ಇಂದು ಕೊಪ್ಪಳಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ: ಜಿಲ್ಲಾ ಕಚೇರಿ ಉದ್ಘಾಟನೆ

By Govindaraj SFirst Published Dec 15, 2022, 9:58 AM IST
Highlights

ಬಿಜೆಪಿ ಜಿಲ್ಲಾ ಕಚೇರಿ ಉದ್ಘಾಟನೆಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಡಿ.15ರಂದು ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಕವಲೂರು ನಗರದಲ್ಲಿ ನಿರ್ಮಿಸಲಾದ ಜಿಲ್ಲಾ ಬಿಜೆಪಿ ನೂತನ ಕಟ್ಟಡವನ್ನು ಜೆ.ಪಿ ನಡ್ಡಾ ಅವರು ಉದ್ಘಾಟಿಸುವರು.

ಕೊಪ್ಪಳ (ಡಿ.15): ಬಿಜೆಪಿ ಜಿಲ್ಲಾ ಕಚೇರಿ ಉದ್ಘಾಟನೆಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಡಿ.15ರಂದು ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಕವಲೂರು ನಗರದಲ್ಲಿ ನಿರ್ಮಿಸಲಾದ ಜಿಲ್ಲಾ ಬಿಜೆಪಿ ನೂತನ ಕಟ್ಟಡವನ್ನು ಜೆ.ಪಿ ನಡ್ಡಾ ಅವರು ಉದ್ಘಾಟಿಸುವರು. ಗುರುವಾರ ಬೆಳಗ್ಗೆ 10.30ಕ್ಕೆ ವಿಶೇಷ ವಿಮಾನ ಮೂಲಕ ನಡ್ಡಾ ಅವರು ಕೊಪ್ಪಳಕ್ಕೆ ಆಗಮಿಸಲಿದ್ದು, ಅವರನ್ನು ಪೂರ್ಣಕುಂಭ ಮೆರವಣಿಗೆ ಮೂಲಕ ಸ್ವಾಗತಿಸಲಾಗುತ್ತದೆ. ಕಚೇರಿ ಉದ್ಘಾಟನೆ ನಡೆಯಲಿದ್ದು, ಬಳಿಕ ಪಕ್ಷ ಕಟ್ಟಿಬೆಳೆಸಿದ ಹಿರಿಯರು ಹಾಗೂ ಕಚೇರಿ ಕಟ್ಟಲು ನೆರವು ನೀಡಿದವರನ್ನು ಸನ್ಮಾನಿಸಲಾಗುತ್ತದೆ.

ಹಾಗೆ ಕೊಪ್ಪಳದಿಂದಲೇ ವಚ್ರ್ಯುವಲ್‌ ವೇದಿಕೆ ಮೂಲಕ ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಬಳ್ಳಾರಿ, ರಾಯಚೂರು, ಬೀದರ್‌, ಚಾಮರಾಜನಗರ, ಕೋಲಾರ ಜಿಲ್ಲಾ ಕಚೇರಿಗಳನ್ನು ಸಹ ಉದ್ಘಾಟಿಸಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಸಚಿವರಾದ ಆನಂದ ಸಿಂಗ್‌, ಹಾಲಪ್ಪ ಆಚಾರ್‌ ಹಾಗೂ ನಾನಾ ಇಲಾಖೆ ಸಚಿವರು, ಸಂಸದ ಸಂಗಣ್ಣ ಕರಡಿ, ನಾನಾ ಜಿಲ್ಲಾ ಸಂಸದರು, ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು, ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನ ಗೌಡ ಪಾಟೀಲ, ಬಳ್ಳಾರಿ ವಿಭಾಗ ಪ್ರಭಾರಿ ಸಿದ್ದೇಶ ಯಾದವ, ಕಾಡಾ ಮಾಜಿ ಅಧ್ಯಕ್ಷ ಎಚ್‌. ಗಿರಿಗೌಡ ಭಾಗಿಯಾಗಲಿದ್ದಾರೆ.

ಒಳ ಮೀಸಲಾತಿ ಸಮಿತಿ ಕಣ್ಣೊರೆಸುವ ತಂತ್ರ: ಸಿದ್ದರಾಮಯ್ಯ

ಸಾರ್ವಜನಿಕ ಸಭೆ: ಬಿಜೆಪಿ ನೂತನ ಕಚೇರಿ ಉದ್ಘಾಟನೆಯ ನಂತರ ನಗರದ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಮಾವೇಶ ಜರುಗಲಿದ್ದು, ಸುಮಾರು 25 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

ಧಾರ್ಮಿಕ ಪೂಜೆ: ಬಿಜೆಪಿ ಕಾರ್ಯಾಲಯದ ನೂತನ ಕಟ್ಟಡದ ಉದ್ಘಾಟನೆಯ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ಮಂಗಳವಾರ ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳು, ಬಿಜೆಪಿ ಕಾರ್ಯಕರ್ತರು, ಮುಖಂಡರು ನೆರವೇರಿಸಿದ್ದಾರೆ.

ರಾಜ್ಯದ 10 ಬಿಜೆಪಿ ಕಚೇರಿ ನಡ್ಡಾ ಉದ್ಘಾಟನೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಗುರುವಾರ ರಾಜ್ಯದಲ್ಲಿನ ಪಕ್ಷದ 10 ಜಿಲ್ಲೆಗಳ ನೂತನ ಕಾರ್ಯಾಲಯ ಭವನಗಳ ಉದ್ಘಾಟನೆ ಮತ್ತು ಮೂರು ಜಿಲ್ಲೆಗಳ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕೊಪ್ಪಳದಲ್ಲಿ ನಡೆಯುವ ಸಮಾರಂಭದಲ್ಲಿಯೇ ನಡ್ಡಾ ಅವರು ಕೊಪ್ಪಳ ಜಿಲ್ಲಾ ಕಾರ್ಯಾಲಯದ ಶಿಲಾಫಲಕ ಅನಾವರಣ ಮಾಡುವುದರ ಜತೆಗೆ ಬಳ್ಳಾರಿ, ರಾಯಚೂರು, ಬೀದರ್‌, ವಿಜಯಪುರ, ಬಾಗಲಕೋಟೆ, ಕೋಲಾರ, ಚಾಮರಾಜನಗರ, ಹಾವೇರಿ ಮತ್ತು ಗದಗದಲ್ಲಿ ನಿರ್ಮಿಸಿದ ನೂತನ ಕಾರ್ಯಾಲಯಗಳನ್ನು ವರ್ಚುವಲ್‌ ಮೂಲಕ ಉದ್ಘಾಟಿಸಲಿದ್ದಾರೆ. 

ಅದೇ ರೀತಿ ವಿಜಯನಗರ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲಾ ಕಟ್ಟಡಗಳಿಗೆ ಅವರು ಶಿಲಾನ್ಯಾಸ ನೆರವೇರಿಸುವವರು. ಇದೇ ವೇಳೆ ಹೋಮ, ಹವನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದೆ. ಈ ಸಮಾರಂಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌, ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್‌ ಮತ್ತಿತರ ಮುಖಂಡರು ಭಾಗವಹಿಸಲಿದ್ದಾರೆ ಎಂದು ಬಿಜೆಪಿಯ ಕಟ್ಟಡ ಸಮಿತಿ ರಾಜ್ಯಾಧ್ಯಕ್ಷ ಮಾ.ನಾಗರಾಜ್‌ ಮಾಹಿತಿ ನೀಡಿದ್ದಾರೆ.

ಸಂಪುಟ ವಿಸ್ತರಣೆಗೆ ಮತ್ತೆ ಸಮಯ ನೀಡ್ತೇನೆಂದ ಅಮಿತ್‌ ಶಾ!

ಕಟ್ಟಡದಲ್ಲಿ ಏನೇನಿರಲಿದೆ?: ಬಿಜೆಪಿಯ ನೂತನ ಜಿಲ್ಲಾ ಕಟ್ಟಡದಲ್ಲಿ ಜಿಲ್ಲಾ ಅಧ್ಯಕ್ಷರ ಕೊಠಡಿ, ಗ್ರಂಥಾಲಯ, ಮಾಹಿತಿ ಕೇಂದ್ರ, ಮಾಧ್ಯಮ ಕೊಠಡಿ, ಸಂಸದರು, ಶಾಸಕರು, ಜನಪ್ರತಿನಿಧಿಗಳಿಗೆ ವಿಐಪಿ ಕೊಠಡಿ, ಉಗ್ರಾಣ, ಅಡುಗೆ ಮನೆ, ಊಟದ ಮನೆ, ಪ್ರಶಿಕ್ಷಣ ಮತ್ತು ಸಭೆಗಳಿಗಾಗಿ ಸಭಾಂಗಣ, ಬೋರ್ಡ್‌ ರೂಂ/ಕೋರ್‌ ಕಮಿಟಿ ಸಭಾಂಗಣ, ವಸತಿ ಕೊಠಡಿಗಳು, ಸಾಮೂಹಿಕ ವಸತಿ, ಪಾರ್ಕಿಂಗ್‌ ಇತ್ಯಾದಿ ವ್ಯವಸ್ಥೆಗಳಿಗೆ ಹೈಸ್ಪೀಡ್‌ ಇಂಟರ್ನೆಟ್‌ ವ್ಯವಸ್ಥೆ, ವೈ-ಫೈ, ಲಿಫ್ಟ್‌, ಪವರ್‌ ಬ್ಯಾಕ್‌ಅಪ್‌, ಡಿಜಿಟಲ್‌ ಲೈಬ್ರರಿಗಾಗಿ ವ್ಯವಸ್ಥೆ, ಮಳೆ ನೀರು ಕೊಯ್ಲಿನ ವ್ಯವಸ್ಥೆ, ನೀರಿನ ವ್ಯವಸ್ಥೆಗಾಗಿ ಬೋರ್‌ವೆಲ್‌ ಇದರಲಿದೆ. ಪ್ರಾಕೃತಿಕ ಗಾಳಿ ಮತ್ತು ಬೆಳಕಿನ ವ್ಯವಸ್ಥೆಗೆ ಅನುಗುಣವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ.

click me!