ಎಸ್ಸೆಸ್ಸೆಲ್ಸಿ ಓದಿ 1 ಕೋಟಿ ರೂ. ಗಳಿಸಿದ ಚಾಮರಾಜನಗರ ಟೊಮೆಟೊ ಬೆಳೆಗಾರರು: ರೈತರಿಗೆ ಹೆಣ್ಣು ಕೊಡುವಂತೆ ಮನವಿ

By Sathish Kumar KHFirst Published Aug 7, 2023, 5:37 PM IST
Highlights

ಎಸ್‌ಎಸ್‌ಎಲ್‌ಸಿ ಓದು ಕೃಷಿ ಕೆಲಸ ಆರಂಭಿಸಿದ್ದ ಚಾಮರಾಜನಗರದ ಟೊಮೆಟೊ ಬೆಳೆಗಾರರು ಬರೋಬ್ಬರಿ ಒಂದು ಕೋಟಿ ಆದಾಯ ಗಳಿಸಿದ್ದು, ಈಗ ಹಳ್ಳಿಯ ರೈತರಿಗೆ ಹೆಣ್ಣು ಕೊಡುವಂತೆ ಮನವಿ ಮಾಡಿದ್ದಾರೆ.

ವರದಿ - ಪುಟ್ಟರಾಜು.ಆರ್.ಸಿ. ಏಷ್ಯಾನೆಟ್‌ ಸುವರ್ಣ ನ್ಯೂಸ್

ಚಾಮರಾಜನಗರ (ಆ.07): ಹೆಣ್ಣು ಹೆತ್ತವರಿಗೆ ಹಳ್ಳಿಯ ರೈತನೊಬ್ಬ ಸವಾಲು ಹಾಕಿದ್ದಾನೆ. ಟೊಮ್ಯಾಟೊ ಬೆಳೆದು ಕೋಟಿ ಸಂಪಾದಿಸಿ ಸೈ ಎನಿಸಿಕೊಂಡಿದ್ದಾನೆ. ಎಲ್ಲೆಡೆ ರೈತರಿಗೆ ಹೆಣ್ಣು ಕೊಡಲೂ ಹೆಣ್ಣು ಹೆತ್ತ ಪೋಷಕರು ಮುಂದಾಗ್ತಿಲ್ಲ. ಎಲ್ಲರೂ ಕೂಡ ಡಾಕ್ಟರ್, ಎಂಜಿನಿಯರ್, ಸರ್ಕಾರಿ ನೌಕರರೇ ಬೇಕು ಅನ್ನೋ ಈ ಕಾಲದಲ್ಲಿ ಕೋಟಿ ಸಂಪಾದಿಸಿ ನಾವೂ ಕೂಡ ಯಾರಿಗೂ ಕಮ್ಮಿಯಿಲ್ಲ ಅಂತಾ ತೋರಿಸಿಕೊಟ್ಟಿದ್ದಾನೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..

ಚಾಮರಾಜನಗರ ತಾಲೂಕು ಲಕ್ಷ್ಮೀಪುರದ ಕೃಷ್ಣ ಶೆಟ್ಟಿ ಎಂಬುವರ ಮಕ್ಕಳಾದ ರಾಜೇಶ್ ಮತ್ತು ನಾಗೇಶ್ ಅವರಿಗೆ ಕೃಷಿಯಲ್ಲಿ ಹೆಚ್ಚು ಆಸಕ್ತಿ. ಹಾಗಾಗಿಯೇ  ಎಸ್ಎಸ್ಎಲ್‌ಸಿ ವ್ಯಾಸಂಗ ಮೊಟಕುಗೊಳಿಸಿ ತಂದೆ, ತಾಯಿಯೊಡನೆ ವ್ಯವಸಾಯಕ್ಕಿಳಿದ್ದಿದ್ದರು. ತಮ್ಮ ತಂದೆ,ತಾಯಿ ಸ್ವಂತ ಎರಡೂವರೆ ಎಕರೆಯಲ್ಲಿ ಹಿಂದೊಮ್ಮೆ ಟೊಮ್ಯಾಟೊ ಬೆಳೆದು ಅಲ್ಪಸ್ವಲ್ಪ ಆದಾಯ ಕಂಡಿದ್ದರಿಂದ ಪ್ರೇರಿಪಿತರಾದ  ರಾಜೇಶ್ ಹಾಗು ನಾಗೇಶ್ ತಾವು ಏಕೆ ಕೃಷಿ ಮಾಡಬಾರದು ಎಂದು ಯೋಚಿಸಿ ತಮ್ಮ ಸ್ವಂತ ಜಮೀನಿನಲ್ಲಿ  ಆಗಾಗ್ಗೆ ಟೊಮ್ಯಾಟೊ ಬೆಳೆದು ಅಲ್ಪ,ಸ್ವಲ್ಪ ಲಾಭ ಗಳಿಸುತ್ತಿದ್ದರು ಕೆಲವೊಮ್ಮೆ ಕೈ ಸುಟ್ಟುಕೊಂಡಿದ್ದು ಉಂಟು. 

ರೈತನಿಗೆ ಹೆಣ್ಣು ಕೊಡೊಲ್ಲವೆಂದವರಿಗೆ ಸವಾಲು: ಟೊಮೆಟೊ ಮಾರಿ ಹೊಸ ಕಾರಿನಲ್ಲಿ ಕನ್ಯಾ ಕೇಳೋಕೆ ಹೋಗ್ತೀನೆಂದ ರೈತರು

ಈ ಬಾರಿ ಧೈರ್ಯ ಮಾಡಿ ತಮ್ಮ ಸ್ವಂತ ಎರಡುವರೆ ಎಕರೆ ಜೊತೆಗೆ ಜೊತೆಗೆ ಅಕ್ಕಪಕ್ಕದ ಜಮೀನುಗಳನ್ನು ಗುತ್ತಿಗೆ ಪಡೆದು 12 ಎಕರೆಯಲ್ಲಿ  ಟೊಮ್ಯಾಟೊ ಬೆಳೆದಿದ್ದಾರೆ.  ರೋಗ ಬಾಧೆ, ಕೀಟಬಾಧೆ, ಕೃಷಿ ಕಾರ್ಮಿಕರ ಸಮಸ್ಯೆ ಹೀಗೆ ಹತ್ತಾರು ಸವಾಲುಗಳನ್ನು ಮೆಟ್ಟಿ ನಿಂತು ಭರ್ಜರಿ ಬೆಳೆ ತೆಗೆದಿದ್ದಾರೆ.  ಇದೇ ವೇಳೆ  ಟೊಮ್ಯಾಟೋ ಬೆಲೆ ಗಗನ್ನಕೇರಿದ್ದು ಇವರ ಅದೃಷ್ಟದ ಬಾಗಿಲು ತೆರೆದಿದೆ. ಮೊದಲ ಎರಡು ಕೊಯ್ಲಿನಲ್ಲೇ 40 ಲಕ್ಷ ಆದಾಯ ಗಳಿಸಿರುವ ಈ ಸಹೋದರರು ಇನ್ನೂ 80 ಲಕ್ಷ ದಿಂದ ಒಂದುವರೆ ಕೋಟಿ  ಆದಾಯದ ನಿರೀಕ್ಷೆಯಲ್ಲಿದ್ದಾರೆ. ಈ ಸಹೋದರರು ಬೆಳೆದ ಟೊಮ್ಯಾಟೋಗೆ ಆರಂಭದಲ್ಲಿ ಕೆ.ಜಿ.ಗೆ 100 ರೂಪಾಯಿ ಬೆಲೆ ಸಿಕ್ಕಿದ್ದು ತಲಾ 30 ಕೆ.ಜಿ.ಯ  2000 ಬಾಕ್ಸ್ ಮಾರಾಟ ಮಾಡಿ 40 ಲಕ್ಷ ರೂಪಾಯಿ ಗಳಿಸಿದ್ದಾರೆ. ಕೇರಳ ಹಾಗು ತಮಿಳುನಾಡು ವ್ಯಾಪಾರಿಗಳು ಜಮೀನಿಗೇ ಬಂದು ಖರೀದಿಸುತ್ತಿದ್ದಾರೆ.

ಈಗ 80 ರೂಪಾಯಿ ಬೆಲೆ ಸಿಗುತ್ತಿದ್ದು ಇನ್ನೂ 6 ರಿಂದ 8 ಸಾವಿರ ಬಾಕ್ಸ್ ಟೊಮ್ಯಾಟೊ ಸಿಗುವ ನಿರೀಕ್ಷೆ ಇದೆ. ರೈತರೆಂದರೆ ಕೀಳಾಗಿ ನೋಡ್ತಾರೆ, ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡ್ತಾರೆ, ಹಾಗಾಗಿಯೇ ವ್ಯವಸಾಯದಲ್ಲಿ ಸಾಧನೆ ಮಾಡಬೇಕು ರೈತರು ಕೋಟಿ ಸಂಪಾದನೆ ಮಾಡಬಹುದು, ರೈತರು ಯಾರಿಗೇನು ಕಮ್ಮಿ ಇಲ್ಲ ಎಂದು ತೋರಿಸಬೇಕು ಎಂದು ಕೊಂಡಿದ್ದು ಈಗ ಆ ಸಾಧನೆ ಮಾಡಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ..

ಕೃಷಿ ಸಚಿವ ಚಲುವರಾಯಸ್ವಾಮಿಗೆ ಮಂತ್ರಿಗಿರಿ ಕುರ್ಚಿ ಕಂಟಕ: ಕಂಡಕ್ಟರ್ ಆಯ್ತು, ಈಗ ಕೃಷಿ ಅಧಿಕಾರಿಗಳಿಂದ ಆತ್ಮಹತ್ಯೆ ಬೆದರಿಕೆ

ಇನ್ನೂ  ತಮ್ಮ ಮಕ್ಕಳ ಸಾಧನೆಗೆ ಹೆಮ್ಮೆಪಡುವ ತಂದೆ ಕೃಷ್ಣಶೆಟ್ಟಿ ಮಕ್ಕಳಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ಈಗ ಟೊಮ್ಯಾಟೊ ದಿಂದ ಸಂಪಾದನೆಯಾಗುತ್ತಿರುವ ಹಣದಲ್ಲಿ ಇಬ್ಬರಿಗು ಸ್ವಂತ ಮನೆ ಕಟ್ಟಿಕೊಡಬೇಕು, ಸ್ವಂತ ಜಮೀನು ಖರೀದಿಸಿಕೊಡಬೇಕು ಎಂದುಕೊಂಡಿದ್ದಾರೆ.ಅಲ್ಲದೇ ಬಂದಂತಹ ಆದಾಯದಲ್ಲಿ ಕಾರು ಖರೀದಿ ಮಾಡಲೂ ಕೂಡ ಮುಂದಾಗಿದ್ದಾರೆ.ಅಲ್ಲದೇ ಚಾಮರಾಜನಗರ ತಾಲೂಕಿನ ಕೆಬ್ಬೇಪುರದಲ್ಲಿ ರೈತನ ಬೆಳೆ ನಾಶದ ನಂತರ ಪೊಲೀಸರು ಕೂಡ ಅಲರ್ಟ್ ಆಗಿದ್ದು, ಟೊಮ್ಯಾಟೊ ಬೆಳೆದ ಜಮೀನಿನಲ್ಲಿ ಗಸ್ತು ಕೂಡ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ಹಠಕ್ಕೆ ಬಿದ್ದಿದ್ದ ಈ ಸಹೋದರರು ಇದೀಗ ಕೃಷಿಯಲ್ಲಿ ಯಶ ಕಂಡಿದ್ದಾರೆ.ಅಲ್ಲದೇ ಬಂದ ಆದಾಯದಲ್ಲಿ ಕಾರು ಖರೀದಿಸಲು ಕೂಡ ನಿರ್ಧಾರ ಮಾಡಿದ್ದಾರೆ. ಹೆಣ್ಣು ಕೊಡಲೂ ಹಿಂದೇಟು ಹಾಕುವ ಪೋಷಕರಿಗೂ ಕೂಡ ಈ ಮೂಲಕ ಸೆಡ್ಡು ಹೊಡೆದಿದ್ದಾರೆ.

click me!