ಕೊರೋನಾ ಭೀತಿ, ರಾಜ್ಯದಲ್ಲಿ 1345ಕ್ಕೂ ಅಧಿಕ ಜನರ ಮೇಲೆ ನಿಗಾ!

By Kannadaprabha NewsFirst Published Mar 14, 2020, 7:59 AM IST
Highlights

ರಾಜ್ಯದಲ್ಲಿ 1345ಕ್ಕೂ ಅಧಿಕ ಜನರ ಮೇಲೆ ನಿಗಾ| ಕಲಬುರಗಿ, ಗದಗದಲ್ಲಿ ಅತಿ ಹೆಚ್ಚು ಶಂಕಿತರು

ಬೆಂಗಳೂರು[ಮಾ.14]: ಕೊರೋನಾ ವೈರಸ್‌ನಿಂದಾಗಿ ಕಲಬುರಗಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರೀ ಕಟ್ಟೆಚ್ಚರವಹಿಸಲಾಗುತ್ತಿದೆ. ಮೃತಪಟ್ಟವ್ಯಕ್ತಿಯ ಕುಟುಂಬದವರು, ಈಗಾಗಲೇ ಸೋಂಕು ಪತ್ತೆಯಾಗಿರುವ ವ್ಯಕ್ತಿಗಳು ಮತ್ತು ವಿದೇಶದಿಂದ ಬಂದ ಶಂಕಿತರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 1345 ಜನರ ಮೇಲೆ ನಿಗಾ ವಹಿಸಲಾಗಿದೆ.

"

1 ವಾರ ಬಂದ್‌ನಿಂದ 20 ಸಾವಿರ ಕೋಟಿ ನಷ್ಟ!

ಕಲಬುರಗಿಯಲ್ಲಿ 46 ಜನರ ಮೇಲೆ ನಿಗಾ ವಹಿಸಲಾಗಿದೆ. ಇದರಲ್ಲಿ ಕೊರೋನಾ ವೈರಸ್‌ಗೆ ಮೃತಪಟ್ಟವ್ಯಕ್ತಿಯ ಕುಟುಂಬದವರು ಮತ್ತು ಇತ್ತೀಚೆಗೆ ವಿದೇಶದಿಂದ ಆಗಮಿಸಿದ ವ್ಯಕ್ತಿಗಳು ಸೇರಿದ್ದಾರೆ. ಗದಗದಲ್ಲಿ 41 ಜನರ ಮೇಲೆ ನಿಗಾ ವಹಿಸಲಾಗಿದೆ. ಇದರಲ್ಲಿ ಸಿಂಗಾಪುರ, ಮಲೇಷ್ಯಾ ಪ್ರವಾಸಕ್ಕೆ ತೆರಳಿದ್ದ ಲಕ್ಷ್ಮೇಶ್ವರ ಪಟ್ಟಣದ 17 ಜನ ಹಾಗೂ ಮೆಕ್ಕಾ ಮದೀನಾ ಪ್ರವಾಸಿ ಮುಗಿಸಿಕೊಂಡು ಬಂದಿರುವ 12 ಹಾಗೂ ಪಕ್ಕದ ಕೇರಳ ಸೇರಿದಂತೆ ದೇಶದಲ್ಲಿನ ಇನ್ನಿತರ ಭಾಗಗಳಿಂದ ಆಗಮಿಸಿರುವ 12 ಜನರ ಸೇರಿದ್ದಾರೆ.

ಕೊರೋನಾ ವೈರಸ್‌ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಜಿಲ್ಲೆಯಲ್ಲಿ ಇದುವರೆಗೆ ಯಾರೊಬ್ಬರಲ್ಲಿಯೂ ಸೋಂಕು ಪತ್ತೆಯಾಗಿಲ್ಲ. ಆದರೆ, ವಿದೇಶದಿಂದ ಬಂದ ಒಬ್ಬರನ್ನು ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕವಾಗಿರಿಸಿ ನಿಗಾ ವಹಿಸಲಾಗಿದೆ. ಹಾಸನದಲ್ಲಿ ಒಟ್ಟು ಐವರ ಮೇಲೆ ನಿಗಾ ವಹಿಸಲಾಗಿದೆ. ಇದರಲ್ಲಿ ಇತ್ತೀಚೆಗೆ ಮೆಕ್ಕಾ-ಮದೀನಾದಿಂದ ಮರಳಿದ ಒಬ್ಬ ವ್ಯಕ್ತಿಯೂ ಸೇರಿದ್ದಾರೆ.

ಉಳಿದಂತೆ ದಾವಣಗೆರೆಯಲ್ಲಿ 24, ಬಾಗಲಕೋಟೆಯಲ್ಲಿ 16, ಬೆಳಗಾವಿಯಲ್ಲಿ 14, ವಿಜಯಪುರದಲ್ಲಿ 5, ದಕ್ಷಿಣ ಕನ್ನಡದಲ್ಲಿ 6, ಉಡುಪಿಯಲ್ಲಿ 9, ರಾಯಚೂರಲ್ಲಿ 5 ಮಂದಿಯ ಮೇಲೆ ನಿಗಾ ವಹಿಸಲಾಗಿದೆ. ಬಳ್ಳಾರಿ, ಕೊಪ್ಪಳ, ಚಿಕ್ಕಮಗಳೂರಿನಲ್ಲಿ ಇಬ್ಬರ ಮೇಲೆ ಮತ್ತು ಕೊಡಗು, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಒಬ್ಬರ ಮೇಲೆ ಜಿಲ್ಲಾಡಳಿತ ನಿಗಾ ವಹಿಸುತ್ತಿದೆ.

click me!