
ಶಿವಮೊಗ್ಗ (ಅ.22) : ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಬಿಜೆಪಿಯವರು ಯತ್ನಿಸುತ್ತಿದ್ದು, ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ. ಮಾಜಿ ಸಚಿವರೊಬ್ಬರು ಕಾಂಗ್ರೆಸ್ ಶಾಸಕರೊಬ್ಬರಿಗೆ ₹50 ಕೋಟಿ ಕೊಡುವ ಆಮಿಷವೊಡ್ಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಜನತೆ ಕಾಂಗ್ರೆಸ್ಗೆ ಬಹುಮತ ನೀಡಿದ್ದಾರೆ. ಆದರೆ ಕೇವಲ 5 ತಿಂಗಳೊಳಗೆ ಬಿಜೆಪಿ ಅಧಿಕಾರವಿಲ್ಲದೇ ಒದ್ದಾಡುತ್ತಿದೆ. ಅದಕ್ಕಾಗಿ ತಲಾ ₹50 ಕೋಟಿ ಹಣದ ಆಮಿಷವೊಡ್ಡಿ ಕಾಂಗ್ರೆಸ್ ಶಾಸಕರ ಮನೆಯ ಬಾಗಿಲನ್ನು ಬಡಿಯುತ್ತಿದ್ದಾರೆ. ಸರ್ಕಾರ ಬೀಳಿಸುವ ಯತ್ನ ಮಾಡುತ್ತಿದ್ದಾರೆ. ಆದರೆ, ಅವರ ಪ್ರಯತ್ನಕ್ಕೆ ಯಶಸ್ಸು ಸಿಗುವುದಿಲ್ಲ. ಮಾಜಿ ಸಚಿವ ಈಶ್ವರಪ್ಪ ಸಹ ಸರ್ಕಾರ ಬೀಳಿಸುತ್ತೇವೆ, ಬೀಳಿಸಿದರೆ ತಪ್ಪೇನು ಎಂದಿದ್ದಾರೆ ಎಂದು ಕಿಡಿಕಾರಿದರು.
ಮತ್ತೊಂದು ಹೋರಾಟಕ್ಕೆ ಮುಂದಾದ ವಾಟಾಳ್; ಇಂದು ಪುರುಷರ ಪರವಾಗಿ ಪ್ರತಿಭಟನೆ
ಈಶ್ವರಪ್ಪಗೆ ಸಂವಿಧಾನ ಗೊತ್ತಿಲ್ಲ: ಆಯನೂರು ಕಿಡಿ
ಈಶ್ವರಪ್ಪ ಅವರಿಗೆ ಪ್ರಜಾಪ್ರಭುತ್ವ ಗೊತ್ತಿಲ್ಲ. ಅವರು ಸಂವಿಧಾನ ಓದಿಲ್ಲ. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾಗ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟಿದ್ದರು. ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಈಶ್ವರಪ್ಪ ಕೊಡುಗೆಯೇನು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಪ್ರಶ್ನಿಸಿದರು.
ಈಶ್ವರಪ್ಪ ಅವರ ಅರ್ಹತೆ, ಭ್ರಷ್ಟಾಚಾರ ನೋಡಿ ಅವರಿಗಿದ್ದ ಎಲ್ಲ ಅವಕಾಶವನ್ನು ಕಿತ್ತುಕೊಂಡಿದ್ದಾರೆ. ಯಡಿಯೂರಪ್ಪ ಅವರು ಜೈಲಿಗೆ ಹೋದಾಗ ನನ್ನಂಥವನು ಆಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ ಅಂದಿದ್ದರು. ಯಡಿಯೂರಪ್ಪ ಜೈಲಿಗೆ ಹೋದಾಗ ಖುಷಿಪಟ್ಟ ನಿಮಗೆ ಕನಿಷ್ಠ ಕೃತಜ್ಞತೆ ಇಲ್ಲ. ಸೌಜನ್ಯಕ್ಕೂ ಜೈಲಿಗೆ ಭೇಟಿ ಸಾಂತ್ವನ ಹೇಳಲಿಲ್ಲ. ಯಡಿಯೂರಪ್ಪ ವಿರುದ್ಧ ಸಂಚು ಮಾಡಿದ ರಾಜಕಾರಣಿ ಈಶ್ವರಪ್ಪ ಎಂದು ಹರಿಹಾಯ್ದರು.
ಈಶ್ವರಪ್ಪ ನೀರಾವರಿ ಸಚಿವರಾಗಿದ್ದಾಗ ಗುತ್ತಿಗೆದಾರನ ವಿರುದ್ಧ ನಿಮ್ಮ ಮಗ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆದರೆ, ಗುತ್ತಿಗೆದಾರ ನಿಮ್ಮನ್ನು ಬಂದು ಭೇಟಿ ಮಾಡಿದಾಗ ಸುಮ್ಮನಾಗಿದ್ದು ಏಕೆ? ನೀವು ನಿರ್ವಹಿಸಿದ ಖಾತೆಗಳಲ್ಲಿ ಲೂಟಿ ಮಾಡಿದ್ದು ಬಿಟ್ಟರೆ ಬೇರೇನು ಮಾಡಲಿಲ್ಲ. ಯಡಿಯೂರಪ್ಪ ವಿರುದ್ದ ದ್ರೋಹದ ರಾಜಕಾರಣ ನಾನು ಮಾಡಿಲ್ಲ. ನಿಮ್ಮಂತೆ ನಾನು ಪಕ್ಷದ ನಾಯಕರ ವಿರುದ್ಧವೇ ಕತ್ತಿ ಮಸೆಯಲಿಲ್ಲ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಲಿಲ್ಲ. ಬದಲಿಗೆ ಮನಸ್ಸಿಗೆ ಸರಿ ಬರಲಿಲ್ಲ ಎಂದಾಗ ಪಕ್ಷ ಬಿಟ್ಟು ಹೊರಬಂದಿದ್ದೇನೆ ಎಂದ ಅವರು, ಇದೇ ರೀತಿ ನಾಲಿಗೆ ಹರಿಬಿಟ್ಟರೆ ನಿಮ್ಮ ಭ್ರಷ್ಟಾಚಾರವನ್ನು ದಾಖಲೆ ಸಮೇತ ಬಿಚ್ಚಿಡ ಬಲ್ಲೆ ಎಂದರು.
ನಾಯಕನಿಲ್ಲದ ಬಿಜೆಪಿ ಶಿಥಿಲವಾಗುತ್ತಿದೆ: ಆಯನೂರು ಮಂಜುನಾಥ್ ವ್ಯಂಗ್ಯ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಪ್ರಮುಖರಾದ ಎಸ್.ಕೆ. ಮರಿಯಪ್ಪ, ಧೀರರಾಜ್ ಹೊನ್ನವಿಲೆ ಮತ್ತಿತರರು ಇದ್ದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನೀವು ಎಷ್ಟು ಲೂಟಿ ಹೊಡೆದಿದ್ದೀರಾ, ನಿಮ್ಮ ಕುಟುಂಬದವರ ಪಾತ್ರವೇನು ಎಂಬುದು ಜನತೆಗೆ ಗೊತ್ತಿದೆ. ಹೆರಿಗೆ ಬೇರೆಯವರದ್ದಾದರೆ, ತೊಟ್ಟಿಲು ಕಟ್ಟುವವರು ಈಶ್ವರಪ್ಪ. ಜೈಲಿಗೆ ಹೋಗಿ ಬಂದ ಯಡಿಯೂರಪ್ಪರನ್ನು ಬಿಜೆಪಿಗರು ಒಪ್ಪಿಕೊಳ್ಳುವುದಾರೆ ಡಿ.ಕೆ.ಶಿವಕುಮಾರರನ್ನು ಕಾಂಗ್ರೆಸ್ಸಿಗರು ಒಪ್ಪಿಕೊಳ್ಳಬಾರದೆ?
- ಆಯನೂರು ಮಂಜುನಾಥ, ಕಾಂಗ್ರೆಸ್ ಮುಖಂಡ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ