
ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ನಡೆದಿದ್ದ ವಿದೇಶಿ ಮಹಿಳೆ ಮೇಲಿನ ಅ*ತ್ಯಾ*ಚಾರ ಹಾಗೂ ದೇಶಿ ಪ್ರವಾಸಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳಿಗೆ ಮರಣದಂಡನೆ ವಿಧಿಸಲಾಗಿದೆ. ಕೆಳ ಹಂತದ ನ್ಯಾಯಾಲಯದ ಐತಿಹಾಸಿಕ ತೀರ್ಪು ಇದಾಗಿದೆ.
ಪ್ರಕರಣದ ಆರೋಪಿಗಳಾದ ಗಂಗಾವತಿ ಸಾಯಿನಗರದ ನಿವಾಸಿಗಳಾದ ಮಲ್ಲೇಶ್ @ ಹಂದಿಮಲ್ಲ, ಸಾಯಿ ಹಾಗೂ ಶರಣಪ್ಪ ಎಂಬ ಮೂವರು ಆರೋಪಿಗಳು ಪ್ರಕರಣದಲ್ಲಿ ದೋಷಿಗಳೆಂದು ಈಗಾಗಲೇ ನ್ಯಾಯಾಲಯ ತೀರ್ಮಾನಿಸಿತ್ತು. ಇಂದು ಶಿಕ್ಷೆಯ ಪ್ರಮಾಣ ಘೋಷಣೆ ಮಾಡಿದ ನ್ಯಾಯಧೀಶ ಸದಾನಂದ ನಾಗಪ್ಪ ನಾಯಕ್ ಅವರು ಮೂವರಿಗೂ ಮರಣದಂಡನೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಹಂಪಿ ಸಮೀಪದ ಸಾಣಾಪುರದ ತುಂಗಭದ್ರಾ ಎಡದಂಡೆ ಕಾಲುವೆ ಬಳಿ 2025ರ ಮಾರ್ಚ್ 6ರಂದು ಘಟನೆ ನಡೆದಿತ್ತು. ವಿದೇಶಿ ಮಹಿಳೆ, ಅಮೆರಿಕದ ಪ್ರವಾಸಿಗನ ಕೊಲೆ ನಡೆದಿತ್ತು. ಅನೇಕುಂದಿ ಪ್ರದೇಶದ ಹೋಮ್ಸ್ಟೇನಲ್ಲಿ ತಂಗಿದ್ದ 5 ಮಂದಿ ಪ್ರವಾಸಿಗರು ಊಟದ ನಂತರ ಕಾಲುವೆ ಬಳಿ ಮ್ಯೂಸಿಕ್ ಕೇಳುತ್ತ ಕುಳಿತಿದ್ದರು. ಈ ವೇಳೆ ಮದ್ಯಪಾನ ಮಾಡಿ ಬಂದಿದ್ದ ಮೂವರು ಆರೋಪಿಗಳು ಈ ಕೃತ್ಯ ಎಸಗಿದ್ದರು. ಮಾತ್ರವಲ್ಲ ಗುಂಪಿನಲ್ಲಿದ್ದ ಮೂವರು ಪುರುಷ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ ಅವರನ್ನು ಕಾಲುವೆಗೆ ತಳ್ಳಿ ಇಬ್ಬರು ಮಹಿಳಾ ಪ್ರವಾಸಿಗರ ಮೇಲೆ ಸಾಮೂಹಿಕ ಅ*ತ್ಯಾ*ಚಾರ ನಡೆಸಿದ್ದರು. ಸಂತ್ರಸ್ತ ಮಹಿಳೆಯರಲ್ಲಿ ಒಬ್ಬರು ಇಸ್ರೇಲ್ ಪ್ರಜೆಯಾಗಿದ್ದರೆ, ಮತ್ತೊಬ್ಬರು ಭಾರತೀಯ ಮಹಿಳೆಯಾಗಿದ್ದರು. ಇನ್ನು ಆರೋಪಿಗಳು ನಡೆಸಿದ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಒಡಿಶಾ ಮೂಲದ ಬಿಭಾಷಾ ಎಂಬ ಯುವಕ ಈಜಲು ಆಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಮೃತದೇಹವನ್ನು ಸುಮಾರು 24 ಗಂಟೆಗಳ ನಂತರ ಪತ್ತೆ ಹಚ್ಚಲಾಗಿತ್ತು. ಇತರ ಇಬ್ಬರು ಪ್ರವಾಸಿಗರು ಈಜಿ ದಡ ಸೇರಿ, ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಪ್ರಕರಣವು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ಘಟನೆಯ ಬಳಿಕ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಅ*ತ್ಯಾ*ಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ವೇಗವಾಗಿ ನಡೆಸಿದ ಪೊಲೀಸರು ಸಮಗ್ರ ಸಾಕ್ಷ್ಯಾಧಾರಗಳೊಂದಿಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆಯ ವೇಳೆ ನ್ಯಾಯಾಲಯದಲ್ಲಿ ಆರೋಪಗಳೆಲ್ಲವೂ ಸಾಬೀತಾಗಿವೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಲಾಗಿತ್ತು.
ಇಂದು ಅಂತಿಮ ತೀರ್ಪು ಪ್ರಕಟಿಸಿದ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಪ್ರಕರಣ ನಡೆದು ಕೇವಲ 9 ತಿಂಗಳೊಳಗೆ ತೀರ್ಪು ನೀಡುವ ಮೂಲಕ ನ್ಯಾಯಾಂಗದ ದಕ್ಷತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ನ್ಯಾಯಮೂರ್ತಿ ಸದಾನಂದ ನಾಗಪ್ಪ ನಾಯಕ್ ಅವರು ತೀರ್ಪು ಪ್ರಕಟಿಸಿ, ಇಂತಹ ಕ್ರೂರ ಅಪರಾಧಗಳಿಗೆ ಸಮಾಜದಲ್ಲಿ ಯಾವುದೇ ಸ್ಥಳವಿಲ್ಲ ಎಂಬ ಬಲವಾದ ಸಂದೇಶವನ್ನು ನೀಡಿದರು. ವಿದೇಶಿ ಮಹಿಳೆಯ ಮೇಲಿನ ಅ*ತ್ಯಾ*ಚಾರ ಹಾಗೂ ನಿರಪರಾಧಿ ಯುವಕನ ಕೊಲೆ ಪ್ರಕರಣದಲ್ಲಿ ನ್ಯಾಯ ದೊರೆತಿದೆ ಎಂಬ ಭಾವನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ