ಮಳೆ ಮೋಡಗಳು ಕಟ್ಟೋದು ನೋಡ್ಬೇಕಾ ಬಲ್ಲಾಳರಾಯನ ದುರ್ಗಕ್ಕೆ ಬನ್ನಿ: ಟ್ರಕ್ಕಿಂಗ್‌ಗೆ ಬೆಸ್ಟ್‌ ಪ್ಲೇಸ್‌

Published : Jul 16, 2023, 10:43 PM IST
ಮಳೆ ಮೋಡಗಳು ಕಟ್ಟೋದು ನೋಡ್ಬೇಕಾ ಬಲ್ಲಾಳರಾಯನ ದುರ್ಗಕ್ಕೆ ಬನ್ನಿ: ಟ್ರಕ್ಕಿಂಗ್‌ಗೆ ಬೆಸ್ಟ್‌ ಪ್ಲೇಸ್‌

ಸಾರಾಂಶ

ಮಳೆಯ ಮೋಡಗಳು ಕಟ್ಟುವುದನ್ನು ನೀವು ನೋಡಬೇಕಾ ಈಗಲೇ ನೀವು ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಕ್ಕೆ ಬನ್ನಿ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 
ಚಿಕ್ಕಮಗಳೂರು (ಜು.16): ಮಳೆಯ ಮೋಡಗಳು ಕಟ್ಟುವುದನ್ನು ನೀವು ನೋಡಬೇಕಾ ಈಗಲೇ ನೀವು ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಕ್ಕೆ ಬನ್ನಿ. ಇಲ್ಲಿ ಟ್ರಕ್ಕಿಂಗ್‌ ಹಾಗೂ ಪ್ರಕೃತಿ ಸೌಂದರ್ಯಕ್ಕೂ ಇಲ್ಲಿ ಅವಕಾಶವಿದೆ. ಬಲ್ಲಾಳರಾಯನ ದುರ್ಗದ ಕೋಟೆ ಮೇಲೆ ನಿಂತು ನೋಡಿದರೆ ಸ್ವರ್ಗದಲ್ಲಿಯೇ ತೇಲಿದ ಅನುಭವ ಆಗೋದು ಗ್ಯಾರಂಟಿ.

ಪಶ್ಚಿಮಘಟ್ಟದ ಅನನ್ಯ ಅರಣ್ಯ ಸಂಪತ್ತು ಹೊಂದಿರುವ ಚಿಕ್ಕಮಗಳೂರಿನ ಮಲೆನಾಡು ಭಾಗಗಳಲ್ಲಿ ಮಳೆ ಬಂತೆಂದರೆ ರಮಣೀಯತೆ ಸೃಷ್ಟಿಯಾಗುತ್ತದೆ. ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುವ ರಮಣೀಯ ಸ್ಥಳಗಳಲ್ಲಿ ಒಂದಾದ ಬಳ್ಳಾಲರಾಯನ ದುರ್ಗ ಮತ್ತು ರಾಣಿಝರಿಗೆ ಈ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣೋ ನೈಜ ಸ್ವರ್ಗದ ಚೆಲುವು. ದಿಟ್ಟಿಸಿ ನೋಡುದ್ರೆ ಕೊನೆಯೇ ಇಲ್ಲವೆಂಬಂತೆ ಕಾಣೋ ಕೋಟೆಯ ಬೃಹದಾಕಾರದ ಗೋಡೆ. ಪ್ರತೀ ಹೆಜ್ಜೆಯಲ್ಲೂ ಪ್ರವಾಸಿಗರಿಗೆ ಸವಾಲೆಸೆಯೋ ನಿಸರ್ಗದ ಮಡಿಲು.

ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ವಾಹನ ಪ್ರವೇಶ ನಿರ್ಬಂಧ: ಟ್ರಾಫಿಕ್‌ ತಡೆಯಲು ಪೊಲೀಸರ ಕ್ರಮ

ಇದು ಚಿಕ್ಕಮಗಳೂರು- ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಬಲ್ಲಾಳರಾಯನ ದುರ್ಗದ ಕೋಟೆ. ಮೂಡಿಗೆರೆ ತಾಲೂಕಿನಲ್ಲಿದೆ. ರುದ್ರ ರಮಣೀಯವಾಗಿ ಕಾಣುವ ಈ ತಾಣವನ್ನ ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬರ್ತಾರೆ. ಅದ್ರಲ್ಲು ಟ್ರಕ್ಕಿಂಗ್ ಪ್ರಿಯರಿಗಂತೂ ಬಲ್ಲರಾಯನ ಕೋಟೆ ಹತ್ತೋದಂದ್ರೆ ಎಲ್ಲಿಲ್ಲದ ಉತ್ಸಾಹ ಹಾಗೂ ಸವಾಲು. ದುರ್ಗದಹಳ್ಳಿಯ ಎಂಡ್ ಪಾಯಿಂಟ್ನಲ್ಲಿ ವಾಹನ ನಿಲ್ಲಿಸಿ ಅರ್ಧ ಕಿ.ಮೀ. ಸಾಗಿದ್ರೆ ಅಬ್ಬಾ... ಅನ್ನೋ ವೀವ್ ಪಾಯಿಂಟ್ ಕಣ್ಣಿಗೆ ಅಪ್ಪಳಿಸುತ್ತೆ. ಈ ಜಾಗದಲ್ಲಿ ನಿಂತು ನೋಡಿದ್ರೆ ಸ್ವರ್ಗಕ್ಕೆ ಮೂರೇ ಗೇಣು ಅನ್ಸತ್ತೆ. ಸುತ್ತಲಿನ ಹಚ್ಚ ಹಸಿರಿನ ವನರಾಶಿ ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತೆ. ಇಲ್ಲಿಗೆ ಬರೋ ಪ್ರವಾಸಿಗ್ರು ಬಗೆಬಗೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ನಿಸರ್ಗದ ಮಡಿಲಲ್ಲಿ ಕುಣಿದು ಕುಪ್ಪಳಿಸುತ್ತಾರೆ. 

ರಾಣಿಝರಿ ಪ್ರಪಾತ ನೋಡಲು ಪ್ರವಾಸಿಗರ ಲಗ್ಗೆ :  ನೇತ್ರಾವತಿ ಪೀಕ್ ಗೆ ಪ್ರವಾಸಿಗರನ್ನು ನಿರ್ಬಂಧಿಸಿರುವ ಹಿನ್ನೆಲೆ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನದುರ್ಗ ಮತ್ತು ರಾಣಿಝರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಬಲ್ಲಾಳರಾಯನ ದುರ್ಗದ ತುದಿಯಲ್ಲಿ ನಿಂತು ಮಂಜಿನ ನಡುವೆ ಕಾಣುವ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಗ್ರಾಮಗಳನ್ನು ನೋಡಿ ಪ್ರವಾಸಿಗರು ಪುಳಕಿತರಾಗುತ್ತಿದ್ದಾರೆ. ಕ್ಷಣಕ್ಕೊಮ್ಮೆ ಬದಲಾಗುವ ತಂಪು ವಾತಾವರಣದ ಜೊತೆ ರಾಣಿಝರಿಯ ಪ್ರಪಾತವನ್ನು ನೋಡಿ ಪ್ರಕೃತಿ ಸಮೃದ್ಧತೆಯನ್ನು ಪ್ರವಾಸಿಗರು ಆಸ್ವಾದಿಸುತ್ತಿದ್ದಾರೆ.ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳ ಬಳಿ ಜನ ಜಾತ್ರೆಯೇ ನೆರೆದಿದೆ. ಮುಗಿಲೆತ್ತರದ ಬೆಟ್ಟಗುಡ್ಡಗಳು, ವನರಾಶಿ, ತಂಪೆರೆವ ತುಂತುರು ಮತ್ತು ಶುದ್ಧಗಾಳಿಗೆ ಪ್ರವಾಸಿಗರು ಮಾರುಹೋಗಿದ್ದಾರೆ. ನಿತ್ಯದ ಜಂಜಾಟಗಳಿಂದ ದೂರವಾಗಿ ಪ್ರಕೃತಿಯ ಮಡಿಲಿಗೆ ಜನಸ್ತೋಮ ಹರಿದುಬರುತ್ತಿದೆ.

ಜಿಟಿ ಜಿಟಿ ಮಳೆಯಲ್ಲಿ ಕರ್ನಾಟಕದ ಮಿನಿ ಊಟಿ ಜೋಗಿಮಟ್ಟಿ ನೋಡಲು ಪ್ರವಾಸಿಗರ ದಂಡು!

ಗತ ವೈಭವವನ್ನ ಸಾರುವ ಕಲ್ಲು: ಒಂದನೇ ಬಲ್ಲಾಳರಾಯ, ರಕ್ಷಣಾ ಕೋಟೆಯನ್ನಾಗಿ ಈ ಕೋಟೆ ರಚಿಸಿದ್ದನೆಂಬ ಐತಿಹ್ಯವಿದೆ. ಗತ ವೈಭವವನ್ನ ಸಾರುವ ಕಲ್ಲಿನಿಂದ ನಿರ್ಮಾಣವಾಗಿದ್ದ ಬೃಹದಾಕಾರವಾದ ಗೋಡೆಗಳು ಇಂದಿಗೂ ಅಚ್ಚರಿ ಮೂಡಿಸುತ್ತವೆ. ಕಣ್ಣು ಹಾಯಿಸಿದಷ್ಟು ದೂರ ಗೋಚರಿಸೋ ಹಸಿರ ಪರ್ವತ ರಾಶಿ ಪ್ರವಾಸಿಗರ ಮನಸೂರೆಗೊಳಿಸೋದ್ರ ಜೊತೆ, ಇಲ್ಲಿನ ಪ್ರಪಾತ ಗಟ್ಟಿ ಗುಂಡಿಗೆಯನ್ನು ಒಮ್ಮೆ ನಡುಗಿಸುತ್ತೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನ ವರ್ಣಿಸೋಕೆ ಪದಗಳೇ ಸಾಲದು. ಸುತ್ತಲಿನ ಪರ್ವತಗಳು ನೋಡುಗರನ್ನ ಆಕರ್ಷಿಸಿದ್ರೆ, ಪರ್ವತಗಳ ನಡುವಿನ ಮಂಜು ಮುಸುಕಿದ ನೋಟ ನೋಡುಗರನ್ನ ನಿಬ್ಬೆರಗುಗೊಳಿಸುತ್ತೆ.

ಒಟ್ಟಾರೆ, ಬಲ್ಲಾರಾಯನ ಕೋಟೆಯ ವೀವ್ ಪಾಯಿಂಟಾಗಿರೋ ರಾಣಿ ಝರಿ ನೋಟ ಒಂದೊಂದು ಧಿಕ್ಕಲ್ಲಿ ಒಂದೊಂದು ರೀತಿ ಮನೋಜ್ಞವಾಗಿ ಕಾಣ್ತಿದೆ. ಮಳೆಗಾಲದ ಮಂಜು ರಾಣಿ ಝರಿಗೆ ಮುತ್ತಿಕ್ಕುತ್ತಿದ್ದರೆ ನೋಡುಗನ ಕಣ್ಣಿಗೆ ಹಬ್ಬ. ಆದ್ರೆ, ಬೇಸಿಗೆಯಲ್ಲಿ ಈ ರಾಣಿಝರಿಯ ನೋಟ ಪ್ರವಾಸಿಗರ ಎದೆಯನ್ನ ಝಲ್ ಎನಿಸುತ್ತೆ. ಅದೇನೆ ಇದ್ರು, ಇಲ್ಲಿನ ಟ್ರಕ್ಕಿಂಗ್, ಈ ವಾತಾವರಣ, ಪ್ರಕೃತಿ ಸೌಂದರ್ಯ ಎಲ್ಲವೂ ಅದ್ಭುತವೇ ಸರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್