Bengaluru: ಸರ್ಕಾರಿ ಆಸ್ಪತ್ರೆಗಳಲ್ಲಿ ಅನಾಥ ಶವ ಹಾಗೂ ಅಂಗಾಂಗ ಮಾರಾಟ ಮಾಫಿಯಾ..!

By Sathish Kumar KHFirst Published Jul 31, 2023, 12:08 PM IST
Highlights

ಬೆಂಗಳೂರಿನ ಸರ್ಕಾರಿ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಅನಾಥ ಶವಗಳು ಹಾಗೂ ಅವುಗಳ ಅಂಗಾಂಗ ಮಾರಾಟ ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್‌ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು (ಜು.31): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾರಸುದಾರರಿಲ್ಲದ ಅನಾಥ ಶವಗಳನ್ನು ಮಾರಾಟ ಮಾಡಿಕೊಳ್ಳುತ್ತಿರುವ ಮತ್ತು ಅವುಗಳ ಅಂಗಾಗಳನ್ನು ಕಳ್ಳತನ ಮಾಡುತ್ತಿರುವ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳ ಮಾಫಿಯಾ ( Medical College Mafia) ನಡೆಯುತ್ತಿದೆ. ಜೊತೆಗೆ, ಸರ್ಕಾರಿ ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ ತನಿಖಾ ತಂಡ ರಚನೆ ಮಾಡಬೇಕೆಂದು ಕೋರಿ ಬೆಂಗಳೂರು ದಕ್ಷಿಣ ವಿಭಾಗ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್‌ ಅವರು ಅರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ಗೆ ದೂರು ಸಲ್ಲಿಸಿದ್ದಾರೆ.

ಬೆಂಗಳೂರು ಮಹಾನಗರದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆ, ಕೆ. ಸಿ. ಜನರಲ್ ಆಸ್ಪತ್ರೆ, ಸಂಜಯ್ ಗಾಂಧಿ ಆಸ್ಪತ್ರೆ, ಬೊರಿಂಗ್ ಆಸ್ಪತ್ರೆಗಳು ಸೇರಿದಂತೆ ರಾಜ್ಯದ ಮಹಾ ನಗರಗಳಲ್ಲಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಇರುವ ಬಹಳಷ್ಟು ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ವಾರಸುದಾರರಿಲ್ಲದ ರೋಗಿಗಳು ದಾಖಲಾಗುತ್ತಿದ್ದಾರೆ. ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಇತರೆ ಪ್ರಮುಖ ಸ್ಥಳಗಳಲ್ಲಿರುವ ಪಾದಚಾರಿ ಮಾರ್ಗಗಳು ಮತ್ತು ಉದ್ಯಾನವನಗಳಲ್ಲಿ ಪ್ರಾಣ ತ್ಯಜಿಸಿರುವ ಅನಾಥರು ಮತ್ತು ವಾರಸುದಾರರು ಪತ್ತೆಯಾಗದ ಶವಗಳನ್ನು ನಗರದ ಬಹುತೇಕ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಇಡಲಾಗುತ್ತದೆ. 

ತಿರುಪತಿ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ: ಕಾರಣ ಬಿಚ್ಚಿಟ್ಟ ಕೆಎಂಫ್‌

ಉಚಿತ ಶವ ಸಂಸ್ಕಾರದ ಹೆಸರಲ್ಲಿ ಹೆಣಗಳ ಮಾರಾಟ: ಇಂತಹ ವಾರಸುದಾರರಿಲ್ಲದ ಮತ್ತು ಅನಾಥರ ಶವಗಳನ್ನು ಉಚಿತವಾಗಿ ಸಂಸ್ಕಾರ ಮಾಡುತ್ತಿದ್ದೇವೆಂಬ ಸೋಗಿನಲ್ಲಿರುವ ಮೆಡಿಕಲ್‌ ಕಾಲೇಜು ಮಾಫಿಯಾದ (Medical College Mafia) ಸದಸ್ಯ ತಂಡಗಳು ಶವಗಳನ್ನು ಹಾಗೂ ಅವುಗಳ ಅಂಗಾಂಗಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಆಯಾ ಸರ್ಕಾರಿ ಆಸ್ಪತ್ರೆಗಳ ಪ್ರಮುಖರು ಮತ್ತು ರಾಜ್ಯದ ಹಲವು ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಶಾಮೀಲಾಗಿ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಕಳೆದ ಎರಡೂವರೆ ದಶಕಗಳಿಂದ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಮರಣೋತ್ತರ ಪರೀಕ್ಷೆ ಹೆಸರಲ್ಲಿ ವಂಚನೆ: ಅಲ್ಲದೇ, ಇಂತಹ ವಾರಸುದಾರರು ಪತ್ತೆಯಾಗದ ಮತ್ತು ಅನಾಥ ಶವಗಳ ಅಂಗಾಂಗಗಳನ್ನು ಮರಣೋತ್ತರ ಶವ ಪರೀಕ್ಷೆ (Post mortem) ಹೆಸರಿನಲ್ಲಿ ಹೊರ ತೆಗೆದು ಖಾಸಗಿ (Corporate) ಆಸ್ಪತ್ರೆಗಳಿಗೆ ಮಾರಾಟ ಮಾಡುವ ದಂಧೆಯೂ ಸಹ ಅವ್ಯಾಹತವಾಗಿ ನಡೆದಿದೆ. ಇದು ಬೆಂಗಳೂರು ಮಹಾನಗರವಲ್ಲದೇ, ರಾಜ್ಯದ ಇತರೆ ನಗರಗಳಲ್ಲಿಯೂ ಸಹ ಯಾವ ಎಗ್ಗಿಲ್ಲದೇ ನಡೆದು ಬರುತ್ತಿದೆ. ಹಗಲು ಹೊತ್ತಿಗಿಂತಲೂ ರಾತ್ರಿ ಹೊತ್ತಿನಲ್ಲಿ ಇಂತಹ ಕಾನೂನು ಬಾಹಿರ ಕೃತ್ಯಗಳನ್ನು ಹೆಚ್ಚಾಗಿ ಎಸಗಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಮುಸ್ಲಿಂ ದರ್ಗಾದಲ್ಲಿ ಕೇಸರಿ ವಸ್ತ್ರವೇ ಗೆಲ್ಲುವುದಾಗಿ ಭವಿಷ್ಯ ನುಡಿದ ಲಾಲಸಾಬ್‌ ಅಜ್ಜ

ಆಸ್ಪತ್ರೆಗಳೊಂದಿಗೆ ಎನ್‌ಜಿಒ ಸಂಘಟನೆಗಳೂ ಭಾಗಿ: ಅತ್ಯಂತ ಅಪಾಯಕಾರಿ ಮಾಫಿಯಾಗಳಲ್ಲಿ ಪ್ರಮುಖವಾಗಿರುವ ಮೆಡಿಕಲ್ ಕಾಲೇಜು ಮಾಫಿಯಾ ಮತ್ತು ಖಾಸಗಿ ಆಸ್ಪತ್ರೆಗಳ ಮಾಫಿಯಾ ತಂಡದ ಸದಸ್ಯರುಗಳು, ಕೆಲವೊಂದು ಸಮಾಜ ಘಾತುಕ ವ್ಯಕ್ತಿಗಳು ಮತ್ತು ಕೆಲವೊಂದು ಖಾಸಗಿ ಸಂಸ್ಥೆಗಳು (NGO)ಇಂತಹ ಕಾನೂನು ಬಾಹಿರವಾದ ಆಘಾತಕಾರಿ ಕಾರ್ಯಗಳಲ್ಲಿ ತೊಡಗಿದ್ದಾವೆ. ಈ ಬಗ್ಗೆ ತಾವು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕಿದ್ದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದೀಚೆಗೆ ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ, ಪಾದಚಾರಿ ಮಾರ್ಗಗಳು ಮತ್ತು ಉದ್ಯಾನವನಗಳಲ್ಲಿ ಅಸುನೀಗಿದ ವಾರಸುದಾರರು ಪತ್ತೆಯಾಗದ ಮತ್ತು ಅನಾಥರ ಶವಗಳನ್ನು ಸಂಸ್ಕಾರ ಮಾಡಿರುವ ಸ್ಥಳಗಳಿಂದ ಹೊರತೆಗೆದು ಪರಿಶೀಲನೆ ಮಾಡಬೇಕು. ಈ ಬಗ್ಗೆ ಪ್ರಾಮಾಣಿಕ ಹಿರಿಯ ಅಥವಾ ನಿವೃತ್ತ ಫೊರೆನ್ಸಿಕ್‌ (Forensic) ತಜ್ಞರಿಂದ ಪರೀಕ್ಷೆ ಮಾಡಿಸಿದ್ದೇ ಆದಲ್ಲಿ, ಮೆಡಿಕಲ್‌ ಕಾಲೇಜು ಮಾಫಿಯಾ ಮತ್ತು ಖಾಸಗಿ ಆಸ್ಪತ್ರೆ ಮಾಫಿಯಾದ ನಿಜವಾದ ಬಣ್ಣ ಬಯಲಾಗುತ್ತದೆ ಎಂದು ತಿಳಿಸಿದ್ದಾರೆ.

ಅನಾಥ ಶವಗಳ ಪರಿಶೀಲನಾ ಸಮಿತಿ ರಚಿಸಿ: ಮೇಲೆ ತಿಳಿಸಿರುವ ವಿಷಯಗಳಿಗೆ ಸಂಬಂಧಿಸಿದಂತೆ, ಒಂದು ತನಿಖಾ ತಂಡವನ್ನು ರಚಿಸುವುದರ ಜೊತೆಗೆ ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಇತರೆ ಮಹಾನಗರಗಳ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ಪತ್ರೆಗಳು ಮತ್ತು ಅಪಘಾತ ಪ್ರಕರಣಗಳ ರೋಗಿಗಳನ್ನು ದಾಖಲಿಸಿಕೊಳ್ಳುವ ಜಿಲ್ಲಾ ಮಟ್ಟದ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ಇಡುವ ಸಂಬಂಧ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ 'ವಾರಸುದಾರರು ಪತ್ತೆಯಾಗದ ಮತ್ತು ಅನಾಥ ರೋಗಿಗಳು ಮತ್ತು ಶವಗಳ ಪರಿಶೀಲನಾ ಸಮಿತಿ'ಯನ್ನು ರಚಿಸುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಎನ್.ಆರ್. ರಮೇಶ್‌ ಮನವಿ ಮಾಡಿದ್ದಾರೆ.

click me!