
ಬೆಂಗಳೂರು (ಮೇ.04): ಹೃದಯ ಸ್ಪರ್ಶಿಸುವ ಈ ಕಥೆ ಸಾವಿರಾರು ಜನರ ಮನಸ್ಸನ್ನು ತಟ್ಟದೇ ಇರದು. ಬೆಂಗಳೂರು ಮೂಲದ ಉದ್ಯಮಿ ಮತ್ತು ಕ್ರೀಡಾಪಟು ಚಿನ್ಮಯ್ ಹೆಗ್ಡೆ ಅವರ ಜೀವನದಲ್ಲಿ ಒಂದು ವಿಶೇಷ ಘಟನೆ ನಡೆದಿದೆ. ಇದನ್ನು ಅವರು ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಂದು ಬ್ಯಾಂಕ್ ತಪ್ಪು, ಒಂದು ಸಣ್ಣ ನಿರ್ಧಾರ, ಮತ್ತು ಒಂದು ಹುಡುಗಿಯ ಭವಿಷ್ಯವೇ ಬದಲಾದದ್ದು ಹೇಗೆಂದು ಬರೆದುಕೊಂಡಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆ ಹೆಗ್ಡೆ ಅವರಿಗೆ ಅಂತಾರಾಷ್ಟ್ರೀಯ ಖಾತೆಯಿಂದ ಆಕಸ್ಮಿಕವಾಗಿ 50,000 ರೂ. ಜಮೆಯಾಯಿತು. ಏಕಾಏಕಿ ಬಂದ ಈ ಹಣದಿಂದ ಗೊಂದಲಗೊಂಡ ಅವರು ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ, ಈ ಹಣ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ರಿಜ್ವಾನ್ ಎಂಬ ಯುವಕನಿಂದ ತಪ್ಪಾಗಿ ಅವರ ಖಾತೆಗೆ ಜಮೆಯಾಗಿದೆ ಎಂದು ಪತ್ತೆಯಾಯಿತು.
ಖಾತೆ ಸಂಖ್ಯೆಯಲ್ಲಿ ಸಣ್ಣ ತಪ್ಪಿನಿಂದಾಗಿ ಹಣ ನನ್ನ ಖಾತೆಗೆ ಜಮೆಯಾಯಿತು. ನಾನು ಅವನಿಗೆ ಕರೆ ಮಾಡಿದಾಗ ಅವನು ಅತ್ತ. ದಯವಿಟ್ಟು ನನ್ನ ಕುಟುಂಬಕ್ಕಾಗಿ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ಆ ಹಣವನ್ನು ವಾಪಾಸ್ ಕೊಡಿ ಎಂದು ಕೇಳಿದ. ನಾನು ಆ ಹಣ ನೀಡುವುದಾಗಿ ಅವರಿಗೆ ಭರವಸೆ ನೀಡಿದ್ದೆ. ನಾನು ಅವರ ವಿಳಾಸವನ್ನು ತೆಗೆದುಕೊಂಡು ಅವರ ಕುಟುಂಬವನ್ನು ಭೇಟಿ ಮಾಡಲು ಹೋದೆ. ಅವರ ಮನೆ ಭೀಕರ ಸ್ಥಿತಿಯಲ್ಲಿತ್ತು. ಅದು ಯಾವಾಗ ಬೇಕಾದರೂ ಕುಸಿಯಬಹುದು ಎಂದು ತೋರುತ್ತಿತ್ತು. ವೀಲ್ಚೇರ್ನಲ್ಲಿದ್ದ ಅವರ ತಂದೆ ಕಟ್ಟಡ ನಿರ್ಮಾಣ ಕೆಲಸಗಾರರಾಗಿದ್ದರು.
ಆದರೆ 3ನೇ ಮಹಡಿಯಿಂದ ಬಿದ್ದು ಕಾಲುಗಳ ಸ್ವಾಧೀನ ಕಳೆದುಕೊಂಡರು ಎಂದು ನನಗೆ ಹೇಳಿದರು. ರಿಜ್ವಾನ್ ಇತ್ತೀಚೆಗೆ ಶೇ. 92 ಅಂಕ ಪಡೆದು ಬಿಕಾಂ ಮುಗಿಸಿ ಕುಟುಂಬವನ್ನು ಪೋಷಿಸಲು ವಿದೇಶಕ್ಕೆ ಹೋಗಿದ್ದರು. ಇನ್ನು ಅವರ ಚಿಕ್ಕ ತಂಗಿ ಒಬ್ಬ ಉತ್ತಮ ವಿದ್ಯಾರ್ಥಿನಿಯಾಗಿದ್ದರೂ, ಹಣದ ಕೊರತೆಯಿಂದ ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಹೋಗಬೇಕಾಯಿತು. ಈ ಕಥೆಯನ್ನು ನಾನು ನಮ್ಮ ತಂದೆಗೆ ಹೇಳಿದಾಗ ಅದು ಅವರ ಮನಸ್ಸಿಗೆ ನಾಟಿತು. ಮರುದಿನವೇ ನನ್ನ ತಂದೆ ಹೇಳಿದರು, ನಾನು ಅವರ ಮಗಳ ಶಿಕ್ಷಣದ ಜವಬ್ದಾರಿಯನ್ನ ಸಂಪೂರ್ಣವಾಗಿ ವಹಿಸಿಕೊಳ್ಳುತ್ತೇನೆ ಎಂದರು. ನಾವು ಮತ್ತೆ ಅವರ ಮನೆಗೆ ಹೋದೆವು. ಅಪ್ಪ ಆಕೆಯ ಆ ವರ್ಷದ ಶುಲ್ಕವನ್ನು ಪಾವತಿಸಿದರು. ಮತ್ತು ನನ್ನಿಂದ ಆಕೆಯ ಶಿಕ್ಷಣದ ನಿರಂತರ ವರದಿ ಕೇಳಿದರು ಎಂದು ಹೆಗ್ಡೆ ಬರೆದುಕೊಂಡಿದ್ದಾರೆ.
SSLCಯಲ್ಲಿ 625ಕ್ಕೆ 200 ಅಂಕ: ಮಗ ಫೇಲ್ ಆದ್ರೂ ಕೇಕ್ ಕಟ್ ಮಾಡಿ ಸಂಭ್ರಮಿಸಿದ ತಂದೆ
ಇನ್ನು ಕಳೆದ ಶುಕ್ರವಾರ, ಕರ್ನಾಟಕ SSLC ಫಲಿತಾಂಶ ಪ್ರಕಟವಾದಾಗ, ಆ ಹುಡುಗಿ 625ರಲ್ಲಿ 606 ಅಂಕಗಳನ್ನು ಪಡೆದು 97% ಫಲಿತಾಂಶ ಗಳಿಸಿದ್ದಾಳೆ. ಇನ್ನು ಅವಳು ಮೊದಲು ಕರೆ ಮಾಡಿ, ನನಗೆ ನೀವು ನಿಜವಾದ ಅಣ್ಣನಿಗಿಂತ ಮೊದಲು ಹಾಗಾಗಿ ನಿಮಗೆ ಕರೆ ಮಾಡಿದೆ. ನೀವು ನನ್ನ ಅಣ್ಣನಂತಿದ್ದೀರಿ ಎಂದಳು. ಅದು ನನಗೆ ಎಷ್ಟು ಭಾವನಾತ್ಮಕವಾಗಿತ್ತೋ ಎಂದು ಹೇಳಲಾಗದು. ಬ್ಯಾಂಕ್ ಖಾತೆಯ ಸಣ್ಣ ಎಡವಟ್ಟಿನಿಂದ ಆದ ಒಂದು ತಪ್ಪಿನಿಂದ ಆಕೆಯ ಜೀವನ ಸುಂದರವಾಯಿತು ಎಂದು ಹೆಗ್ಡೆ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ