ವಸತಿ ಶಾಲೆ ಪ್ರವೇಶ, ಕೆಇಎನಿಂದ ಪಟ್ಟಿ ಬಿಡುಗಡೆ ವಿಳಂಬ: ಪೋಷಕರ ಪರದಾಟ

By Kannadaprabha NewsFirst Published Jun 10, 2023, 11:27 AM IST
Highlights

ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾಗಿ ವಾರವಾಗಿದ್ದರೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿ ಬರುವ ಶಾಲೆ, ಕಾಲೇಜುಗಳಲ್ಲಿ 6ನೇ ತರಗತಿ ಮತ್ತು ಪ್ರಥಮ ಪಿಯುಸಿ ಪ್ರವೇಶ ಪಡೆಯುವುದು ವಿಳಂಬವಾಗಿ ವಿದ್ಯಾರ್ಥಿಗಳು, ಪೋಷಕರು ಪರದಾಡುವಂತಾಗಿದೆ. 

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ಜೂ.10): ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾಗಿ ವಾರವಾಗಿದ್ದರೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿ ಬರುವ ಶಾಲೆ, ಕಾಲೇಜುಗಳಲ್ಲಿ 6ನೇ ತರಗತಿ ಮತ್ತು ಪ್ರಥಮ ಪಿಯುಸಿ ಪ್ರವೇಶ ಪಡೆಯುವುದು ವಿಳಂಬವಾಗಿ ವಿದ್ಯಾರ್ಥಿಗಳು, ಪೋಷಕರು ಪರದಾಡುವಂತಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ 6ನೇ ತರಗತಿ ಪ್ರವೇಶದ ಉಸ್ತುವಾರಿ ವಹಿಸಿದ್ದು, ಕೋವಿಡ್‌ ವೇಳೆ ಪೋಷಕರನ್ನು ಕಳೆದುಕೊಂಡವರು, ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ಮತ್ತಿತರ ವಿಶೇಷ ಪ್ರಕರಣಗಳಿಗೆ ಮೊದಲು ಪ್ರವೇಶಾವಕಾಶಕ್ಕೆ ಅವಕಾಶ ಕಲ್ಪಿಸಲಾಗಿದ್ತೆ. 

ಇದಾದ ಬಳಿಕ ಮೊದಲನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತಾದರೂ ತಾಂತ್ರಿಕ ಕಾರಣಗಳಿಂದ ಹಿಂಪಡೆಯಲಾಗಿತ್ತು. ಜೂ.8 ರಂದು ಮೊದಲೇ ಸುತ್ತಿನ ಸೀಟು ಹಂಚಿಕೆ ಆಯ್ಕೆ ಪಟ್ಟಿಯನ್ನು ಮಾತ್ರ ಕೆಇಎ ಬಿಡುಗಡೆಗೊಳಿಸಿದೆ. ಮೊದಲನೇ ಪಟ್ಟಿಯ ವಿದ್ಯಾರ್ಥಿಗಳು ದಾಖಲಾಗಿ, ಇದರಲ್ಲಿ ಉಳಿದ ಸೀಟುಗಳಿಗೆ ಎರಡನೇ ಪಟ್ಟಿ, ಅಗತ್ಯವಿದ್ದರೆ ಮೂರನೇ ಪಟ್ಟಿಯನ್ನೂ ಬಿಡುಗಡೆ ಮಾಡಬೇಕು. ಆದರೆ ಈಗಾಗಲೇ ಶಾಲೆಗಳು ಆರಂಭವಾಗಿರುವುದರಿಂದ 2 ಮತ್ತು 3ನೇ ಪಟ್ಟಿಬಿಡುಗಡೆಗೆ ಕಾಯುತ್ತಿರಬೇಕೇ ಅಥವಾ ಬೇರೆ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬೇಕೋ ಎಂಬ ಸಂದಿಗ್ಧತೆ ಪೋಷಕರನ್ನು ಕಾಡುತ್ತಿದೆ.

ಪಠ್ಯ​ಪು​ಸ್ತಕ ಪರಿ​ಷ್ಕ​ರ​ಣೆ: ಕಾಂಗ್ರೆಸ್‌ ವಿರುದ್ಧ ರಾಜೀವ್‌ ಚಂದ್ರಶೇಖರ್‌ ತೀವ್ರ ಆಕ್ರೋ​ಶ

ಬೇಡಿಕೆ ಇದ್ದರೂ ವಿಳಂಬ: ಕಿತ್ತೂರು ರಾಣಿ ಚನ್ನಮ್ಮ, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ, ಅಟಲ್‌ ಬಿಹಾರಿ ವಾಜಪೇಯಿ ಸೇರಿದಂತೆ ರಾಜ್ಯದಲ್ಲಿ 830 ಶಾಲೆಗಳು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿ ಬರಲಿದ್ದು ಒಂದು ಶಾಲೆಗೆ 50 ರಂತೆ 41,500 ವಿದ್ಯಾರ್ಥಿಗಳಿಗೆ 6ನೇ ತರಗತಿ ಪ್ರವೇಶಕ್ಕೆ ಅವಕಾಶವಿದೆ. ಜತೆಗೆ ಸಂಸ್ಥೆಯ ವ್ಯಾಪ್ತಿಯಲ್ಲಿ 84 ಕಾಲೇಜುಗಳು ಬರಲಿದ್ದು ಒಟ್ಟು 6480 ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿಗೆ ವಸತಿ ಸಹಿತ ಪ್ರವೇಶಾವಕಾಶವಿದೆ. ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆಯನ್ನು ಜಿಲ್ಲಾ ಮಟ್ಟದಲ್ಲಿ ನಿರ್ವಹಿಸಲು ಸರ್ಕಾರ ಅವಕಾಶ ನೀಡಿದ್ದು ಕೆಲವು ಜಿಲ್ಲೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿವೆ. 

ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎರಡನೇ ಸುತ್ತಿನ ಸೀಟು ಹಂಚಿಕೆ ಆಯ್ಕೆ ಪಟ್ಟಿಇನ್ನೂ ಪ್ರಕಟವಾಗಿಲ್ಲ. ಕೊರೋನಾ ಸಂಕಷ್ಟದ ಬಳಿಕ ವಸತಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಪೋಷಕರೂ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ವಸತಿ ಶಾಲೆಯಲ್ಲಿ ಮಕ್ಕಳಿಗೆ ಪ್ರವೇಶ ದೊರೆತರೆ ವಿದ್ಯಾಭ್ಯಾಸದ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಬದಲಾದ ಜೀವನಮಟ್ಟದಲ್ಲಿ ಪತಿ-ಪತ್ನಿ ಇಬ್ಬರೂ ದುಡಿಯುವ ಸಂದರ್ಭ ಉಂಟಾದಾಗಲೂ ಮಕ್ಕಳನ್ನು ವಸತಿ ಶಾಲೆಗೆ ಸೇರ್ಪಡೆ ಮಾಡಲು ಮುಂದಾಗುತ್ತಾರೆ. ಆದರೆ ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದರೂ ಇನ್ನೂ ಈ ಪ್ರಕ್ರಿಯೆ ಪೂರ್ಣವಾಗಿಲ್ಲ ಎಂಬ ಅಸಮಾಧಾನವನ್ನು ಪೋಷಕರು ವ್ಯಕ್ತಪಡಿಸುತ್ತಿದ್ದಾರೆ.

ಕೆಇಎಯಿಂದ ವಿಳಂಬ?: 6ನೇ ತರಗತಿ ಪ್ರವೇಶಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಸುವಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಿಂದ, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮಾಚ್‌ರ್‍ನಲ್ಲೇ ಮನವಿ ಮಾಡಲಾಗಿತ್ತು. ಅದರಂತೆ ಪರೀಕ್ಷೆಯೂ ನಡೆದು ಮೇ ತಿಂಗಳಿನಲ್ಲೇ ಫಲಿತಾಂಶವನ್ನೂ ಪ್ರಕಟಿಸಲಾಗಿತ್ತು. ಆದರೆ ಬಳಿಕ ಸಿಇಟಿ ಸೇರಿದಂತೆ ಬೇರೆ ಕಾರ್ಯಗಳಲ್ಲಿ ಪರೀಕ್ಷಾ ಪ್ರಾಧಿಕಾರ ತೊಡಗಿದ್ದರಿಂದ ವಸತಿ ಶಾಲೆಗಳ ಪ್ರವೇಶ ಪ್ರಕ್ರಿಯೆ ವಿಳಂಬವಾಯಿತು ಎಂದು ಮೂಲಗಳು ತಿಳಿಸಿವೆ.

ಮೇಕೆದಾಟು ಪಾದಯಾತ್ರೆ: ಡಿ.ಕೆ.ಶಿವಕುಮಾರ್‌ ಮೇಲಿನ 1 ಕೇಸ್‌ ರದ್ದು, 2ಕ್ಕೆ ತಡೆ

ಚಿತ್ರದುರ್ಗ ಜಿಲ್ಲೆಯ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜುಗಳ ಪ್ರಥಮ ಪಿಯುಸಿಯ ಎರಡನೇ ಸುತ್ತಿನ ಸೀಟು ಹಂಚಿಕೆ ಆಯ್ಕೆ ಪಟ್ಟಿಯನ್ನು ಜೂ.12 ರಂದು ಪ್ರಕಟಿಸಲಾಗುವುದು.
-ಜಗದೀಶ್‌ ಹೆಬ್ಬಳ್ಳಿ, ಸಮಾಜ ಕಲ್ಯಾಣ ಇಲಾಖೆ ಚಿತ್ರದುರ್ಗ ಜಿಲ್ಲಾ ಉಪ ನಿರ್ದೇಶಕ

click me!