
ಬೆಂಗಳೂರು (ಜೂ.19): ಬೆಂಗಳೂರಿನಲ್ಲಿ ಕುಡಿಯುವ ನೀರಿನ ಶುಲ್ಕ 14 ವರ್ಷದಿಂದ ಏರಿಕೆಯಾಗಿಲ್ಲ. ಹಾಗಾಗಿ ನೀರಿನ ದರ ಹೆಚ್ಚಳ ಅನಿವಾರ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಜಲ ಮಂಡಳಿಯು ಹಣ ಇಲ್ಲದೆ ವಿದ್ಯುತ್ ಬಿಲ್ ಕಟ್ಟಲು ಆಗುತ್ತಿಲ್ಲ, ಸಿಬ್ಬಂದಿಗೆ ಸಂಬಳ ಕೊಡುವುದಕ್ಕೂ ಕಷ್ಟವಾಗಿದೆ. ಪ್ರತಿ ವರ್ಷ ನಷ್ಟ ಆಗುತ್ತಲೇ ಇದೆ. ಆದರೆ ಬೆಂಗಳೂರಿಗೆ ಕುಡಿಯುವ ನೀರು ಬೇಕು. ನೀರಿನ ದರ ಹೆಚ್ಚು ಮಾಡಬೇಕಾ ಬೇಡವಾ ನೀವೇ ಹೇಳಿ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿಯವರು ಇದ್ದಾಗ ವಿದ್ಯುತ್ ಬೆಲೆ ಜಾಸ್ತಿ ಮಾಡಿದರು. ನಾವು ಬಂದು ಕಡಿಮೆ ಮಾಡಿದೆವು. ಕಡಿಮೆ ಮಾಡಿದರೆ ಮಾತೇ ಆಡುವುದಿಲ್ಲ. ದರ ಹೆಚ್ಚಿಸಿದರೆ ಮಾತನಾಡುತ್ತೀರಿ. ₹400 ಇದ್ದ ಗ್ಯಾಸ್ ಸಿಲಿಂಡರ್ ₹1 ಸಾವಿರ ಆಯಿತು. ₹75 ಇದ್ದ ಪೆಟ್ರೋಲ್ ₹100 ಆಯಿತು. ₹3 ಜಾಸ್ತಿನಾ ಅಥವಾ ₹30 ಜಾಸ್ತಿನಾ ಎಂದು ಪತ್ರಕರ್ತರನ್ನು ಪ್ರಶ್ನಿಸಿದರು.
ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ್ದರೆ ದರ್ಶನ್ ಮನೆ ತೆರವು: ಡಿಕೆಶಿ
ಮಸ್ಕ್ ಹೇಳಿಕೆಯಿಂದ ಮತದಾನ ಪ್ರಕ್ರಿಯೆ ಬಗ್ಗೆ ಆತಂಕ: ತಂತ್ರಜ್ಞಾನ ನಿಪುಣ ಎಂದು ಇಡೀ ಪ್ರಪಂಚ ಒಪ್ಪಿಕೊಂಡಿರುವ ಎಲಾನ್ ಮಸ್ಕ್ ಅವರೇ ಇವಿಎಂಗಳ ಮೇಲೆ ಅನುಮಾನ ವ್ಯಕ್ತಪಡಿಸಿರುವುದರಿಂದ ಭಾರತದಲ್ಲಿ ನಡೆದ ಮತದಾನ ಪ್ರಕ್ರಿಯೆಗಳ ಬಗ್ಗೆ ಆತಂಕ ಮೂಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ವಿದ್ಯುನ್ಮಾನ ಮತ ಯಂತ್ರಗಳನ್ನು (ಇವಿಎಂ) ಹ್ಯಾಕ್ ಮಾಡಬಹುದು ಎಂಬ ಎಲಾನ್ ಮಸ್ಕ್ ಹೇಳಿಕೆ ಉದ್ದೇಶಿಸಿ ಸರಣಿ ಟ್ವೀಟ್ ಮಾಡಿರುವ ಅವರ, ಮಸುಕಾಗಿದ್ದ ಅನುಮಾನ ಈಗ ತೀಕ್ಷ್ಣವಾಗಿದೆ ಎಂದು ಹೇಳಿದ್ದಾರೆ.
ಚುನಾವಣೆಯ ನಂತರ ದೇಶದ ಕೆಲವೆಡೆ ನಡೆಯುತ್ತಿರುವ ಘಟನೆಗಳಿಗೂ ಮಸ್ಕ್ ಅವರ ಹೇಳಿಕೆಗೂ ತಾಳೆಯಾಗುತ್ತಿದೆ. ಚುನಾವಣೆ ವ್ಯವಸ್ಥೆಯೇ ಪಾರದರ್ಶಕವಾಗಿ ಇರದಿದ್ದರೆ ಜನಾದೇಶ ಯಾರ ಕಡೆ ಇದೆ ಎಂದು ತಿಳಿಯುವುದಾದರೂ ಹೇಗೆ? ಇವಿಎಂಗಳ ಸತ್ಯಾಸತ್ಯತೆ ಬಗ್ಗೆ ಈಗ ಪ್ರಪಂಚಕ್ಕೇ ಅರ್ಥವಾಗಿದೆ. ಭಾರತಕ್ಕೂ ಆ ಕಾಲ ಸನ್ನಿಹಿತವಾಗಿದೆ. ಇಡೀ ವಿಶ್ವ ಪ್ರಶ್ನೆ ಮಾಡುತ್ತಿರುವಾಗ ಭಾರತವೂ ಈ ಬಗ್ಗೆ ಪ್ರಶ್ನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಬಿಬಿಎಂಪಿ ಚುನಾವಣೆಗೆ ಸಜ್ಜಾಗಿ: ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಸೂಚನೆ
ತಂಗಡಗಿ ಬೆಂಬಲ : ಇವಿಎಂಗಳ ಬಗ್ಗೆ ನಾವು ಮೊದಲಿನಿಂದಲೂ ಪ್ರಶ್ನಿಸುತ್ತಾ ಬಂದಿದ್ದೇವೆ. ವಿದೇಶಿ ಉದ್ಯಮಿ ಎಲಾನ್ ಮಸ್ಕ್ ಸಹಿತ ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯ ಎಂಬ ಹೇಳಿಕೆ ನೀಡಿದ್ದಾರೆ. ನಮ್ಮಲ್ಲೂ ಇವಿಎಂ ಬ್ಯಾನ್ ಮಾಡಿ ಮೊದಲಿದ್ದ ಪದ್ಧತಿ ಜಾರಿಗೊಳಿಸಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಆಗ್ರಹಿಸಿದ್ದಾರೆ. ಮುಂದುವರೆದ ಅಮೆರಿಕ ಸೇರಿ ಹೊರದೇಶಗಳಲ್ಲಿ ಇವಿಎಂ ಬ್ಯಾನ್ ಮಾಡಲಾಗಿದೆ. ಅದರಂತೆ ಭಾರತದಲ್ಲೂ ಇವಿಎಂ ಬ್ಯಾನ್ ಮಾಡಲಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ