
ಗದಗ (ಜು.09): ಅಮರನಾಥ ಯಾತ್ರೆಗೆ ತೆರಳುವ ಮಾರ್ಗಮಧ್ಯೆ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದ್ದು, ಕರ್ನಾಟಕದ 80 ಯಾತ್ರಾರ್ಥಿಗಳು ಮಾರ್ಗ ಮಧ್ಯೆ ಸಿಲುಕಿಕೊಂಡು ಸಂಕಷ್ಟದಲ್ಲಿದ್ದಾರೆ. ಈ ಪೈಕಿ, 23 ಯಾತ್ರಾರ್ಥಿಗಳು ಗದಗ ಜಿಲ್ಲೆಯವರು. ಯಾತ್ರಾರ್ಥಿಗಳು ಅಲ್ಲಿಂದಲೇ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಡಿಯೋ ಕಳಿಸಿದ್ದು, ‘ನಮ್ಮನ್ನು ರಕ್ಷಣೆ ಮಾಡಿ, ನಮ್ಮ ತವರೂರಿಗೆ ಸುರಕ್ಷಿತವಾಗಿ ತೆರಳಲು ಅನುಕೂಲ ಮಾಡಿಕೊಡಿ’ ಎಂದು ಮನವಿ ಮಾಡಿದ್ದಾರೆ. ಜುಲೈ 4ರಂದು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಂದ ಇವರೆಲ್ಲಾ ಅಮರನಾಥಕ್ಕೆ ತೆರಳಿದ್ದರು.
ಅಮರನಾಥ ದರ್ಶನ ಪಡೆದು ಶುಕ್ರವಾರ ವಾಪಸ್ ಆಗುವ ವೇಳೆ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದ್ದು, ಮಾರ್ಗ ಮಧ್ಯೆ ಇವರು ಸಿಲುಕಿಕೊಂಡಿದ್ದಾರೆ. ಯಾತ್ರಾರ್ಥಿಗಳು ಸದ್ಯ ಬೇಸ್ ಕ್ಯಾಂಪ್ನಲ್ಲಿ ಆಶ್ರಯ ಪಡೆದು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬದವರಲ್ಲಿ ಆತಂಕ ಮನೆ ಮಾಡಿದೆ. ಈ ಮಧ್ಯೆ, ಗದಗ ಜಿಲ್ಲೆಯ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ್ರ ಅವರಿಂದ ನಿರಂತರ ಪ್ರಯತ್ನ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್ಪಿ ಬಿ.ಎಸ್.ನೇಮಗೌಡ್ರ, ಹವಾಮಾನ ವೈಪರಿತ್ಯದ ಕಾರಣ ಗುಡ್ಡ ಕುಸಿದು ರಸ್ತೆ ಬಂದ್ ಆಗಿದೆ.
Mandya: ಕೆಆರ್ಎಸ್ ಒಳಹರಿವಿನಲ್ಲಿ ಹೆಚ್ಚಳ: ಒಂದೇ ದಿನದಲ್ಲಿ ಎರಡು ಅಡಿ ನೀರು ಏರಿಕೆ
ಹೀಗಾಗಿ, ಗದಗ ಜಿಲ್ಲೆಯ ಯಾತ್ರಾರ್ಥಿಗಳು ಮಾರ್ಗಮಧ್ಯೆ ಸಿಲುಕಿಕೊಂಡಿದ್ದಾರೆ. ಯಾತ್ರಾರ್ಥಿಗಳು ಬೇಸ್ಕ್ಯಾಂಪ್ನಲ್ಲಿದ್ದು, ಸಾಮಾನ್ಯ ಹೆಲಿಕಾಪ್ಟರ್ಗೆ ಇಲ್ಲಿಗೆ ತೆರಳಲು ಆಗುವುದಿಲ್ಲ. ಸೇನಾ ಹೆಲಿಕಾಪ್ಟರ್ ಅವಶ್ಯಕತೆ ಇದ್ದು, ವಾತಾವರಣ ವೈಪರಿತ್ಯದಿಂದ ಸೇನಾ ಹೆಲಿಕಾಪ್ಟರ್ ತೆರಳಲು ಸ್ವಲ್ಪ ವಿಳಂಬವಾಗಿದೆ. ಸೇನೆಯೊಂದಿಗೆ ನಿರಂತರ ಸಂಪರ್ಕ ಮಾಡಿ ಜಿಲ್ಲೆಯ 23 ಜನ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯ ಅವರು ಸುರಕ್ಷಿತ ಜಾಗದಲ್ಲಿದ್ದಾರೆ. ಕುಟುಂಬಸ್ಥರು ಆತಂಕ ಪಡುವ ಅವಶ್ಯಕತೆ ಇಲ್ಲ. ಸುರಕ್ಷಿತವಾಗಿ ಕರೆತರಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲಲ್ಲಿ ಗುಡ್ಡ ಕುಸಿತ: ನಮ್ಮೊಟ್ಟಿಗೆ ಬೇರೆ ಬೇರೆ ಕಡೆಯವರು ಇದ್ದಾರೆ. ಹಲವರು ಬೇಸ್ ಕ್ಯಾಂಪಿನಲ್ಲಿ ಆಶ್ರಯ ಪಡೆದಿದ್ದೇವೆ. ಶನಿವಾರ ಅಂತಹ ಸಮಸ್ಯೆ ಆಗಿಲ್ಲ. ಮುಂಜಾನೆ ಉಪಾಹಾರ ಸಿಕ್ಕಿಲ್ಲ, ಮಧ್ಯಾಹ್ನ ಊಟ ನೀಡಿದ್ದಾರೆ. ಆದರೆ ಉಳಿದಂತೆ ಶೌಚಾಲಯ ಮತ್ತಿತರ ಸಮಸ್ಯೆ ಇದೆ. ವಿಪರೀತ ಚಳಿ, ಮಳೆ ಇದೆ. ಅಲ್ಲಲ್ಲಿ ಗುಡ್ಡ ಕುಸಿತ ಆಗುತ್ತಿದೆ ಎಂಬ ಮಾಹಿತಿ ಲಭಿಸುತ್ತಿದೆ. ಏನು ಮಾಡುವುದು ತಿಳಿಯುತ್ತಿಲ್ಲ. ಸಚಿವ ಎಚ್.ಕೆ. ಪಾಟೀಲ್, ಗದಗ ಎಸ್ಪಿ ಸೇರಿದಂತೆ ಹಲವರು ನಮ್ಮನ್ನು ಸಂಪರ್ಕಿಸಿ ಧೈರ್ಯ ಹೇಳಿದ್ದಾರೆ. ನಮಗೂ ಸಾಕಷ್ಟುಧೈರ್ಯ ಇದೆ. ಆದರೆ ಹವಾಮಾನ ವೈಪರಿತ್ಯದಿಂದ ಮುಂದೇನು? ಎಂಬ ಆತಂಕ ಇದೆ. ಪರಿಸ್ಥಿತಿ ಇನ್ನೆರಡು ದಿನ ಮುಂದುವರಿದರೆ ಆಹಾರ ಸೇರಿದಂತೆ ಎಲ್ಲದಕ್ಕೂ ಪರದಾಡಬೇಕಾದ ಪರಿಸ್ಥಿತಿ ಬರಬಹುದು ಎಂದರು.
ರಾಹುಲ್ ಕೇಸಲ್ಲಿ ‘ಕೈ’ ಹೋರಾಟ ಕೋರ್ಟ್ ವಿರುದ್ಧವೇ: ಪ್ರಲ್ಹಾದ್ ಜೋಶಿ ಪ್ರಶ್ನೆ
ಇಲ್ಲಿ ಭಾರೀ ಚಳಿ, ಮಳೆ ಇದೆ. ನಾವು ಸಾಕಷ್ಟುಸಿದ್ಧತೆ ಮಾಡಿಕೊಂಡು ಬಂದಿದ್ದರೂ ಮಹಿಳೆಯರು, ಮಕ್ಕಳಿಗೆ ಸಮಸ್ಯೆ ಆಗುತ್ತಿದೆ. ಇದೊಂದು ಅನಿರೀಕ್ಷಿತ ಬೆಳವಣಿಗೆ ಆಗಿದ್ದರಿಂದ ಹೊಂದಿ ಕೊಳ್ಳಲು ಆಗುತ್ತಿಲ್ಲ. ಸದ್ಯ ಧೈರ್ಯವಾಗಿದ್ದೇವೆ. ಎಲ್ಲರೂ ಸುರಕ್ಷಿತವಾಗಿದ್ದೇವೆ, ಗದಗ ಸೇರಿದಂತೆ ಸಂಬಂಧಿಗಳು, ಆತ್ಮೀಯರು ಆತಂಕ ಪಡುವುದು ಬೇಡ ಎಂಬ ಸಮಾಧಾನದ ಮಾತು ಹೇಳಿದರು. ಗದಗ ಜಿಲ್ಲೆಯಿಂದ ಜು.4ರಂದು 23 ಜನರು ಬಂದಿದ್ದೇವೆ, ಅಮರನಾಥ ದರ್ಶನ ಪಡೆದು ಜು. 7ರಂದು ವಾಪಸ್ ಬರುವಾಗ ವಿಪರೀತ ಮಳೆಯಿಂದ ಗುಡ್ಡ ಕುಸಿದು, ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸ್ವಲ್ಪ ಆತಂಕವಾಗಿದೆ. 23 ಜನರು ಬೇಸ್ ಕ್ಯಾಂಪ್ನಲ್ಲಿ ರಕ್ಷಣೆ ಪಡೆದಿದ್ದೇವೆ. ನಿನ್ನೆಯವರೆಗೆ ಏನೂ ಸಮಸ್ಯೆ ಇರಲಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ