
ಬೆಂಗಳೂರು (ಡಿ.26) : ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್’ (ಕೃತಕ ಬುದ್ಧಿಮತ್ತೆ) ಬಳಸಿ ರಾಜಧಾನಿ ಬೆಂಗಳೂರಿನ 1,434 ಕಿಲೋ ಮೀಟರ್ ಉದ್ದದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ (ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್) ಗುಣಮಟ್ಟಹಾಗೂ ಸದೃಢತೆ ಬಗ್ಗೆ ತಿಳಿಯಲು ಸರ್ವೆ ನಡೆಸಲು ಬಿಬಿಎಂಪಿ ನಿರ್ಧರಿಸಿದೆ.
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ರಸ್ತೆ ಸೌಕರ್ಯ ಒದಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದ ನಗರದಲ್ಲಿ ಅಪಘಾತಗಳ ಸಂಖ್ಯೆ ಏರುತ್ತಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಅಂಗ ವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ, ಅಪಘಾತಗಳನ್ನು ನಿಯಂತ್ರಿಸುವ, ಜತೆಗೆ ರಸ್ತೆಗಳ ಗುಣಮಟ್ಟಕಾಪಾಡುವ ಉದ್ದೇಶದಿಂದ ಅತ್ಯಧಿಕ ವಾಹನ ಸಂಚಾರವಿರುವ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ ವರ್ಷಕ್ಕೆ ನಾಲ್ಕು ಬಾರಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸರ್ವೆಗೆ ಬಿಬಿಎಂಪಿ ಮುಂದಾಗಿದೆ.
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸಿಸ್ಟಂ ಸರ್ವೆ ನಡೆಸಲು ವಿಶೇಷ ವಾಹನ ಸಿದ್ಧಪಡಿಸಲಾಗುತ್ತದೆ. ವಾಹನಕ್ಕೆ ಕ್ಯಾಮರಾ ಸೇರಿದಂತೆ ವಿವಿಧ ತಂತ್ರಜ್ಞಾನದ ಉಪಕರಣಗಳ ಅಳವಡಿಸಲಾಗುತ್ತದೆ. ಈ ವಾಹನ ರಸ್ತೆಯಲ್ಲಿ ಸಂಚರಿಸುವ ಮೂಲಕ ಸರ್ವೆ ನಡೆಸಲಿದೆ.
ಸರ್ವೆಯಲ್ಲಿ ಗಮನಿಸುವ ಅಂಶಗಳು:
ವರ್ಷದಲ್ಲಿ ನಾಲ್ಕು ಬಾರಿ ಅಂದರೆ, ಪ್ರತಿ ಮೂರು ತಿಂಗಳಿಗೆ ಒಂದು ಸರ್ವೆ ಮಾಡಲಾಗುತ್ತದೆ. ಸರ್ವೆ ನಡೆಸುವ ಸಂದರ್ಭದಲ್ಲಿ ಮುಖ್ಯವಾಗಿ ರಸ್ತೆ ಗುಂಡಿ, ರಸ್ತೆಯ ಮೇಲ್ಮೈ, ರಸ್ತೆ ಹಾಗೂ ತಡೆ ಗೋಡೆಗಳ ಬಿರುಕು, ಬೀದಿ ದೀಪ, ರಸ್ತೆ ವಿಭಜಕ, ಮಾರ್ಗಸೂಚಿ ಫಲಕಗಳು, ರಸ್ತೆ ಮೇಲೆ ಹಾಕಲಾದ ಬಿಳಿ ಮತ್ತು ಹಳದಿ ಬಣ್ಣದ ಪಟ್ಟಿಗಳು ಸೇರಿದಂತೆ ವಿವಿಧ ಅಂಶಗಳನ್ನು ಗಮನಿಸಲಿದೆ. ಒಂದು ವೇಳೆ ಈ ಅಂಶಗಳಲ್ಲಿ ದೋಷ ಕಂಡು ಬಂದರೆ ಗುರುತಿಸಿ ಮಾಹಿತಿ ಸಂಗ್ರಹಿಸಲಿದೆ.
ತ್ವರಿತ ರಿಪೇರಿಗೆ ಸಹಕಾರಿ
ನಿಯಮಿತವಾಗಿ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಗುಣಮಟ್ಟದ ವರದಿ ಬಿಬಿಎಂಪಿಗೆ ಲಭ್ಯವಾಗಲಿದೆ. ರಸ್ತೆ ಗುಂಡಿ ಕಾಣಿಸಿಕೊಂಡರೆ, ರಸ್ತೆ ಮೇಲ್ಮೈ ಹಾಳಾಗಿರುವುದು ಕಂಡು ಬಂದರೆ ತ್ವರಿತವಾಗಿ ದುರಸ್ತಿ ಮಾಡುವುದಕ್ಕೆ ಈ ಸರ್ವೆ ಸಹಕಾರಿಯಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇಶದಲ್ಲಿಯೇ ಮೊದಲು
ಮುಂದುವರೆದ ರಾಷ್ಟ್ರಗಳಲ್ಲಿ ಈ ರೀತಿಯ ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್’ ಸರ್ವೆಗಳನ್ನು ನಿಯಮಿತವಾಗಿ ಮಾಡಲಾಗುತ್ತಿದೆ. ಭಾರತದಲ್ಲಿ ಮೊದಲ ಬಾರಿಗೆ ಬಿಬಿಎಂಪಿಯು ಈ ರೀತಿಯ ಸರ್ವೆ ನಡೆಸುವುದಕ್ಕೆ ತೀರ್ಮಾನಿಸಿದೆ. ಸರ್ವೆಗೆ ವರ್ಷಕ್ಕೆ ಒಟ್ಟು .80 ಲಕ್ಷ ವೆಚ್ಚ ಮಾಡಲಿದೆ.
Artificial Intelligence: ಉದ್ಯೋಗಾವಕಾಶ ಸೃಷ್ಟಿಸಲಿರುವ ಕೃತಕ ಬುದ್ಧಿಮತ್ತೆ ಪಾರ್ಕ್ಗೆ ಸಚಿವ ಅಶ್ವತ್ಥ ಚಾಲನೆ
ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ನಗರದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಗುಣಮಟ್ಟದ ಬಗ್ಗೆ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಸರ್ವೆ ನಡೆಸಲು ತೀರ್ಮಾನಿಸಲಾಗಿದೆ. ಇದರಿಂದ ನಗರದ ರಸ್ತೆಗಳ ಗುಣಮಟ್ಟಸುಧಾರಿಸುವುದಕ್ಕೆ ಸಹಕಾರಿ ಆಗಲಿದೆ.
-ಜಯಸಿಂಹ, ಕಾರ್ಯಪಾಲಕ ಎಂಜಿನಿಯರ್, ಬಿಬಿಎಂಪಿ ಟಿಇಸಿ ವಿಭಾಗ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ