ದಕ್ಷಿಣ ಕನ್ನಡ: ಸೌಜನ್ಯ ಪ್ರಕರಣ ಮರು ತನಿಖೆ ಆಗ್ರಹಿಸಿ ಬಿಜೆಪಿ ಬೃಹತ್‌ ಪ್ರತಿಭಟನೆ

By Kannadaprabha NewsFirst Published Aug 27, 2023, 9:30 PM IST
Highlights

ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಪಕ್ಷದ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ, ಉಜಿರೆ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಭಾನುವಾರ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಪ್ರಾಂಗಣದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನೆಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲಾ ಬಿಜೆಪಿಯ ಶಾಸಕರು, ಮಾಜಿ ಶಾಸಕರು ಭಾಗಿಯಾಗಿದ್ದರು.

ಬೆಳ್ತಂಗಡಿ (ಆ.27) :  ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಪಕ್ಷದ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ, ಉಜಿರೆ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಭಾನುವಾರ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಪ್ರಾಂಗಣದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನೆಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲಾ ಬಿಜೆಪಿಯ ಶಾಸಕರು, ಮಾಜಿ ಶಾಸಕರು ಭಾಗಿಯಾಗಿದ್ದರು.

ಸಂಸದ ನಳಿನ್‌ ಕುಮಾರ್‌(MP Nalin kumar kateel) ಮಾತನಾಡಿ, ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ(Soujanya rape and murder case)ವನ್ನು ಸಿಬಿಐ ನ್ಯಾಯಾಲಯ ತನಿಖೆ ನಡೆಸಿ, ಸಂತೋಷ್‌ ರಾವ್‌ ನಿರಪರಾಧಿ ಎಂದು ಹೇಳಿದ್ದರಿಂದ, ಈ ಪ್ರಕರಣದ ಮರುತನಿಖೆಗೆ ಅವಕಾಶ ಇದೆ. ನ್ಯಾಯಾಲಯದ ಮೂಲಕವೇ ಇದರ ಮರು ತನಿಖೆಯಾಗಬೇಕು. ಈ ಪ್ರಕರಣದ ಹಿಂದೆ ಯಾರೇ ಪ್ರಭಾವಿಗಳಿದ್ದರೂ ಅವರ ಬಂಧನವಾಗಬೇಕು ಎಂದು ಆಗ್ರಹಿಸಿದರು.

ಸೌಜನ್ಯ ಹತ್ಯೆ ಮರುತನಿಖೆಗೆ ಕೇಂದ್ರಕ್ಕೆ ಪತ್ರ: ಸಿದ್ದರಾಮಯ್ಯ

ಪ್ರಕರಣ ಸಿಬಿಐ ತನಿಖೆಯಲ್ಲಿ ಇದ್ದಾಗ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಆದರೆ ಇದೀಗ ಸಂತೋಷ್‌ ರಾವ್‌ ನಿರ್ದೋಷಿ ಎಂದು ಬಂದಿರುವುದರಿಂದ ಈ ಕೊಲೆಯನ್ನು ಮಾಡಿದವರು ಯಾರು ಎಂಬುದು ಗೊತ್ತಾಗಬೇಕಾಗಿದೆ. ಇದಕ್ಕಾಗಿ ಅಪರಾಧಿ ಯಾರೇ ಇದ್ದರೂ ಅವರ ಬಂಧನವಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ, ಬೆಳ್ತಂಗಡಿಯ ಮಾಜಿ ಶಾಸಕರಲ್ಲಿ ಸಾಕ್ಷಿ ಇದ್ದರೆ ಅದನ್ನು ಹೇಳಲಿ, ಅವರಿಗೆ ಭದ್ರತೆಯನ್ನು ಕೊಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಸಿಬಿಐ ತನಿಖೆಯಾಗಿರುವುದರಿಂದ ಇದರ ಮರು ತನಿಖೆಗೆ ಮುಖ್ಯಂತ್ರಿ, ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ ಎಂದರು.

ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಮಾತನಾಡಿ, ಗೃಹ ಸಚಿವರು ಇದು ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ. ಆದರೆ ಇದು ಮುಗಿದ ಅಧ್ಯಾಯವಲ್ಲ, ಈಗ ಹೋರಾಟ ಆರಂಭ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಲ್ಲ ಸಂಘಟನೆಗಳ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ತಿಳಿಸಿದರು.

ಸೌಜನ್ಯಾ ತಾಯಿ ಕುಸುಮಾವತಿ ಅವರು ಪ್ರಧಾನಿಯವನ್ನು ಭೇಟಿ ಮಾಡಬೇಕು ಅದನ್ನು ಮಾಡಿಸಿಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ವ್ಯವಸ್ಥೆಯನ್ನು ಬಿಜೆಪಿ ವತಿಯಿಂದ ಮಾಡುತ್ತೇವೆ. ಅವರನ್ನು ಭೇಟಿ ಮಾಡಿಸುತ್ತೇವೆ ಎಂದು ಸುನಿಲ್‌ ಕುಮಾರ್‌ ಭರವಸೆ ನೀಡಿದರು.

ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರಿಗೆ ಆರೋಪಿಗಳು ಯಾರು ಎಂದುಗೊತ್ತಿದ್ದರೆ ತನಿಖಾ ಸಂಸ್ಥೆಗೆ ಹೇಳಿ, ಗೊತ್ತಿದ್ದು ಅದನ್ನು ಮುಚ್ಚಿಡುವುದ ಕೂಡಾ ಅಪರಾಧವಾಗುತ್ತದೆ ಎಂದರು.

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಕರಣದ ನೈಜ ಆರೋಪಿಗಳ ಶೀಘ್ರ ಬಂಧನವಾಗಬೇಕು ಎಂದರು.

ಪ್ರಧಾನಿ ಭೇಟಿ ಮಾಡಿಸಿ: ಸೌಜನ್ಯ ತಾಯಿ ಕುಸುಮಾವತಿ ಅವರು ಮಾತನಾಡಿ, ನನ್ನ ಮಗಳ ಕೊಲೆ ಪ್ರಕರಣದಲ್ಲಿ ಕಳೆದ 11 ವರ್ಷಗಳಿಂದ ನ್ಯಾಯ ಕೇಳುತ್ತಿದ್ದೇನೆ ಅದರೆ ನನಗೆ ನ್ಯಾಯ ಸಿಗಲಿಲ್ಲ, ನನಗೆ ನ್ಯಾಯ ಒದಗಿಸಬೇಕು. ನನಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಬೇಕು ಅದಕ್ಕೆ ವ್ಯವಸ್ಥೆಯನ್ನು ನೀವು ಮಾಡಬೇಕು, ಹರೀಶ್‌ ಪೂಂಜರ ಬಗ್ಗೆ ನನಗೆ ಭರವಸೆ ಇದೆ. ಅವರು ಮಾಡಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಮನೆ ಮನೆಗಳಲ್ಲಿ ಕಾರ್ಯಕರ್ತರು ಪ್ರಾರ್ಥಿಸಲು ಮನವಿ:

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಹರೀಶ್‌ ಪೂಂಜ, ನಾವು ಈಗಾಗಲೇ ಈ ಪ್ರಕರಣದ ಮರು ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದೇವೆ. ಇಂದಿನಿಂದ ಮೂರು ದಿನಗಳ ಕಾಲ ದ.ಕ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ತಮ್ಮ ಮನೆಯಲ್ಲಿ ದೇವರಿಗೆ ಪ್ರಾರ್ಥನೆ ಮಾಡುವಾಗ ಸೌಜನ್ಯ ಕೊಲೆ ಆರೋಪಿಗಳ ಶೀಘ್ರ ಪತ್ತೆಯಾಗಬೇಕು ಎಂದು ಪ್ರಾರ್ಥಿಸುವಂತೆ ಸಲಹೆ ನೀಡಿದರು.

ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ, ಮಂಗಳೂರು ಶಾಸಕ ವೇದವ್ಯಾಸ ಕಾಮತ್‌, ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಮಾತನಾಡಿದರು.

ವೇದಿಕೆಯಲ್ಲಿ ಸೌಜನ್ಯಳ ಅಜ್ಜ ಬಾಬು ಗೌಡ ಪಾಂಗಾಳ, ಶಾಸಕರಾದ ರಾಜೇಶ್‌ ನಾಯ್ಕ, ಡಾ. ಭಾರತ್‌ ಶೆಟ್ಟಿ, ಕಿರಣ್‌ ಕೋಡ್ಗಿ, ಗುರುರಾಜ ಗಂಟಿಹೊಳೆ, ಗುರ್ಮೆ ಸುರೇಶ್‌ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಸಹಪ್ರಭಾರಿ ಗೋಪಾಲಕೃಷ್ಣ ಹೆರಳೆ, ಸಹ ಪ್ರಭಾರಿ ಭಾರತೇಶ್‌ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್‌ ಉಪಸ್ಥಿತರಿದ್ದರು. ಸುದರ್ಶನ್‌ ಮೂಡುಬಿದಿರೆ ಸ್ವಾಗತಿಸಿದರು. ಜಿಲ್ಲಾ ವಿಭಾಗ ಸಹ ಪ್ರಭಾರಿ ಉದಯಕುಮಾರ್‌ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಉಡುಪಿ ಜಿಲ್ಲಾ ಅಧ್ಯಕ್ಷ ಕುಲಾಡಿ ಸುರೇಶ್‌ ನಾಯ್ಕ ವಂದಿಸಿದರು. ಸ್ವಸ್ತಿಕ ಬೆಳ್ತಂಗಡಿ ವಂದೇಮಾತರಂ ಹಾಡಿದರು.

ಸೌಜನ್ಯ ಪ್ರಕರಣ ಮರು ತನಿಖೆಯಾಗಲಿ: ಪ್ರಮೋದ್‌ ಮುತಾಲಿಕ್‌

ದ.ಕ. ಮತ್ತು ಉಡುಪಿ ಜಿಲ್ಲೆಯ 13 ವಿಧಾನಸಭಾ ಕ್ಷೇತ್ರಗಳಿಂದ ಬಸ್ಸುಗಳಲ್ಲಿ ಕಾರ್ಯಕರ್ತರು ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬಿರುಬಿಸಿಲಿದ್ದರೂ ನ್ಯಾಯ ಕೊಡಿ, ನ್ಯಾಯ ಕೊಡಿ ಎಂಬ ಒಕ್ಕಣೆಯ ಫಲಕಗಳನ್ನು ಹಿಡಿದು ಸಭೆಯ ಕೊನೆಯ ತನಕ ಭಾಗವಹಿಸಿದ್ದರು. ಎಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಸಮಾರಂಭದ ಬಳಿಕ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸೌಜನ್ಯಾಳ ಬೃಹತ್‌ ಭಾವಚಿತ್ರವನ್ನು ವೇದಿಕೆಯಲ್ಲಿಡಲಾಗಿತ್ತು. ಸಭೆಯ ಪ್ರಾರಂಭದಲ್ಲಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆಯನ್ನು ನೆರವೇರಿಸಿದರು.

click me!