
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಆ.18): ಕಳೆದೆರಡು ವರ್ಷ ರಾಜ್ಯದಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ವ್ಯಾಪಾರಿ ಧರ್ಮ ದಂಗಲ್ ಈ ಬಾರಿಯೂ ಮುಂದುವರಿಯುವ ಲಕ್ಷಣಗಳು ಗೋಚರಿಸ್ತಾ ಇದೆ. ಕರಾವಳಿಯಲ್ಲಿ ಜಾತ್ರೆಗಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಮಧ್ಯೆಯೇ ಅಧಿಕೃತವಾಗಿ ಹಿಂದೂ ಜಾತ್ರಾ ವ್ಯಾಪಾರಿಗಳ ಸಂಘ ಹುಟ್ಟುಕೊಂಡಿದೆ.ಆದರೆ ಇದಕ್ಕೆ ಠಕ್ಕರ್ ಕೊಡಲು ಜಾತ್ರಾ ವ್ಯಾಪಾರಿಗಳ ಮತ್ತೊಂದು ಸಂಘಟನೆಯೂ ಅಸ್ತಿತ್ವಕ್ಕೆ ಬಂದಿದ್ದು, ಜಾತ್ರೆಗಳ ಹೊತ್ತಲ್ಲಿ ಈ ಬಾರಿಯೂ ಧರ್ಮ ದಂಗಲ್ ತಾರಕಕ್ಕೇರುವ ಲಕ್ಷಣ ಗೋಚರಿಸ್ತಾ ಇದೆ.
ಕಳೆದ ಎರಡು ವರ್ಷ ರಾಜ್ಯದಲ್ಲಿ ಧಾರ್ಮಿಕ ವ್ಯಾಪಾರಿ ಧರ್ಮ ದಂಗಲ್ ಭಾರೀ ವಿವಾದ ಸೃಷ್ಟಿಸಿತ್ತು. ಕರಾವಳಿಯಲ್ಲಿ ಆರಂಭವಾದ ಈ ವಿವಾದ ರಾಜ್ಯಾದ್ಯಂತ ಹಬ್ಬುವ ಮೂಲಕ ಮತ್ತಷ್ಟು ಬಿಸಿಯೇರಿತ್ತು. ದೇವಸ್ಥಾನಗಳ ಜಾತ್ರೆಯ ಹೊತ್ತಲ್ಲಿ ಅನ್ಯ ಧರ್ಮಿಯರಿಗೆ ವ್ಯಾಪಾರ ನಿಷೇಧ ಅನ್ನೋ ಬ್ಯಾನರ್ ಹಾಕುವ ಮೂಲಕ ಹಿಂದೂ ಸಂಘಟನೆಗಳು ವಿವಾದ ಎಬ್ಬಿಸಿದ್ದವು.
ಬಿಜೆಪಿ- ಕಾಂಗ್ರೆಸ್ ಮಧ್ಯೆ ಧರ್ಮ ದಂಗಲ್: ಹಳೇ ವಿವಾದಗಳಿಗೆ ಹೊಸ ಸರ್ಕಾರದಿಂದ ಮರುಜೀವ
ಧಾರ್ಮಿಕ ದತ್ತಿ ಕಾನೂನಿನ ಪ್ರಕಾರವೇ ಅನ್ಯ ಧರ್ಮೀಯರಿಗೆ ವ್ಯಾಪಾರದ ಅವಕಾಶ ಇಲ್ಲ ಅಂತ ವಾದಿಸಿ ಸಂಘರ್ಷ ಎದ್ದಿತ್ತು. ಇದೀಗ ಈ ಬಾರಿಯೂ ಕರಾವಳಿಯಲ್ಲಿ ಮತ್ತೆ ವ್ಯಾಪಾರಿ ಧರ್ಮ ದಂಗಲ್ ಆತಂಕ ಎದುರಾಗಿದೆ. ದೇವಸ್ಥಾನದ ಜಾತ್ರೆಗಳು ಆರಂಭವಾಗೋ ಹೊತ್ತಲ್ಲೇ ಮತ್ತೆ ವಿವಾದ ಭುಗಿಲೆದ್ದಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಮತ್ತೆ ವ್ಯಾಪಾರಿ ಧರ್ಮ ದಂಗಲ್ ಆತಂಕ ಎದುರಾಗಿದ್ದು, ಅನ್ಯಧರ್ಮಿಯರ ವ್ಯಾಪಾರ ತಡೆಯಲು ಸಂಘಟನೆ ಕಟ್ಟಿಕೊಂಡ ಕೆಲ ಹಿಂದೂ ವ್ಯಾಪಾರಿಗಳು ಅಧಿಕೃತವಾಗಿ ಫೀಲ್ಡಿಗಿಳಿದ್ದಾರೆ.
ಮಂಗಳೂರಿನಲ್ಲಿ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಿಗಳ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಹಿಂದೂ ದೇವಸ್ಥಾನ(Hindu temple)ಗಳಲ್ಲಿ ಅನ್ಯ ಧರ್ಮೀಯರ ವ್ಯಾಪಾರ ತಡೆಗೆ ಸಂಘಟನೆ ಸೃಷ್ಟಿಯಾಗಿದೆ. ರಾಜ್ಯಾದ್ಯಂತ 1 ಲಕ್ಷ 27 ಸಾವಿರ ಹಿಂದೂ ಜಾತ್ರಾ ವ್ಯಾಪಾರಿಗಳ ಗುರುತು ಮಾಡಲಾಗಿದ್ದು, ಸದ್ಯ ರಾಜ್ಯದ ಸಾವಿರಕ್ಕೂ ಅಧಿಕ ಹಿಂದೂ ವ್ಯಾಪಾರಿಗಳನ್ನು ಸೇರಿಸಿ ಸಂಘಟನೆ ರಚಿಸಲಾಗಿದೆ. ರಾಜ್ಯ ಬಿಜೆಪಿ ನಾಯಕರ(Karnataka bjp leaders) ಸಮ್ಮುಖದಲ್ಲಿ ಕೆಲವೇ ದಿನಗಳಲ್ಲಿ ಸಂಘಟನೆ ಉದ್ಘಾಟನೆಗೆ ಸಿದ್ದತೆ ನಡೆದಿದ್ದು, ಧಾರ್ಮಿಕ ದತ್ತಿ ಅಧಿನಿಯಮ 33ರಡಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲು ಸಂಘಟನೆ ಆಗ್ರಹಿಸಿದೆ. ಇನ್ನು ಈ ಮಧ್ಯೆ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘಕ್ಕೆ ಪರ್ಯಾಯವಾಗಿ ಮತ್ತೊಂದು ಸಂಘ ಅಸ್ತಿತ್ವಕ್ಕೆ ಬಂದಿದೆ.
ದ.ಕ ಮತ್ತು ಉಡುಪಿ ಜಿಲ್ಲೆಗಳ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಜಾತ್ರೆಗಳಲ್ಲಿ ವ್ಯಾಪಾರಕ್ಕೆ ತೊಂದರೆ ಮಾಡುವವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದೆ. ಸೌಹಾರ್ದತೆಗೆ ಧಕ್ಕೆ ತರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಕರ್ನಾಟಕ ಬೀದಿ ಬದಿ ವ್ಯಾಪಾರ ನಿಯಮ 2019ರಡಿ ಅನುಮತಿ ನೀಡಬೇಕು. ಕೆಲವು ಸಂಘಟನೆಗಳು ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ಮಾಡುವ ಮೂಲಕ ಗಲಾಟೆ ಸೃಷ್ಟಿಸುತ್ತಿದೆ ಅಂತ ದೂರಿದೆ. ಈ ಬಾರಿ ಜಾತ್ರೆ ಸಮಯದಲ್ಲಿ ಸಂಘರ್ಷ ಸೃಷ್ಟಿಸಿದ್ರೆ ಹೋರಾಟದ ಎಚ್ಚರಿಕೆ ನೀಡಿರೋ ಸಮನ್ವಯ ಸಮಿತಿ, ಮುಂದಿನ ತಿಂಗಳಿನಿಂದ ಕರಾವಳಿಯಲ್ಲಿ ಜಾತ್ರೋತ್ಸವಗಳು ಆರಂಭವಾಗ್ತಾ ಇರೋ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲಾ ಜಾತ್ರಾ ವ್ಯಾಪಾರಿಗಳಿಗೆ ರಕ್ಷಣೆ ನೀಡಬೇಕು ಅಂತ ಆಗ್ರಹಿಸಿದೆ.
ಧರ್ಮ ದಂಗಲ್: ಮುಸ್ಲಿಮರೇ ಕಟ್ಟಿಸಿದ ದೇವಾಲಯದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಗಳಿಗಿಲ್ಲ ಅವಕಾಶ!
ಸುಪ್ರೀಂ ಕೋರ್ಟ್(Supreme court) ತೀರ್ಪು ಉಲ್ಲೇಖಿಸಿ ದೇವಸ್ಥಾನದ ಜಾತ್ರೆಗಳಲ್ಲಿ ಅನ್ಯಧರ್ಮಿಯರಿಗೆ ಅವಕಾಶಕ್ಕೆ ಆಗ್ರಹಿಸಿದೆ. ಒಟ್ಟಾರೆ ಜಾತ್ರೋತ್ಸವ ಆರಂಭದ ಹೊತ್ತಲ್ಲೇ ಎರಡು ಸಂಘಟನೆಗಳು ಪರಸ್ಪರ ತೊಡೆ ತಟ್ಟಿವೆ. ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ವರ್ಸಸ್ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿ ಮಧ್ಯೆ ಫೈಟ್ ಶುರುವಾಗಿದೆ. ಈ ಬಾರಿ ಕೆಲ ಹಿಂದೂ ವ್ಯಾಪಾರಿಗಳು ಪ್ರತ್ಯೇಕ ಸಂಘಟನೆ ಕಟ್ಟಿದ್ರೆ ಹಿಂದೂ ವ್ಯಾಪಾರಿಗಳ ಸಂಘಕ್ಕೆ ಕೌಂಟರ್ ಕೊಡಲು ಉಭಯ ಜಿಲ್ಲೆಗಳ ಜಾತ್ರಾ ವ್ಯಾಪಾರ ಸಮನ್ವಯ ಸಮಿತಿ ಸಿದ್ದವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ