Covid Crisis: 4.5 ತಿಂಗಳ ಬಳಿಕ ಕೋವಿಡ್‌ ಪಾಸಿಟಿವಿಟಿ 7%: 676 ಕೇಸ್‌

By Govindaraj SFirst Published Jun 23, 2022, 5:00 AM IST
Highlights

ರಾಜ್ಯದಲ್ಲಿ ಕೊರೋನಾ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.7.2ಕ್ಕೆ ಹೆಚ್ಚಳವಾಗಿದೆ. ನಾಲ್ಕೂವರೆ ತಿಂಗಳ ಬಳಿಕ ಪಾಸಿಟಿವಿಟಿ ದರ ಶೇ.7ಕ್ಕೆ ತಲುಪಿರುವುದು ಮತ್ತು ಒಂದೇ ದಿನದಲ್ಲಿ ದುಪ್ಪಟ್ಟಾಗಿರುವುದು ಆತಂಕ ಮೂಡಿಸಿದೆ. 

ಬೆಂಗಳೂರು (ಜೂ.23): ರಾಜ್ಯದಲ್ಲಿ ಕೊರೋನಾ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.7.2ಕ್ಕೆ ಹೆಚ್ಚಳವಾಗಿದೆ. ನಾಲ್ಕೂವರೆ ತಿಂಗಳ ಬಳಿಕ ಪಾಸಿಟಿವಿಟಿ ದರ ಶೇ.7ಕ್ಕೆ ತಲುಪಿರುವುದು ಮತ್ತು ಒಂದೇ ದಿನದಲ್ಲಿ ದುಪ್ಪಟ್ಟಾಗಿರುವುದು ಆತಂಕ ಮೂಡಿಸಿದೆ. ಬುಧವಾರ 676 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 804 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವಾಗಿಲ್ಲ. ಸದ್ಯ 4892 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 9,400 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 7.2 ರಷ್ಟುದಾಖಲಾಗಿದೆ. 

ಮಂಗಳವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 10 ಸಾವಿರದಷ್ಟುಇಳಿಕೆಯಾಗಿದೆ. ಹೀಗಾಗಿ ಹೊಸ ಪ್ರಕರಣಗಳು 62 ಇಳಿಕೆಯಾಗಿವೆ. (ಮಂಗಳವಾರ 738, ಸಾವು ಶೂನ್ಯ). ಪಾಸಿಟಿವಿಟಿ ದರ ಫೆಬ್ರವರಿಯಲ್ಲಿ ಶೇ.7 ರಷ್ಟಿತ್ತು. ಆ ಬಳಿಕ ಇಳಿಕೆಯಾಗುತ್ತಾ ಏಪ್ರಿಲ್‌ನಲ್ಲಿ ಶೇ.0.5ಕ್ಕೆ ತಗ್ಗಿತ್ತು. ಕಳೆದ ಒಂದು ವಾರದಿಂದ ಶೇ.3 ಆಸುಪಾಸಿನಲ್ಲಿತ್ತು. ಮಂಗಳವಾರ ಕೂಡಾ ಶೇ.3.8ರಷ್ಟಿತ್ತು. ಆದರೆ, ಬುಧವಾರ ಶೇ.7.2ಕ್ಕೆ ಏರಿಕೆಯಾಗಿದೆ.

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಕೊರೋನಾ ಪಾಸಿಟಿವ್..?

ಅಂದರೆ, ಸೋಂಕು ಪರೀಕ್ಷೆಗೊಳಗಾದ ಪ್ರತಿ 100 ಮಂದಿಯಲ್ಲಿ ಏಳು ಮಂದಿಗೆ ಸೋಂಕು ದೃಢಪಟ್ಟಿದೆ ಎಂದರ್ಥ. ಒಂದೇ ದಿನಕ್ಕೆ ದುಪ್ಪಟ್ಟಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಬುಧವಾರ ಕೊರೋನಾ ಸೋಂಕು ಪರೀಕ್ಷೆಗಳು ಸಾಕಷ್ಟುಕಡಿಮೆಯಾಗಿವೆ. ಹಿಂದಿನ ಎರಡು ಮೂರು ದಿನಗಳ ಹೊಸ ಪ್ರಕರಣಗಳನ್ನು ತಡವಾಗಿ ಸೇರ್ಪಡೆ ಮಾಡಿ ವರದಿ ಮಾಡಲಾಗಿದೆ. ಹೀಗಾಗಿ, ಪಾಸಿಟಿವಿಟಿ ದರ ಧಿಡೀರ್‌ ಏರಿಕೆಯಾಗಿದೆ ಎನ್ನಲಾಗಿದೆ.

ಎಲ್ಲಿ ಎಷ್ಟು ಸೋಂಕು: ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 626 ಪತ್ತೆಯಾಗಿವೆ. ಉಳಿದಂತೆ ಮೈಸೂರು 12, ಉತ್ತರ ಕನ್ನಡ 8, ಬಳ್ಳಾರಿ ಮತ್ತು ಉಡುಪಿ ತಲಾ 5, ದಕ್ಷಿಣ ಕನ್ನಡ 4, ಬೆಳಗಾವಿ 3, ಶಿವಮೊಗ್ಗ, ಮಂಡ್ಯ, ಕಲಬುರಗಿ, ಧಾರವಾಡ, ಚಿಕ್ಕಮಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ತಲಾ ಇಬ್ಬರಿಗೆ, ತುಮಕೂರಿನಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. 17 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಸಕ್ರಿಯ ಸೋಂಕಿತರ ಪೈಕಿ 32 ಮಂದಿ ಮಾತ್ರ ಆಸ್ಪತೆಯಲ್ಲಿದ್ದು, ಉಳಿದ 4870 ಮಂದಿ ಮನೆಯ ಆರೈಕೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ 39.6 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.1 ಲಕ್ಷ ಮಂದಿ ಗುಣ ಮುಖರಾಗಿದ್ದು, 40,071 ಮಂದಿ ಸಾವಿಗೀಡಾಗಿದ್ದಾರೆ.

ದುಡ್ಡು ಕೊಡ್ತೀನಿ ಅಂದ್ರೂ ಸಿಗ್ತಿಲ್ಲ ಬೂಸ್ಟರ್‌ ಡೋಸ್‌..!

ಜೀನೋಮ್‌ ಸೀಕ್ವೆನ್ಸಿಂಗ್‌ ಹೆಚ್ಚಿಸಿ: ದೇಶದಲ್ಲಿ ಕೋವಿಡ್‌ 4ನೇ ಅಲೆ ಅಬ್ಬರ ಹೆಚ್ಚುತ್ತಿರುವ ನಡುವೆಯೇ ‘ಕಳೆದ 7 ದಿನಗಳ ಅವಧಿಯಲ್ಲಿ ಕೋವಿಡ್‌ ಸೋಂಕು ಹೆಚ್ಚುತ್ತಿರುವ ಪ್ರದೇಶಗಳಿಂದ ಹೆಚ್ಚೆಚ್ಚು ಸ್ಯಾಂಪಲ್‌ಗಳನ್ನು ಜೀನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಬೇಕು’ ಎಂದು ಕೇಂದ್ರ ಸರ್ಕಾರವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ದೇಶದಲ್ಲಿ ಕೋವಿಡ್‌ ಆರ್ಭಟ ಮತ್ತೆ ಹೆಚ್ಚಾಗುತ್ತಿರುವುದಕ್ಕೆ ಕೊರೋನಾದ ಹೊಸ ರೂಪಾಂತರಿ ಅಥವಾ ಉಪತಳಿ ಕಾರಣವಾಗಿರಬಹುದು ಎಂಬ ಸಾಧ್ಯತೆಯನ್ನು ಪರಿಶೀಲಿಸುವ ಹಿನ್ನೆಲೆಯಲ್ಲಿ ಜಿನೋಮ್‌ ಸೀಕ್ವೆನ್ಸಿಂಗ್‌ ನಡೆಸುವ ಇನ್ಸಾಕೋಗ್‌ ಸೂಚನೆ ನೀಡಿದೆ.

click me!