ಸಚಿವ ಸಂಪುಟಕ್ಕೆ ಅಧಿವೇಶನದ ನಂತರವೇ ಸರ್ಜರಿ, ಒಂದು ಮಹಿಳಾ ಮಂತ್ರಿಗಿರಿ ಫಿಕ್ಸ್- ಸಿಎಂ ಡಿ.ಕೆ. ಶಿವಕುಮಾರ್

Sathish Kumar KH   | Kannada Prabha
Published : Aug 11, 2026, 06:03 AM IST
Karnataka Cabinet DK Shivakumar

ಸಾರಾಂಶ

ಇತ್ತೀಚಿನ ಸಂಪುಟ ವಿಸ್ತರಣೆಯಿಂದ ಉಂಟಾದ ಅಸಮಾಧಾನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದಾರೆ. ಸದ್ಯಕ್ಕೆ ಖಾತೆ ಹಂಚಿಕೆ ಮಾತ್ರ ನಡೆಯಲಿದ್ದು, ಸಚಿವರ ಸ್ಥಾನ ಬದಲಾವಣೆಯಂತಹ ಪ್ರಮುಖ ನಿರ್ಧಾರವನ್ನು ಮುಂಗಾರು ಅಧಿವೇಶನದ ನಂತರವೇ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಾಲೂರು/ನವದೆಹಲಿ (ಆ.11): ಸದ್ಯಕ್ಕೆ ಸಚಿವರ ಖಾತೆ ಹಂಚಿಕೆ ನಡೆಯಲಿದೆ, ವಿಧಾನಸಭೆಯ ಮುಂಗಾರು ಅಧಿವೇಶನ ಮುಗಿದ ನಂತರ ಸಚಿವರ ಸ್ಥಾನ ಬದಲಾವಣೆ ನಡೆಯಲಿದೆ. ಜೊತೆಗೆ ಮಹಿಳೆಯರಿಗೆ ಒಂದು ಸಚಿವ ಸ್ಥಾನ ಕೊಟ್ಟೇ ಕೊಡ್ತೀವಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆ ಮತ್ತು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಕುರಿತಂತೆ ಹೈಕಮಾಂಡ್‌ ಜೊತೆ ಚರ್ಚಿಸಲು ದೆಹಲಿಗೆ ತೆರಳಿದ್ದ ಡಿಕೆಶಿ, ಸೋಮವಾರ ರಾಜ್ಯಕ್ಕೆ ವಾಪಸ್ಸಾಗಿ ಕೋಲಾರ ಜಿಲ್ಲೆ ಮಾಲೂರಿನಲ್ಲಿ ನಡೆದ ಸಾಧನಾ ಸಂಭ್ರಮ ಸಮಾವೇಶದಲ್ಲಿ ಪಾಲ್ಗೊಂಡರು. ಈ ವೇಳೆ, ಸುದ್ದಿಗಾರರ ಜೊತೆ ಮಾತನಾಡಿ, ದೆಹಲಿ ಪ್ರವಾಸದ ವೇಳೆ ಹೈಕಮಾಂಡ್‌ ನಾಯಕರ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಸಚಿವರ ಸ್ಥಾನ ಬದಲಾವಣೆ ಬಗ್ಗೆ ಇಲ್ಲಿ ಬಹಿರಂಗವಾಗಿ ಚರ್ಚೆ ಮಾಡೋದಕ್ಕೆ ಆಗಲ್ಲ. ಸಚಿವರ ಸ್ಥಾನ ಬದಲಾವಣೆ ಏನಿದ್ದರೂ ಅಧಿವೇಶನದ ಬಳಿಕ ಎಂದರು.

ಖರ್ಗೆ, ವೇಣು, ಸುರ್ಜೇವಾಲ ಜೊತೆ ಚರ್ಚೆ:

ಸಂಪುಟ ವಿಸ್ತರಣೆ ಬೆನ್ನಲ್ಲೇ ಉದ್ಭವಿಸಿದ ಕಾಂಗ್ರೆಸ್‌ ನಾಯಕರ ಬಂಡಾಯದ ಹಿನ್ನೆಲೆಯಲ್ಲಿ ಭಾನುವಾರ ದೆಹಲಿಗೆ ತೆರಳಿದ್ದ ಸಿಎಂ, ಸಂಪುಟದ ಅಸಮಾಧಾನಗಳ ಕುರಿತು ಹೈಕಮಾಂಡ್‌ ನಾಯಕರಿಗೆ ವರದಿ ಒಪ್ಪಿಸಿದರು. ಭಾನುವಾರ ರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಒಂದೂವರೆ ತಾಸು, ಬಳಿಕ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಜೊತೆ ಒಂದು ತಾಸು ಮಾತುಕತೆ ನಡೆಸಿದರು. ಮಾತುಕತೆ ವೇಳೆ, ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆ, ನೂತನ ಸಚಿವರಿಗೆ ಖಾತೆ ಹಂಚಿಕೆ, ಖಾಲಿ ಉಳಿದಿರುವ ಒಂದು ಸ್ಥಾನ ತುಂಬುವುದು, ಖಾತೆ ಅದಲು-ಬದಲು, ಸಭಾಪತಿ ಆಯ್ಕೆ ವಿಚಾರ, ಸಚಿವ ನಾಗೇಂದ್ರ ಪ್ರಕರಣ, ಸಿದ್ದರಾಮಯ್ಯ ಅವರ ಬೇಡಿಕೆ ವಿಷಯಗಳು ಚರ್ಚೆಯಾದವು.

ಸೋಮವಾರ ಬೆಳಗ್ಗೆ 7 ಗಂಟೆ ವೇಳೆಗೆ ದೆಹಲಿಯ ಲೋದಿ ಎಸ್ಟೇಟ್‌ನಲ್ಲಿರುವ ವೇಣುಗೋಪಾಲ ಅವರ ನಿವಾಸಕ್ಕೆ ತೆರಳಿ ಸಂಪುಟ ಅಸಮಾಧಾನ, ನಾಗೇಂದ್ರ ಪ್ರಕರಣ, ಖಾತೆ ಹಂಚಿಕೆ ಕುರಿತು ಮಾಹಿತಿ ಹಂಚಿಕೊಂಡರು. ಈ ವೇಳೆ, ಸಚಿವ ಮುನಿಯಪ್ಪ ಅವರನ್ನು ಕರೆಸಿಕೊಂಡ ಡಿಕೆಶಿ ಮತ್ತು ವೇಣುಗೋಪಾಲ್‌, ಸಚಿವರ ಬದಲಾವಣೆ ಕುರಿತು ಚರ್ಚೆ ನಡೆಸಿದರು.

ವೇಣುಗೋಪಾಲ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಖರ್ಗೆಯವರು ನಮ್ಮ ಪಕ್ಷದ ವರಿಷ್ಠರು, ಹೈಕಮಾಂಡ್. ಹಾಗಾಗಿ, ಅವರನ್ನು ಭೇಟಿಯಾಗಿದ್ದೆ. ಪರಿಷತ್ ಸಭಾಪತಿ ಸ್ಥಾನಕ್ಕೆ ಸಲೀಂ ಅವರನ್ನು ಅಭ್ಯರ್ಥಿಯಾಗಿಸಲು ಸೂಚನೆ ನೀಡಿದ್ದಾರೆ ಎಂದರು. ಸಂಪುಟದಲ್ಲಿ ಮಹಿಳೆಗೆ ಒಂದು ಸ್ಥಾನ ಕೊಡಲೇಬೇಕು, ಕೊಡ್ತಿವಿ. ಅಷ್ಟು ಅರ್ಜೆಂಟ್‌ ಇಲ್ಲ ಎಂದರು.

ಸಂಪುಟ ವಿಳಂಬ ಕುರಿತ ಬಿಜೆಪಿಯವರ ಟೀಕೆ ಕುರಿತು ಪ್ರತಿಕ್ರಿಯಿಸಿ, ಬಿಎಸ್ ವೈ ಅವರಿದ್ದಾಗ ಎಷ್ಟು ದಿನಕ್ಕೆ ಸಂಪುಟ ರಚನೆ ಆಯ್ತು?. ನಾಳೆಯೇ ಖಾತೆ ಹಂಚಿಕೆ ಮಾಡಬೇಕು ಅಂತ ಏನೂ ಇಲ್ಲ. ಬೇಕಿದ್ದರೆ, ನಾನೊಬ್ಬನೇ ಅಧಿವೇಶನದಲ್ಲಿ ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರ ಕೊಡ್ತಿನಿ ಎಂದರು.

ಸಚಿವ ನಾಗೇಂದ್ರ ಮೇಲಿನ ಇ.ಡಿ.ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಯಾರ ಮೇಲೆ ಕೇಸ್ ಇಲ್ಲ ಹೇಳಿ ನೋಡೋಣ?. ನಾನು ಜಾಮೀನು ತಂಗೊಡಿಲ್ವಾ?, ಕುಮಾರಸ್ವಾಮಿ ಅವರು ಜಾಮೀನಿನ ಮೇಲೆ ಇಲ್ವಾ?. ವಿಪಕ್ಷದವರಿಗೆ ಮಾತಾಡಲು ಒಂದು ವಿಷಯ ಬೇಕು, ಅದಕ್ಕೆ ಆರೋಪ ಮಾಡುತ್ತಿದ್ದಾರೆ ಅಷ್ಟೆ ಎಂದು ತಿರುಗೇಟು ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೇಣುಕಾಸ್ವಾಮಿ ಕೇಸಲ್ಲಿ ದರ್ಶನ್‌ಗೆ ಮತ್ತಷ್ಟು ಸಂಕಷ್ಟ; ಡಿ ಗ್ಯಾಂಗ್‌ಗೆ ಮಾಫಿ ಸಾಕ್ಷಿ ವಿರೋಧಿಸುವ ಹಕ್ಕಿಲ್ಲ-ಕೋರ್ಟ್
ಬಿಡದಿ ಟೌನ್‌ಶಿಪ್ ಪಾದಯಾತ್ರೆ 2ನೇ ದಿನಕ್ಕೆ ಮೊಟಕು; ಅಡ್ಡಗಟ್ಟಿದ ಪೊಲೀಸರು, ಆ.18ಕ್ಕೆ ಮತ್ತೆ ಹೋರಾಟ-ನಿಖಿಲ್ ಕುಮಾರಸ್ವಾಮಿ