‘ಜಮೀರ್‌ ಗದ್ದಲ’ದ ನಡುವೆಯೇ ಚರ್ಚೆಇಲ್ಲದೇ 5 ಮಸೂದೆ ಅಂಗೀಕಾರ !

By Kannadaprabha NewsFirst Published Dec 12, 2023, 6:01 AM IST
Highlights

ವಿಧಾನಸಭೆ ಸಭಾಧ್ಯಕ್ಷ ಸ್ಥಾನ ಕುರಿತು ಹೇಳಿಕೆ ನೀಡಿರುವ ಸಚಿವ ಜಮೀರ್‌ ಅಹಮದ್‌ ಖಾನ್‌ ವಜಾಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಸದಸ್ಯರ ಧರಣಿ ನಡುವೆಯೇ ಮುದ್ರಾಂಕ ಶುಲ್ಕ ಹೆಚ್ಚಳ ಸೇರಿದಂತೆ ಐದು ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಲಾಯಿತು.

ವಿಧಾನಸಭೆ (ಡಿ.212) :  ವಿಧಾನಸಭೆ ಸಭಾಧ್ಯಕ್ಷ ಸ್ಥಾನ ಕುರಿತು ಹೇಳಿಕೆ ನೀಡಿರುವ ಸಚಿವ ಜಮೀರ್‌ ಅಹಮದ್‌ ಖಾನ್‌ ವಜಾಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಸದಸ್ಯರ ಧರಣಿ ನಡುವೆಯೇ ಮುದ್ರಾಂಕ ಶುಲ್ಕ ಹೆಚ್ಚಳ ಸೇರಿದಂತೆ ಐದು ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಲಾಯಿತು.

ಕರ್ನಾಟಕ ಜಿಎಸ್ಟಿ ತಿದ್ದುಪಡಿ ವಿಧೇಯಕ-2023 ಮಂಡಿಸಿ, ಜಿಎಸ್‌ಟಿ ಕೌನ್ಸಿಲ್‌ ಸೂಚನೆಯಂತೆ ಅ.1 ರಿಂದ ಆನ್‌ಲೈನ್‌ ಗೇಮಿಂಗ್‌, ಆನ್‌ಲೈನ್‌ ಜೂಜು, ಲಾಟರಿ ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೇ.28ಕ್ಕೆ ಹೆಚ್ಚಿಸಿ ಸುಗ್ರಿವಾಜ್ಞೆ ಹೊರಡಿಸಲಾಗಿತ್ತು. ಈಗ ಕಾನೂನು ತರಲು ಕಾನೂನು ಹಾಗೂ ಸಂಸದೀಯ ಸಚಿವ ಎಚ್‌.ಕೆ. ಪಾಟೀಲ್‌ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆದರು.

ಝಮೀರ್ ಅಹಮದ್ ಎಲ್ಲಿದ್ದಾರಪ್ಪಾ.? ಸ್ವಲ್ಪ ಮುಖ ತೋರಿಸಿ ಎಂದ್ರು ಸಭಾಪತಿ!

ಇದೇ ವೇಳೆ ಆನ್‌ಲೈನ್‌ ಗೇಮ್‌, ಆನ್‌ಲೈನ್ ಮನಿ ಗೇಮ್‌, ಬೆಟ್ಟಿಂಗ್‌, ಕ್ಯಾಸಿನೋಗಳು, ಜೂಜು, ಕುದುರೆ ರೇಸಿಂಗ್‌, ಲಾಟರಿ ಮೇಲಿನ ಜಿಎಸ್‌ಟಿ ಹೆಚ್ಚಳಕ್ಕೆ ಮಾತ್ರ ವಿಧೇಯಕ ಮಂಡಿಸಲಾಗಿದೆ. ಜತೆಗೆ ವಿಧೇಯಕದಲ್ಲಿ ಆನ್‌ಲೈನ್‌ ಆಟಗಳ ಮೇಲೆ ತೆರಿಗೆ ವಿಧಿಸುವುದು ಈ ವ್ಯವಹಾರಗಳನ್ನು ಕ್ರಮಬದ್ಧಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸ್ಟಾಂಪ್‌ ಶುಲ್ಕ ಹೆಚ್ಚಳ ವಿಧೇಯಕಕ್ಕೆ ಅಂಗೀಕಾರ:

ಕರ್ನಾಟಕ ಸ್ಟಾಂಪು ತಿದ್ದುಪಡಿ ಕಾಯಿದೆ ಬಗ್ಗೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, 2011 ರಿಂದ ಈಚೆಗೆ ರಾಜ್ಯದಲ್ಲಿ ಸ್ಟಾಂಪು ಶುಲ್ಕ ಪರಿಷ್ಕರಿಸಿಲ್ಲ. ಇದು ಕೇವಲ ಸ್ಟಾಂಪು ಶುಲ್ಕವೇ ಹೊರತು ನೋಂದಣಿ ಶುಲ್ಕವಲ್ಲ. ಸೇವಾ ಒಪ್ಪಂದ, ಬ್ಯಾಂಕ್‌ ಗ್ಯಾರಂಟಿ ಹೀಗೆ 54 ವಿವಿಧ ಕರಾರುಗಳಿಗೆ ಅಲ್ಪ ಪ್ರಮಾಣದ ಸ್ಟಾಂಪ್‌ ಶುಲ್ಕ ವಿಧಿಸಲಾಗುತ್ತದೆ. ಇದು ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಒಟ್ಟು ಆದಾಯದ ಶೇ.10 ರಷ್ಟು ಮಾತ್ರ ಸ್ಟಾಂಪು ಶುಲ್ಕದಿಂದ ಬರುತ್ತದೆ. ಹೀಗಾಗಿ ಇದರಿಂದ ಸಾರ್ವಜನಿಕರಿಗೆ ಹೊರೆಯಾಗಲ್ಲ ಎಂದು ಸಮರ್ಥನೆ ನೀಡಿ ಅಂಗೀಕಾರ ಪಡೆದರು.

ಎಂಬಿಬಿಎಸ್‌ ಗ್ರಾಮೀಣ ಸೇವೆ ಕಡ್ಡಾಯಕ್ಕೆ ವಿನಾಯಿತಿ:

ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ ನೀಡುವ ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕಕ್ಕೂ ಅಂಗೀಕಾರ ನೀಡಲಾಯಿತು. ಖಾಲಿ ಹುದ್ದೆಗಳನ್ನುಭರ್ತಿ ಮಾಡಲು ಸಾಧ್ಯವಾದಷ್ಟು ಹುದ್ದೆಗಳಿಗೆ ಮಾತ್ರ ಎಂಬಿಬಿಎಸ್, ಸ್ನಾತಕೋತ್ತರ ಪದವಿ ಪೂರೈಸಿರುವವರಿಗೆ ಕಡ್ಡಾಯ ಗ್ರಾಮೀಣ ಸೇವೆ ಅಡಿ ಸೇವೆಗೆ ತೆಗೆದುಕೊಳ್ಳಲಾಗುವುದು. ಉಳಿದವರಿಗೆ ವಿನಾಯಿತಿ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ತಿದ್ದುಪಡಿ:

ರಾಜ್ಯಾದ್ಯಂತ 35- 40 ಸಾವಿರ ಜನಸಂಖ್ಯೆಗೆ ಒಂದು ಜಿಲ್ಲಾ ಪಂಚಾಯ್ತಿ ಕ್ಷೇತ್ರ ರಚನೆ ಮಾಡಲಾಗಿದೆ. ಆದರೆ ಕೊಡಗು ಸೇರಿದಂತೆ ಕೆಲ ಮಲೆನಾಡು ಭಾಗದಲ್ಲಿ ಜನಸಂಖ್ಯೆ ವಿರಳವಾಗಿರುತ್ತದೆ. ಹೀಗಾಗಿ ಈ ಭಾಗದಲ್ಲಿ 18 ರಿಂದ 25 ಸಾವಿರ ಜನಸಂಖ್ಯೆಗೆ ಒಂದು ಕ್ಷೇತ್ರ ರಚನೆ ಮಾಡಲು ತಿದ್ದುಪಡಿ ಮಾಡಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

 

ಶಾಸಕ ಯತ್ನಾಳ ಆರೋಪ ಸತ್ಯಕ್ಕೆ ದೂರ: ಸಚಿವ ಜಮೀರ್ ಅಹ್ಮದ್ ಖಾನ್

ಕಾಂಗ್ರೆಸ್‌ ಸದಸ್ಯ ಎ.ಎಸ್‌. ಪೊನ್ನಣ್ಣ, ಪ್ರಸ್ತುತ 29 ಕ್ಷೇತ್ರ ಇದ್ದದ್ದು 18 ರಿಂದ 25 ಸಾವಿರ ಜನಸಂಖ್ಯೆಗೆ ಒಂದು ಕ್ಷೇತ್ರ ಮಾಡಿದ್ದರೂ 23 ಕ್ಷೇತ್ರಕ್ಕೆ ಕುಸಿದಿದೆ. ಹೀಗಾಗಿ 17 ಸಾವಿರದಿಂದ 25 ಸಾವಿರಕ್ಕೆ ಒಂದು ಕ್ಷೇತ್ರ ಮಾಡಬೇಕು ಎಂದು ಮನವಿ ಮಾಡಿದರು. ಈ ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ ಬಳಿಕ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.

ಕರಾವಳಿ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಕರಾವಳಿ ಅಭಿವೃದ್ಧಿ ಮಂಡಳಿ ರಚಿಸುವ ಅವಶ್ಯಕವೆಂದು ಪರಿಗಣಿಸಿ ಯೋಜನಾ ಸಚಿವ ಡಿ.ಸುಧಾಕರ್‌ ಮಂಡಿಸಿದ ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕಕ್ಕೂ ಇದೇ ವೇಳೆ ಒಪ್ಪಿಗೆ ಪಡೆಯಲಾಯಿತು.

ಮೌಲ್ವಿ ಸೋದರ ಮಾವನ ಜೊತೆ ಯತ್ನಾಳ ವ್ಯವಹಾರ: ಇಸ್ಮಾಯಿಲ್‌ ತಮಟಗಾರ ದಾಖಲೆ ಬಿಡುಗಡೆ

  • ಮುದ್ರಾಂಕ ಶುಲ್ಕ ಹೆಚ್ಚಳ ಸೇರಿದಂತೆ 5 ವಿಧೇಯಕ ಚರ್ಚೆ ಇಲ್ಲದೆ ಅಸ್ತು
  • ಆನ್‌ಲೈನ್‌ ಗೇಮಿಂಗ್‌, ಆನ್‌ಲೈನ್‌ ಜೂಜು, ಲಾಟರಿ ಜಿಎಸ್‌ಟಿ ಶೇ.18ರಿಂದ ಶೇ.28ಕ್ಕೆ
  • ಎಂಬಿಬಿಎಸ್‌ ಗ್ರಾಮೀಣ ಸೇವೆ ಕಡ್ಡಾಯಕ್ಕೆ ವಿನಾಯಿತಿ
  • ಜಿಪಂ ಕ್ಷೇತ್ರದ ಜನಸಂಖ್ಯೆ ಮಿತಿ ಮಲೆನಾಡಲ್ಲಿ 25 ಸಾವಿರಕ್ಕೆ ಇಳಿಕೆ
  • ಅಭಿವೃದ್ಧಿ ಮಂಡಳಿ ವಿಧೇಯಕಕ್ಕೂ ಅನುಮೋದನೆ
click me!