
ರಾಮನಗರ (ಜ.21): ಅಯೋಧ್ಯೆಯಲ್ಲಿ ರಾಮಲಲ್ಲಾ (ಬಾಲರಾಮ)ನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ರಾಮನಗರದಲ್ಲಿ ಜ.22ರಂದು ಹಮ್ಮಿಕೊಳ್ಳಲಾಗಿದ್ದ ಸಂಭ್ರಮದ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.
ರಾಮಮಂದಿರ ಉದ್ಘಾಟನೆಯನ್ನು ಸಂಭ್ರಮಿಸಲು ನಾಗರಿಕರು ರಾಮನಗರದಲ್ಲಿ ಶ್ರೀರಾಮ ಮೂರ್ತಿಗೆ ವಿಶೇಷ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದರು. ಇದಕ್ಕಾಗಿ ಅಯೋಧ್ಯ ರಾಮಮಂದಿರ ಉದ್ಘಾಟನೆ ಆಚರಣಾ ಸಮಿತಿಯನ್ನು ರಚಿಸಿಕೊಂಡಿದ್ದರು. ಆದರೀಗ ಪೊಲೀಸ್ ಇಲಾಖೆಯಿಂದ ಕಟ್ಟು ನಿಟ್ಟಿನ ನಿಬಂಧನೆಗಳನ್ನು ಪಾಲಿಸುವಂತೆ ಖಡಕ್ ಸೂಚನೆ ಕೊಟ್ಟಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನಿಬಂಧನೆಗಳನ್ನು ಹೇರಿರುವುದು ಸಂಭ್ರಮದ ಮೇಲೆ ತಣ್ಣೀರು ಎರಚಿದಂತಾಗಿದೆ.
ಅಯೋಧ್ಯೆ ಬಾಲರಾಮನ ಪ್ರಾಣಪ್ರತಿಷ್ಠೆಯಲ್ಲಿ ಸುಳ್ಯದ ಪುರೋಹಿತ ಕೆ ಗಣಪತಿ ಭಟ್ ಭಾಗಿ
ಶ್ರೀರಾಮ ದೇವರ ಮೂರ್ತಿಯನ್ನು ಗರುಡ ವಾಹನದಲ್ಲಿ ಮೆರವಣಿಗೆಯ ನಂತರ ನಗರದ ಎಂ.ಜಿ.ರಸ್ತೆಯಲ್ಲಿ ನಿರ್ಮಿಸಲಾಗುವ ವೇದಿಕೆಯಲ್ಲಿ ಇರಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿತ್ತು. ನಂತರ ಮೆರವಣಿಗೆಯನ್ನು ಶ್ರೀ ಕೆಂಗಲ್ ಹನುಮಂತಯ್ಯ ವೃತ್ತದವರೆಗೆ ನಡೆಸುವುದು, ಸಂಜೆ ಶ್ರೀರಾಮ ದೇವರ ದೇವಾಲಯದ ಬಳಿ 6.30ರ ನಂತರ ದೀಪೋತ್ಸವ ಮತ್ತು ಸಂಗೀತೋತ್ಸವ ನಡೆಸಲು ನಿರ್ಣಯಿಸಲಾಗಿತ್ತು.
ಆದರೆ, ಪೊಲೀಸ್ ಇಲಾಖೆ ಮೆರವಣಿಗೆ ನಡೆಸಲು ಮತ್ತು ರಸ್ತೆಯಲ್ಲಿ ದೇವತಾ ಮೂರ್ತಿಯನ್ನು ಇರಿಸಲು ಅವಕಾಶವನ್ನು ನಿರಾಕರಿಸಿದೆ ಎಂದು ಗೊತ್ತಾಗಿದೆ. ಸಾರ್ವಜನಿಕ ಅನ್ನ ಸಂತರ್ಪಣೆ ಮತ್ತು ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾರ ಪ್ರಾಣ ಪತ್ರಿಷ್ಠಾಪನೆಯ ನೇರ ಪ್ರಸಾರದ ಎಲ್.ಇ.ಡಿ ಪರದೆಗಳನ್ನು ಅಳವಡಿಸಿಕೊಳ್ಳಲು ಮಾತ್ರ ಅವಕಾಶ ನೀಡಿದೆ ಎಂದು ಗೊತ್ತಾಗಿದೆ.
ಛತ್ರದ ಬೀದಿಯಲ್ಲಿರುವ ಶ್ರೀರಾಮ ದೇವಾಲಯದ ಬಳಿಯಿಂದ ಶ್ರೀ ರಾಮ ದೇವರ ಮೂರ್ತಿಯನ್ನು ಮಂಗಳವಾದ್ಯ ಸಮೇತ ಎಂ.ಜಿ.ರಸ್ತೆಯ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯದ ಬಳಿಗೆ ತರಲು ಸಹ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ. ಪೊಲೀಸ್ ಇಲಾಖೆಯ ಈ ಕ್ರಮಕ್ಕೆ ಶ್ರೀರಾಮ ಭಕ್ತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೀರಾಮನ ಪ್ರಾಣ ಪ್ರತಿಷ್ಠೆಯಿಂದ ಪ್ರತಿ ಜೀವ ಸಂಕುಲಕ್ಕೆ ಆನಂದ: ಕಲ್ಲಡ್ಕ ಪ್ರಭಾಕರ ಭಟ್
ರಾಮಮಂದಿರ ಉದ್ಘಾಟನೆಯ ದಿನವಾದ ಜ.22ರಂದು ರಾಮನಗರ ಮಾತ್ರವಲ್ಲ ಬೇರೆ ಯಾವ ಜಿಲ್ಲೆಗಳಲ್ಲಿಯೂ ಮೆರವಣಿಗೆಗಳಿಗೆ ಅವಕಾಶ ನೀಡಿಲ್ಲ. ಅಲ್ಲದೆ, ಹಿಂದೂ ಪರ ಸಂಘಟನೆಗಳು ಮೆರವಣಿಗೆ ನಡೆಸದಿರಲು ನಿರ್ಧರಿಸಿವೆ. ಹಾಗಾಗಿ ರಾಮನಗರದಲ್ಲಿಯೂ ಮೆರವಣಿಗೆ ನಿರ್ಬಂಧ ಹೇರಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರು ಕೈಜೋಡಿಸಬೇಕು.
- ದಿನಕರ್ ಶೆಟ್ಟಿ, ಡಿವೈಎಸ್ಪಿ, ರಾಮನಗರ
ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠಾಪನಾ ಸಂಭ್ರಮವನ್ನು ರಾಮನಗರದಲ್ಲಿ ಆಚರಿಸಲು ಪೊಲೀಸ್ ಇಲಾಖೆ ನಿರ್ಬಂಧ ಹೇರಿದೆ. ದೇವರ ಉತ್ಸಕ್ಕೂ ಅನುಮತಿ ನಿರಾಕರಿಸಿರುವುದು ಬೇಸರ ತಂದಿದೆ. ಸಂಭ್ರಮವನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ಶ್ರೀ ರಾಮನೂರಿನಲ್ಲಿ ಶ್ರೀರಾಮನ ಸಾಮೂಹಿಕ ಆರಾಧನೆಗೆ ಅನುಮತಿ ಸಿಕ್ಕಿಲ್ಲ. ಸಾರ್ವಜನಿಕರ ಭಾವನೆಗಳಿಗೆ ಪೊಲೀಸ್ ಇಲಾಖೆ ಸ್ಪಂದಿಸದಿರುವುದು ದುಃಖ ತಂದಿದೆ.- ಕೆ.ವಿ.ಉಮೇಶ್, ಅಧ್ಯಕ್ಷರು, ಅಯೋಧ್ಯ ರಾಮಮಂದಿರ ಉದ್ಘಾಟನೆ ಆಚರಣಾ ಸಮಿತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ