ಜನತೆ ಎಚ್ಚರ ವಹಿಸಿ ಕೊರೋನಾ 2ನೇ ಅಲೆ ತಪ್ಪಿಸಿ: ಸಚಿವ ಕೆ. ಸುಧಾಕರ್ ಮನವಿ!

By Suvarna NewsFirst Published Nov 22, 2020, 7:13 AM IST
Highlights

ಜನತೆ ಎಚ್ಚರ ವಹಿಸಿ ಕೊರೋನಾ 2ನೇ ಅಲೆ ತಪ್ಪಿಸಿ| 2ನೇ ಎಲೆ ಎದುರಿಸಲು ಸರ್ಕಾರ ಸಿದ್ಧತೆ: ಸಚಿವ ಸುಧಾಕರ್‌| ಸೋಂಕು ಹೆಚ್ಚಾದರೆ ಕಾಲೇಜು ಬಂದ್‌ ಅನಿವಾರ್ಯ

ಬೆಳಗಾವಿ/ಧಾರವಾಡ(ನ.22): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಿ 2ನೇ ಅಲೆ ಬರದಂತೆ ತಡೆಯಲು ಜನರೂ ಸಹಕರಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ಹೇಳಿದ್ದಾರೆ.

"

ಕರ್ನಾಟಕ, ಮಹಾರಾಷ್ಟ್ರ ಸೇರಿ 4-5 ರಾಜ್ಯಗಳಲ್ಲಿ ಸೋಂಕು ದಿಢೀರ್‌ ಹೆಚ್ಚಳ: 2ನೇ ಅಲೆಯ ಭೀತಿ!

ಬೆಳಗಾವಿ ಮತ್ತು ಧಾರವಾಡಗಳಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಮೊದಲ ಅಲೆ ಕಳೆದ 45 ದಿನದಿಂದ 2 ತಿಂಗಳ ಅವಧಿಯಲ್ಲಿ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಎರಡನೇ ಅಲೆ ಬಂದೇ ಬರುತ್ತದೆ ಎಂದೇನೂ ಇಲ್ಲ, ಬರುವುದೇ ಇಲ್ಲ ಎಂದೂ ಅಲ್ಲ. ಇದು ನಮ್ಮ ಜನತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದನ್ನು ಅವಲಂಬಿಸಿದೆ. ಹಬ್ಬಗಳ ಬಳಿಕ ದೆಹಲಿ, ಅಹ್ಮದಾಬಾದ್‌ಗಳಲ್ಲಿ ಕೊರೋನಾ ಹೆಚ್ಚಾಗಿ ಕಾಣಿಸಿಕೊಂಡಿದೆ. ಈವರೆಗೆ ರಾಜ್ಯದಲ್ಲಿ ಅಂತಹ ಬೆಳವಣಿಗೆ ಇಲ್ಲ. ಆದರೂ ಅದನ್ನು ಎದುರಿಸಲು ರಾಜ್ಯ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.

ಸೋಂಕು ಹೆಚ್ಚಿದರೆ ಕಾಲೇಜಿಗೆ ಬೀಗ: ಕಾಲೇಜು ಆರಂಭದಿಂದಾಗಿ ವಿದ್ಯಾರ್ಥಿಗಳಲ್ಲಿ ಕೊರೋನಾ ಹೆಚ್ಚಾದರೆ ಕಾಲೇಜುಗಳನ್ನು ಅನಿವಾರ್ಯವಾಗಿ ಬಂದ್‌ ಮಾಡಬೇಕಾಗುತ್ತದೆ ಎಂದು ಸಚಿವರು ತಿಳಿಸಿದರು. ಕಾಲೇಜುಗಳು ಆರಂಭವಾದ ಬಳಿಕ ವಿದ್ಯಾರ್ಥಿಗಳಲ್ಲಿ ಕೊರೋನಾ ಹೆಚ್ಚಾಗಿದೆ ಎಂಬ ಪರಿಸ್ಥಿತಿ ಸದ್ಯ ಕಂಡುಬಂದಿಲ್ಲ. ಇಲ್ಲಿವರೆಗೆ 120-130 ವಿದ್ಯಾರ್ಥಿಗಳು, ಉಪನ್ಯಾಸಕರಲ್ಲಿ ಕೊರೋನಾ ದೃಢಪಟ್ಟಿದ್ದನ್ನು ಮಾಧ್ಯಮಗಳಿಂದ ತಿಳಿದಿದ್ದೇವೆ. ಮುಂದಿನ ದಿನಗಳಲ್ಲಿ ಒಂದು ವೇಳೆ ಕೊರೋನಾ ಪ್ರಸರಣ ತೀರಾ ಹೆಚ್ಚಾದ ಬೆಳವಣಿಗೆ ಕಂಡುಬಂದರೆ ಬೇರೆ ಅವಕಾಶ ಇಲ್ಲದೆ ಕಾಲೇಜುಗಳನ್ನು ಮುಚ್ಚಲೇಬೇಕಾಗುತ್ತದೆ. ಇದಕ್ಕಾಗಿಯೇ ನಾವು ಇನ್ನೂ ಪ್ರಾಥಮಿಕ ಶಾಲೆಗಳನ್ನು ತೆರೆದಿಲ್ಲ. ಉನ್ನತ ಅಧಿಕಾರಿಗಳ ಮಾಹಿತಿ ಪಡೆದು, ಮುಂದಿನ ಬೆಳವಣಿಗೆ ಗಮನಿಸಿ ಕ್ರಮ ಕೈಗೊಳ್ಳಲಿದ್ದೇವೆ ಎಂದರು.

ಕೋವಿಡ್‌ ಕೇಸ್‌ 13ಕ್ಕೆ ಇಳಿಕೆ : ಕಡಿಮೆಯಾದ ಮಹಾಮಾರಿ ಅಬ್ಬರ

ಇದೇವೇಳೆ ಕೊರೋನಾ ಲಸಿಕೆ ಇನ್ನೂ ಬಿಡುಗಡೆ ಆಗಿಲ್ಲ, ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್‌ ನಡೆಸಿರುವ ಕಂಪನಿಗಳ ಜೊತೆ ಕೇಂದ್ರ ಸರ್ಕಾರ ಸಮಾಲೋಚನೆ ನಡೆಸಿ ಒಡಂಬಡಿಕೆ ಮಾಡಿಕೊಂಡಿಗೆ ಅಷ್ಟೇ ಎಂದು ಸಚಿವರು ಸ್ಪಷ್ಟಪಡಿಸಿದರು. ಲಸಿಕೆ ಬಂದರೆ ಅದರ ಸಂಗ್ರಹಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೇಂದ್ರ ಆರೋಗ್ಯ ಸಚಿವರ ಜೊತೆ ವಿಡಿಯೋ ಸಂವಾದದ ಮೂಲಕ ಮಾತುಕತೆ ನಡೆಸಲಾಗಿದೆ. ಕೊರೋನಾ ಲಸಿಕೆ ಬಂದಮೇಲೆ ವಿತರಣೆ ನಿಧಾನ ಆಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲಸಿಕೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

click me!