
ಬೆಂಗಳೂರು (ಜು.26) ಸೋಶಿಯಲ್ ಮೀಡಿಯಾ ಮೂಲಕ ಭಾರಿ ಸಂಚಲನ ಸೃಷ್ಟಿಸಿದ ಕಾಕ್ರೋಚ್ ಜನತಾ ಪಾರ್ಟಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೀಗ ರಾಜ್ಯದಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಅನಾಮಧೇಯ ಪತ್ರವೊಂದು ಹರಿದಾಡುತ್ತಿದೆ. ಪೊಲೀಸ್ ಪೇದೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಗೃಹ ಸಚಿವರಿಗೆ ಬರೆದಿರುವ ಅನಾಮಧೇಯ ಪತ್ರ ಇದೀಗ ಕೋಲಾಹಲ ಸೃಷ್ಟಿಸುತ್ತಿದೆ. 10 ವರ್ಷ ಸೇವೆ ಸಲ್ಲಿಸಿರುವ ಕಾನ್ಸ್ಟೇಬಲ್ ಗಳಿಗೆ ಅನ್ಯಾಯವಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವರ್ಗಾವಣೆ ಮಾಡಿ ಇಲ್ಲಾ ನಮಗೆ ದಯಾಮರಣ ನೀಡಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕಳೆದ 7 ವರ್ಷದಿಂದ ಅಂತರ್ ಜಿಲ್ಲಾ ವರ್ಗವಣೆ ನೀಡದೆ ಅನ್ಯಾಯ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 2016ರ ಬ್ಯಾಚ್ ನ ಪೊಲೀಸ್ ಕಾನ್ಸ್ಟೇಬಲ್ ಗಳಿಗೆ ಅನ್ಯಾಯ ಎಂದು ಪ್ರಮುಖವಾಗಿ ಪತ್ರದಲ್ಲಿ ಹೇಳಲಾಗಿದೆ. ಸೇವೆ ಅವಧಿ 10 ವರ್ಷ ಪೂರ್ಣಗೊಂಡರೂ ವರ್ಗಾವಣೆ ನೀಡುತ್ತಿಲ್ಲ. ಈ ಕುರಿಕು ರಾಜ್ಯ ಗೃಹ ಸಚಿವರು ಗಮನಹರಿಸಿ ವರ್ಗಾವಣೆಗೆ ಆದೇಶ ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಒಂದು ವೇಳೆ ವರ್ಗಾವಣೆ ಮಾಡಿಲ್ಲ ಎಂದಾದರೆ ಸಿಬ್ಬಂದಿ ಹಾಗೂ ಕುಟುಂಬಕ್ಕೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಲಾಗಿದೆ
ಹಿಂದೆ 2.5 ವರ್ಷ ಪ್ರೊಬೇಷನರಿ ಮುಗಿದ ನಂತರ ವರ್ಗಾವಣೆ ಪಡೆಯಬಹುದಿತ್ತು. ಇದೀಗ ಪೊಲೀಸ್ ಇಲಾಖೆಯು ವರ್ಗಾವಣೆ ಅವಧಿಯನ್ನು 5 ಹಾಗೂ ನಂತರ 10 ವರ್ಷಕ್ಕೆ ಹೆಚ್ಚಿಸಿದೆ. ಈ ವಿಳಂಬ ಕಾಲದಲ್ಲಿ ಕೇವಲ ಪತಿ-ಪತ್ನಿ ಪ್ರಕರಣಗಳ ವರ್ಗಾವಣೆ ಮಾತ್ರ ಮಾಡಲಾಗಿದೆ. ಇನ್ನುಳಿದ ಎಲ್ಲಾ ವರ್ಗಾವಣೆ ತಡೆ ಹಿಡಿಯಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
2023ರಲ್ಲಿ 10 ವರ್ಷ ಸೇವೆ ನಂತರ ಆನ್ಲೈನ್ ಅರ್ಜಿ ಹಾಕಲು ಆದೇಶಿಸಿದೆ. ಬೆಂಗಳೂರು ನಗರದಿಂದ ಸುಮಾರು 1000 ಅರ್ಜಿಗಳು ದಾಖಲಾಗಿ ವರ್ಗಾವಣೆಗೆ ಕಾಯುತ್ತಿದ್ದಾರೆ. ವೈದ್ಯಕೀಯ ಕೌಟುಂಬಿಕ ಕಾರಣಗಳಿಂದ 200-250 ಸಿಬ್ಬಂದಿ 3-4 ಬಾರಿ ಬಡ್ತಿ ತ್ಯಜಿಸಿದ್ದಾರೆ. 2020 ರಿಂದ 2025 ರವರೆಗೆ ಒಟ್ಟು 252 ಸಿಬ್ಬಂದಿಗಳ ಅಂತರ್ಜಿಲ್ಲಾ ವರ್ಗಾವಣೆಯಾಗಿದೆ. ಇದರಲ್ಲಿ 85% ಪತಿ-ಪತ್ನಿ ಹಾಗೂ ಮಾಜಿ ಸೈನಿಕ ಸಿಬ್ಬಂದಿಗಳು ಸೇರಿದ್ದಾರೆ ಎಂದು ಅನಾಮಧೇಯ ಪತ್ರದಲ್ಲಿ ಹೇಳಲಾಗಿದೆ.
ಜನವರಿ 17, 2026 ರಂದು 12 ಜಿಲ್ಲೆಗಳಿಂದ 355 ಸಿವಿಲ್ ಕಾನ್ಸ್ಟೇಬಲ್ಗಳ ವರ್ಗಾವಣೆಯಾಗಿದೆ. 2016ರ ಸಾಮಾನ್ಯ ಸಿಬ್ಬಂದಿ ಕಾಯುತ್ತಿದ್ದರೂ 2019ರ ಇತರ ಪ್ರಕರಣಗಳಿಗೆ ವರ್ಗಾವಣೆ ನೀಡಲಾಗುತ್ತಿದೆ. ಅಧಿಕಾರಿಗಳ ಬಳಿ ಮನವಿ ಮಾಡಿದರೂ ಕಳೆದ 3 ವರ್ಷಗಳಿಂದ ಅಲೆಯುವಂತೆ ಮಾಡಿದ್ದಾರೆ. ಬೆಂಗಳೂರಿಗೆ ಹೆಚ್ಚಿನ ಸಿಬ್ಬಂದಿ ನೇಮಿಸಿ, ಹೊರ ಜಿಲ್ಲೆಗೆ ಬಯಸುವವರಿಗೆ ವರ್ಗಾವಣೆ ನೀಡಿ ಎಂದು ಒತ್ತಾಯಿಸಿದ್ದಾರೆ. 2016ರ ಸಾಮಾನ್ಯ ಪ್ರಕರಣದ ಸಿಬ್ಬಂದಿಗೆ ತಕ್ಷಣ ಅಂತರ್ಜಿಲ್ಲಾ ವರ್ಗಾವಣೆ ನೀಡಿ ನ್ಯಾಯ ಒದಗಿಸಿ ಎಂದು ಕೋರಿದ್ದಾರೆ. ಇದೀಗ ಈ ಅನಾಮಧೇಯ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ