
ಬೆಂಗಳೂರು (ಡಿ.12): ನಗರದ ಓಕಳೀಪುರಂ ರೈಲ್ವೇ ಪ್ಯಾರಲೆಲ್ ರಸ್ತೆ ಬಳಿ ಸಂಭವಿಸಿದ ಭೀಕರ ಟ್ರಕ್ ಅಪಘಾತದಲ್ಲಿ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶೇಷಾದ್ರಿಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಮೃತರನ್ನು ಲಲಿತಮ್ಮ ಎಂದು ಗುರುತಿಸಲಾಗಿದೆ. ಇವರು ಏಷ್ಯಾನೆಟ್ ಸುವರ್ಣನ್ಯೂಸ್ ಕಚೇರಿಯಲ್ಲಿ ಹೌಸ್ ಕೀಪಿಂಗ್ (Housekeeping) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಲಲಿತಮ್ಮ ಅವರು ಸಂಜೆ ತಮ್ಮ ಕೆಲಸವನ್ನು ಮುಗಿಸಿಕೊಂಡು, ಎಂದಿನಂತೆ ಮನೆಗೆ ಹಿಂದಿರುಗಲು ರಸ್ತೆ ದಾಟುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಓಕಳೀಪುರಂ ರೈಲ್ವೇ ಪ್ಯಾರಲೆಲ್ ರಸ್ತೆಯಲ್ಲಿ ಅತೀ ವೇಗದಿಂದ ಬಂದ ಟ್ರಕ್ ಒಂದು ರಸ್ತೆ ದಾಟುತ್ತಿದ್ದ ಲಲಿತಮ್ಮ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಲಿತಮ್ಮ ಅವರು ಕೆಳಗೆ ಬಿದ್ದಿದ್ದು, ತಕ್ಷಣವೇ ಟ್ರಕ್ನ ಚಕ್ರ ಅವರ ತಲೆಯ ಮೇಲೆ ಹರಿದು ಹೋಗಿದೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಭೀಕರವಾಗಿ ಮೃತಪಟ್ಟಿದ್ದಾರೆ.
ಘಟನೆಯ ಕುರಿತು ಮಾಹಿತಿ ತಿಳಿದ ಕೂಡಲೇ ಶೇಷಾದ್ರಿಪುರಂ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸ್ಥಳೀಯರ ಮಾಹಿತಿ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪಡೆದು ಪೊಲೀಸರು ಪರಿಶೀಲನೆ ನಡೆಸಿದರು. ಸಾವನ್ನಪ್ಪಿರುವ ಲಲಿತಮ್ಮ ಅವರ ಮೃತದೇಹವನ್ನು ಪೊಲೀಸರು ಸ್ಥಳ ಮಹಜರು ಮಾಡಿದ ನಂತರ ಬೌರಿಂಗ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಟ್ರಕ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಘಟನಾ ಸ್ಥಳದಲ್ಲಿಯೇ ಇದ್ದ ಟ್ರಕ್ ಹಾಗೂ ಅಪಘಾತ ಮಾಡಿದ ಚಾಲಕನ್ನು ವಶಕ್ಕೆ ಪಡೆದಿದ್ದಾರೆ.
ತಮ್ಮ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ನೌಕರರೊಬ್ಬರು ಈ ರೀತಿ ಅಕಾಲಿಕವಾಗಿ ಸಾವನ್ನಪ್ಪಿರುವುದು ಸಹೋದ್ಯೋಗಿಗಳಲ್ಲಿ ಮತ್ತು ಕುಟುಂಬಸ್ಥರಲ್ಲಿ ದುಃಖವನ್ನುಂಟು ಮಾಡಿದೆ. ಶೇಷಾದ್ರಿಪುರಂ ಸಂಚಾರ ವಿಭಾಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ