ರಾಮನಿಗಾಗಿ ಹೋರಾಟ ನೆನಪಿಸಿಕೊಂಡ್ರೆ ಮೈ ಜುಮ್ ಅನ್ನುತ್ತೆ; ಕರಸೇವಕರ ಮನದಾಳದ ಮಾತುಗಳು ಇಲ್ಲಿವೆ

By Kannadaprabha NewsFirst Published Jan 21, 2024, 5:43 AM IST
Highlights

ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮಮಂದಿರ ಉದ್ಘಾಟನೆ ಹಾಗೂ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ರಾಮ ಶಿಲಾ ಯಾತ್ರೆಯಲ್ಲಿ ಭಾಗವಹಿಸಿದ್ದ ಪಟ್ಟಣದ ಕರಸೇವಕರ ಮನದಲ್ಲಿ ಸಂತಸ ಇಮ್ಮಡಿಗೊಂಡಿದ್ದು, ತಮ್ಮ ಮನದಾಳದ ಮಾತುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಬಾಳೆಹೊನ್ನೂರು (ಜ.20): ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮಮಂದಿರ ಉದ್ಘಾಟನೆ ಹಾಗೂ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ರಾಮ ಶಿಲಾ ಯಾತ್ರೆಯಲ್ಲಿ ಭಾಗವಹಿಸಿದ್ದ ಪಟ್ಟಣದ ಕರಸೇವಕರ ಮನದಲ್ಲಿ ಸಂತಸ ಇಮ್ಮಡಿಗೊಂಡಿದ್ದು, ತಮ್ಮ ಮನದಾಳದ ಮಾತುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಸೋಮವಾರ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆ ನಡೆಯುವ ಹಿನ್ನೆಲೆಯಲ್ಲಿ ರಾಮಮಂದಿರ ಹೋರಾಟ, ಶಿಲಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಂಘದ ಕಾರ್ಯ ಕರ್ತರನ್ನು ಪತ್ರಿಕೆ ಮಾತಿಗೆಳೆದಾಗ ಹಲವು ವಿಚಾರಗಳನ್ನು ಹೊರಹಾಕಿದ್ದಾರೆ.

ರಾಮಮಂದಿರ ಲೋಕಾರ್ಪಣೆ ಹಿನ್ನೆಲೆ: ಮಂಗಳೂರಿನಲ್ಲಿ ಹೈ ಅಲರ್ಟ್!

ಅಂದು ಶಿಲಾಯಾತ್ರೆಯ ಮುಂದಾಳತ್ವವಹಿಸಿ ಕರಸೇವಕರಾಗಿದ್ದ ಸುರೇಂದ್ರ ಪೈ ಮಾತನಾಡಿ, ಬಾಳೆಹೊನ್ನೂರಿನಿಂದ ವಿಹಿಂಪ ಮುಖಂಡ ಬಿ.ಎಸ್.ವಿಠ್ಠಲ್‌ರಾವ್ ಅವರ ಮಾರ್ಗದರ್ಶನದಲ್ಲಿ ಹತ್ತು ಜನರ ತಂಡ ಇಟ್ಟಿಗೆ ಸಂಗ್ರಹದ ಶಿಲಾಯಾತ್ರೆಯಲ್ಲಿ ಭಾಗವಹಿಸಿದ್ದೆವು.

ಕರಸೇವೆಗಾಗಿ 17 ದಿನ ನಾವುಗಳು ಮನೆ, ಕುಟುಂಬವನ್ನು ಬಿಟ್ಟು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತೆರಳಿ ರಥಯಾತ್ರೆಯಲ್ಲಿ ಸಾವಿರಾರು ಇಟ್ಟಿಗೆ ಸಂಗ್ರಹಿಸಿ ದ್ದೆವು. ಬಾಳೆಹೊನ್ನೂರಿನಿಂದ ಹೊರಟ ರಥಯಾತ್ರೆಯು ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕಿನ ವಿವಿಧ ಭಾಗಗಳಲ್ಲಿ ಇಟ್ಟಿಗೆ ಸಂಗ್ರಹಿಸಿ ಚಿಕ್ಕಮಗಳೂರಿಗೆ ತೆರಳಿ ಅಲ್ಲಿಂದ ಶಿವಮೊಗ್ಗ, ಚಿತ್ರದುರ್ಗ, ರಾಯಚೂರು, ಬಾದಾಮಿ, ಪಟ್ಟದಕಲ್ಲು, ಐಹೊಳೆ ಮೂಲಕ ಬೀದರ್‌ಗೆ ತೆರಳಿದೆವು.

ತೆರಳಿದ ಎಲ್ಲೆಡೆಯೂ ನಮಗೆ ದೊರೆತ ಭವ್ಯ ಸ್ವಾಗತ ದೊರೆತಿದ್ದು, ಗ್ರಾಮಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಜಯ್ ಶ್ರೀರಾಮ್ ಘೋಷಣೆಗಳೊಂದಿಗೆ ಸ್ವಾಗತಿಸುತ್ತಿದ್ದರು. ಎಲ್ಲ ಕಡೆಗಳಲ್ಲಿಯೂ ನಮಗೆ ಊಟೋಪಚಾರ, ಪಾನೀಯ ವ್ಯವಸ್ಥೆ, ತಂಗಲು ಕೊಠಡಿಗಳ ವ್ಯವಸ್ಥೆಯನ್ನು ಉತ್ತಮವಾಗಿ ಮಾಡಿದ್ದರು. ಕರ್ನಾಟಕದ ಅಷ್ಟ ದಿಕ್ಕಿನಿಂದ ಇಟ್ಟಿಗೆ ಸಂಗ್ರಹ ಮಾಡಿದ್ದ ರಥಯಾತ್ರೆಯು ಅಂತಿಮವಾಗಿ ಬೀದರ್‌ನಲ್ಲಿ ಸಮಾವೇಶಗೊಂಡಿತು.

ಸಮಾವೇಶದಲ್ಲಿ 500ಕ್ಕೂ ಅಧಿಕ ವಿವಿಧ ಮಠಾಧೀಶರು ಭಾಗವಹಿಸಿದ್ದರು. ಲಕ್ಷಾಂತರ ರಾಮಭಕ್ತರು ಅಲ್ಲಿ ಪಾಲ್ಗೊಂಡಿದ್ದು, ಎಲ್ಲರ ಮನದಲ್ಲೂ ರಾಮಮಂದಿರ ನಿರ್ಮಾಣದ ಗುರಿಯೊಂದೇ ಕಾಣುತಿತ್ತು. ಅಂದಿನ ಯುವಕರ, ರಾಮಭಕ್ತರ ಉತ್ಸಾಹಕ್ಕೆ ಬೆಲ ಕಟ್ಟಲು ಸಾಧ್ಯವೇ ಇಲ್ಲ. ಇಂದು ರಾಮಮಂದಿರ ಉದ್ಘಾಟನೆ ನಡೆಯುತ್ತಿರುವುದು ನಮಗೆ ಬಹಳ ಸಂತಸ ತಂದಿದೆ.

ಬೀದರ್‌ನಲ್ಲಿ ಸಮಾವೇಶ ನಡೆಸಿ ಅಲ್ಲಿಂದ ರೈಲಿನ ಮೂಲಕ ಇಟ್ಟಿಗೆಗಳನ್ನು ತುಂಬಿ ಹೈದ್ರಾಬಾದ್ ಮೂಲಕ ಆಯೋಧ್ಯೆಗೆ ಕಳುಹಿಸಲಾಯಿತು. ನಮ್ಮ ತಂಡವು ಸಹ ಆಯೋಧ್ಯೆಗೆ ಹೊರಟಿದ್ದೆವು. ಸಂಘಟನೆಯಿಂದ ಕರಸೇವೆಯ ಪಾಸ್‌ಗಳನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೇ ಟಿಕೆಟ್ ಸಹ ಬುಕ್ ಮಾಡಲಾಗಿತ್ತು. ಆದರೆ ಕಡೇ ಕ್ಷಣದಲ್ಲಿ ರೈಲ್ವೇ ಸಂಚಾರ ರದ್ದು ಮಾಡಿದ ಕಾರಣ ವಾಪಾಸ್ ಬಂದೆವು ಎಂದು ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಟ್ಟರು.

ಯಾತ್ರೆಯಲ್ಲಿ ಪಾಲ್ಗೊಂಡ ಕರಸೇವಕರು: ಸುರೇಂದ್ರ ಪೈ, ರಾ.ವೆಂಕಟೇಶ್, ಸುಧಾಕರ ಪೂಜಾರಿ, ರಾಧಾಕೃಷ್ಣ ಕಾಮತ್, ಸಂತೋಷ್‌ಭಟ್, ಬಿ.ಕೆ.ಮಧು ಸೂಧನ್, ವಿ.ಜಿ.ನಾರಾಯಣ್, ಎಚ್.ಕೆ.ಸುಧಾಕರಭಟ್, ಅಂದಿನ ಕೆಇಬಿ ಜೆಇ ಮುಳಗುಂದ, ಬಿಎಸ್‌ಎನ್‌ಎಲ್ ಲೈನ್‌ಮೆನ್ ಅಣ್ಣಪ್ಪ.

ಈ ಬಾರಿ ಅಭಿಮಾನಿಗಳೊಂದಿಗೆ ಬರ್ತಡೇ ಆಚರಿಸಿಕೊಳ್ಳಲ್ಲ ಎಂದ ನಿಖಿಲ್ ಕುಮಾರಸ್ವಾಮಿ! ಕಾರಣ ಇಲ್ಲಿದೆ


ಸಂಗ್ರಸಿದ 1 ಇಟ್ಟಿಗೆ ದೇವಳ ನವೀಕರಣಕ್ಕೆ ಬಳಕೆ

ರಾಮಶಿಲಾ ಯಾತ್ರೆಯಲ್ಲಿ ಸಂಗ್ರಹಿಸಿ ಬೀದರ್‌ನಲ್ಲಿ ಪೂಜೆಗೊಂಡ ಇಟ್ಟಿಗೆಗಳಲ್ಲಿ ಒಂದು ಇಟ್ಟಿಗೆಯನ್ನು ನಮ್ಮೊಂದಿಗೆ ತಂದು ಬಾಳೆಹೊನ್ನೂರಿನ ಆಂಜನೇಯ ದೇವಸ್ಥಾನದಲ್ಲಿ ಇರಿಸಿದ್ದೆವು. ಇತ್ತೀಚೆಗೆ ಆಂಜನೇಯ ದೇವಸ್ಥಾನ ನವೀಕರಣ ಮಾಡುವ ಸಂದರ್ಭದಲ್ಲಿ ಆ ಇಟ್ಟಿಗೆ ಕಟ್ಟಡಕ್ಕೆ ಬಳಸಿಕೊಳ್ಳಲಾಗಿದೆ. ಸಂಗ್ರಹಿಸಿದ್ದ ಎಲ್ಲಾ ಇಟ್ಟಿಗೆಗಳಲ್ಲಿ ಕನ್ನಡದಲ್ಲಿ ‘ಶ್ರೀರಾಮ’ ಎಂದು ಬರೆದಿತ್ತು ಎಂದು ಸುರೇಂದ್ರ ಪೈ ತಿಳಿಸಿದರು.

ರಾಮನ ಸೇವೆಯಲ್ಲಿ ಭಾಗವಹಿಸುವುದೇ ಜೀವನದ ಒಂದು ಉತ್ತಮ ಕಾರ್ಯ. ಇಂತಹ ಸಂದರ್ಭದಲ್ಲಿ ನಾವು ಕರಸೇವೆಯಲ್ಲಿ ಭಾಗವಹಿಸಿರುವುದು ಜೀವನದ ಅತ್ಯಂತ ಪುಣ್ಯದ ಕ್ಷಣಗಳು, ಸತ್ಯಕ್ಕೆ ಎಂದಿಗೂ ಸಹ ಜಯ ಖಚಿತ ಎಂಬಂತೆ ರಾಮ ಜನ್ಮಭೂಮಿ ವಿಚಾರದಲ್ಲಿ ಸತ್ಯ ಅಂತಿಮವಾಗಿ ಗೆದ್ದಿದೆ. ಇದೀಗ ರಾಮ ಮಂದಿರ ನಿರ್ಮಾಣದ ಕನಸು ನನಸಾಗಿರುವುದು ಸಂತಸ ತಂದಿದೆ.

- ಸುರೇಂದ್ರ ಪೈ, ಕರಸೇವಕ.

ಅಯೋಧ್ಯೆಯ ಕರಸೇವೆಯ ಘಟನೆಗಳನ್ನು ನೆನಪಿಸಿಕೊಂಡರೆ ಮೈ ಜುಮ್ಮೆನಿಸುವಂತದ್ದು. ಅಂದಿನ ನಮ್ಮ ಸಹೋದರ, ಸಹೋದರಿಯರ ತ್ಯಾಗದ ಫಲವೇ ಇಂದಿನ ಭವ್ಯ ರಾಮಮಂದಿರ ಹಾಗೂ ಬಾಲರಾಮನ ವಿಗ್ರಹವಾಗಿದೆ. ರಾಮಮಂದಿರ, ದತ್ತಪೀಠಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ವಿಠ್ಠಲ್‌ರಾವ್ ಅವರ ಸ್ಮರಣೆಯನ್ನು ನಾವೀಗ ಮಾಡಬೇಕಿದೆ.

- ಸುಧಾ ಎಸ್.ಪೈ, ಬಾಳೆಹೊನ್ನೂರು

click me!