ಮದುವೆ ಭಾಗ್ಯಕ್ಕೆ ಮಲೆ ಮಹದೇಶ್ವರನ ಮೊರೆ ಹೋದ ಬ್ರಹ್ಮಚಾರಿಗಳು!

By Kannadaprabha NewsFirst Published Nov 12, 2023, 8:29 PM IST
Highlights

ಪ್ರಸಿದ್ಧ ಧಾರ್ಮಿಕ ಸ್ಥಳವಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶನಿವಾರದಿಂದ ದೀಪಾವಳಿ ಜಾತ್ರೆ ಆರಂಭಗೊಂಡಿದೆ. 

ಚಾಮರಾಜನಗರ (ನ.12): ಪ್ರಸಿದ್ಧ ಧಾರ್ಮಿಕ ಸ್ಥಳವಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶನಿವಾರದಿಂದ ದೀಪಾವಳಿ ಜಾತ್ರೆ ಆರಂಭಗೊಂಡಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಪಾದಯಾತ್ರೆ ಮೂಲಕ ಕ್ಷೇತ್ರಕ್ಕೆ ತೆರಳುತ್ತಿದ್ದು ಅವಿವಾಹಿತ ಯುವಕರು ಮದುವೆಯಾಗಲೆಂದು ಮಾದಪ್ಪನ ಮೊರೆ ಹೋಗಿದ್ದಾರೆ. ಮೈಸೂರು ಜಿಲ್ಲೆಯ ಟಿ‌.ನರಸೀಪುರ ತಾಲೂಕಿನ ದೊಡ್ಡಮೂಡು ಎಂಬ ಗ್ರಾಮದಿಂದ ಯುವಕರ ದಂಡೇ ಮದುವೆ ಭಾಗ್ಯ ಕರುಣಿಸಲೆಂದು ಪಾದಯಾತ್ರೆ ನಡೆಸುತ್ತಿದ್ದಾರೆ. 

ಹನೂರಿನಲ್ಲಿ ಮಾತನಾಡಿದ ಯುವಕರು, ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ, 11 ವರ್ಷಗಳ ಹಿಂದೆ 10-20 ಯುವಕರ ತಂಡದೊಂದಿದೆ ಆರಂಭವಾದ ನಮ್ಮ ಪಾದಯಾತ್ರೆ ಈಗ ನೂರಾರು ಸಂಖ್ಯೆ ಆಗಿದೆ. ಸಿದ್ದರಾಮಯ್ಯ ಎಲ್ಲಾ ಭಾಗ್ಯವನ್ನು ಕೊಟ್ಟಿದ್ದಾರೆ. ಅದೇ ರೀತಿ ರೈತರ ಮಕ್ಕಳಿಗೆ ಹೆಣ್ಣು ಭಾಗ್ಯವನ್ನು ಕೊಡಬೇಕು, ನಮಗೆ ದುಡ್ಡು-ಕಾಸು ಬೇಡ, ವಿವಾಹ ಭಾಗ್ಯ ಕೊಡಬೇಕೆಂದು ಆಗ್ರಹಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ನೂರಾರು ಯುವಕರು ಮಳೆ ಬರಲಿ- ರೈತರು, ಕೂಲಿ ಕಾರ್ಮಿಕರಿಗೆ ಹೆಣ್ಣು ಸಿಗಲೆಂದು ಪ್ರಾರ್ಥಿಸಿ ಪಾದಯಾತ್ರೆ ಕೈಗೊಂಡಿದ್ದರು.

ರಾಮನಗರದಲ್ಲಿ ಒನಕೆ ಓಬವ್ವ ಭವನ ನಿರ್ಮಾಣಕ್ಕೆ ಕ್ರಮ: ಶಾಸಕ ಇಕ್ಬಾಲ್ ಹುಸೇನ್

ರೈತರೇ ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಹೆಣ್ಣು ಕೇಳಲು ಹೋದರೆ ಎಲ್ಲರೂ ಸರ್ಕಾರಿ ಕೆಲಸವನ್ನೇ ಕೇಳುತ್ತಿದ್ದಾರೆ. ಎಲ್ಲಿಂದ ತರುವುದು ಸರ್ಕಾರಿ ಕೆಲಸ. ಮಹದೇಶ್ವರನಿಗೆ ಜನರಿಗೆ ಒಳ್ಳೆ ಬುದ್ಧಿ ನೀಡಿ ಯುವಕರಿಗೆ ಹೆಣ್ಣು ಸಿಗುವಂತೆ ಮಾಡಬೇಕಿದೆ.
-ಮಲ್ಲೇಶ್‌, ಸದಸ್ಯ, ಅಖಿಲ ಕರ್ನಾಟಕ ಬ್ರಹ್ಮಚಾರಿ ಸಂಘ

click me!