ಸರ್ವ ರೋಗಕ್ಕೂ ಸಾರಾಯಿ ಮದ್ದು ಅಂತಾರೆ, ಆದ್ರೆ ಕೆಲವಡಿ ರಂಗನಾಥ ಸ್ವಾಮಿ ಸರ್ವ ಪೂಜೆಗೂ ಸಾರಾಯಿ ನೈವೇದ್ಯ ಕೊಡ್ತಾರೆ!

By Sathish Kumar KHFirst Published Apr 1, 2024, 8:00 PM IST
Highlights

ಸಾಮಾನ್ಯವಾಗಿ ಸರ್ವ ರೋಗಕ್ಕೂ ಸಾರಾಯಿ ಮದ್ದು ಎಂದು ಹೇಳುತ್ತಾರೆ. ಆದರೆ, ಕೆಲವಡಿ ರಂಗನಾಥಸ್ವಾಮಿ ದೇವರಿಗೆ ಭಕ್ತರು ಸರ್ವ ಪೂಜೆಗೂ ಸಾರಾಯಿ ನೈವೇದ್ಯ ಕೊಡುತ್ತಾರೆ.

ವರದಿ- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಏ.01):
ಹಿಂದೂ ಸಂಪ್ರದಾಯದ ಪ್ರಕಾರ ನಾವು, ನೀವೆಲ್ಲರೂ ದೇವರಿಗೆ ಕಾಯಿ, ಗಂಧದ ಕಡ್ಡಿ, ಕರ್ಪೂರ, ಹೂವು, ಹಣ್ಣುಗಳನ್ನು ಹಾಗೂ ವಿವಿಧ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಕೊಡುತ್ತೇವೆ. ಆದರೆ, ಕೆಲವಡಿ ರಂಗನಾಥಸ್ವಾಮಿ ದೇವರಿಗೆ ಸಾರಾಯಿಯನ್ನೇ ನೈವೇದ್ಯವಾಗಿ ಕೊಟ್ಟು ಹರಕೆ ತೀರಿಸಲಾಗುತ್ತದೆ.

ಹೌದು, ಸಾಮಾನ್ಯವಾಗಿ ಯಾರಾದರೂ ಬಿಟ್ಟಿ ಸಲಹೆ ಕೊಡುವವರಿದ್ದರೆ ಸರ್ವ ರೋಗಕ್ಕೂ ಸಾರಾಯಿ ಮದ್ದು ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಸ್ಪಿರಿಟ್‌ ಅಂಶ ದೇಹಕ್ಕೆ ಒಂದಷ್ಟು ಚೈತನ್ಯ ಕೊಡುವುದು ಸತ್ಯ. ಇನ್ನು ಕೆಲವು ಔಷಧಿಗಳಲ್ಲಿಯೂ ಸ್ಪಿರಿಟ್‌ ಬಳಕೆ ಮಾಡಲಾಗಿರುತ್ತದೆ. ಆದರೆ, ಇಲ್ಲಿ ದೇವರಿಗೆ ಸಾರಾಯಿಯನ್ನೇ ನೈವೇದ್ಯವಾಗಿ ಅರ್ಪಣೆ ಮಾಡಲಾಗುತ್ತದೆ. ಅದು ಎಲ್ಲಿ ಅಂತೀರಾ..? ಬಾಗಲಕೋಟೆ ಜಿಲ್ಲೆಯ ಶ್ರೀಕ್ಷೇತ್ರ ಕೆಲವಡಿ ರಂಗನಾಥಸ್ವಾಮಿ ದೇವಾಲಯದಲ್ಲಿ.

ಬೆಳಗಾವಿಯ 'ಸತ್ತಗುರು' ಬಟ್ಟೆ ಅಂಗಡಿ ನಾಮಫಲಕ ಫುಲ್ ವೈರಲ್; ಕೊನೆಗೂ 'ಸತ್‌ಗುರು' ಎಂದು ಬದಲಿಸಿದ ಮಾಲೀಕ!

ಸಾಮಾನ್ಯವಾಗಿ ದೇವರಿಗೆ ಕಾಯಿ ಕರ್ಪೂರ ಸಹಿತ ವಿವಿಧ ಬಗೆಯ ಖಾದ್ಯಗಳ ನೈವೇದ್ಯ ಸಲ್ಲಿಸೋದು ಸರ್ವೇ ಸಾಮಾನ್ಯವಾಗಿರುತ್ತದೆ. ಆದ್ರೆ ಬಾಗಲಕೋಟೆ ಜಿಲ್ಲೆಯ ಕೆಲವಡಿ ರಂಗನಾಥ ಸ್ವಾಮಿಗೆ ಸರಾಯಿಯನ್ನೇ ಭಕ್ತರು ನೈವೇದ್ಯ ರೂಪದಲ್ಲಿ ಸಲ್ಲಿಸುವ ಅಪರೂಪದ ಸಂಪ್ರದಾಯವಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಲಿ ಕೊಡುವ ಪದ್ದತಿಯೂ ಇದೆ. ಉಳಿದಂತೆ ಹರಕೆ ತೀರಿಸಲು ವಿವಿಧ ಸೇವೆಗಳನ್ನು ಮಾಡಲಾಗುತ್ತದೆ. ಆದರೆ, ಕೆಲವಡಿ ರಂಗನಾಥಸ್ವಾಮಿ ದೇವರಿಗೆ ಸಾರಾಯಿಯನ್ನೇ ನೈವೇದ್ಯವಾಗಿ ಕೊಟ್ಟು ಹರಕೆ ತೀರಿಸಲಾಗುತ್ತದೆ. ಕೆಲವರು ಬ್ರಾಂಡೆಡ್ ಸಾರಾಯಿ ಬಾಟಲಿ ಕೊಟ್ಟರೆ, ಇನ್ನು ಕೆಲವರು ತೀರಾ ಲೋಕಲ್ ಆಗಿರುವ ಹೈವರ್ಡ್ಸ್, ಓಟಿ, ಬ್ಯಾಗ್‌ ಪೈಪರ್ ಹಾಗೂ ಜಿನ್‌ ಸೇರಿದಂತೆ ಇತರೆ ಬ್ರಾಂಡ್‌ಗಳ ಬಾಟಲಿಗಳು ಹಾಗೂ ಟೆಟ್ರಾ ಪ್ಯಾಕೆಟ್‌ಗಳನ್ನು ನೈವೇದ್ಯವಾಗಿ ದೇವರಿಗೆ ಅರ್ಪಿಸುತ್ತಾರೆ.

ಇಲ್ಲಿನ ರಂಗನಾಥ ಸ್ವಾಮಿಯ ಜಾತ್ರೆಗೆ ಸಾರಾಯಿ ನೈವೇದ್ಯವನ್ನ ನೀಡಲಾಗುತ್ತದೆ. ಪ್ರತಿವರ್ಷ ನಡೆಯುವ  ಜಾತ್ರೆಯಲ್ಲಿ ತಮ್ಮ ಹರಕೆ ಬೇಡಿಕೊಳ್ಳುವ ಭಕ್ತರು ಮರುವರ್ಷ ಜಾತ್ರೆಯಾಗುವ ಹೊತ್ತಿಗೆ ಇಷ್ಟಾರ್ಥ ಸಿದ್ದಿಯಾದ್ರೆ ಇಂತಿಷ್ಟು ಸರಾಯಿ ನೈವೈದ್ಯ ನೀಡುವುದಾಗಿ ಬೇಡಿಕೊಂಡಿರ್ತಾರೆ. ಮಕ್ಕಳಿಲ್ಲದವರು ಮಕ್ಕಳಿಗಾಗಿ, ಯುವಕರು ನೌಕರಿಗಾಗಿ, ಸಂಸಾರಸ್ಥರು ಮನೆ ಸಮಸ್ಯೆ ಬಗೆಹರಿಸುವುದು ಸೇರಿದಂತೆ ಭಕ್ತರು ನಾನಾ ರೀತಿಯಲ್ಲಿ ಬೇಡಿಕೆ ಸಲ್ಲಿಸುತ್ತಾರೆ. ಇತ್ತ ಇಷ್ಟಾರ್ಥ ಸಿದ್ದಿಯಾಗುತ್ತಲೇ ಬೇಡಿಕೊಂಡಂತೆ ಭಕ್ತರು ಸಾರಾಯಿ ನೈವೇದ್ಯಯನ್ನ ರಂಗನಾಥ ಸ್ವಾಮಿಗೆ ಅರ್ಪಿಸಿ ಕೃತಾರ್ಥರಾಗುತ್ತಾರೆ.

ಹಿಂದೂ ಹೋರಾಟಕ್ಕೆ ಗೆಲುವು, ಗ್ಯಾನವಾಪಿ ಮಸೀದಿಯಲ್ಲಿ ಪೂಜೆ ತಡೆಗೆ ಸುಪ್ರೀಂ ಕೋರ್ಟ್ ನಿರಾಕರಣೆ!

ಸರಾಯಿಯನ್ನ ದೇವರ ಮುಂದಿಟ್ಟು ನೈವೇದ್ಯವನ್ನ ಸಲ್ಲಿಸಲಾಗುತ್ತದೆ. ಇನ್ನು ಈ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಲಿದ್ದು, ತಲೆತಲಾಂತರದಿಂದ ಈ ಸಂಪ್ರದಾಯ ಮುಂದುವರೆದುಕೊಂಡು ಬಂದಿದೆ. ಇಂದು ನಾವೆಲ್ಲಾ ಮುಂದುವರೆಸಿಕೊಂಡು ಹೊರಟಿದ್ದೇವೆ ಎಂದು ಕೆಲವಡಿ ರಂಗನಾಥ ಸ್ವಾಮಿಯ ಭಕ್ತರು ಹೇಳುತ್ತಾರೆ.

click me!