ಕೊರೋನಾ ಪರೀಕ್ಷೆ ವೇಳೆ ಐಡಿ, ಆಧಾರ್‌ ಕಡ್ಡಾಯ: ಬಿಎಸ್‌ವೈ

By Kannadaprabha NewsFirst Published Jul 24, 2020, 10:52 AM IST
Highlights

ಕೊರೋನಾ ಸೋಂಕು ಪರೀಕ್ಷೆ ವೇಳೆ ತಪ್ಪು ವಿಳಾಸ, ಮೊಬೈಲ್‌ ಸಂಖ್ಯೆ ನೀಡುವವರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತದಾನ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಅಥವಾ ಇತರೆ ವಿಳಾಸ ದಾಖಲೆಗಳೊಂದಿಗೆ ಒಟಿಪಿ ಸಂಖ್ಯೆ ಪಡೆಯುವುದನ್ನು ಕಡ್ಡಾಯಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು(ಜು.24): ಕೊರೋನಾ ಸೋಂಕು ಪರೀಕ್ಷೆ ವೇಳೆ ತಪ್ಪು ವಿಳಾಸ, ಮೊಬೈಲ್‌ ಸಂಖ್ಯೆ ನೀಡುವವರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತದಾನ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಅಥವಾ ಇತರೆ ವಿಳಾಸ ದಾಖಲೆಗಳೊಂದಿಗೆ ಒಟಿಪಿ ಸಂಖ್ಯೆ ಪಡೆಯುವುದನ್ನು ಕಡ್ಡಾಯಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗುರುವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಪೂರ್ವ, ಪಶ್ಚಿಮ ಹಾಗೂ ಯಲಹಂಕ ವಲಯದ ಉಸ್ತುವಾರಿ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ವಲಯ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳಿಂದ ಸೋಂಕು ನಿಯಂತ್ರಣ, ಚಿಕಿತ್ಸೆ ಮುಂತಾದ ವಿವರ ಪಡೆದುಕೊಂಡರು

ನಾಲ್ಕೇ ದಿನದಲ್ಲಿ ಕೊರೋನಾ ಮಂಗಮಾಯ! 'ಧೈರ್ಯವಿದ್ದಷ್ಟು ಬೇಗ ಗುಣಮುಖ'

ನಗರದಲ್ಲಿ ಈವರೆಗೆ ಸೋಂಕು ದೃಢಪಟ್ಟ39 ಸಾವಿರ ಮಂದಿಯ ಪೈಕಿ ಸುಮಾರು 4,500 ಮಂದಿ ಸೋಂಕಿತರು ಯಾರು ಎಂಬುದೇ ಪತ್ತೆಯಾಗಿಲ್ಲ. ತಪ್ಪು ಮಾಹಿತಿ ನೀಡಿರುವುದಿಂದ ಪತ್ತೆಯಾಗುತ್ತಿಲ್ಲ. ಹಾಗಾಗಿ ಸೋಂಕು ಪರೀಕ್ಷೆಗೆ ಗಂಟಲ ದ್ರವ ಸಂಗ್ರಹಿಸುವಾಗ ಪರೀಕ್ಷೆಗೆ ಒಳಗಾಗುವ ವ್ಯಕ್ತಿಯ ವಿಳಾಸ ದಾಖಲೆ, ಆಧಾರ್‌ ಕಾರ್ಡ್‌ ಅಥವಾ ಇನ್ಯಾವುದಾರೂ ದಾಖಲೆ ಪಡೆಯಬೇಕು. ಜತೆಗೆ ಪರೀಕ್ಷೆಗೆ ಒಳಪಡುವ ವ್ಯಕ್ತಿಗೆ ಒಟಿಪಿ ಸಂಖ್ಯೆ ಬಂದ ನಂತರ ಆ ಸಂಖ್ಯೆ ಪಡೆದು ದಾಖಲಿಸಿಕೊಂಡು ಮಾದರಿ ಪಡೆಯುವಂತೆ ಸೂಚನೆ ನೀಡಿದ್ದಾರೆ.

ಪ್ರತಿ ವಾರ್ಡ್‌ನಲ್ಲಿ ಜಾಗೃತಿ ಫಲಕ:

ಬಿಬಿಎಂಪಿಯ 198 ವಾರ್ಡ್‌ಗಳಲ್ಲಿಯೂ ಕೊರೋನಾ ಸೋಂಕು ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಫಲಕ ಅಳವಡಿಸಬೇಕು, ಸೋಂಕು ಪರೀಕ್ಷೆ ಹೆಚ್ಚಳ ಮಾಡಿ 24 ಗಂಟೆಯಲ್ಲಿ ಫಲಿತಾಂಶ ಲಭ್ಯವಾಗುವಂತೆ ಮಾಡಿ. ಪ್ರತಿವಾರ ವಲಯ ಮಟ್ಟದಲ್ಲಿ ಸೋಂಕು ಕಡಿಮೆಗೊಳಿಸಿ ವರದಿ ನೀಡಬೇಕು ಎಂದು ವಲಯಗಳ ಉಸ್ತುವಾರಿ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಿದರು.

ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ:

ಕೊರೋನಾ ಸೋಂಕು ನಿಯಂತ್ರಣ ಕಾರ್ಯಕ್ಕೆ ಬೂತ್‌ ಮಟ್ಟ, ವಾರ್ಡ್‌ ಮಟ್ಟದಲ್ಲಿ ಕಾರ್ಯನಿರ್ವಹಿಸುವಂತೆ ಶಿಕ್ಷಕರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ- ಸಿಬ್ಬಂದಿಗೆ ಸೂಚನೆ ನೀಡಲಾಗಿದ್ದರೂ ಹಾಜರಾಗದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಕೊರೋನಾ ಸೋಂಕಿತರ ಅಂತ್ಯಕ್ರಿಯೆಗೆ ಚಿತಾಗಾರ ಮತ್ತು ಸ್ಮಶಾನಗಳನ್ನು ನಿಗದಿಪಡಿಸಿ ಆದೇಶಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಕೊರೋನಾ ಗೆದ್ದ ರಾಜ್ಯದ ಮೊದಲ ಶತಾಯುಷಿ: ಮನೆ​ಯಲ್ಲೇ ಚಿಕಿ​ತ್ಸೆ ಪಡೆದು 100ರ ವೃದ್ಧೆ ಗುಣಮುಖ

ಸಭೆಯಲ್ಲಿ ಯಲಹಂಕ, ಪೂರ್ವ ಹಾಗೂ ಪಶ್ಚಿಮ ವಲಯದ ಉಸ್ತುವಾರಿ ಸಚಿವರಾದ ಡಾ. ಅಶ್ವತ್ಥ ನಾರಾಯಣ್‌, ವಿ.ಸೋಮಣ್ಣ, ಎಸ್‌.ಆರ್‌.ವಿಶ್ವನಾಥ್‌, ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌, ವಲಯ ಸಂಯೋಜನಾ ಅಧಿಕಾರಿಗಳು ಉಪಸ್ಥಿತರಿದ್ದರು.

ಡಿಸಿಪಿ ನೇತೃತ್ವದಲ್ಲಿ ತಂಡ

ಕೊರೋನಾ ಪರೀಕ್ಷೆ ವೇಳೆ ತಪ್ಪು ವಿಳಾಸ, ಮೊಬೈಲ್‌ ನಂಬರ್‌ ನೀಡಿರುವ ಸೋಂಕಿತರನ್ನು ಪತ್ತೆ ಮಾಡಲು ವಲಯಕ್ಕೊಬ್ಬರಂತೆ ಡಿಸಿಪಿ ನೇತೃತ್ವದ ತಂಡ ನೇಮಕ  ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

click me!