
ಬೆಳ್ತಂಗಡಿ (ಸೆ.08): ಚಾರ್ಮಾಡಿ ಘಾಟಿ ಪರಿಸರದ ರಸ್ತೆಯಲ್ಲಿ ಶನಿವಾರ ಕಾಡಾನೆ ಕಂಡು ಬಂದಿದೆ. ಸಂಜೆ 4 ಗಂಟೆ ಸುಮಾರಿಗೆ ಘಾಟಿಯ ಒಂದನೇ ತಿರುವಿನ ಬಳಿ ರಸ್ತೆ ಮಧ್ಯೆ ಕಾಡಾನೆ ಕಂಡು ಬಂದಿದ್ದು ಸುಮಾರು ಅರ್ಧ ತಾಸಿಗಿಂತ ಅಧಿಕಕಾಲ ಒಂದೇ ಸ್ಥಳದಲ್ಲಿ ನಿಂತಿತ್ತು. ಈ ವೇಳೆ ಘಾಟಿಯ ಎರಡು ಬದಿಗಳಿಂದ ವಾಹನಗಳು ಸಂಚಾರ ನಡೆಸದೆ ಸಾಲುಗಟ್ಟಿ ನಿಂತವು. ಆನೆ ಅರಣ್ಯದ ಕಡೆ ಹೋದ ಬಳಿಕ ವಾಹನ ಸಂಚಾರ ಆರಂಭವಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಘಾಟಿ ಪ್ರದೇಶದ ರಸ್ತೆಯಲ್ಲಿ ಕಾಡಾನೆ ಆಗಾಗ ಕಂಡುಬರುವುದು ಸಾಮಾನ್ಯವಾಗಿದೆ. ಈ ವೇಳೆ ಕೆಲವು ಪ್ರವಾಸಿಗರು ಫೋಟೋ ವಿಡಿಯೋಗಾಗಿ ಆನೆ ಇರುವ ಸ್ಥಳದ ಹತ್ತಿರದವರೆಗೂ ಹೋಗುತ್ತಾರೆ. ಆದರೆ ಶನಿವಾರ ಪ್ರವಾಸಿಗರು ದೂರದಿಂದಲೇ ಫೋಟೋ ತೆಗೆಯುವುದು ವಿಡಿಯೋ ಮಾಡುವುದು ಕಂಡು ಬಂತು.
ಅರಣ್ಯ ಇಲಾಖೆ ವತಿಯಿಂದ ಘಾಟಿ ಪ್ರದೇಶದ ಅಲ್ಲಲ್ಲಿ ಇತ್ತೀಚಿಗೆ ಎಚ್ಚರಿಕೆ ಫಲಕಗಳನ್ನು ಹಾಕಲಾಗಿದ್ದು ಇದರಲ್ಲಿ ಕಾಡಾನೆ ರಸ್ತೆಯಲ್ಲಿ ಕಂಡುಬರುವ ಸಮಯ ಅವುಗಳ ಹತ್ತಿರ ತೆರಳದಂತೆ ಹಾಗೂ ಅದರ ಚಲನವಲನಕ್ಕೆ ಅಡ್ಡಿ ಉಂಟಾಗದಂತೆ ಇರಬೇಕು ಎಂಬ ಸೂಚನೆಯನ್ನು ನೀಡಲಾಗಿದೆ. ಘಾಟಿ ಪ್ರದೇಶದಲ್ಲಿ ವಿಪರೀತ ಮಂಜು ಕವಿದ ವಾತಾವರಣ ಇರುವುದರಿಂದ ವನ್ಯಜೀವಿಗಳು ರಸ್ತೆ ವ್ಯಾಪ್ತಿಯಲ್ಲಿದ್ದರೂ ಕಾಣದ ಸ್ಥಿತಿ ಇದೆ. ಇದರಿಂದ ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯಿಂದ ಪ್ರಯಾಣಿಸುವುದು ಅಗತ್ಯವಾಗಿದೆ.
ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಚಾರ್ಮಾಡಿ ಸುತ್ತಮುತ್ತ ಬೀಡು ಬಿಟ್ಟಿವೆ. ಎರಡು ದಿನಗಳ ಹಿಂದೆ ಮರಿಯಾನೆ ಸಹಿತ ಐದು ಕಾಡಾನೆಗಳ ಹಿಂಡೊಂದು ಮಠದ ಮಜಲು, ಕೆರೆಕೋಡಿ ಪರಿಸರದಲ್ಲಿ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಉಂಟುಮಾಡಿತ್ತು. ಇದಕ್ಕೂ ಕೆಲವು ದಿನ ಮೊದಲು ಒಂಟಿ ಸಲಗ ಇಲ್ಲಿನ ಮೃತ್ಯುಂಜಯ ನದಿಯಲ್ಲಿ ಬೆಳಗಿನ ಜಾವ ಕಂಡುಬಂದಿತ್ತು. ಇದೀಗ ಇಲ್ಲಿಂದ 2 ಕಿಮೀ ದೂರದ ಘಾಟಿ ರಸ್ತೆಯಲ್ಲಿ ಹಗಲು ಹೊತ್ತಲ್ಲೇ ಒಂಟಿ ಸಲಗ ಕಂಡುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ