
ಬೆಂಗಳೂರು : ಕರ್ನಾಟಕ ಹೈಕೋರ್ಟ್ನ ಧಾರವಾಡ ವಿಭಾಗೀಯ ಪೀಠ ಹಾಗೂ ರಾಮನಗರ, ಕಾರವಾರ, ದಾವಣಗೆರೆ, ಮಂಡ್ಯ, ಹಾಸನ, ಮಡಿಕೇರಿ, ಧಾರವಾಡ, ಮಂಗಳೂರು ಹಾಗೂ ಹಾವೇರಿ ಜಿಲ್ಲಾ ಪ್ರಧಾನ ನ್ಯಾಯಾಲಯ ಸೇರಿ ಒಟ್ಟು 10 ನ್ಯಾಯಾಲಯಗಳಿಗೆ ಸೋಮವಾರ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದ್ದು, ಜನರ ಆತಂಕಕ್ಕೆ ಕಾರಣವಾಯಿತು.
ನ್ಯಾಯಾಲಯಗಳ ಅಧಿಕೃತ ಇ-ಮೇಲ್/ಜಿಲ್ಲಾ ಪ್ರಧಾನ ನ್ಯಾಯಾಧೀಶರ ಇ-ಮೇಲ್ಗಳಿಗೆ ಸೋಮವಾರ ಬೆಳಗ್ಗೆ 8.25ರಿಂದ ಮಧ್ಯಾಹ್ನ 12.30ರ ನಡುವೆ ಈ ಬೆದರಿಕೆಯ ಸಂದೇಶ ಬಂದಿದ್ದು, ಆತಂಕಗೊಂಡ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ, ಕಕ್ಷಿದಾರರು ಕಲಾಪ ಸ್ಥಗಿತಗೊಳಿಸಿ, ನ್ಯಾಯಾಲಯಗಳಿಂದ ಹೊರ ಬಂದರು. ಬಳಿಕ, ಬಾಂಬ್ ಪತ್ತೆ ದಳ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಇವೆಲ್ಲವೂ ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಎಂಬುದು ದೃಢಪಟ್ಟಿತು. ಬಳಿಕ, ನ್ಯಾಯಾಲಯದ ಕಾರ್ಯ-ಕಲಾಪಗಳು ಎಂದಿನಂತೆ ಮುಂದುವರಿದವು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಡ್ಯದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಈ.ತಿಮ್ಮಯ್ಯ, ಒಂದೇ ಇ-ಮೇಲ್ನಿಂದ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಇ-ಮೇಲ್ ವಿಳಾಸ ಹಾಗೂ ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಸುನ್ನಿಯಾ ದಾಸನ್ ಹೆಸರಿನ sunniya_dasan@outlook.com ಎಂಬ ಐಡಿಯಿಂದ ಈ ಬೆದರಿಕೆ ಮೇಲ್ ಬಂದಿದೆ. ನಿಮ್ಮ ನ್ಯಾಯಾಲಯದ ಆವರಣ/ನ್ಯಾಯಾಧೀಶರ ಕೊಠಡಿಯಲ್ಲಿ ಆರ್ಡಿಎಕ್ಸ್ ಮತ್ತು ಐಇಡಿ ಸ್ಫೋಟಕ ಇರಿಸಲಾಗಿದ್ದು, ಶೀಘ್ರದಲ್ಲೇ ಅವು ಸ್ಫೋಟಗೊಳ್ಳಲಿವೆ. ಕೋರ್ಟ್ನಲ್ಲಿರುವ ಎಲ್ಲರನ್ನೂ ಸ್ಥಳಾಂತರಿಸಿ ಎಂದು ಮೇಲ್ನಲ್ಲಿ ಎಚ್ಚರಿಸಲಾಗಿದೆ.
ತಮಿಳುನಾಡಿನಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿ ರಕ್ಷಿಸಿ ಎಂದು ಮನವಿ ಮಾಡಲಾಗಿದೆ. ಬೆದರಿಕೆ ಮೇಲ್ನಲ್ಲಿ ತಮಿಳುನಾಡಿನ ರಾಜಕೀಯ ತಂತ್ರಗಾರರಾದ ಪ್ರಶಾಂತ್ ಕಿಶೋರ್ ಮತ್ತು ಸುನಿಲ್ ಕನುಗೋಲು ಸೂಚನೆಯಂತೆ ತಮಿಳುನಾಡು ಸರ್ಕಾರ ಮಾಧ್ಯಮಗಳನ್ನು ನಿಯಂತ್ರಿಸುತ್ತಿದೆ. ಅಲ್ಲದೆ, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಅಜೆಂಡಾ ಜಾರಿಗೆ ತರಲು ಕೆಲವು ಹಿರಿಯ ಪತ್ರಕರ್ತರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಮೇಲ್ನಲ್ಲಿ ಪತ್ರಕರ್ತರು ಮತ್ತು ಬಾಲಕಿಯರ ಹೆಸರನ್ನು ಉಲ್ಲೇಖಿಸಿ, ಡಿಎಂಕೆಯ ಜಾಫರ್ ಸಾದಿಕ್ ಮೂಲಕ ಅನೈತಿಕ ಚಟುವಟಿಕೆ ನಡೆಯುತ್ತಿವೆ ಎಂಬ ಸ್ಫೋಟಕ ಆರೋಪ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಸಂದೇಶದ ಕೊನೆಯಲ್ಲಿ Pak ISI Cell–Coimbatore LTTE-TOSIS ಎಂದು ನಮೂದಿಸಲಾಗಿದ್ದು, ಭಯೋತ್ಪಾದಕ ಸಂಘಟನೆಗಳ ಹೆಸರನ್ನು ಬಳಸಿಕೊಳ್ಳಲಾಗಿದೆ.
ರಾಮನಗರ, ಕಾರವಾರ, ದಾವಣಗೆರೆ, ಮಂಡ್ಯ, ಹಾಸನ, ಮಡಿಕೇರಿ, ಧಾರವಾಡ, ಮಂಗಳೂರು, ಹಾವೇರಿ ಜಿಲ್ಲಾ ಕೋರ್ಟ್ಗಳು, ಧಾರವಾಡ ಹೈಕೋರ್ಟ್ ಪೀಠ.
34 ಶಾಲೆಗಳಿಗೆ ಸೋಮವಾರ ಕಿಡಿಗೇಡಿಗಳು ಬಾಂಬ್ ಬೆದರಿಕೆ
ಅಹಮದಾಬಾದ್/ಡೆಹ್ರಾಡೂನ್: ಗುಜರಾತಿನ ಅಹಮದಾಬಾದ್ ಮತ್ತು ವಡೋದರಾದ 34 ಶಾಲೆಗಳಿಗೆ ಸೋಮವಾರ ಕಿಡಿಗೇಡಿಗಳು ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು, ಶ್ವಾನದಳ ಮತ್ತು ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಈ ವೇಳೆ ಯಾವುದೇ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇನ್ನೊಂದೆಡೆ ಉತ್ತರಪ್ರದೇಶದ 5 ಮತ್ತು ಉತ್ತರಾಖಂಡದ ನೈನಿತಾಲ್ನ ಜಿಲ್ಲಾ ನ್ಯಾಯಾಲಯಕ್ಕೂ ಇದೇ ರೀತಿಯ ಬೆದರಿಕೆ ಬಂದಿತ್ತು. ತಪಾಸಣೆ ಬಳಿಕ ಅದು ಹುಸಿ ಕರೆ ಎಂದು ಪತ್ತೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ