ಬರೋಬ್ಬರಿ 16 ಕೊಲೆ ಬೆದರಿಕೆ ಪತ್ರ, ಸಾಹಿತಿ ಕುಂ.ವೀ.ಗೆ ಗನ್‌ಮ್ಯಾನ್‌ ಭದ್ರತೆ

By Gowthami KFirst Published Jun 13, 2023, 11:11 PM IST
Highlights

ಸಾಹಿತಿ ಕುಂ.ವೀರಭದ್ರಪ್ಪನವರ ರಕ್ಷಣೆಗೆ ಪೊಲೀಸ್‌ ಇಲಾಖೆಯು ಇದೀಗ ಗನ್‌ಮ್ಯಾನ್‌ ನಿಯೋಜಿಸಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಪೇದೆಯನ್ನು ಗನ್‌ಮ್ಯಾನ್‌ ಸೇವೆಗೆಂದು ನಿಯೋಜಿಸಲಾಗಿದೆ.

ಕೊಟ್ಟೂರು (ಜೂ.13): ಸಾಹಿತಿ ಕುಂ.ವೀರಭದ್ರಪ್ಪನವರ ರಕ್ಷಣೆಗೆ ಪೊಲೀಸ್‌ ಇಲಾಖೆಯು ಇದೀಗ ಗನ್‌ಮ್ಯಾನ್‌ ನಿಯೋಜಿಸಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಪೇದೆಯನ್ನು ಗನ್‌ಮ್ಯಾನ್‌ ಸೇವೆಗೆಂದು ನಿಯೋಜಿಸಲಾಗಿದೆ. ಕುಂ.ವೀ.ಯವರಿಗೆ ಇದುವರೆಗೆ 16 ಕೊಲೆ ಬೆದರಿಕೆ ಪತ್ರ ಬಂದಿದ್ದವು. ಈ ಕುರಿತು ಆರೋಪಿ ಒಬ್ಬನನ್ನು ಇತ್ತೀಚೆಗೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ವಶಕ್ಕೆ ಪಡೆದ ವ್ಯಕ್ತಿಯಿಂದ ಹಸ್ತಾಕ್ಷರಗಳನ್ನು ಸಂಗ್ರಹಿಸಿದ್ದಾರೆ. ಆತನ ಹಸ್ತಾಕ್ಷರ ಗಳನ್ನು ವಿಧಿ ವಿಜ್ಞಾನ ಪರೀಕ್ಷಾಲಯಕ್ಕೆ ಪೊಲೀಸರು ಕಳುಹಿಸಿದ್ದಾರೆ. ಕೊಟ್ಟೂರು ಪೊಲೀಸರ ವಿಚಾರಣೆ ಬಳಿಕ ಚಿತ್ರದುರ್ಗಕ್ಕೆ ಯುವಕನನ್ನು ವಿಚಾರಣೆಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಮಾತನಾಡಿದ ಸಾಹಿತಿ ಕುಂ.ವೀರಭದ್ರಪ್ಪ, ಬೆದರಿಕೆ ಪತ್ರಗಳ ಹಿನ್ನೆಲೆಯಲ್ಲಿ ನನಗೆ ಗನ್‌ಮ್ಯಾನ್‌ ನಿಯೋಜಿಸಿದ್ದಾರೆ. ಬೆದರಿಕೆ ಪತ್ರಗಳ ಬಗ್ಗೆ ನಾನು ಹೆಚ್ಚು ಗಮನಹರಿಸಿಲ್ಲ. ಪುಸ್ತಕವೊಂದನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿರುವೆ ಎಂದಿದ್ದಾರೆ.

ಗೋಳ್ವಾಳ್ಕರ್‌, ಸಾವರ್ಕರ್‌ ಫೇಕ್‌ ದೇಶಭಕ್ತರು, ಅವರ ಪಾಠ ನಮಗ್ಯಾಕೆ: ಕುಂವೀ!

Latest Videos

16 ನೇ ಬೆದರಿಕೆ ಪತ್ರ:
ನನಗೆ ಈಗ್ಲೂ  ಬೆದರಿಕೆ ಪತ್ರ ಬರುತ್ತಿವೆ. ಇದೀಗ 16 ನೇ ಬೆದರಿಕೆ ಪತ್ರ ಬಂದಿದೆ  ಸನಾತನ ಮೌಲ್ಯ, ಹಿಂದುತ್ವ ವಾದವನ್ನು ವಿರೋಧಿಸಿದಾಗ ಈ ರೀತಿಯ ಪ್ರೇಮ ಪತ್ರಗಳು ಬರುತ್ತವೆ. ನಾನು ಇದನ್ನು ಬೆದರಿಕೆ ಪತ್ರ ಅಂದುಕೊಂಡಿಲ್ಲ, ಪ್ರೇಮ ಪತ್ರ ಅಂದ್ಕೊಂಡಿರುವೆ ಎಂದು ಈ ಹಿಂದೆ ಕೂಡ ಹೇಳಿದ್ದರು.

ರಾಮಗರದಲ್ಲಿ ಯುವಕ ವಶಕ್ಕೆ
ಖ್ಯಾತ ಕಾದಂಬರಿಕಾರ ಕುಂ.ವೀರಭದ್ರಪ್ಪ ಅವರಿಗೆ ಬೆದರಿಕೆ ಪತ್ರಗಳು ಬರುತ್ತಿರುವ ಹಿನ್ನೆಲೆ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಯುವಕನನ್ನು ರಾಮನಗರದಲ್ಲಿ ಬೆಂಗಳೂರು ಪೊಲೀಸರು ವಶಕ್ಕೆ ಪಡೆದು ಕೊಟ್ಟೂರು ಪೊಲೀಸರ ಸುಪರ್ದಿಗೆ ವಹಿಸಿದ್ದಾರೆನ್ನಲಾಗಿದೆ. ಪ್ರದೀಪ್‌(39) ಪೊಲೀಸರ ವಶದಲ್ಲಿರುವ ಯುವಕ ಎಂದು ತಿಳಿದು ಬಂದಿದೆ. ಪ್ರದೀಪ್‌ ಮೂಲತಃ ಹರಿಹರ ಬಳಿಯ ಕಮಲಾಪುರದವನಾಗಿದ್ದು, ಆತನನ್ನು ಬೆಂಗಳೂರು ಪೊಲೀಸರು ರಾಮನಗರದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಯುವಕನನ್ನು ವಿಚಾರಣೆಗೆ ಒಳಪಡಿಸಿದಾಗ ಲಭ್ಯವಾದ ಕೆಲ ಮಾಹಿತಿ ಆಧರಿಸಿ ಕೊಟ್ಟೂರು ಪೊಲೀಸರಿಗೆ ಕಳೆದ ವಾರದ ಗುರುವಾರ ರಾತ್ರಿ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ಚಕ್ರತೀರ್ಥ ಅಲ್ಲ, ವಕ್ರತೀರ್ಥ ಎಂದು ಕುಂ ವೀ ಆಕ್ರೋಶ

ಇದೀಗ ಯುವಕ ಪ್ರದೀಪ್‌ನನ್ನು ಕೊಟ್ಟೂರಿನ ಪೊಲೀಸ್‌ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸರನ್ನು ಸುದ್ದಿಗಾರರು ಸಂಪರ್ಕಿಸಿದಾಗ, ಯುವಕನನ್ನು ವಿಚಾರಣೆ ಮಾಡುತ್ತಿದ್ದೇವೆ. ಈ ಹಂತದಲ್ಲಿ ಯಾವುದೇ ಖಚಿತ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಷ್ಟೇ ತಿಳಿಸಿದ್ದಾರೆ.

ಸದ್ಯ ಪ್ರಕರಣ ವಿಚಾರಣೆ ಹಂತದಲ್ಲಿದ್ದು, ಯಾವುದೇ ಮಾಹಿತಿ ನೀಡಲ್ಲ. ಈ ಸಂಬಂಧ ಸುದ್ದಿ ಹರಡಿರುವ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳಲ್ಲ. ವಿಚಾರಣೆ ಮುಗಿದ ನಂತರ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದೇವೆ. ಆ ನಂತರ ಹಿರಿಯ ಪೊಲೀಸ್‌ ಅಧಿಕಾರಿಗಳು ಅಧಿಕೃತವಾಗಿ ಎಲ್ಲವನ್ನೂ ಪ್ರಕಟಿಸುತ್ತಾರೆ ಎಂದು ಕೊಟ್ಟೂರಿನ ಸರ್ಕಲ್‌ ಇನ್ಸ್‌ಪೆಕ್ಟರ್‌ ವೆಂಕಟಸ್ವಾಮಿ ತಿಳಿಸಿದ್ದಾರೆ.

click me!