
ಬೆಂಗಳೂರು (ಜು.29): ಯೂಟ್ಯೂಬ್(Youtube)ನಲ್ಲಿ ಕಳ್ಳತನ ಕೃತ್ಯಗಳ ವಿಡಿಯೋ ನೋಡಿ ಮೊಬೈಲ್ ಮಾರಾಟ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಬಿಸಿಎ ಪದವೀಧರನೊಬ್ಬನನ್ನು ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ರಾಜ್ಯದ ತಿರುವಣ್ಣಾಮಲೈ ಮೂಲದ ಸತೀಯಾ ಅಲಿಯಾಸ್ ಸತ್ಯ ಬಂಧಿತನಾಗಿದ್ದು, ಆರೋಪಿಯಿಂದ 11 ಮೊಬೈಲ್ಗಳು, 9 ಲ್ಯಾಪ್ಟಾಪ್ ಹಾಗೂ 2 ಟ್ಯಾಬ್ಗಳು ಸೇರಿದಂತೆ 20 ಲಕ್ಷ ರು. ಮೌಲ್ಯದ ವಸ್ತುಗಳು ಜಪ್ತಿಯಾಗಿವೆ. ಕೆಲ ದಿನಗಳ ಹಿಂದೆ ಎಚ್ಎಸ್ಆರ್ ಲೇಔಟ್ ಹತ್ತಿರ ಮೊಬೈಲ್ ಅಂಗಡಿಯಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸತ್ಯ ಕ್ರಿಮಿನಲ್ ಹಿನ್ನಲೆ ಹೊಂದಿದ್ದು, ಆತನ ವಿರುದ್ಧ ತಮಿಳುನಾಡಿನಲ್ಲಿ ಕಳ್ಳತನ ಪ್ರಕರಣವಿದೆ. ಬಿಸಿಎ ಓದಿದ್ದ ಸತ್ಯ ಕೆಲಸವಿಲ್ಲದೆ ಅಲೆಯುತ್ತಿದ್ದ. ಬೆವರು ಹರಿಸದೆ ಸುಲಭವಾಗಿ ಹಣ ಸಂಪಾದನೆಗೆ ಆತ ಅಡ್ಡದಾರಿ ತುಳಿದಿದ್ದ. ಯೂಟ್ಯೂಬ್ನಲ್ಲಿ ಮೊಬೈಲ್ ಅಂಗಡಿಗಳಿಗೆ ಕಳ್ಳತನ ನಡೆಸುವುದು ಹೇಗೆ ಎಂಬುದನ್ನು ಕಲಿತು ಅದರಂತೆ ಆತ ಕೃತ್ಯ ಎಸಗುತ್ತಿದ್ದ. ಇತ್ತೀಚಿಗೆ ಎಚ್ಎಸ್ಆರ್ ಲೇಔಟ್ ಸಮೀಪ ವೆಂಕಟೇಶ್ ಎಂಬುವರಿಗೆ ಸೇರಿದ ಮೊಬೈಲ್ ಅಂಗಡಿಗೆ ಬೀಗ ಮುರಿದು 11 ಮೊಬೈಲ್ಗಳನ್ನು ಸತ್ಯ ದೋಚಿದ್ದ. ಈ ಕೃತ್ಯದ ಖದೀಮನ ಪತ್ತೆಗೆ ಇನ್ಸ್ಪೆಕ್ಟರ್ ಧರ್ಮೇಗೌಡ ಸಾರಥ್ಯದಲ್ಲಿ ಸಬ್ ಇನ್ಸ್ಪೆಕ್ಟರ್ ಶಿವಶಂಕರ್ ತಂಡವು ಕಾರ್ಯಾಚರಣೆಗಿಳಿಯಿತು. ಕೊನೆಗೆ ಬೆಂಗಳೂರು ಟು ಚೆನ್ನೈವರೆಗೆ ಸುಮಾರು 600 ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿ ಸುಳಿವು ಸಿಕ್ಕಿದೆ. ಈ ಮಾಹಿತಿ ಆಧರಿಸಿ 350 ಕಿ.ಮೀ ಆತನನ್ನು ಬೆನ್ನತ್ತಿ ಪೊಲೀಸರು ಸೆರೆ ಹಿಡಿದು ಕರೆತಂದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ನನಗೆ ಮನಸ್ಸಿನಲ್ಲಿ ಕಳ್ಳತನ ಮಾಡಬೇಕು ಅನಿಸಿತು. ಅದಕ್ಕೆ ನಾನು ಮೊಬೈಲ್ ಕಳವು ಮಾಡಿದ್ದೆ. ಇದರ ಹೊರತು ಬೇರೆ ಉದ್ದೇಶವಿರಲಿಲ್ಲ ಎಂದು ವಿಚಾರಣೆ ವೇಳೆ ಆರೋಪಿ ಸತ್ಯ ಹೇಳಿಕೆ ಕೊಟ್ಟಿರುವುದಾಗಿ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ