
ಉಡುಪಿ(ಡಿ.20): ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಅಂದವರ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದೆ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸಾಬೀತಾದರೆ ಕ್ರಮ ಎಂದು ಸರ್ಕಾರ ಹೇಳಿತ್ತು. ಆದರೆ ಸಿಟಿ ರವಿ ವಿಚಾರದಲ್ಲಿ ಸರ್ಕಾರಕ್ಕೆ ಏಕೆ ತರಾತುರಿ? 'ನಾನು ಯಾವುದೇ ಅಶ್ಲೀಲ ಪದ ಬಳಕೆ ಮಾಡಿಲ್ಲ' ಎಂದು ಸಿಟಿ ರವಿ ಅನೇಕ ಸ್ಪಷ್ಟನೆ ನೀಡಿದ್ರೂ ಬಂಧಿಸಿದ್ದು ಏಕೆ? ವಿಧಾನ ಸೌಧದಲ್ಲಿ ನಿಂತು ಪಾಕಿಸ್ತಾನಕ್ಕೆ ಜೈ ಎಂದವನನ್ನು ಬಂಧಿಸದ ಸರ್ಕಾರ, ವಿಧಾನ ಪರಿಷತ್ ಸದಸ್ಯರಾದ ಸಿಟಿ ರವಿ ಅವರನ್ನು ಬಂಧಿಸಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪದಲ್ಲಿ ಸಿಟಿ ರವಿ ಅವರ ಬಂಧನ ವಿಚಾರವಾಗಿ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ಸಭಾಪತಿಗಳ ಸುಪರ್ದಿಯಲ್ಲಿರುವ ಎಲ್ಲಾ ಕಡತಗಳನ್ನು ತರಿಸಿ ನಡೆದಿರುವ ವಿದ್ಯಮಾನ, ಆಡಿರುವ ಮಾತು ಪ್ರಯೋಗಾಲಯದಲ್ಲಿ ಪರಿಶೀಲನೆ ಆಗಬೇಕು. ಆರೋಪ ಸಾಬೀತಾದ ನಂತರ ಕ್ರಮ ಕೈಗೊಂಡರೆ ಅದಕ್ಕೆ ಅರ್ಥ ಇದೆ. ಆದರೆ ಸುವರ್ಣ ಸುವರ್ಣಸೌಧದಲ್ಲಿ ಸಿಟಿ ರವಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಳ ರೀತಿ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಾರೆ. ತಲೆಗೆ ಗಂಭೀರ ಗಾಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ವಿಪಕ್ಷವನ್ನು ನಡೆಸಿಕೊಳ್ಳುವ ರೀತಿಯಾ ಇದು? ಎಂದು ಕಿಡಿಕಾರಿದರು.
ವಿಧಾನ ಪರಿಷತ್ ಸದಸ್ಯರಾದ ಸಿಟಿ ರವಿ ಅವರನ್ನು ಭಯೋತ್ಪಾದಕರ ರೀತಿ ಪೊಲೀಸರು ಹೊತ್ತೊಯ್ದಿದ್ದಾರೆ. ಇಡೀ ರಾತ್ರಿ ಮೂರು ನಾಲ್ಕು ಜಿಲ್ಲೆಗಳಲ್ಲಿ ಸುತ್ತಾಡಿಸಿ ಹಿಂಸೆ ಕೊಟ್ಟಿದ್ದಾರೆ. ಸಿಟಿ ರವಿ ತಲೆಗೆ ಗಾಯವಾಗಿ ರಕ್ತ ಸುರಿಯುತ್ತಿದ್ದರು ಚಿಕಿತ್ಸೆ ಕೊಡಿಸದೆ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಈ ಎಲ್ಲ ವಿದ್ಯಮಾನಗಳ ಬಗ್ಗೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ಕೊಡಬೇಕು ಎಂದು ಆಗ್ರಹಿಸಿದರು.
ಸಿಟಿ ರವಿಗೆ 'ಕೊಲೆಗಡುಕ' ಎಂದಿದ್ದು ಸಂವಿಧಾನಿಕ ಪದವೇ? ಪೊಲೀಸರು ಸಚಿವೆಯನ್ನ ಬಂಧಿಸುವ ಧೈರ್ಯ ತೋರಲಿ; ರೆಡ್ಡಿ ಗರಂ
ಶಾಸಕರನ್ನು ಬಂಧಿಸಲು ಸಭಾಪತಿ ಅವರ ಅನುಮತಿ ಬೇಕು. ಆದರೆ ಈ ಸಭಾಪತಿ ಅನುಮತಿ ಪಡೆಯದೆ ಬಂಧಿಸಲಾಗಿದೆ. ಈ ಬೆಳವಣಿಗೆ ರಾಜ್ಯ ಸರ್ಕಾರಕ್ಕೆ ಗೌರವ, ಶೋಭೆ ತರುವುದಿಲ್ಲ. ಚಿಕ್ಕಮಗಳೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಸಹಿತ ನಾಯಕರನ್ನು ಬಂಧನ ಮಾಡುತ್ತಿದ್ದಾರೆ. ನೂರಾರು ಕಾರ್ಯಕರ್ತರ ವಿರುದ್ಧ ಪೊಲೀಸರು ದೂರು ದಾಖಲು ಮಾಡಿದ್ದಾರೆ. ರಾಜ್ಯ ಪೊಲೀಸರು ಆಡಳಿತ ಪಕ್ಷದ ಅಣತಿಯಂತೆ ನಡೆದುಕೊಳ್ಳುವ ಮೂಲಕ ಏನು ಸಂದೇಶ ಕೊಡಲು ಹೊರಟಿದ್ದಾರೆ? ಡಿಕೆ ಶಿವಕುಮಾರ ಹೇಳುವ ದಾಖಲೆಗಳನ್ನು ಕೇಳಲು ಸಾಧ್ಯವಿಲ್ಲ. ಸರ್ಕಾರಿ ದಾಖಲೆಗಳ್ಲಲಿ ಅಧಿಕೃತವಾಗಿ ಪರಿಶೀಲಿಸಿ. ಮೊದಲು ಈಗ ಹಾಕಿರುವ ಕೇಸ್ ವಾಪಸ್ ಪಡೆಯಿರಿ. ಪ್ರಯೋಗಾಲಯದ ವರದಿ ಬಂದ ನಂತರ ಕ್ರಮ ಜರುಗಿಸಿ ಎಂದು ತಾಕೀತು ಮಾಡಿದರು.
ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಿಟಿ ರವಿ ಆಶ್ಲೀಲ ಪದ ಬಳಕೆ ಮಾಡಿದ ಬಗ್ಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ: ಬಸವರಾಜ ಹೊರಟ್ಟಿ
ಸದನ ಇರುವುದು ಸಾಮಾನ್ಯ ಜನರ ಬಗ್ಗೆ ಚರ್ಚೆ ಮಾಡಲು. ಯಾವುದೇ ವೈಯಕ್ತಿಕ ಟೀಕೆ ಟಿಪ್ಪಣಿಗಳು ಅಲ್ಲಿ ಇರಬಾರದು. ಏನಾಗಿದೆ ಎಂದು ಪರಿಶೀಲಿಸದೇ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಯಾರ ಮನಸ್ಸಿಗೂ ನೋವಾಗದಂತೆ ಸತ್ಯದರ್ಶನವಾಗಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ