಾರೆ. ಮೋದಿಯವರಿಗೆ ಹೊಸತನ್ನು ಕಲಿಯುವ ಹಂಬಲವಿದೆ. ಎಲ್ಲವನ್ನೂ ಸಕಾರಾತ್ಮಕವಾಗಿಯೇ ನೋಡುವವರಾಗಿದ್ದು, ಪರಿಪೂರ್ಣ ವ್ಯಕ್ತಿತ್ವ ಹೊಂದಿದ್ದಾರೆ.  ಮೋದಿ ಅವರ ನೇತೃತ್ವದದಲ್ಲಿ ಭಾರತಕ್ಕೆ ಒಂದು ಸ್ಪಷ್ಟಗುರಿ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟರು. ಕ್ರೀಡಾಪಟು ಪಂಕಜ್‌ ಅಡ್ವಾಣಿ, ನಟಿ ಪ್ರಣೀತಾ ಸುಭಾಷ್‌, ಗಾಯಕ ಚಂದನ್‌ ಶೆಟ್ಟಿ, ಉದ್ಯಮಿ ಅಚ್ಯುತ್‌ ಗೌಡ ಮತ್ತಿತರರನ್ನು ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಗೌರವಿಸಿದರು. ಹಲವು ಜಿಲ್ಲೆಯ ವಿದ್ಯಾರ್ಥಿಗಳು ವಚ್ರ್ಯುವಲ್‌ ಆಗಿ ಸಂವಾದದಲ್ಲಿ ಪಾಲ್ಗೊಂಡಿದ್ದರು. ಶಾಸಕ ಸತೀಶ್‌ ರೆಡ್ಡಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಪಿ.ಶ್ಯಾಮ್‌, ಕೂ ಆ್ಯಪ್‌ ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ, ಬಿಜೆಪಿ ಯುವ ಮೋರ್ಚಾದ ಡಾ.ಸಂದೀಪ್‌, ಅನಿಲ್‌ ಶೆಟ್ಟಿಮತ್ತಿತರರು ಉಪಸ್ಥಿತರಿದ್ದರು.

ಕಲಿಕೆಗೆ ಸಹಕಾರಿಯಾಗಲು ನೂತನ ತಂತ್ರಾಂಶ: ಬೋರ್ಡ್‌ ಪರೀಕ್ಷೆಗಳನ್ನು ಮತ್ತಷ್ಟು ಡಿಜಿಟಲೀಕರಿಸಬೇಕು ಎಂದು ವಿದ್ಯಾರ್ಥಿನಿಯೊಬ್ಬರು ಮನವಿ ಮಾಡಿದಾಗ, ಇದಕ್ಕೆ ಉತ್ತರಿಸಿದ ಬಸವರಾಜ ಬೊಮ್ಮಾಯಿ. ‘ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಇನ್ನೂ ಡಿಜಿಟಲೀಕರಣ ಸರಿಯಾಗಿ ತಲುಪಿಲ್ಲ. ಇದಕ್ಕೆ ಇನ್ನೂ ಸಮಯ ಬೇಕು. ಮುಂದಿನ ದಿನಗಳಲ್ಲಿ ಡಿಜಿಟಲ್‌ ಶಿಕ್ಷಣ ಹೆಚ್ಚಾಗಲಿದೆ. ಸರ್ಕಾರದಿಂದಲೇ ಶಿಕ್ಷಣಕ್ಕೆ ಸಹಕಾರಿಯಾಗಿ ಬೈಜೂಸ್‌ ಮಾದರಿಯ ತಂತ್ರಾಂಶ ಸಿದ್ಧಪಡಿಸಲಾಗುತ್ತಿದೆ. ವ್ಯವಸ್ಥೆ ಡಿಜಿಟಲೀಕರಣಕ್ಕೆ ಸಂಪೂರ್ಣ ಸಿದ್ಧವಾದಾಗ ಸರ್ಕಾರವೂ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು.

ಕ್ಯಾಂಟೀನ್‌ ನೆಚ್ಚಿನ ಸ್ಥಳ: ಕೆ.ಎಲ್‌.ಇ. ಕಾಲೇಜಿನ ವಿದ್ಯಾರ್ಥಿ ದಿನಗಳನ್ನು ಮೆಲುಕು ಹಾಕಿ ಎಂಬ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ‘ನಾನು ಈಗ 40 ವರ್ಷದ ಹಿಂದಿನ ವಿದ್ಯಾರ್ಥಿ. ಈಗಲೂ ಕೂಡ ಕಾಲೇಜು ಕ್ಯಾಂಪಸ್‌ ಮಿಸ್‌ ಮಾಡಿಕೊಳ್ಳುತ್ತೇನೆ. ಕಾಲೇಜಿನಲ್ಲಿ ಕ್ಯಾಂಟಿನ್‌ ನನ್ನ ನೆಚ್ಚಿನ ಸ್ಥಳವಾಗಿತ್ತು. ಪ್ರಾಂಶುಪಾಲರ ಅನುಮತಿಗಿಂತ ಮೊದಲೇ ಅಖಿಲ ಭಾರತ ಪ್ರವಾಸವನ್ನು ಆಯೋಜಿಸಿದ್ದೆವು ಎಂದು ನೆನಪಿಸಿಕೊಂಡರು.

ಸಿಎಂ ಬೊಮ್ಮಾಯಿಯದ್ದು ದೇಶದ ಅತೀ ಭ್ರಷ್ಟ ಸರ್ಕಾರ: ರಣದೀಪ್‌ ಸಿಂಗ್‌ ಸುರ್ಜೇವಾಲಾ

ವಿವೇಕಾನಂದರೇ ಸ್ಫೂರ್ತಿ: ಸ್ವಾಮಿ ವಿವೇಕಾನಂದರೇ ನನಗೆ ಸ್ಫೂರ್ತಿ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಸಾಧನೆ ಬದುಕುತ್ತದೆ ಎಂದು ಅವರು ಹೇಳಿದ್ದಾರೆ. ಆ ರೀತಿ ಬದುಕಬೇಕು. ನೀವೂ ಕೂಡ ಸಾಧಕರಾಗಬೇಕು.

ಅವಶ್ಯಕತೆಯಿದ್ದಷ್ಟು ಸಾಮಾಜಿಕ ಜಾಲತಾಣ: ಅವಶ್ಯಕತೆಯಿದ್ದಷ್ಟು ಮಾತ್ರ ಸಾಮಾಜಿಕ ಜಾಲತಾಣವನ್ನು ಬಳಸಿ. ಇಂದು ಸಾಮಾಜಿಕ ಜಾಲತಾಣಗಳು ಹೆಚ್ಚು ಪರಿಣಾಮಕಾರಿ ಆಗಿರುವುದರಿಂದ ಸತ್ಯಕ್ಕೆ ದೂರವಾದ ಸಂಗತಿಗಳನ್ನು ಪಸರಿಸಲೂ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಎಚ್ಚರ ವಹಿಸಿ. ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸ, ನಂಬಿಕೆ ಇದ್ದರೆ ಖಂಡಿತ ಯಶಸ್ಸು ನಿಮ್ಮದಾಗಲಿದೆ.

click me!