ಬೆಂಗಳೂರಿನಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಮಂಗಳೂರು ಮೂಲದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು[ಡಿ.08]: ಮಂಗಳೂರಿನಿಂದ ಬಂದು ಬೆಂಗಳೂರಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರು ಪೊಲೀಸರ ಅತಿಥಿಯಾಗಿದ್ದಾರೆ
ಬೆಂಗಳೂರಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಮಂಗಳೂರು ಮೂಲದ ಮೊಹಮ್ಮದ್ ರಫೀಕ್, ತೌಸಿಫ್ ಸಾಧಿಕ್ ರನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳು ಮಲ್ಲೇಶ್ವರಂ ರಿಜಾಯ್ಸ್ ಹೊಟೇಲ್ ನಲ್ಲಿ ಸಂಬಂಧಿಕರ ಮದುವೆಗೆಂದು ಬಂದಿದ್ದ ನಿರ್ಮಲಾ ಎಂಬ ಮಹಿಳೆ ಲಿಪ್ಟ್ ಗಾಗಿ ಕಾಯುತ್ತಿದ್ದ ವೇಳೆ ಸರ ಕಿತ್ತಿದ್ದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.
ಘಟನೆಯ ಬಳಿಕ ಮಹಿಳೆಯು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ಯ ಪ್ರವೃತ್ತರಾದ ಪೊಲೀಸರು ಹೊಟೇಲ್ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಇಬ್ಬರು ಸರಗಳ್ಳರನ್ನು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ 25 ಸರಗಳ್ಳತನ ಪ್ರಕರಣ ಹಾಗೂ ಮೂರು ದರೋಡೆ ಪ್ರಕರಣ ದಾಖಲಾಗಿರುವುದೂ ಬಯಲಾಗಿದೆ. ಸದ್ಯ ಬಂಧಿತರಿಂದ ಮೂರುವರೆ ಲಕ್ಷ ಮೌಲ್ಯದ 120 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.