
ಬೆಂಗಳೂರು : ಸಚಿವ ಡಿ.ಕೆ.ಶಿವಕುಮಾರ್ ಬಳಿಕ ಇದೀಗ ಕಾಂಗ್ರೆಸ್ನ ಮತ್ತೊಬ್ಬ ಪ್ರಭಾವಿ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕ ಲಿಂಗಾಯತ ಧರ್ಮ ಶಿಫಾರಸಿಗೆ ಸಂಬಂಧಪಟ್ಟಂತೆ ಮನಬಿಚ್ಚಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆದ ಹೋರಾಟ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿಯಾಗಿ ಸರ್ಕಾರದ ಪರವಾಗಿ ತೆಗೆದುಕೊಂಡ ನಿರ್ಧಾರ ನನಗೆ ತೊಂದರೆ ಮಾಡಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಭಾನುವಾರ ಇಲ್ಲಿನ ತೋಂಟ ದಾರ್ಯ ಮಠದಲ್ಲಿ ಆಯೋಜಿಸಲಾ ಗಿದ್ದ ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ಪುಣ್ಯ ಸ್ಮರಣೋತ್ಸವ ಮಾತ ನಾಡಿದ ಸಿದ್ದರಾಮಯ್ಯ ಅವರು, ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಕೆಲ ಮುಖಂಡರು ಭೇಟಿ ಮಾಡಿ ಪ್ರತ್ಯೇಕ ಧರ್ಮ ವಿಚಾರದಲ್ಲಿ ಕೇಂದ್ರಕ್ಕೆ ಕಳಿಸುವ ಪ್ರಸ್ತಾವನೆ ಬಗ್ಗೆ ಚರ್ಚಿಸಿದ್ದರು.
ಅದಕ್ಕೆ ನಾನು ನೀವೆಲ್ಲಾ ಒಟ್ಟಾಗಿ ಬನ್ನಿ ಎಂದು ಹೇಳಿದ್ದೆ. ಆ ವೇಳೆಯಲ್ಲಿ ಅವರು ಸೇರಿದಂತೆ ಒಟ್ಟು 5 ಪಿಟಿಷನ್ ಸಲ್ಲಿಕೆ ಮಾಡಿದ್ದರು. ಅದನ್ನು ಅಲ್ಪಸಂಖ್ಯಾತ ಕಮಿಟಿ ಹಾಗೂ ಕ್ಯಾಬಿನೆಟ್ಗೆ ಕೊಟ್ಟೆ, ಅಲ್ಲಿ ಯಾರಿಂದಲೂ ವಿರೋಧ ವ್ಯಕ್ತವಾಗಲಿಲ್ಲ. ಆದರೆ ಈಶ್ವರ ಖಂಡ್ರೆ ಹಾಗೂ ಮಲ್ಲಿಕಾರ್ಜುನ ಮಾತ್ರ ವೀರಶೈವ ಲಿಂಗಾಯತ ಎಂದು ನಮೂದಿಸುವಂತೆ ಕೋರಿಕೆ ಸಲ್ಲಿಸಿದ್ದರು.
ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಸಲ್ಲಿಕೆಯಾದ ಪ್ರಸ್ತಾವನೆಯಲ್ಲಿ ಲಿಂಗಾಯತ ಎಂದು ಉಲ್ಲೇಖಿಸಿ, ಜತೆಯಲ್ಲಿ ವೀರಶೈವರೂ ಬಸವ ತತ್ವದ ಅನುಯಾಯಿಗಳು ಮತ್ತು ಪ್ರತಿಪಾದಕರು ಎಂದು ನಮೂದಿಸಲಾಗಿತ್ತು. ಇಷ್ಟೆಲ್ಲ ಮಾಡಿದ ಮೇಲೂ ಕೆಲವರು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ನನ್ನನ್ನು ಕಾರಣ ಮಾಡಿದರು. ಏನು ಮಾಡ್ಲಿ?... ಈ ವಿಷಯದಲ್ಲಿ ನನ್ನ ಹಾಕ್ಕೊಂಡು ಬಡಿದರೆ ನಾನೇನು ಮಾಡ್ಲಿ? ಹೋಗ್ಲಿ ಬಿಡಿ, ಅದ್ರಿಂದ ನನಗೆ ಸ್ವಲ್ಪ ತೊಂದರೇನೂ ಆಯ್ತು, ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.
ಲಿಂಗೈಕ್ಯ ತೋಂಟದಾರ್ಯ ಶ್ರೀಗಳು ಸೇರಿದಂತೆ ಎಲ್ಲ ಲಿಂಗಾಯತ ಮಠಾಧೀಶರು ಸರ್ಕಾರದ ನಿರ್ಧಾರ ಸ್ವಾಗತಿಸಿದರು. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳಷ್ಟೇ ಸಿದ್ದರಾಮಯ್ಯ ಧರ್ಮ ಒಡೆದ ಎಂದು ಆರೋಪ ಮಾಡಿ ನನ್ನನ್ನೇ ಗುರಿ ಮಾಡಿದರು. ಹಾಗಾದ್ರೆ ಬಸವಣ್ಣ ಧರ್ಮ ಒಡೆದ್ರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಪ್ರಗತಿಪರ ಚಿಂತನೆಗೆ ಪಟ್ಟಭದ್ರರ ವಿರೋಧ ಅನಾದಿ ಕಾಲದಿಂದಲೂ ಇದೆ ಎನ್ನುವುದಕ್ಕೆ ಬಸವಣ್ಣನವರ ಕಾಲದಲ್ಲಿ ಅವರು ಎದುರಿಸಿದ್ದ ಕಷ್ಟ ಕಾರ್ಪಣ್ಯಗಳೇ ನಿದರ್ಶನಗಳಾಗಿವೆ. ಅವು ಇಂದಿಗೂ ಮುಂದುವರಿದಿದ್ದು, ಈ ವಿಷಯದಲ್ಲಿ ಲಿಂಗೈಕ್ಯ ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ತಮ್ಮ ನೇರ ನಿಷ್ಠುರವಾದದಿಂದ ಹಲವಾರು ಜನರ ವಿರೋಧ ಕಟ್ಟಿಕೊಂಡಿದ್ದರು ಎಂದರು ಸಿದ್ದರಾಮಯ್ಯ.
ವೋಟಿಗಾಗಿ ಮಾಡಿಲ್ಲ: ನಾನು ಮುಖ್ಯಮಂತ್ರಿಯಾಗಿ ವಿಜಯಪುರ ವಿವಿಗೆ ಅಕ್ಕಮಹಾದೇವಿ ಹೆಸರು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರ ಅಳವಡಿಸಲು ಆದೇಶ ಹೊರಡಿಸಿದೆ. ಬಸವೇಶ್ವರ ತತ್ವ, ಸಿದ್ಧಾಂತಗಳು ಜನ ಮನಕ್ಕೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಮಾಡಿದ್ದೆ ಹೊರತು, ಅದರಲ್ಲಿ ಸ್ವಾರ್ಥವಾಗಲಿ, ಮತದಿಚ್ಛೆಯಾಗಲಿ ಇರಲಿಲ್ಲ. ನಾನು ಮಾಡಿದ ಕೆಲಸವನ್ನು ಎಲ್ಲರೂ ಮೆಚ್ಚಿ ಕರೆದು ಸನ್ಮಾನ ಮಾಡಿದ್ದರು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ