ತಪ್ಪನ್ನು ತಪ್ಪು ಎಂದರೆ ದೇಶದ್ರೋಹ, ಭಯೋತ್ಪಾದಕರ ಪಟ್ಟ: ಸಿದ್ದರಾಮಯ್ಯ!

By Kannadaprabha NewsFirst Published Jan 5, 2022, 5:51 AM IST
Highlights

*ಸರಿದಾರಿಯಲ್ಲಿ ಹೋಗು ಎಂದರೆ ಭಯೋತ್ಪಾದಕರು ಅನ್ನುತ್ತಾರೆ
*ಮುಂದಿನ ದಿನಗಳಲ್ಲಿ ಬಹಳ ಅಪಾಯವಿದೆ: ಸಿದ್ದರಾಮಯ್ಯ
*ಪ್ರೊ.ಅಸ್ಸಾದಿ ವಿರಚಿತ ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ ಪುಸ್ತಕ ಬಿಡುಗಡೆ
 

ಬೆಂಗಳೂರು (ಜ.5): ಇಂದು ಸಂವಿಧಾನ (Constitution), ಪ್ರಜಾಪ್ರಭುತ್ವ (Democracy) ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ (Freedom of Expression) ಗಂಡಾಂತರ ಬಂದಿದೆ. ಸಂವಿಧಾನ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ಇಲ್ಲದಿದ್ದರೆ ಮತ್ತೆ ಶೋಷಣೆಗೆ ಒಳಗಾಗುತ್ತೇವೆ. ಅದಕ್ಕಾಗಿ ಧ್ವನಿ ಎತ್ತುವ ಕೆಲಸವನ್ನು ಪ್ರಜ್ಞಾವಂತ ಜನರು ಮಾಡಬೇಕಾದ ಅನಿವಾರ್ಯತೆ ಇದೆ ಎಂದು ವಿಧಾನಸಭಾ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಎಚ್ಚರಿಸಿದರು. ಮಂಗಳವಾರ ಕುಮಾರಕೃಪಾ ರಸ್ತೆಯ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ.ಮುಜಾಫಿರ್‌ ಅಸ್ಸಾದಿ ಅವರ ‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ತಪ್ಪು ಎಂದು ಹೇಳಿದರೆ ದೇಶದ್ರೋಹಿಗಳ ಪಟ್ಟ

ಪ್ರಸ್ತುತ ತಪ್ಪನ್ನು ತಪ್ಪು ಎಂದು ಹೇಳಿದರೆ ದೇಶದ್ರೋಹಿಗಳ ಪಟ್ಟಕಟ್ಟುವ ಪರಿಸ್ಥಿತಿ ಇದೆ. ತಪ್ಪು ಮಾಡುತ್ತಿದ್ದೀಯಾ, ಸರಿದಾರಿಯಲ್ಲಿ ಹೋಗು ಎಂದರೆ ಭಯೋತ್ಪಾದಕರು ಎನ್ನುವ ದುಸ್ಥಿತಿ ನಿರ್ಮಾಣವಾಗಿದೆ. ಈ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆ ಮಾಡುವಂತಹದ್ದು ಪ್ರತಿಯೊಬ್ಬ ಪ್ರಜ್ಞಾವಂತನ ಜವಾಬ್ದಾರಿ. ವ್ಯಕ್ತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬನ ಜವಾಬ್ದಾರಿ. ಅದಕ್ಕಾಗಿ ನಾವೆಲ್ಲ ಧ್ವನಿ ಎತ್ತಬೇಕು ಎಂದು ಹೇಳಿದರು.

ಇದನ್ನೂ ಓದಿ: Mekedatu'ಮೇಕೆದಾಟು ಪಾದಯಾತ್ರೆ ನಿಲ್ಲಿಸಲು ಸಿದ್ದರಾಮಯ್ಯನವರೇ ಸರ್ಕಾರಕ್ಕೆ ರಹಸ್ಯ ಮನವಿ ಮಾಡಿದ್ದಾರೆ'

ವೈಚಾರಿಕತೆಯ ಶಿಕ್ಷಣ ಸಿಗುತ್ತಿಲ್ಲ!

ನಾವು ಕಲಿಯುತ್ತಿರುವ ಶಿಕ್ಷಣದಲ್ಲಿ ವೈಚಾರಿಕತೆಯ ಶಿಕ್ಷಣ ಸಿಗುತ್ತಿಲ್ಲ. ಆದ್ದರಿಂದ ಮೌಢ್ಯ, ಕಂದಾಚಾರ, ಅನಿಷ್ಠ ಪದ್ಧತಿಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಆಚರಣೆ ಮಾಡುತ್ತಿದ್ದೇವೆ. ಶಿಕ್ಷಣ ನಮ್ಮಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವನೆ ಬೆಳಸಬೇಕಿತ್ತು. ವಿಪರಾರ‍ಯಸವೆಂದರೆ ವಿಜ್ಞಾನ ಓದಿದವರು ಮೌಢ್ಯಕ್ಕೆ ಬಲಿಯಾಗುತ್ತಿದ್ದಾರೆ. ವೈದ್ಯರು, ವಿಜ್ಞಾನಿಗಳು, ಎಂಜಿನಿಯರ್‌ಗಳು ಸೇರಿದಂತೆ ಉನ್ನತ ಶಿಕ್ಷಣ ಪಡೆದವರು ಕೂಡ ತಮಗೆ ಅರಿವಿದ್ದೋ ಅಥವಾ ಅರಿವಿಲ್ಲದೆಯೋ ಮೌಢ್ಯಕ್ಕೆ ದಾಸರಾಗುತ್ತಿದ್ದಾರೆ. ಶಿಕ್ಷಣದಿಂದ ಜ್ಞಾನ ವಿಕಾಸಗೊಂಡು ಸಮಾಜದಲ್ಲಿ ಬದಲಾವಣೆಯಾಗುತ್ತದೆ ಅಂದುಕೊಂಡದ್ದು ಸುಳ್ಳಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಬಹಳ ಅಪಾಯವಿದೆ!

ಧರ್ಮಗಳ ನಡುವೆ ಗೋಡೆ ಕಟ್ಟಿದ್ವೇಷ ಹುಟ್ಟು ಹಾಕುವ ಪಟ್ಟಭದ್ರ ಹಿತಾಸಕ್ತಿಗಳು ಹೆಚ್ಚಾಗಿದ್ದಾರೆ. ಅಂತಹವರ ಪ್ರಭಾವ ಇತ್ತೀಚಿನ ವರ್ಷಗಳಲ್ಲಿ ಜಾಸ್ತಿಯಾಗುತ್ತಿದೆ. ಶಿಕ್ಷಣ ಹೆಚ್ಚಿದಷ್ಟುಜಾತಿ ವ್ಯವಸ್ಥೆ ಕಡಿಮೆಯಾಗಬೇಕಿತ್ತು ದುರ್ದೈವ ಅದು ಜಾಸ್ತಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಬಹಳ ಅಪಾಯವಿದೆ. ಅದಕ್ಕೂ ಮುಂಚೆ ಎಚ್ಚರವಾಗದಿದ್ದರೆ ಸಮಾಜದಲ್ಲಿ ದ್ವೇಷ, ಅಸೂಯೆ, ಅಶಾಂತಿ ಹೆಚ್ಚಾಗಲಿದೆ. ಇಂದು ಸಮಾಜ ಶಾಂತಿಯ ತೋಟವಾಗಿ ಉಳಿದಿಲ್ಲ. ಸರ್ವ ಜನಾಂಗದ ಉದ್ಯಾನವಾಗಿ ಉಳಿದಿಲ್ಲ. ಆ ದಿಕ್ಕಿನಲ್ಲಿ ಪ್ರತಿಯೊಬ್ಬರು ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌, ಡಾ ಮುಜಾಫರ್‌ ಅಸ್ಸಾದಿ, ಪತ್ರಕರ್ತೆ ಸಿಂಥಿಯಾ ಸ್ಟೀಫನ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

click me!