ಆತ್ಮನಿರ್ಭರ ರೀತಿಯಲ್ಲಿ ಗೋಶಾಲೆ ಅಭಿವೃದ್ಧಿ: ಸಚಿವ ಚವ್ಹಾಣ್‌

By Govindaraj SFirst Published Jun 27, 2022, 5:20 AM IST
Highlights

ಸರ್ಕಾರಿ ಗೋಶಾಲೆಗಳನ್ನು ಸ್ವಾವಲಂಬಿಯನ್ನಾಗಿಸಿ, ಆತ್ಮ ನಿರ್ಭರ ಗೋಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್‌ ಅವರು ಹೇಳಿದರು.

ದಾಬಸ್‌ಪೇಟೆ (ಜೂ.27): ಸರ್ಕಾರಿ ಗೋಶಾಲೆಗಳನ್ನು ಸ್ವಾವಲಂಬಿಯನ್ನಾಗಿಸಿ, ಆತ್ಮ ನಿರ್ಭರ ಗೋಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್‌ ಅವರು ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆ ವ್ಯಾಪ್ತಿಯ ತ್ಯಾಮಗೊಂಡ್ಲು ಹೋಬಳಿ ಕೋಡಿಗೆಹಳ್ಳಿಯಲ್ಲಿ ಸರ್ಕಾರಿ ಗೋಶಾಲೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಗೋವುಗಳು ಕಸಾಯಿಖಾನೆಗೆ ಹೋಗುವುದನ್ನು ತಡೆಯಲು ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ತಂದು ಗೋವುಗಳನ್ನು ಸಂರಕ್ಷಿಸಲು ಜಿಲ್ಲೆಗೊಂದು ಗೋಶಾಲೆ ಸ್ಥಾಪನೆಗೆ ಕ್ರಮವಹಿಸಲಾಗಿದೆ ಹೇಳಿದರು.

100 ಗೋಶಾಲೆ ನಿರ್ಮಾಣ: ಗೋಶಾಲೆಗಳ ಸ್ವಾವಲಂಬನಕ್ಕೆ ಗೋವುಗಳಿಂದ ಉತ್ಪತ್ತಿಯಾಗುವ ಸಗಣಿ, ಗಂಜಲದಿಂದ ಗವ್ಯ ಉತ್ಪನ್ನಗಳನ್ನು ತಯಾರಿಕೆ ಮಾಡುವ ಉದ್ದೇಶವಿದೆ. ರಾಜ್ಯದಲ್ಲಿ 100 ಗೋಶಾಲೆ ನಿರ್ಮಿಸಿ, ಗೋ ಸಂಕುಲ ರಕ್ಷಿಸಲಾಗುತ್ತದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಮೆಗಾ ಡೈರಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ತಾಕತ್ತಿದ್ದರೆ ಸಿದ್ದರಾಮಯ್ಯ ನಮ್ಮೆದುರು ಬೀಫ್‌ ತಿನ್ನಲಿ: ಪ್ರಭು ಚವ್ಹಾಣ್‌

ಇತಿಹಾಸದಲ್ಲೇ ಇದೇ ಮೊದಲು: ಕಳೆದ ಹನ್ನೆರಡು ವರ್ಷಗಳಿಂದ ಪಶು ಸಂಗೋಪನಾ ಇಲಾಖೆಯಲ್ಲಿ ಬಾಕಿ ಉಳಿದಿದ್ದ ನೇಮಕಾತಿಗೆ ಚಾಲನೆ ಹಾಗೂ ಪದೋನ್ನತಿ ನೀಡಿ ಇಲಾಖೆ ಅಭಿವೃದ್ಧಿಪಡಿಸಲಾಗುತ್ತಿದೆ. 400 ಪಶು ವೈದ್ಯರ ನೇಮಕ, 250 ಪಶು ವೈದ್ಯಕೀಯ ಸಿಬ್ಬಂದಿ ನೇಮಕ ಪಶು ಸಂಗೋಪನೆ ಇಲಾಖೆಯ ಇತಿಹಾಸದಲ್ಲೇ ಇದೇ ಮೊದಲು ಎಂದು ಸಚಿವರು ತಿಳಿಸಿದರು.

ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಜಾನುವಾರು ಸಂಕುಲ ರಕ್ಷಣೆಯೇ ನಮ್ಮ ಸರ್ಕಾರದ ಗುರಿಯಾಗಿದೆ. ಪಶುವೈದ್ಯಕೀಯ ವೈದ್ಯರು, ಸಿಬ್ಬಂದಿ ಸದಾ ಜಾನುವಾರುಗಳ ಸೇವೆಗೆ ಸಿದ್ಧರಾಗಿರಬೇಕು. ರೈತರಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಶಾಸಕ ಡಾ. ಶ್ರೀನಿವಾಸಮೂರ್ತಿ ಮಾತನಾಡಿ, ಕೃಷಿ ಪ್ರಧಾನವಾದ ನೆಲಮಂಗಲ ತಾಲೂಕಿಗೆ ಆರು ಪಶು ಚಿಕಿತ್ಸಾಲಯಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. 

ಶಾಸಕರ ಮನವಿಗೆ ಪ್ರತಿಕ್ರಿಯಿಸಿದ ಸಚಿವ ಪ್ರಭು ಚವ್ಹಾಣ್‌, ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳಿವೆ. ಈಗಾಗಲೇ 30 ಪಶು ಚಿಕಿತ್ಸಾಲಯ ಮಂಜೂರು ಮಾಡಲಾಗಿದೆ. ನಿಮ್ಮ ಬೇಡಿಕೆ ನನ್ನ ಗಮನಕ್ಕೆ ಬಂದಿದೆ. ತಾಲೂಕಿಗೆ ನಾನು ಒಂದು ಪಶು ಚಿಕಿತ್ಸಾಲಯ ನೀಡುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ರೇವಣಪ್ಪ, ಉಪ ವಿಭಾಗಾಧಿಕಾರಿ ತೇಜಸ್‌ಕುಮಾರ್‌, ತಹಸೀಲ್ದಾರ್‌ ಮಂಜುನಾಥ್‌, ಮಾಜಿ ಶಾಸಕ ಎಂ.ವಿ.ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದೇಶದಲ್ಲೇ ಮೊದಲ ಬಾರಿಗೆ ಪಶುಗಳಿಗೂ ಆ್ಯಂಬುಲೆನ್ಸ್‌!

715 ಎಫ್‌ಐಆರ್‌ ದಾಖಲು: ಪಶುಸಂಗೋಪನೆ ಇಲಾಖೆಯಲ್ಲಿ ಜಾರಿಗೆ ಬಂದ ಪಶು ಸಹಾಯವಾಣಿ ಕೇಂದ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಕರೆ ಸ್ವೀಕರಿಸಿ, ಸ್ಥಳದಲ್ಲೇ ಶೇ.75ರಷ್ಟುಸಮಸ್ಯೆಗಳನ್ನು ಬಗೆಹರಿಸಲಾಗಿದೆ. ರಾಜ್ಯಾದ್ಯಂತ 715 ಎಫ್‌ಐಆರ್‌ ದಾಖಲಿಸಿ, 15,000ಕ್ಕೂ ಅಧಿಕ ಗೋವುಗಳನ್ನು ರಕ್ಷಿಸಿ ಗೋಶಾಲೆಗಳಿಗೆ ಬಿಡಲಾಗಿದೆ. ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ, ಗೋಹತ್ಯೆ ನಿಷೇಧ ಕಾಯ್ದೆ, ಪಶು ಸಂಜಿವೀನಿ ಆ್ಯಂಬುಲೆನ್ಸ್‌, ಪಶು ಸಂಚಾರಿ ಚಿಕಿತ್ಸಾಲಯ, ಪಶು ಚಿಕಿತ್ಸಾಲಯ ಮತ್ತು ಗೋಶಾಲೆ ನಿರ್ಮಾಣದಿಂದಾಗಿ ಹೈನುಗಾರಿಕೆಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ಪ್ರಭು ಚವ್ಹಾಣ್‌ ತಿಳಿಸಿದರು.

click me!