
ಬೆಂಗಳೂರು (ಮಾ.12) ನಗರದಲ್ಲಿ ಸಾರ್ವಜನಿಕರಿಗೆ ಸೇವೆ (Public service) ನೀಡುವ ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಸೇರಿ ಒಟ್ಟು 14 ಇಲಾಖೆಗಳ ಸೇವೆ ಮತ್ತು ದೂರುಗಳ ಮೇಲ್ವಿಚಾರಣೆಗೆ ಇಂಟಿಗ್ರೇಟೆಡ್ ಕಂಟ್ರೋಲ್ ಮತ್ತು ಕಮಾಂಡ್ ಸೆಂಟರ್ (ಐಸಿಸಿಸಿ)ಗೆ ಬಿಬಿಎಂಪಿ (BBMP) ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಲು ಶುಕ್ರವಾರ ಚಾಲನೆ ನೀಡಲಾಯಿತು. ಈ ಕೇಂದ್ರದ ಸ್ಥಾಪನೆಯಿಂದ ನಗರದ ವಿವಿಧ 14 ಇಲಾಖೆಗಳ ಮಾಹಿತಿ ಒಂದೇ ಸೂರಿನಲ್ಲಿ ಸಂಗ್ರಹವಾಗಲಿದ್ದು, ಈ ಮಾಹಿತಿ ಆಧರಿಸಿ ಸಮಸ್ಯೆಗಳ ತ್ವರಿತ ಇತ್ಯರ್ಥಕ್ಕೆ ನೆರವಾಗಲಿದೆ.
ಬೆಂಗಳೂರು ಸ್ಮಾರ್ಟ್ ಸಿಟಿ ಲಿ.ನಿಂದ (Bengaluru Smart City Ltd) ಐಸಿಸಿಸಿ (ICCC)ನಿರ್ಮಿಸಲಾಗುತ್ತಿದೆ. ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಬಿಎಂಟಿಸಿ ಮೆಟ್ರೋ, ಬೆಂಗಳೂರು ಸಂಚಾರಿ ಮತ್ತು ನಗರ ಪೊಲೀಸ್, ಮಾಲಿನ್ಯ ನಿಯಂತ್ರಣ ಮಂಡಳಿ, ಆರೋಗ್ಯ ಇಲಾಖೆ ಸೇರಿ 14 ಇಲಾಖೆಗಳು ಈ ಐಸಿಸಿಸಿಗೆ ಅಡಿಯಲ್ಲಿ ಬರುತ್ತವೆ. ಈ ಇಲಾಖೆಗಳ ಪ್ರತಿಯೊಂದು ಕಾರ್ಯ ಚಟುವಟಿಕೆ, ಸೇವೆಗಳು, ರಕ್ಷಣೆ, ರಸ್ತೆ ನಿಯಮಗಳ ಪಾಲನೆ ಹಾಗೂ ತುರ್ತು ಪರಿಸ್ಥಿತಿ ಬಗ್ಗೆ ಐಸಿಸಿಸಿಯಲ್ಲಿ ಮಾಹಿತಿ ಕ್ರೋಡೀಕರಣ ಆಗಲಿದೆ. ಇದರಿಂದ ಸಮನ್ವಯತೆ ಹೆಚ್ಚಿ ಸಮಸ್ಯೆ, ದೂರುಗಳ ಪರಿಹಾರ ತ್ವರಿತವಾಗಲಿದೆ.
ದಿನದ 24 ಗಂಟೆಯೂ ಈ ಕೇಂದ್ರ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರ ದೂರು ನಿರ್ವಹಣೆ ವ್ಯವಸ್ಥೆ ಹೊಂದಿದೆ. ಈ ಮೂಲಕ ಆಡಳಿತದಲ್ಲಿ ಸಾರ್ವಜನಿಕರ ಸಹಭಾಗಿತ್ವಕ್ಕೆ ಆದ್ಯತೆ ನೀಡಲಾಗುತ್ತದೆ. ಮುಖ್ಯವಾಗಿ ನಗರದ ವಾಸಯೋಗ್ಯತೆ ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
40 ಕೋಟಿ ರು. ವೆಚ್ಚ: ಬಿಬಿಎಂಪಿ ಕೇಂದ್ರ ಕಚೇರಿಯ ಕೋವಿಡ್ ವಾರ್ ರೂಮ್ (Covid War Room) ಇರುವ ಮಹಡಿಯಲ್ಲಿ ಐಸಿಸಿಸಿಯನ್ನು ಅಂದಾಜು 40 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. 25 ಜನರ ತಂಡವು ಕಾರ್ಯ ನಿರ್ವಹಿಸಲಿದೆ. ಪಾಲಿಕೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗ ಮತ್ತು ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕ ನೇತೃತ್ವದಲ್ಲಿ ನಿರ್ಮಾಣ ಆಗುತ್ತಿದ್ದು, ನಗರದ ಒಟ್ಟಾರೆ ನಿರ್ವಹಣೆಗೆ ಸಹಕಾರಿ ಆಗಲಿದೆ. ಇದರೊಂದಿಗೆ ಎಲ್ಲ ವಲಯ ಕಚೇರಿಗಳಲ್ಲಿ ಆಧುನಿಕ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲು ಸ್ಮಾರ್ಟ್ ಸಿಟಿ ಲಿ. ಯೋಜನೆ ರೂಪಿಸಿದೆ.
ಸೆಂಟರ್ ಸ್ಥಾಪನೆ ಕಾರ್ಯಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಚಾಲನೆ ನೀಡಿದರು. ಮುಖ್ಯ ಆಯುಕ್ತ ಗೌರವ್ಗುಪ್ತ, ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ, ಉಪ ಆಯುಕ್ತೆ ರಮಾಮಣಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಉಪಸ್ಥಿತರಿದ್ದರು.
400 ಕೋಟಿ ವೆಚ್ಚದಲ್ಲಿ ಕರ್ನಾಟಕದ ಕೆರೆಗಳ ಅಭಿವೃದ್ಧಿ: ಸಚಿವ ಮಾಧುಸ್ವಾಮಿ
ಕಾರ್ಯ ನಿರ್ವಹಣೆ ಹೇಗೆ? ನಗರದ ವಿವಿಧ 14 ಇಲಾಖೆಗಳ ಜಾಲತಾಣ ಮತ್ತು ಅಪ್ಲಿಕೇಷನ್ಗಳಿಂದ ಸಿಗುವ ಮಾಹಿತಿಯನ್ನು ‘ಐಸಿಸಿಸಿ’ ಕೇಂದ್ರ ಸ್ವೀಕರಿಸುತ್ತದೆ. ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ತಂಡಗಳು ವಿವಿಧೆಡೆಯಿಂದ ಬಂದ ಮಾಹಿತಿಯನ್ನು ಸಂಸ್ಕರಿಸಿ, ಒಂದೇ ತೆರೆನಾದ ವಿಚಾರಗಳನ್ನು ಕ್ರೋಡೀಕರಿಸಲಿವೆ. ಈ ದತ್ತಾಂಶವನ್ನು ಆಧರಿಸಿ ಮೇಲಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಸೂಕ್ತವಾದ ಕ್ರಮ ರೂಪಿಸಲು ಸಹಾಯಕವಾಗಲಿದೆ. ಅರ್ಥಾತ್ ಸಮಸ್ಯೆಗಳ ಪರಿಹಾರ ಸುಲಭವಾಗಲಿದೆ.
Namma Bengaluru Foundation : ಆನೆ ಕಾರಿಡಾರ್ ಫಾಸ್ಟ್ ಟ್ರ್ಯಾಕ್ ಸರ್ವೇ.. ಡಿಸಿಗೆ NBF ಅಭಿನಂದನೆ
ಉದಾಹರಣೆಗೆ: ಒಂದು ರಸ್ತೆಯಲ್ಲಿ ಗುಂಡಿ ಬಿದ್ದು, ಸಂಚಾರಕ್ಕೆ ತೊಂದರೆ ಆಗಿ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ಪೊಲೀಸರು ತಮ್ಮ ಇಲಾಖೆಗೆ ಮಾಹಿತಿ ನೀಡುತ್ತಾರೆ. ಆ ಮಾಹಿತಿ ಐಸಿಸಿಸಿಗೂ ಬರುತ್ತದೆ. ಆಗ ಅವರು ಈ ಸಮಸ್ಯೆಯನ್ನು ಸಂಬಂಧಿಸಿದ ಇಲಾಖೆ ಗಮನಕ್ಕೆ ತರುತ್ತಾರೆ. ಆಗ ಆ ಇಲಾಖೆ ಕೂಡಲೇ ಸ್ಥಳಕ್ಕೆ ಧಾವಿಸಿ ರಸ್ತೆ ಸರಿಪಡಿಸಲು ಕ್ರಮ ಜರುಗಿಸುತ್ತದೆ. ಟ್ರಾಫಿಕ್ ಸಮಸ್ಯೆ ನಿವಾರಣೆ ಆಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ