
ಮೈಸೂರು (ಆ.15): ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆ ಕುರಿತು ಮೈಸೂರಿನ ಶಾಸಕ ಶ್ರೀವತ್ಸ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕ ಶ್ರೀವತ್ಸ್ ಅವರು 'ಅನಾಮಿಕ ಏನು ವಿಕ್ರಂ ಬೇತಾಳನ ದೊಡ್ಡ ದೊಡ್ಡ ಗುಡ್ಡ ಅಗೆದು ಅವನೇ ಹೂತು ಹಾಕಿ ಬರುವುದಕ್ಕೆ?' ಎಂದು ಮೈಸೂರಿನಲ್ಲಿ ಶಾಸಕ ಶ್ರೀವತ್ಸ್ ಆಕ್ರೋಶ ವ್ಯಕ್ತಪಡಿಸಿದರು.
ಅನಾಮಿಕ ವ್ಯಕ್ತಿಯೊಬ್ಬನ ದೂರಿನ ಆಧಾರದ ಮೇಲೆ ಎಸ್ಐಟಿ ತನಿಖೆ ಆರಂಭವಾಗಿದೆ. ಆತನೇ ಶವಗಳನ್ನು ಹೂತು ಹಾಕಿದ್ದಾನೆ ಎಂದು ಬಂದವನ ಮಾತಿಗೆ ಸರ್ಕಾರ ಕಿವಿಗೊಡುತ್ತಿದೆಯೇ? ಸರ್ಕಾರ ಏನು ಅನಾಮಿಕನ ಪರವಾಗಿದ್ಯಾ? ಎಂದು ಪ್ರಶ್ನಿಸಿದರು. ಆತ ತೋರಿಸಿದ ಸ್ಥಳಗಳಲ್ಲಿ ಯಾವುದೇ ಆಧಾರಗಳು ಸಿಗದಿರುವುದರಿಂದ, ಮೊದಲು ಈ ಅನಾಮಿಕ ವ್ಯಕ್ತಿಯ ಬಗ್ಗೆ ತನಿಖೆ ನಡೆಸಬೇಕೆಂದು ಶಾಸಕರು ಒತ್ತಾಯಿಸಿದರು.
ಸರ್ಕಾರ ಮೌನದ ಅರ್ಥ ಅಪಪ್ರಚಾರ ನಡೆಯಲಿ ಎಂಬುದಾ?
ಧರ್ಮಸ್ಥಳದ ವಿರುದ್ಧ ಯೂಟ್ಯೂಬ್ನಲ್ಲಿ ನಡೆಯುತ್ತಿರುವ ಅಪಪ್ರಚಾರವನ್ನು ತಡೆಯಲು ಸರ್ಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಾಸಕ ಶ್ರೀವತ್ಸ ಕಿಡಿಕಾರಿದ್ದಾರೆ. ಸರ್ಕಾರದ ಮೌನವು ಅಪಪ್ರಚಾರಕ್ಕೆ ಬೆಂಬಲ ನೀಡುತ್ತಿದೆಯೇ? ಅಪಪ್ರಚಾರಕ್ಕೆ ಸರ್ಕಾರ ಬೆನ್ನಿಗೆ ನಿಂತಿದೆಯೇ? ಎಂದು ಆರೋಪಿಸಿದ ಅವರು, ಧರ್ಮಸ್ಥಳದಂತಹ ಹಿಂದೂ ಶ್ರದ್ಧಾ ಕೇಂದ್ರವನ್ನು ಗುರಿಯಾಗಿಸಿಕೊಂಡು ನೂರಾರು ಕೊಲೆಗಳಾಗಿವೆ ಎಂಬ ಸುಳ್ಳು ಆರೋಪಗಳನ್ನು ಹಬ್ಬಿಸಲಾಗುತ್ತಿದೆ ಎಂದರು. ಸರ್ಕಾರ ಗಂಭೀರವಾಗಿದ್ದರೆ, ಮೊದಲು ಅಪಪ್ರಚಾರಕಾರರ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿದರು.
ಸೌಜನ್ಯ ಕೇಸ್, ಅನಾಮಿಕನ ಹೇಳಿಕೆ ಎರಡೂ ತನಿಖೆ ಆಗಬೇಕು:
ಸೌಜನ್ಯ ಕೇಸ್ನ ಸಮಗ್ರ ತನಿಖೆಯ ಜೊತೆಗೆ, ಅನಾಮಿಕ ವ್ಯಕ್ತಿಯ ಆರೋಪಗಳ ಬಗ್ಗೆಯೂ ತನಿಖೆ ನಡೆಯಬೇಕೆಂದು ಶಾಸಕರು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಶಾಸಕರು ಧರ್ಮಸ್ಥಳದ ಪರವಾಗಿ ನಿಲ್ಲಬೇಕೆಂದು ಹೇಳಿದ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳುತ್ತಿದೆ. ಒಂದೆಡೆ ಉದಯಗಿರಿಯಲ್ಲಿ ಸಾಮಾಜಿಕ ಜಾಲತಾಣದ ಪೋಸ್ಟ್ಗೆ ಬಂಧನ ಕ್ರಮ ತೆಗೆದುಕೊಂಡ ಸರ್ಕಾರ, ಧರ್ಮಸ್ಥಳದ ವಿರುದ್ಧದ ಅಪಪ್ರಚಾರಕ್ಕೆ ಯಾಕೆ ಕಾನೂನು ಕ್ರಮ ಜರುಗಿಸಿಲ್ಲ ಎಂದು ಪ್ರಶ್ನಿಸಿದರು.
ನಟ ದರ್ಶನ್ ಬೇಲ್ ರದ್ದು
ನಟ ದರ್ಶನ್ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ತೀರ್ಪನ್ನು ಶಾಸಕ ಶ್ರೀವತ್ಸ ಸ್ವಾಗತಿಸಿದರು. ಕಾನೂನನ್ನು ದುಡ್ಡಿನಿಂದ ಕೊಂಡುಕೊಳ್ಳಬಹುದು ಎಂಬ ಊಹಾಪೋಹಗಳು ಕಳೆದ ಐದಾರು ತಿಂಗಳಿಂದ ಹಬ್ಬಿದ್ದವು. ಆದರೆ, ಈ ತೀರ್ಪು ಆ ಎಲ್ಲಾ ಆರೋಪಗಳನ್ನು ಸುಳ್ಳಾಗಿಸಿದೆ. ಯಾರೇ ತಪ್ಪು ಮಾಡಿದರೂ ನಮ್ಮ ನ್ಯಾಯವ್ಯವಸ್ಥೆಯಲ್ಲಿ ಶಿಕ್ಷೆ ಖಚಿತ ಎಂದು ಶಾಸಕರು ಹೇಳಿದರು. ಸುಪ್ರೀಂ ಕೋರ್ಟ್ನ ತೀರ್ಪನ್ನು ಎಲ್ಲರೂ ಸ್ವಾಗತಿಸಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ