
ಬೆಂಗಳೂರು (ನ.18): ನಗರದ ಭಾರಿ ಸಂಚಾರ ದಟ್ಟಣೆಯ ನಡುವೆಯೂ ಜೀವ ಉಳಿಸುವ ಕಾರ್ಯಾಚರಣೆಗೆ ಬೆಂಗಳೂರು ಮೆಟ್ರೋ ಮತ್ತೊಮ್ಮೆ 'ಲೈಫ್ಲೈನ್' ಯಾಗಿ ಪರಿವರ್ತನೆಗೊಂಡಿದೆ. ನವೆಂಬರ್ 17ರ ಸೋಮವಾರ ಸಂಜೆ, ತುರ್ತು ಹೃದಯ ಕಸಿ ಶಸ್ತ್ರಚಿಕಿತ್ಸೆಗಾಗಿ ಆಸ್ಟರ್ ಆರ್ವಿ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯಕ್ಕೆ ಜೀವಂತ ಮಾನವ ಹೃದಯವನ್ನು ಮೆಟ್ರೋ ಮಾರ್ಗವಾಗಿ ಯಶಸ್ವಿಯಾಗಿ ಸಾಗಿಸಲಾಯಿತು. ಇದು ಬೆಂಗಳೂರು ಮೆಟ್ರೋದಲ್ಲಿ ನಡೆದ ಐದನೇ ಯಶಸ್ವಿ ಅಂಗಾಂಗ ವರ್ಗಾವಣೆ ಕಾರ್ಯಾಚರಣೆಯಾಗಿದೆ.
ಸಂಜೆ 7:26ಕ್ಕೆ ಆರು ಸದಸ್ಯ ಬಳಗದ ವೈದ್ಯಕೀಯ ತಂಡವು ವಿಶೇಷ ಕಂಟೇನರ್ನಲ್ಲಿ ಹೃದಯವನ್ನು ಹೊತ್ತು ರಾಗಿಗುಡ್ಡ ಮೆಟ್ರೋ ನಿಲ್ದಾಣ ತಲುಪಿತು.
ಭದ್ರತಾ ಸಿಬ್ಬಂದಿ ಮತ್ತು ನಿಲ್ದಾಣ ಸಿಬ್ಬಂದಿ ತಕ್ಷಣ ಸಹಕಾರ ನೀಡಿ, ಎಲ್ಲ ತಪಾಸಣೆಗಳನ್ನು ವೇಗವಾಗಿ ಮುಗಿಸಿ ಕೇವಲ 3 ನಿಮಿಷಗಳಲ್ಲಿ (7:29ಕ್ಕೆ) ತಂಡವನ್ನು ಪ್ಲಾಟ್ಫಾರ್ಮ್ಗೆ ಕರೆದೊಯ್ದರು.
7:32ಕ್ಕೆ ತಂಡ ಮೆಟ್ರೋ ರೈಲಿಗೆ ಏರಿತು. ಪ್ರಯಾಣದುದ್ದಕ್ಕೂ ಭದ್ರತಾ ಸಿಬ್ಬಂದಿ ಜೊತೆಗಿದ್ದು ಯಾವುದೇ ಅಡೆತಡೆ ಇಲ್ಲದಂತೆ ನೋಡಿಕೊಂಡರು.
ರೈಲು ರಾತ್ರಿ 7:39ಕ್ಕೆ ಬೊಮ್ಮಸಂದ್ರ ನಿಲ್ದಾಣ ತಲುಪಿತು (ಕೇವಲ 7 ನಿಮಿಷಗಳ ಪ್ರಯಾಣ!).
ನಿಲ್ದಾಣದಿಂದ ತಕ್ಷಣವೇ ತಂಡವನ್ನು ಹೊರಗೆ ಕರೆದೊಯ್ಯಲಾಯಿತು; ಕಾಯುತ್ತಿದ್ದ ಆಂಬ್ಯುಲೆನ್ಸ್ನಲ್ಲಿ ಹೃದಯವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ರಾತ್ರಿ 8:12ಕ್ಕೆ ನಾರಾಯಣ ಹೃದಯಾಲಯ ತಲುಪಿ ಕಸಿ ತಂಡಕ್ಕೆ ಹೃದಯವನ್ನು ಸಮಯಕ್ಕೆ ಸರಿಯಾಗಿ ಒಪ್ಪಿಸಲಾಯಿತು.
ಈ ತುರ್ತು ವೈದ್ಯಕೀಯ ವರ್ಗಾವಣೆಯು ಈ ವರ್ಷದ ಆರಂಭದಲ್ಲಿ ಬಿಎಂಆರ್ಸಿಎಲ್ ಮತ್ತು ಆರೋಗ್ಯ ಇಲಾಖೆಯಿಂದ ಹೊರಡಿಸಲಾಗಿದ್ದ 'ಗ್ರೀನ್ ಕಾರಿಡಾರ್' ಜಂಟಿ ಕಾರ್ಯವಿಧಾನದಡಿ ನಡೆಯಿತು. ಅಂಗಾಂಗ ಕಸಿಗೆ ಸೂಕ್ತವಾದ ಸಮಯದೊಳಗೆ (ಗೋಲ್ಡನ್ ಅವರ್) ತಲುಪಿಸುವುದು ಅತಿ ಮುಖ್ಯ. ಬೆಳಗ್ಗೆ-ಸಂಜೆ ರಸ್ತೆ ಸಂಚಾರ ದಟ್ಟಣೆಯಲ್ಲೂ ಮೆಟ್ರೋ ಅತ್ಯಂತ ವಿಶ್ವಾಸಾರ್ಹ ಮಾರ್ಗವಾಗಿ ಸಾಬೀತಾಗುತ್ತಿದೆ.
ಬಿಎಂಆರ್ಸಿಎಲ್ ಪ್ರಕಟಣೆಯ ಪ್ರಕಾರ, ಅಂಗಾಂಗ ಕಸಿಗೆ ಸೂಕ್ತವಾಗಿ ಉಳಿಯುವಂತೆ ನೋಡಿಕೊಳ್ಳಲು ಅವುಗಳನ್ನು ತ್ವರಿತವಾಗಿ ಸಾಗಿಸುವ ಅಗತ್ಯವಿದ್ದ ಸ್ಪರ್ಶ ಆಸ್ಪತ್ರೆಯಿಂದ ಈ ವಿನಂತಿ ಬಂದಿತ್ತು. ಬೆಳಗಿನ ಸಮಯದಲ್ಲಿ ರಸ್ತೆ ಸಂಚಾರ ಅನಿರೀಕ್ಷಿತವಾಗಿದ್ದರಿಂದ, ತಂಡವು ಮೆಟ್ರೋದತ್ತ ಮುಖ ಮಾಡಿತ್ತು. ಅಂತಹ ತುರ್ತು ಸಂದರ್ಭಗಳಲ್ಲಿ 'ಜೀವ ಉಳಿಸುವ ಯಾವುದೇ ತುರ್ತು ಸಂದರ್ಭದಲ್ಲಿ ಬೆಂಗಳೂರು ಮೆಟ್ರೋ ಸದಾ ಸಿದ್ಧವಾಗಿದೆ. ನಗರದ ಜನರಿಗೆ ನಾವು ನಿಜವಾದ ಜೀವನರೇಖೆಯಾಗಿ ಮುಂದುವರಿಯುತ್ತೇವೆ' ಎಂದು ತಿಳಿಸಿದೆ. ಕಳೆದ ಎರಡು ವಾರಗಳಲ್ಲಿ ಮಾತ್ರವೇ ಮೆಟ್ರೋ ಮಾರ್ಗದಲ್ಲಿ ಹೃದಯ ಮತ್ತು ಶ್ವಾಸಕೋಶ ಸಾಗಾಟ ಮಾಡಲಾಗಿದ್ದು, ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ 'A human face ಎಂಬ ಪ್ರಶಂಸೆಗೆ ಬೆಂಗಳೂರು ಮೆಟ್ರೋ ಪಾತ್ರವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ