ದರ್ಶನ್ & ರೇಣುಕಾಸ್ವಾಮಿ ಕೇಸ್: ಇನ್‌ಸ್ಪೆಕ್ಟರ್‌ ಗಿರೀಶ್ ನಾಯ್ಕ್ ‘ಆರೋಪಿ’ ಮನವಿಗೆ ಆಕ್ಷೇಪ

Published : Mar 04, 2026, 08:38 AM IST
Darshan Thoogudeepa Renukaswamy

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಸುಳ್ಳು ಸಾಕ್ಷ್ಯ ಸೃಷ್ಟಿ ಆರೋಪದ ಮೇಲೆ ತನಿಖಾಧಿಕಾರಿ ಗಿರೀಶ್ ನಾಯ್ಕ್ ಅವರನ್ನೇ ಆರೋಪಿಯನ್ನಾಗಿಸಬೇಕೆಂಬ ಮನವಿಗೆ ವಿಶೇಷ ಸರ್ಕಾರಿ ಅಭಿಯೋಜಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ಒದಗಿಸಿದ ಆರೋಪ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಹಿಂದಿನ ಇನ್‌ಸ್ಪೆಕ್ಟರ್‌ ಗಿರೀಶ್ ನಾಯ್ಕ್ ಅವರನ್ನು ಆರೋಪಿಯನ್ನಾಗಿ ಮಾಡಬೇಕೆಂಬ 3ನೇ ಆರೋಪಿ ಪವನ್‌ ಮನವಿಗೆ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು ಮಂಗಳವಾರ ಮುಂದುವರಿಸಿತು.

ಮೂರನೇ ಆರೋಪಿ ಪವನ್ ಅರ್ಜಿ

ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಆರೋಪ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ಆವರಣ ಪ್ರವೇಶಿಸುವುದಕ್ಕೆ ಅನುಮತಿ ನಿರಾಕರಿಸಿದ ಬಗ್ಗೆ ವಿವರಣೆ ನೀಡುವಂತೆ ಆ ಠಾಣೆ ಇನ್‌ಸ್ಪೆಕ್ಟರ್‌ಗೆ ನಗರದ ನ್ಯಾಯಾಲಯ ನಿರ್ದೇಶಿಸಿತ್ತು. ಜೊತೆಗೆ ಸುಳ್ಳು ಸಾಕ್ಷ್ಯ ಸೃಷ್ಟಿ ಮಾಡಿದ್ದಕ್ಕೆ ಮೊದಲಿಗೆ ಪ್ರಕರಣದ ತನಿಖೆ ನಡೆಸಿದ್ದ‌ ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಆರೋಪಿಯನ್ನಾಗಿ ಮಾಡಬೇಕು ಎಂದು ಪವನ್ ಅರ್ಜಿ ಸಲ್ಲಿಸಿದ್ದ.

ಈ ಅರ್ಜಿಯನ್ನು ಬುಧವಾರ ಬಲವಾಗಿ ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕರು, ಅಪರಾಧದಲ್ಲಿ ಭಾಗಿಯಾಗಿದ್ದಲ್ಲಿ ಮಾತ್ರ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 319 ಅನ್ವಯ ತನಿಖಾಧಿಕಾರಿಯನ್ನು ಆರೋಪಿಯಾಗಿ ಮಾಡಲು ಅವಕಾಶವಿದೆ. ಪ್ರಕರಣದಲ್ಲಿ ಯಾವ ಕಾರಣಕ್ಕೆ ತನಿಖಾಧಿಕಾರಿ ಆರೋಪಿ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸರ್ಕಾರಿ ಅಭಿಯೋಜಕರ ವಾದ ಏನು?

ಅಲ್ಲದೇ, ತನಿಖೆಯ ವೇಳೆ 2024ರ ಜೂ.11ರಂದು ರಾತ್ರಿ 1 ಗಂಟೆಗೆ ವಶಪಡಿಸಿಕೊಂಡ ಎಂಟು ಮೊಬೈಲ್‌ಗಳು ಆರೊಪಿಗಳದ್ದೇ ಆಗಿದೆ. ಅವುಗಳನ್ನು ಮಹಜರು ನಡೆಸಿ ಜಪ್ತಿ ಮಾಡಲಾಗಿದೆ. ಆ ಮೊಬೈಲ್ ಗಳಿಂದ ಡಿಜಿಟಲ್ ಸಾಕ್ಷ್ಯ ಸಂಗ್ರಹಿಸಲಾಗಿದೆ. ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಈ ರೀತಿಯ ಅರ್ಜಿಗಳನ್ನ ಸಲ್ಲಿಸಲಾಗಿದ್ದು, ಅವುಗಳಿಗೆ ಮಾನ್ಯತೆ ನೀಡಬಾರದು ಎಂದು ಸರ್ಕಾರಿ ಅಭಿಯೋಜಕರು ನ್ಯಾಯಾಲಯವನ್ನು ಕೋರಿದರು.

ಇನ್ನು ಕಾಮಾಕ್ಷಿಪಾಳ್ಯ ಠಾಣೆಗೆ ಭೇಟಿ ನೀಡಲು ಪವನ್ ಪರ ವಕೀಲ ಸುಧನ್ವಗೆ ಅವಕಾಶ ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸರ್ಕಾರಿ ಅಭಿಯೋಜಕರು, ವಕೀಲರ ಭೇಟಿಯಿಂದ ಕಲೆಹಾಕುವ ಸಾಕ್ಷ್ಯಕ್ಕೆ ಯಾವ ಮಾನ್ಯತೆಯಿದೆ. ಠಾಣೆಯಲ್ಲಿ ಸೂಕ್ಷ್ಮ ಪ್ರಕರಣಗಳ ತನಿಖೆ ನಡೆಯುತ್ತಿರುತ್ತವೆ. ಅತ್ಯಾ*ಚಾರ ಹಾಗೂ ಪೋಕ್ಸೋ ಪ್ರಕರಣದ ಆರೋಪಿಗಳು ಅಲ್ಲಿ ಇರುತ್ತಾರೆ. ಇಂತಹ ಸಂದರ್ಭದಲ್ಲಿ ವಕೀಲರ ತಂಡಕ್ಕೆ ಠಾಣೆಗೆ ಭೇಟಿಗೆ ಅವಕಾಶ ನೀಡಲು ಹೇಗೆ ಸಾಧ್ಯ‌ ಎಂದು ಸರ್ಕಾರಿ ಅಭಿಯೋಕರು ಖಾರವಾಗಿ ಪ್ರಶ್ನಿಸಿದರು.

ಅಂತಿಮವಾಗಿ ವಿಚಾರಣೆಯನ್ನು ಮಾ.9ಕ್ಕೆ ನ್ಯಾಯಾಲಯ ಮುಂದೂಡಿತು‌.

ತ್ವರಿತ ವಿಚಾರಣೆಗೆ ಆಕ್ಷೇಪ

ಪ್ರಕರಣವನ್ನು ಪ್ರತಿ ದಿನ ವಿಚಾರಣೆ ಮಾಡುವಂತೆ ಕೋರಿರುವ ದರ್ಶನ್ ಅರ್ಜಿಗೆ ಆಕ್ಷೇಪಣೆ ವ್ಯಕ್ತಪಡಿಸಿದ ಸರ್ಕಾರಿ ಅಭಿಯೋಜಕರು, ಪ್ರತಿದಿನ ವಿಚಾರಣೆ ಅಗತ್ಯವಿಲ್ಲ. ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಲಷ್ಟೇ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಇದೇ ನ್ಯಾಯಾಲಯದಲ್ಲಿ 977 ಪ್ರಕರಣಗಳ ವಿಚಾರಣೆ (ಟ್ರಯಲ್) ನಡೆಯುತ್ತಿವೆ. ಆ ಎಲ್ಲವನ್ನೂ ಬಿಟ್ಟು ಈ ಪ್ರಕರಣವನ್ನು ಏಕೆ ಪ್ರತಿದಿನ ವಿಚಾರಣೆ ಮಾಡಬೇಕು? ಈಗಾಗಲೇ ವಾರಕ್ಕೆ 2 ದಿನ ವಿಚಾರಣೆ ನಡೆಯುತ್ತಿದೆ. ಅದನ್ನೇ ಮುಂದುವರಿಸಬೇಕು. ಹಾಗಾಗಿ, ಪ್ರತಿದಿನ ವಿಚಾರಣೆಗೆ ಅವಕಾಶ ನೀಡಬಾರದು ಎಂದು ಕೋರಿದರು.

ವಿಚಾರಣೆ ವೇಳೆ ಆರೋಪಿಗಳನ್ನ ಖುದ್ದು ಕೋರ್ಟ್‌ಗೆ ಹಾಜರುಪಡಿಸಲು ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂಬ ಆರೋಪಿಗಳ ಮನವಿ ತಿರಸ್ಕರಿಸಬೇಕು. ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಿದಾಗ ಸಾಕಷ್ಡು ಜನಜಂಗುಳಿ ಆಗುತ್ತದೆ. ಆರೋಪಿಗಳ ವಿಡಿಯೋ ಕಾನ್ಫರೆನ್ಸ್ ನಲ್ಲಿಯೇ ವಿಚಾರಣೆ ನಡೆಯಲಿ ಎಂದರು.

ಇದನ್ನೂ ಓದಿ: ಪವಿತ್ರಾ ಗೌಡಗೆ ಮೆಸೇಜ್ ಮಾಡ್ತಿದ್ದ ರೇಣುಕಾಸ್ವಾಮಿಗೆ ಅಪೊಲೊ ಫಾರ್ಮಸಿ ಕೊಡ್ತಿದ್ದ ಸಂಬಳ ರಿವೀಲ್ ಮಾಡಿದ ತಾಯಿ!

ಜೈಲಿನೊಳಗೆ ಕುಟುಂಬ ಭೇಟಿಗೆ ದರ್ಶನ್‌ ಮನವಿ

ಜೈಲಿನೊಳಗೆ ಭೇಟಿ ಮಾಡಲು ತನ್ನ ಕುಟುಂಬಸ್ಥರಿಗೆ ಅವಕಾಶ ನೀಡಲು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಗೂ ಆಕ್ಷೇಪಿಸಿದ ಸರ್ಕಾರಿ ಅಭಿಯೋಜಕರು, ಜೈಲಿನೊಳಗಿನ ಸಂದರ್ಶನಕ್ಕೆ ಅವಕಾಶ ಕೋರಿ ಆರೋಪಿಗಳು ಜೈಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿಲ್ಲ.‌ ಜೈಲು ಕೈಪಿಡಿ ಪ್ರಕಾರ ಜೈಲು ಅಧಿಕಾರಿಗಳಿಗೆ ಮೊದಲು ಮನವಿ ಮಾಡಬೇಕು. ಆ ಮನವಿಯನ್ನು ಜೈಲು ಅಧಿಕಾರಿಗಳು ತಿರಸ್ಕರಿಸಿದರೆ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು. ಸಣ್ಣಪುಟ್ಟ ವಿಚಾರಕ್ಕೂ ದರ್ಶನ್ ಪದೇ ಪದೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಸಮಯ ಹಾಳುಮಾಡುತ್ತಿದ್ದಾರೆ. ಹೀಗಾಗಿ ಅವರ ಅರ್ಜಿಗೆ ಮಾನ್ಯತೆ ನೀಡಬಾರದು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಕಟಾಂಜನದ ಒಳಗಿರೋ ದರ್ಶನ್ ಸ್ಥಿತಿಗೆ ದೇವರೇ ಗತಿ; ಟಿವಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದ ನಟನಿಗೆ ನ್ಯಾಯಾಧೀಶರ ಕೌಂಟರ್ ಏನು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೋಮವಾರಪೇಟೆ: ಮನೆಯಲ್ಲಿ ಆಕಸ್ಮಿಕ ಬೆಂಕಿ: 1 ಕಾಲು ಕಳೆದುಕೊಂಡಿದ್ದ ಯೋಧ ಹೊರ ಬಾರಲಾಗದೇ ಸಜೀವ ದಹನ
ಬಾಣಂತನಕ್ಕೆ ಹೋದ ಹೆಂಡ್ತಿ: ಊಟಕ್ಕೆಂದು ಹೊಟೇಲ್‌ಗೆ ಹೋದಾಗ ಆಕಸ್ಮಿಕವಾಗಿ ಕಾಲ್ತುಳಿದಿದ್ದಕ್ಕೆ ಯುವಕನ ಕೊಲೆ