ಪಠ್ಯದಲ್ಲಿ ಸಿದ್ದೇಶ್ವರ ಶ್ರೀಗಳ ಜೀವನಗಾಥೆ?: ವಿವೇಕಾನಂದರ ನಂತ್ರ ಹೆಚ್ಚು ಪ್ರಭಾವಿಸಿದವರು ಶ್ರೀಗಳು

By Govindaraj SFirst Published Jan 4, 2023, 9:21 AM IST
Highlights

ಸ್ವಾಮಿ ವಿವೇಕಾನಂದರ ನಂತರ ಅತ್ಯಂತ ಪ್ರಭಾವ ಬೀರಿದವರು ಸಿದ್ದೇಶ್ವರ ಶ್ರೀಗಳು. ಸಿದ್ದೇಶ್ವರ ಶ್ರೀಗಳ ಜೀವನಗಾಥೆಯನ್ನು ಪಠ್ಯದಲ್ಲಿ ಸೇರಿಸುವ ಕುರಿತು ಅವರ ಉಯಿಲಿನಲ್ಲಿರುವ ಆಶಯದಂತೆ ನಡೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಜಯಪುರ (ಜ.04): ಸ್ವಾಮಿ ವಿವೇಕಾನಂದರ ನಂತರ ಅತ್ಯಂತ ಪ್ರಭಾವ ಬೀರಿದವರು ಸಿದ್ದೇಶ್ವರ ಶ್ರೀಗಳು. ಸಿದ್ದೇಶ್ವರ ಶ್ರೀಗಳ ಜೀವನಗಾಥೆಯನ್ನು ಪಠ್ಯದಲ್ಲಿ ಸೇರಿಸುವ ಕುರಿತು ಅವರ ಉಯಿಲಿನಲ್ಲಿರುವ ಆಶಯದಂತೆ ನಡೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶ್ರೀಗಳ ಅಂತಿಮ ದರ್ಶನ ಪಡೆದ ಸಂದರ್ಭದಲ್ಲಿ ಮಂಗಳವಾರ ಮಾತನಾಡಿದ ಅವರು, ಶ್ರೀಗಳ ಜೀವನಗಾಥೆಯನ್ನು ಪಠ್ಯದಲ್ಲಿ ಅಳವಡಿಸುವ ಸಂಬಂಧ ಭಕ್ತರಿಂದ ಕೇಳಿ ಬಂದ ಒತ್ತಾಯದ ಕುರಿತು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದರು. ಸಿದ್ದೇಶ್ವರ ಶ್ರೀಗಳು ಬರೆದ ಉಯಿಲಿ(ವಿಲ್‌)ನಂತೆ ನಡೆದುಕೊಳ್ಳುತ್ತೇವೆ. ಭಕ್ತರ ಭಾವನೆಗಳನ್ನು ನಾವು ಗೌರವಿಸುತ್ತೇವೆ ಎಂದರು. ಈ ಮೂಲಕ ಅವರ ಜೀವನವನ್ನು ಪಠ್ಯದಲ್ಲಿ ಅಳವಡಿಸುವುದು ಸಿದ್ದೇಶ್ವರ ಶ್ರೀಗಳ ಆಶಯಕ್ಕೆ ಪೂರಕವಾಗಿದ್ದರೆ ಮಾತ್ರ ಮುಂದಡಿಯಿಡುವ ಸುಳಿವನ್ನು ಬೊಮ್ಮಾಯಿ ನೀಡಿದರು.

ಸಮಾಧಿ, ಪ್ರತಿಮೆ ಬೇಡ, 8 ವರ್ಷದ ಹಿಂದೆ ಶ್ರೀಗಳು ಬರೆದಿದ್ದ ಪತ್ರದಂತೆ ಅಂತ್ಯಕ್ರಿಯೆ!

ಜನರ ಮಧ್ಯೆ ಇದ್ದಾರೆ: ಮರಣವೂ ಒಂದು ಪ್ರಕ್ರಿಯೆ. ಮರಣದ ನಂತರವೂ ಬದುಕುವುದು ಸಾಧನೆ. ಶ್ರೀಗಳು ಅಸ್ತಗಂತರಾಗಿದ್ದರೂ ಜನರ ಮಧ್ಯೆಯೇ ಇದ್ದಾರೆ ಎಂದ ಬೊಮ್ಮಾಯಿ, ಸ್ವಾಮಿ ವಿವೇಕಾನಂದರ ನಂತರ ಅತ್ಯಂತ ಪ್ರಭಾವ ಬೀರಿದವರು ಸಿದ್ದೇಶ್ವರ ಶ್ರೀಗಳು. ಸಿದ್ದೇಶ್ವರ ಶ್ರೀಗಳು ನಮಗೆ ಒಂದು ದೊಡ್ಡ ಪ್ರೇರಣಾ ಶಕ್ತಿ. ಅವರ ವಿಚಾರಗಳನ್ನು ಪಾಲಿಸಿ, ಉಳಿಸಿಕೊಂಡು ಬಂದರೆ ಅವರಿಗೆ ಅದುವೇ ದೊಡ್ಡ ಗೌರವ. ಅವರು ಸಾವನ್ನು ಅರಿತು, ಎದುರಿಸಿ, ಸ್ವಾಗತಿಸಿದವರು ಎಂದರು.

ಪರಮಾತ್ಮ ಒಬ್ಬನೆ. ಸೃಷ್ಟಿಮತ್ತು ಸೃಷ್ಟಿಕರ್ತನ ಸಮಾಗಮವೇ ನಮ್ಮ ಬದುಕು, ಜೀವನ. ಆಧ್ಯಾತ್ಮಿಕ ವಿಚಾರಗಳಲ್ಲಿ 3 ರೀತಿಯ ಜನರನ್ನು ಗುರುತಿಸಬಹುದು. ಒಬ್ಬರು ಹಿಂದಿನ ವಿಚಾರಗಳನ್ನು ಪ್ರತಿಪಾದಿಸುವವರು, ಇನ್ನೊಬ್ಬರು ಕ್ರಾಂತಿಗಳಿಂದ ಬದಲಾವಣೆ ಬಯಸುವವರು, ಮೂರನೆಯವರು ಸಮಾಜ ಸುಧಾರಕರು. ಸಿದ್ದೇಶ್ವರ ಶ್ರೀಗಳು ಮೂರನೇ ರೀತಿಯ ವ್ಯಕ್ತಿಗಳ ಸಾಲಿಗೆ ಸೇರುವವರು. 

ಜ್ಞಾನ ಯೋಗಾಶ್ರಮ ಸಿದ್ದೇಶ್ವರ ಸ್ವಾಮೀಜಿ ನಿಧನ: ಯಾರು ಈ ಸಂತ ಸಿದ್ಧೇಶ್ವರ ಸ್ವಾಮೀಜಿ?

ಮೊದಲನೆಯವರು ತಾತ್ಪೂರ್ತಿಕ ಯಶಸ್ಸು ಕಂಡಿರುತ್ತಾರೆ. ಆದರೆ, ಮೂರನೇಯವರು ಬುದ್ಧ, ಬಸವರಂತೆ ಸಮಾಜವನ್ನು ತಿದ್ದಿದವರು. ಇಂಥವರು ನಮ್ಮ ಪುಣ್ಯ ನಾಡಿನಲ್ಲಿ ಜನ್ಮ ತಳೆದಿದ್ದಾರೆ. ಅವರು ತಮ್ಮ ವೈಚಾರಿಕತೆಯನ್ನು ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಇಂಥವರ ಕಾಲದಲ್ಲಿ ನಾವಿರುವುದೇ ಪುಣ್ಯ ಎಂದರು. ಸಾವಿನ ನಂತರವೂ ಬದುಕುವುದು ಸಾಧನೆ. ಇಷ್ಟುದೊಡ್ಡ ಸಂಖ್ಯೆಯಲ್ಲಿ ಜನ ಸಾಗರ ಸೇರಿರುವುದರಲ್ಲೇ ಶ್ರೀಗಳ ಪ್ರೀತಿ, ವಾತ್ಸಲ್ಯ ಅನಾವರಣಗೊಂಡಿದೆ ಎಂದರು.

click me!