ಬೆಂಗಳೂರು ಹೊರತುಪಡಿಸಿ ಉಳಿದ ಮಹಾನಗರಗಳಿಗೆ ಸಂಬಂಧಿಸಿದ ‘ಅಕ್ರಮ-ಸಕ್ರಮ’ಯೋಜನೆ ಸಂಬಂಧ ಕರಡು ಅಧಿಸೂಚನೆ ಸಿದ್ಧವಾಗಿದ್ದು, ಈ ತಿಂಗಳೊಳಗೆ ಅಧಿಸೂಚನೆ ಹೊರಡಿಸಲಾಗುವುದು.
ಬೆಂಗಳೂರು (ಆ.11): ಬೆಂಗಳೂರು ಹೊರತುಪಡಿಸಿ ಉಳಿದ ಮಹಾನಗರಗಳಿಗೆ ಸಂಬಂಧಿಸಿದ ‘ಅಕ್ರಮ-ಸಕ್ರಮ’ಯೋಜನೆ ಸಂಬಂಧ ಕರಡು ಅಧಿಸೂಚನೆ ಸಿದ್ಧವಾಗಿದ್ದು, ಈ ತಿಂಗಳೊಳಗೆ ಅಧಿಸೂಚನೆ ಹೊರಡಿಸಲಾಗುವುದು. ಜನರಿಗೆ ಅನುಕೂಲವಾಗುವ ಹಾಗೂ ಹೊರೆ ಆಗದ ರೀತಿಯಲ್ಲಿ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದರು.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಕ್ರಮ-ಸಕ್ರಮ’ ಯೋಜನೆ ಸಂಬಂಧ ಈಗಾಗಲೇ ಸಂಪುಟ ಉಪಸಮಿತಿ ಸಭೆ ಸೇರಿ ಸಾಕಷ್ಟು ಚರ್ಚಿಸಿದೆ. ಕೇವಲ ಮನೆಗಳನ್ನು ಮಾತ್ರ ಸಕ್ರಮ ಮಾಡಬೇಕೆ, ವಾಣಿಜ್ಯ ಕಟ್ಟಡಗಳನ್ನು ಸಕ್ರಮ ಮಾಡಬೇಕೆ ಎಂಬ ಬಗ್ಗೆ ಚರ್ಚೆ ನಡೆದಿದೆ. ಅಕ್ರಮ-ಸಕ್ರಮಕ್ಕೆ ಕೊನೆಯ ದಿನಾಂಕ ನಿಗದಿಪಡಿಸುವುದು ಬೇಡ ಎಂಬ ಅಭಿಪ್ರಾಯ ಬಂದಿದೆ. ಜೊತೆಗೆ ಇನ್ನೂ ಕೆಲವು ಸಣ್ಣ ಪುಟ್ಟ ವಿಷಯಗಳ ಬಗ್ಗೆ ಸಮಾಲೋಚಿಸಬೇಕಾಗಿದೆ. ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವ ಉದ್ದೇಶವಿದೆ ಎಂದು ಹೇಳಿದರು.
ಪರೋಕ್ಷವಾಗಿ ಯಡಿಯೂರಪ್ಪ ವಿರೋಧಿಗಳಿಗೆ ಟಾಂಗ್ ಕೊಟ್ಟ ಬೈರತಿ..!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮ-ಸಕ್ರಮಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹೀಗಾಗಿ ರಾಜಧಾನಿಯನ್ನು ಹೊರತುಪಡಿಸಿ ಉಳಿದ ಕಡೆ ಜಾರಿಗೆ ತರಲಾಗುವುದು. ಕೆಲವು ವಿಷಯಗಳ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ಅವರ ಜೊತೆ ಚರ್ಚೆ ನಡೆಯುತ್ತಿದೆ. ಈ ತಿಂಗಳೊಳಗೆ ಜಾರಿ ಮಾಡಲಾಗುವುದು ಎಂದರು. 2023ರ ಮಾರ್ಚ್ ಒಳಗೆ ಸ್ಮಾರ್ಟ್ ಸಿಟಿ ಯೋಜನೆ ಪೂರ್ಣ: ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜ್ಯದ 7 ನಗರಗಳಲ್ಲಿ ಸಾಕಷ್ಟುಕಾಮಗಾರಿ ನಡೆದಿದ್ದು, ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಕೆಲವು ಕಾರಣಗಳಿಂದ ಬೆಳಗಾವಿ, ತುಮಕೂರು ಬಸ್ ನಿಲ್ದಾಣ ಕಾಮಗಾರಿ ವಿಳಂಬವಾಗಿದೆ. ಒಟ್ಟಾರೆ ಸಣ್ಣಪುಟ್ಟಕೆಲಸ ಹೊರತುಪಡಿಸಿದರೆ ಮಾಚ್ರ್ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
7 ನಗರಗಳಲ್ಲಿ ಒಟ್ಟು 889 ಕಾಮಗಾರಿ ಕೈಗೆತ್ತಿಕೊಂಡಿದ್ದು, ಈ ಪೈಕಿ 590 ಕಾಮಗಾರಿ ಪೂರ್ಣವಾಗಿದೆ, 295 ಕಾಮಗಾರಿ ಪ್ರಗತಿಯಲ್ಲಿದೆ, 4 ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಯೋಜನೆಯ ಸಂಬಂಧ 5331 ಕೋಟಿ ರು.ಗಳಲ್ಲಿ 4604.11 ಕೋಟಿ ರು ವೆಚ್ಚ ಮಾಡಲಾಗಿದೆ. ಯೋಜನೆಯ ಅನುಷ್ಠಾನದ ಪರಿಶೀಲನೆಗೆ ತಾವು ಎಲ್ಲ ನಗರಗಳಿಗೆ ಹತ್ತಾರು ಬಾರಿ ಭೇಟಿ ನೀಡಿ, ಖುದ್ದು ಪರಿಶೀಲಿಸಿದ್ದೇನೆ. 35 ಸಭೆ ಮಾಡಲಾಗಿದೆ. ಕೇಂದ್ರ ಸರ್ಕಾರ ಮುಂದಿನ ವರ್ಷದ ಜೂನ್ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಅವಕಾಶ ನೀಡಿದೆ. ಆದರೆ ಮಾಚ್ರ್ ಒಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಡಿಬಿ ಯೋಜನೆ: ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಮೂಲಕ ಮಂಗಳೂರು ಮತ್ತು ದಾವಣಗೆರೆಗೆ ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಪೂರೈಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಏಳೆಂಟು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು, ಈ ಯೋಜನೆ ಹಿಂದಿನ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದರೂ ತಾವು ಅಧಿಕಾರ ವಹಿಸಿಕೊಂಡ ನಂತರ ಕಾಮಗಾರಿಗೆ ವೇಗ ನೀಡಲಾಗಿದೆ ಎಂದು ಬೈರತಿ ಬಸವರಾಜ ತಿಳಿಸಿದರು.
Karnataka Politics: ಪ್ರಿಯಾಂಕ ಖರ್ಗೆ ಅಪ್ರಬುದ್ಧ ರಾಜಕಾರಣಿ: ಸಚಿವ ಬೈರತಿ
ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ: ಮೈಸೂರು ಹೊರತುಪಡಿಸಿದರೆ ಬಹುತೇಕ ನಗರಾಭಿವೃದ್ಧಿ ಪ್ರಾಧಿಕಾರಗಳು ಆರ್ಥಿಕವಾಗಿ ಸಬಲವಾಗಿಲ್ಲ. ರೈತರ ಭೂಮಿಯನ್ನು ಪ್ರಾಧಿಕಾರವೇ ಖರೀದಿಸುವ ಸಾಮರ್ಥ್ಯ ಇಲ್ಲ. ಹೀಗಾಗಿ ಉಳಿದ ಪ್ರಾಧಿಕಾರಗಳಿಗೂ ರೈತರ ಮನವೊಲಿಸಿ, ಭೂಮಿ ಪಡೆದು ನಿವೇಶನವನ್ನಾಗಿ ಪರಿವರ್ತಿಸಿ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗುವಂತೆ ತಿಳಿಸಲಾಗಿದೆ. ಹಾಸನದಲ್ಲಿ ರೈತರ ಸಹಭಾಗಿತ್ವದಲ್ಲಿ 1000 ಎಕರೆ ಜಾಗ ತೆಗೆದುಕೊಳ್ಳಲಾಗಿದೆ. ಅದೇ ರೀತಿ ಬಳ್ಳಾರಿ, ಬೆಳಗಾವಿಯಲ್ಲಿ ಭೂಮಿ ಪಡೆಯಲಾಗಿದೆ. ಮೈಸೂರು ಪ್ರಾಧಿಕಾರ ಭೂಮಿ ನಿರ್ಮಿಸಿದ್ದ ಬಡಾವಣೆಗಳಲ್ಲಿ ಸುಮಾರು 15 ಸಾವಿರ ನಿವೇಶನದ ಮಾಹಿತಿ ಇರಲೇ ಇಲ್ಲ. ಈಗ ಎಲ್ಲ ಮಾಹಿತಿ ಪಡೆದು ಮಾರಾಟ ಇಲ್ಲವೇ ಹರಾಜಿನ ಮೂಲಕ ಹಂಚಿಕೆ ಮಾಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.