ಮಾಜಿ ಸಚಿವ ಪುಟ್ಟಸ್ವಾಮಿ ಈಗ ಪೂರ್ಣಾನಂದ ಪುರಿ ಸ್ವಾಮೀಜಿ

By Kannadaprabha NewsFirst Published May 7, 2022, 12:59 AM IST
Highlights

- ಬೆಂಗಳೂರಲ್ಲಿ ಬಿಎಸ್‌ವೈ ಮಾಜಿ ಆಪ್ತಗೆ ಸನ್ಯಾಸ ದೀಕ್ಷೆ

- ಇದೇ 15ರಂದು ಪಟ್ಟಾಭಿಷೇಕ ಮಹೋತ್ಸವ

- ತೈಲೇಶ್ವರ ಗಾಣಿಗ ಮಠದ ಮೊದಲ ಪೀಠಾಧಿಪತಿ

ಬೆಂಗಳೂರು (ಮೇ.7): ಐದು ದಶಕದ ಸುದೀರ್ಘ ರಾಜಕೀಯ ಜೀವನದಿಂದ ವಿಮುಖವಾಗಿರುವ ಮಾಜಿ ಸಚಿವ (Former Minister) ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ(bs yediyurappa) ಅವರ ಮಾಜಿ ಆಪ್ತ ಬಿ.ಜೆ.ಪುಟ್ಟಸ್ವಾಮಿ (Senior BJP leader B J Puttaswamy) ಅವರು ಇನ್ನು ಮುಂದೆ ಪೂರ್ಣಾನಂದ ಪುರಿ ಸ್ವಾಮೀಜಿಯಾಗಿ (Poornanandapuri Swami) ಕರೆಯಲ್ಪಡುತ್ತಾರೆ.

ಶುಕ್ರವಾರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಜಯೇಂದ್ರಪುರಿ ಸ್ವಾಮೀಜಿ ಅವರು ಪುಟ್ಟಸ್ವಾಮಿ ಅವರಿಗೆ ಸನ್ಯಾಸ ದೀಕ್ಷೆ ನೀಡಿ ಪೂರ್ಣಾನಂದ ಪುರಿ ಸ್ವಾಮಿಗಳೆಂದು ನಾಮಕರಣ ಮಾಡಿದರು.

ನೆಲಮಂಗಲದ ಬಳಿಯ ಮಾದನಾಯಕನಹಳ್ಳಿಯಲ್ಲಿನ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠಕ್ಕೆ ಪ್ರಥಮ ಪೀಠಾಧಿಪತಿಯಾಗಲಿದ್ದಾರೆ. ಈ ತಿಂಗಳ 15ರಂದು ಕೈಲಾಸ ಮಠದ ಜಯೇಂದ್ರಪುರಿ ಸ್ವಾಮೀಜಿಗಳು ಪಟ್ಟಾಭಿಷೇಕ ಮಹೋತ್ಸವ ನೆರವೇರಿಸಿಕೊಡಲಿದ್ದಾರೆ.

ಪಟ್ಟಾಭಿಷೇಕ ಮಹೋತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಎಂ.ಕೃಷ್ಣ, ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. 20 ಮಠಾಧೀಶರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಗಾಣಿಗ ಸಮುದಾಯಕ್ಕೆ ಶಾಶ್ವತ ಸಂಸ್ಥೆ ಕಟ್ಟಲು 8 ಎಕರೆ ಜಮೀನು ಮತ್ತು 5 ಕೋಟಿ ರು. ಅನುದಾನ ನೀಡಿದ್ದರು. ಜೊತೆಗೆ ದಾನಿಗಳಿಂದ ಹಣ ಸಂಗ್ರಹಿಸಿ ಗುರು ಪೀಠ, ವಿದ್ಯಾರ್ಥಿ ನಿಲಯ, ಸಮುದಾಯ ಭವನ ನಿರ್ಮಿಸಲಾಗಿದೆ.

ಸ್ವಾಮೀಜಿಯಾಗಲು ಕಾರಣವೇನು..?: ಸನ್ಯಾಸ ಸ್ವೀಕರಿಸಿ ಸ್ವಾಮೀಜಿ ಆಗಲು ಕಾರಣ ಏನು ಎಂಬುದಕ್ಕೆ ಬಿ.ಜೆ ಪುಟ್ಟಸ್ವಾಮಿ ಉತ್ತರಿಸಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ ಅವರು, ಗಾಣಿಗ ಸಮುದಾಯಕ್ಕೆ ಮಠ ಕಟ್ಟಿಸರೂ 2016 ರಿಂದ ಪೀಠಾಧಿಪತಿಗಾಗಿ ಹುಡುಕಾಟ ನಡೆದಿತ್ತು. ಇದ್ದಕ್ಕಾಗಿ ಮೂವರನ್ನ ಆಯ್ಕೆ ಮಾಡಿ ರಾಜ್ಯ ಮೂರು ಪ್ರತಿಷ್ಠಿತ ಮಠದಲ್ಲಿ ಕಲಿಕೆಗಾಗಿ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಯಾರೊಬ್ಬರು ಪೀಠಾಧಿಪತಿ ಆಗಲು ಸಾಧ್ಯವಾಗಲಿಲ್ಲ. ಬೆಂಗಳೂರಿನ ರಾಜರಾಜೇಶ್ವರಿನಗರ ಜಯೇಂದ್ರಪುರಿ ಸ್ವಾಮೀಜಿ ಒಮ್ಮೆ ಯಾಗ ಮಾಡಿಸಿದಾಗ , ಅವರ ಪ್ರಾರ್ಥನೆ ವೇಳೆ ನಾನು ಕಾಣಿಸಿಕೊಂಡಿದ್ದನಂತೆ.

BJ Puttaswamy: ರಾಜಕೀಯ ತ್ಯಜಿಸಿ ಮಠಾಧೀಶರಾಗಲಿದ್ದಾರೆ ಬಿಎಸ್.ಯಡಿಯೂರಪ್ಪ ಪರಮಾಪ್ತ!

ಹೀಗಾಗಿ ನೀನೇ ಪೀಠಾಧ್ಯಕ್ಷ ಆಗಬೇಕು ಎಂದು ಸ್ವಾಮೀಜಿ ತಿಳಿಸಿದರು.‌ ಹೀಗಾಗಿ ನಾನೂ ಕೂಡ ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡೆ ಎಂದು ಪುಟ್ಟಸ್ವಾಮಿ ಹೇಳಿದರು. ಗಾಣಿಗ ಸಮಾಜದ ಉಳಿವು ಮತ್ತು ಬೆಳವಣಿಗೆಗೆ ಸ್ವಾಮಿಜಿಯಾಗಲು ನಿರ್ಧರಿಸಿದ್ದೇನೆ. ನಮ್ಮ ಗಾಣಿಗ ಸಮಾಜಕ್ಕೆ ಯಾವುದೇ ಪೀಠ ಹಾಗೂ ವಿದ್ಯಾಸಂಸ್ಥೆ ಇಲ್ಲಾ ಎಲ್ಲಾ ಸಮಾಜದಲ್ಲಿ ಇರುವಂತೆ ನಮ್ಮ ಗಾಣಿಗ ಸಮುದಾಯಕ್ಕೂ ಒಂದು ಪೀಠ ಬೇಕು ಎಂಬ ಹಂಬಲ ನನ್ನದಾಗಿತ್ತು. ನಮ್ಮ ಸಮಾಜದ ಒಳಿತಿಗಾಗಿ ಬಹಳ ಕಷ್ಟಪಟ್ಟಿದ್ದೇನೆ. ಜಯೇಂದ್ರ ಪುರಿ ಸ್ವಾಮಿಜಿ ಮಾರ್ಗದರ್ಶನ ಮೇರೆಗೆ ನಾನೇ ಪೀಠಾಧ್ಯಕ್ಷ ಆಗಲಿದ್ದೇನೆ ಎಂದು ಪುಟ್ಟಸ್ವಾಮಿ ಹೇಳಿದರು. 

ಬಿಎಸ್‌ವೈ ಆಪ್ತ ಪುಟ್ಟಸ್ವಾಮಿ ಸದ್ಯದಲ್ಲೇ ಮಠಾಧೀಶ.. ಸನ್ಯಾಸ ದೀಕ್ಷೆ

ನನ್ನ ತೀರ್ಮಾನ ಯಡಿಯೂರಪ್ಪ ಒಪ್ಪಲಿಲ್ಲ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಹಾಯದಿಂದ ಈ ಮಠ ನಿರ್ಮಾಣ ಮಾಡಲಾಗಿದೆ ಎಂದು ನೆನಪು ಮಾಡಿಕೊಂಡ ಪುಟ್ಟಸ್ವಾಮಿ, ಸ್ವಾಮೀಜಿ ಆಗುವ ತೀರ್ಮಾನವನ್ನ ಯಡಿಯೂರಪ್ಪ ಅವರಿಗೆ ತಿಳಿಸಿದಾಗ ನನ್ನ ಮೇಲೆ ಕೋಪ ಮಾಡಿಕೊಂಡರು. ಈ ನಿರ್ದಾರ ಬೇಡವಾಗಿತ್ತು ಅಂತ ಹೇಳಿದ್ರಂತೆ. ಬಳಿಕ ಪೀಠಾಧಿಪತಿ ‌ಹುಡುಕಾಟದಲ್ಲಿ ಆದ ಬೆಳವಣಿಗೆಗಳ‌ನ್ನ ತಿಳಿಸಿದಾಗ ಸಹಮತ ವ್ಯಕ್ತಪಡಿಸಿದು ಎಂದು ಪುಟ್ಟಸ್ವಾಮಿ ಹೇಳಿದರು. ಸರ್ವಾನುಮತದಿಂದ ನಮ್ಮ ಸಮಾಜದವರು ನಾನು ಸ್ವಾಮಿಜಿ ಆಗಲು ಒಪ್ಪಿಗೆ ನೀಡಿದ್ದಾರೆ. ನನ್ನ ಜೀವನ ಕೊನೆಯಲ್ಲಿ ಮುಕ್ತಿ ಸಿಗುವ ಸಲುವಾಗಿ ದೇವರು ಈ ಅವಕಾಶ ನೀಡಿದ್ದಾನೆ. ಹೀಗಾಗಿ ಇದನ್ನ ಕಳೆದುಕೊಳ್ಳಬಾರದು ಅಂತ ತೀರ್ಮಾನ ಮಾಡಿದ್ದೇನೆ ಎಂದು ಪುಟ್ಟಸ್ವಾಮಿ ‌ತಿಳಿಸಿದರು.

click me!