
ಬೆಂಗಳೂರು: ಆರ್ಸಿಬಿ ಸೆಲೆಬ್ರೆಷನ್ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿಯಲ್ಲಿ 15 ವರ್ಷದ ದಿವ್ಯಾಂಶಿಯೂ ಒಬ್ಬಳು. ಘಟನೆ ಬಳಿಕ ದಿವ್ಯಾಂಶಿ ತಾಯಿ ಅಶ್ವಿನಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಗಂಭೀರ ಆರೋಪದೊಂದಿಗೆ ದೂರು ಸಲ್ಲಿಸಿದ್ದಾರೆ. ಮರಣೋತ್ತರ ಪರೀಕ್ಷೆ (ಪೋಸ್ಟ್ಮಾರ್ಟಮ್) ಸಮಯದಲ್ಲಿ ದಿವ್ಯಾಂಶಿಯ ಚಿನ್ನದ ಕಿವಿಯೊಲೆ ಮತ್ತು ಸರ ಕಾಣೆಯಾಗಿದ್ದವು. ಈ ಹಿನ್ನೆಲೆಯಲ್ಲಿ ದೂರು ನೀಡಿದ್ದಾರೆ. Bengaluru stampede Divyanshi postmortem gold theft
ತಾಯಿ ಅಶ್ವಿನಿ ದೂರಿನಲ್ಲಿ, ದಿವ್ಯಾಂಶಿಯ ಶವವನ್ನು ಬೌರಿಂಗ್ ಆಸ್ಪತ್ರೆಯ ಮಾರ್ಚುರಿಗೆ ಕರೆದುಕೊಂಡು ಹೋಗಿದ್ದಾಗ ಆಕೆಯ ಕಿವಿಯೋಲೆ ಹಾಗೂ ಚಿನ್ನದ ಸರ ಇತ್ತೆಂದು ಸ್ಪಷ್ಟಪಡಿಸಿದ್ದಾರೆ. ಆದರೆ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವ ವೇಳೆಗೆ ಆಭರಣಗಳು ಕಾಣೆಯಾಗಿದ್ದವು. ಅಂದಿನಿಂದ ಕುಟುಂಬದವರು ಆಸ್ಪತ್ರೆಯವರ ಜೊತೆನಿರಂತರ ಮಾತನಾಡಿದರೂ ಯಾವುದೇ ಸ್ಪಷ್ಟನೆ ದೊರೆತಿಲ್ಲವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನನ್ನ ಮಗಳ ಚಿನ್ನದ ಕಿವಿಯೋಲೆ ಹೋದದ್ದು ನನ್ನೆಲ್ಲಾ ನೋವಿಗಿಂತ ಹೆಚ್ಚಾಗಿದೆ. ಆ ಓಲೆ ಆಕೆಗೆ ತುಂಬಾ ಪ್ರೀತಿಯದ್ದಾಗಿತ್ತು. ಆಕೆ ಹುಟ್ಟಿದ ದಿನದಂದು ತನ್ನ ಮಾವನಿಂದ ಗಿಫ್ಟ್ ಆಗಿ ಪಡೆದಿದ್ದ ಆಭರಣವಾಗಿತ್ತು. ಒಂದುವರೆ ವರ್ಷಗಳಿಂದ ಅದು ಅವಳ ಕಿವಿಯಲ್ಲಿ ಇತ್ತು. ಅದರ ಬೆಲೆಯ ಬಗ್ಗೆ ನನಗೆ ಸ್ವಲ್ಪವೂ ಆಸೆಯಿಲ್ಲ. ಆದರೆ ಅವಳ ಭಾವನೆಗಳ ಜೊತೆ ಅದು ಬೆರೆತುಕೊಂಡಿದೆ. ಆ ಓಲೆ ನನಗೆ ಬೇಕು ಅಂತ ಕೇಳುತ್ತಿದ್ದೇನೆ ಎಂದು ಅಶ್ವಿನಿ ದುಃಖದಿಂದ ಹೇಳಿದ್ದಾರೆ.
ಘಟನೆಯ ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಿವ್ಯಾಂಶಿಯ ಅಜ್ಜಿಯನ್ನು ಭೇಟಿಯಾಗಿ “ನಾವು ಉತ್ತಮ ಚಿಕಿತ್ಸೆ ಕೊಡಿಸುತ್ತೇವೆ” ಎಂದು ಭರವಸೆ ನೀಡಿದ್ದರು. ಮಾರ್ಚುರಿಯ ಬಳಿ ಮಾತನಾಡುತ್ತಿರುವ ಫೋಟೋವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಶ್ವಿನಿ, “ಮಾರ್ಚುರಿಯಲ್ಲಿ ಟ್ರೀಟ್ಮೆಂಟ್ ಕೊಡ್ತಾರೆ ಅಂತ ಹೇಗೆ ಹೇಳ್ತಾರೆ? ನನ್ನ ಮಗಳು ಈಗ ಎಲ್ಲಿ ಇದ್ದಾಳೆ? ಟ್ರೀಟ್ಮೆಂಟ್ ಕೊಡಿಸ್ತೀವಿ ಅಂದ್ರು, ನಿಮ್ಮ ಟ್ರೀಟ್ಮೆಂಟ್ ಫೇಲ್ ಆಯ್ತಾ ಅಥವಾ ನಿಮ್ಮ ಹೇಳಿಕೆ ಫೇಲ್ ಆಯ್ತಾ ಎಂದು ಪ್ರಶ್ನೆ ಕೇಳಿದ್ದಾರೆ.
ದಿವ್ಯಾಂಶಿಯ ತಾಯಿ ನೀಡಿದ ದೂರಿನ ಮೇರೆಗೆ Commercial Street ಠಾಣೆಯಲ್ಲಿ FIR ದಾಖಲಾಗಿದೆ. ಚಿನ್ನದ ಕಿವಿಯೋಲೆ ಮತ್ತು ಸರ ಒಟ್ಟು ₹1 ಲಕ್ಷ ಮೌಲ್ಯದ ಆಭರಣ ಕಳುವಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶವಾಗಾರದಿಂದ ಶವವನ್ನು ತೆಗೆದುಕೊಂಡು ಕುಟುಂಬಕ್ಕೆ ಹಸ್ತಾಂತರಿಸುವ ತನಕ ಆಭರಣಗಳು ಇವೆ ಎಂದು ದೃಢಪಡಿಸಲಾಗಿದೆ.
ಐಪಿಎಲ್ನ 17 ವರ್ಷಗಳ ಬಳಿಕ 18 ನೇ ಸೀಸನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿದ ಸಂಭ್ರಮದ ಕ್ಷಣವು ಸಾವಿರಾರು ಅಭಿಮಾನಿಗಳಿಗೆ ಭಾವನಾತ್ಮಕವಾಗಿತ್ತು.ಅದು ಜೂನ್ 4ರಂದು ಆಯೋಜಿಸಿದ ವಿಜಯೋತ್ಸವ ಮೆರವಣಿಗೆಯು ಸಾವಿನ ಸಂಭ್ರಮವಾಗಿ ಬದಲಾಯ್ತು.ಜನಸಂದಣಿ ನಿರ್ವಹಣೆಯ ಕುರಿತು ಸೂಕ್ತ ಯೋಜನೆ ರೂಪಿಸದೇ ವಿಫಲವಾಯಿತು. ಸುಮಾರು 3 ಲಕ್ಷಕ್ಕೂ ಹೆಚ್ಚು ಜನರು ಕ್ರೀಡಾಂಗಣದ ಸುತ್ತಮುತ್ತ ಜಮಾಯಿಸಿದ್ದಾಗಿ ಪೊಲೀಸರು ಅಂದಾಜಿಸಿದ್ದಾರೆ . ಇದು ಅಲ್ಲಿನ ಸ್ಥಳದ ಸಾಮರ್ಥ್ಯಕ್ಕಿಂತ ಹತ್ತು ಪಟ್ಟು ಹೆಚ್ಚು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ