ಏರ್‌ ಶೋ ಯಶಸ್ಸಿಗೆ ಸಂಪೂರ್ಣ ಸಹಕಾರ: ಸಿಎಂ ಬಿಎಸ್‌ವೈ

By Kannadaprabha NewsFirst Published Oct 8, 2020, 7:38 AM IST
Highlights

2021ರ ಫೆ.3ರಿಂದ ಬೆಂಗಳೂರಿನಲ್ಲಿ 13ನೇ ಆವೃತ್ತಿ ಏರೋ ಇಂಡಿಯಾ| ಕೊರೋನಾ ಹಿನ್ನೆಲೆ ಅಗತ್ಯ ಸುರಕ್ಷತಾ ಕ್ರಮ: ಸಿಎಂ ಬಿಎಸ್‌ವೈ| 13ನೇ ವೈಮಾನಿಕ ಪ್ರದರ್ಶನ ಆಯೋಜನೆಗೆ ಅಗತ್ಯವಾದ ಸಕಲ ಸಿದ್ಧತೆಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ ಎಂದು ರಕ್ಷಣಾ ಸಚಿವರಿಗೆ ಭರವಸೆ ನೀಡಿದ ಮುಖ್ಯಮಂತ್ರಿ| 

ಬೆಂಗಳೂರು(ಅ.08): ಏರೋ ಇಂಡಿಯಾ-2021 ವೈಮಾನಿಕ ಪ್ರದರ್ಶನ ಫೆ.3 ರಿಂದ 7ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ಇದರ ಯಶಸ್ಸಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ. 

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ವೈಮಾನಿಕ ಪ್ರದರ್ಶನದ ಆಯೋಜನೆಗೆ ಸಂಬಂಧಿಸಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರೊಂದಿಗೆ ನಡೆದ ವರ್ಚುವಲ್‌ ಸಭೆಯ ನಂತರ ಮುಖ್ಯಮಂತ್ರಿಯವರು ಈ ವಿಷಯ ತಿಳಿಸಿದ್ದಾರೆ. 

ಸಭೆಯಲ್ಲಿ ಮುಖ್ಯಮಂತ್ರಿಯವರು 13ನೇ ವೈಮಾನಿಕ ಪ್ರದರ್ಶನ ಆಯೋಜನೆಗೆ ಅಗತ್ಯವಾದ ಸಕಲ ಸಿದ್ಧತೆಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ ಎಂದು ರಕ್ಷಣಾ ಸಚಿವರಿಗೆ ಭರವಸೆ ನೀಡಿದರು. ಕರ್ನಾಟಕ 12 ವೈಮಾನಿಕ ಪ್ರದರ್ಶನಗಳನ್ನು ಆಯೋಜಿಸಿರುವ ಅನುಭವಿ. 13ನೇ ವೈಮಾನಿಕ ಪ್ರದರ್ಶನವನ್ನು ಕೂಡ ಆಯೋಜಿಸುತ್ತಿರುವುದು ಹೆಮ್ಮೆಯ ವಿಚಾರ. ಆದರೆ ಕೋವಿಡ್‌-19ರ ಸಂದರ್ಭದಲ್ಲಿ ಇಂತಹ ಮಹತ್ವಪೂರ್ಣ ಕಾರ್ಯಕ್ರಮ ಸಂಘಟಿಸುವುದು ರಾಜ್ಯಕ್ಕೆ ಮತ್ತು ರಕ್ಷಣಾ ಸಚಿವಾಲಯಕ್ಕೆ ಸವಾಲಿನ ಕೆಲಸ. ಏರೋ ಇಂಡಿಯಾ ವೆಬ್‌ ಸೈಟ್‌ -2021 ಆರಂಭವಾದ ಕೂಡಲೇ ವಸ್ತು ಪ್ರದರ್ಶನಕ್ಕಾಗಿ ಆಸಕ್ತರು ಬಹುಪಾಲು ಸ್ಥಳವನ್ನು ಕಾಯ್ದಿರಿಸಿದ್ದಾರೆ. ಆಸಕ್ತರಿಂದ ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಬಾನಂಗಳದಲ್ಲಿ ಫೋಟೋಶೂಟ್; ಲೋಹದ ಹಕ್ಕಿಗಳಿಂದ ಸಖತ್ ಪೋಸ್; ಫೋಟೋಗ್ರಾಫರ್‌ಗೆ ಶಹಬ್ಬಾಸ್!

ಅಗ್ರ 5ರಲ್ಲಿ ಭಾರತ ಒಂದಾಗಿರಬೇಕು:

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ವೈಮಾನಿಕ ಪ್ರದರ್ಶನ - 2021 ಮೂಲಕ ಭಾರತವು ವೈಮಾನಿಕ ಮತ್ತು ಬಾಹ್ಯಾಕಾಶ ಉದ್ಯಮದಲ್ಲಿ ಮುಂಚೂಣಿಯ ಐದು ರಾಷ್ಟ್ರಗಳಲ್ಲಿ ಒಂದಾಗಿರಬೇಕು ಎನ್ನುವುದು ನಮ್ಮ ಆಶಯ ಎಂದರು.

ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್‌ ನಾಯಕ್‌, ವಿವಿಧ ದೇಶಗಳ ರಾಯಭಾರಿಗಳು, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
 

click me!