ರೈತರಿಗೆ ಗುಡ್‌ನ್ಯೂಸ್: ಅನ್ನದಾತರಿಗೆ ಬೆನ್ನೆಲುಬಾಗಿ ನಿಂತ ಕೃಷಿ ಇಲಾಖೆ

By Suvarna NewsFirst Published Apr 28, 2021, 9:47 PM IST
Highlights

ಕಳೆದ ಲಾಕ್‌ಡೌನ್‌ನಂತೆ ಈ ಬಾರಿಯೂ ರೈತರಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಬೆನ್ನೆಲುಬಾಗಿ ನಿಂತಿದ್ದಾರೆ. 

ಬೆಂಗಳೂರು, (ಏ.28): ರಾಜ್ಯ ಸರ್ಕಾರ ರಾಜ್ಯದಲ್ಲಿ ಘೋಷಿಸಿರುವ 14 ದಿನಗಳ ಲಾಕ್ಡೌನ್‌ನಲ್ಲಿ ರೈತರಿಗಾಗಲಿ ಕೃಷಿ ಚಟುವಟಿಕೆಗಳಿಗಾಗಲಿ ಯಾವುದೇ ತೊಂದರೆಯಾಗದಿರಲೆಂದು ಕೃಷಿ ಇಲಾಖೆ ಮತ್ತೆ ಅಗ್ರಿವಾರ್ ರೂಮ್ ಆರಂಭಿಸಿದೆ.

ಕಳೆದ ವರ್ಷ ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಅಗ್ರಿವಾರ್ ರೂಮ್ ಆರಂಭಿಸಿರುವಂತೆಯೇ ಈ ಬಾರಿಯೂ ರೈತರಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಬೆನ್ನೆಲುಬಾಗಿ ನಿಂತಿದ್ದು, ಕೃಷಿ ಇಲಾಖೆಯಲ್ಲಿ ಅಗ್ರಿ ವಾರ್ ರೂಮ್ ಆರಂಭಿಸಿದ್ದಾರೆ. 

ಕೊರೋನಾ ಹೆಚ್ಚಳ: ಅಡಕೆ ಮಾರಾ​ಟಕ್ಕೆ ತರಾ​ತು​ರಿ..! 

ಈಗಾಗಲೇ ಮುಂಗಾರು ಆರಂಭವಾಗುತ್ತಿರುವುದರಿಂದ ಲಾಕ್ಡೌನ್‌ ಅವಧಿಯಲ್ಲಿ ಯಾವುದೇ ಇಲಾಖೆಯಾಗಲೀ ಅಧಿಕಾರಿಗಳಾಗಲೀ ಕೃಷಿ ಪರಿಕರ ಸಾಗಾಣಿಕೆ ರೈತರ ಕೃಷಿ ಚಟುವಟಿಕೆಗಳಿಗೆ ಅಡ್ಡಿಯನ್ನುಂಟು ಮಾಡಬಾರದು ಎಂದು ಕೃಷಿ ಸಚಿವರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಅಂದ್ಹಾಗೆ, ರೈತರಿಗೆ ನೆರವಾಗಲು ಮತ್ತೆ ಅಗ್ರಿ ವಾರ್ ರೂಮ್ ನೆರವು ಕಲ್ಪಿಸಲಿದೆ‌. ಕೃಷಿ ಕೇಂದ್ರ ಕಚೇರಿಯಲ್ಲಿ ಅಗ್ರಿ ವಾರ್ ರೂಮ್ ಮತ್ತೆ ತೆರೆದಿದ್ದು 080-22210237 ಹಾಗೂ 080-22212818 ಈ ಸಂಖ್ಯೆಗಳು ಸಹಾಯವಾಣಿಯಾಗಿ ಕಾರ್ಯನಿರ್ವಹಿಸಲಿವೆ‌. ಈ ಸಹಾಯವಾಣಿ ಅಗ್ರಿ ವಾರ್ ರೂಮ್ ಏ.28 ರಿಂದ ಆರಂಭವಾಗಿದ್ದು, ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸಲಿದೆ.

ಪಾತಾಳಕ್ಕೆ ಕುಸಿದ ಈರುಳ್ಳಿ ದರ: ರೈತ ಕಂಗಾಲು

ಇದಕ್ಕಾಗಿ ಕೃಷಿ ಪ್ರಧಾನ ಕಚೇರಿಯಲ್ಲಿ ಇಬ್ಬರು ತಾಂತ್ರಿಕ ಅಧಿಕಾರಿಗಳು ಹಾಗೂ ಒಬ್ಬ ಉಪಕೃಷಿ ನಿರ್ದೇಶಕರು ಉಸ್ತುವಾರಿಗೆ ನೇಮಿಸಲಾಗಿದೆ. ಕಳೆದ ಲಾಕ್ಡೌನ್ ಸಂದರ್ಭದಲ್ಲಿ ಆರಂಭಿಸಲಾಗಿದ್ದ ಅಗ್ರಿವಾರ್ ರೂಮ್ ಯಶಸ್ವಿಯೂ ಆಗಿತ್ತು. ಅಲ್ಲದೇ ರೈತರಿಗೆ ನೆರವಾಗಿ 2020ನೇ ಸಾಲಿನಲ್ಲಿ ಕೋವಿಡ್ ನಿರ್ಬಂಧಿತ ಅವಧಿಯಲ್ಲಿಯೂ ಶೇ.106 ಕ್ಕೂ ಹೆಚ್ಚಿನ ದಾಖಲೆಯ ಬಿತ್ತನೆಯಾಗಲು ನೆರವಾಗಿತ್ತು. ಅದೇ ಮಾದರಿಯಲ್ಲಿ ಈಗಲೂ ಈ ಸಹಾಯವಾಣಿ ಅಗ್ರಿವಾರ್ ರೂಮ್ ಕಾರ್ಯನಿರ್ವಹಿಸಲಿದೆ.

ಕಳೆದ ಬಾರಿಯಂತೆ ಈ 14 ದಿನಗಳ ಅವಧಿಯಲ್ಲಿ ಕೃಷಿ ಸಮಸ್ಯೆಗಳ ಬಗ್ಗೆ ಬೆಳೆಗಾರರ ಮಧ್ಯೆ ಸಂಪರ್ಕ ಸೇತುವೆಯಾಗಿ ಈ ಅಗ್ರಿವಾರ್ ರೂಮ್ ಕಾರ್ಯನಿರ್ವಹಿಸಲಿದೆ ಎಂದು ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ರೈತರು ತಾವು ಬೆಳೆದ ಹಣ್ಣು, ತರಕಾರಿ, ಹೂವು ಸೇರಿದಂತೆ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಕುರಿತು ಮಾಹಿತಿ ನೀಡಲಿದ್ದು, ರೈತರು ಈ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಒಂದು ವೇಳೆ ದೂರವಾಣಿ ಮೂಲಕ ಮಾಹಿತಿ ಲಭ್ಯವಾಗದೇ ಇದ್ದಲ್ಲಿ ಅವುಗಳನ್ನು ಪಟ್ಟಿ ಮಾಡಿ ಆನಂತರ ಬಗೆಹರಿಸುವ ಪ್ರಯತ್ನವನ್ನೂ ಸಹ ಕೃಷಿ ಇಲಾಖೆ ಮಾಡಲಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!