
ವಿಧಾನಸಭೆ : ಪ್ರಸಕ್ತ 2025ನೇ ವರ್ಷದಲ್ಲಿ ರಾಜ್ಯಾದ್ಯಂತ ಆರ್ಎಸ್ಎಸ್ನಿಂದ ಒಟ್ಟು 518 ಸ್ಥಳಗಳಲ್ಲಿ ರಾಷ್ಟ್ರೀಯ ಪಥ ಸಂಚಲನ ಕಾರ್ಯಕ್ರಮ ನಡೆದಿದ್ದು, 1.44 ಲಕ್ಷ ಮಂದಿ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ. ಇದೇ ವೇಳೆ, ಈವರೆಗೆ ನಡೆದಿರುವ ಪಥಸಂಚಲನದ ಸಂದರ್ಭದಲ್ಲಿ ಯಾವುದೇ ಗಲಾಟೆ, ದೊಂಬಿ, ಕೋಮುಗಲಭೆಗಳು ನಡೆದಿಲ್ಲ ಎಂದು ಗೃಹ ಸಚಿವ ಡಾ। ಜಿ. ಪರಮೇಶ್ವರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ವಿ.ಸುನೀಲ್ಕುಮಾರ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಪರಮೇಶ್ವರ್ ಅವರು, 518 ಕಡೆ ನಡೆದ ಪಥಸಂಚಲನದಲ್ಲಿ 1,44,293 ಮಂದಿ ಭಾಗವಹಿಸಿದ್ದರು ಎಂದು ಹೇಳಿದ್ದಾರೆ.
ಬೆಂಗಳೂರು ನಗರದ 97 ಕಡೆ ನಡೆದ ಪಥಸಂಚಲನದಲ್ಲಿ 30,233 ಮಂದಿ ಭಾಗಿಯಾಗಿದ್ದರು. ಇದೇ ರೀತಿ ಉತ್ತರ ಕನ್ನಡ, ಕಾರವಾರದಲ್ಲಿ 45 ಸ್ಥಳಗಳಲ್ಲಿ 13,615 ಮಂದಿ, ದಕ್ಷಿಣ ಕನ್ನಡ ಜಿಲ್ಲೆಯ 10 ಸ್ಥಳದಲ್ಲಿ 8,410 ಮಂದಿ, ಶಿವಮೊಗ್ಗ ಜಿಲ್ಲೆಯಲ್ಲಿ 19 ಸ್ಥಳಗಳಲ್ಲಿ 14,283 ಮಂದಿ, ತುಮಕೂರು ಜಿಲ್ಲೆಯ 11 ಸ್ಥಳಗಳಲ್ಲಿ 5,900 ಮಂದಿ, ಹಾಸನ ಜಿಲ್ಲೆಯ 8 ಸ್ಥಳಗಳಲ್ಲಿ 3,550, ಹುಬ್ಬಳ್ಳಿ-ಧಾರವಾಡದಲ್ಲಿ ಎರಡು ತಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 15,000 ಮಂದಿ ಸೇರಿ ವಿವಿಧ ಜಿಲ್ಲೆಗಳಲ್ಲಿ 1.44 ಲಕ್ಷ ಮಂದಿ ಭಾಗವಹಿಸಿದ್ದರು ಎಂದು ಉತ್ತರದಲ್ಲಿ ತಿಳಿಸಿದ್ದಾರೆ.
ಪ್ರಚಾರ ಗಿಟ್ಟಿಸಿಕೊಳ್ಳಲು ಹಾಗೂ ಹೈಕಮಾಂಡ್ ಗಮನ ಸೆಳೆಯಲು ಹೇಳಿಕೆ ನೀಡುವ ರಾಜ್ಯ ಸಚಿವರಿಗೆ ಪರಮೇಶ್ವರ್ ಅವರ ಹೇಳಿಕೆ ಪೆಟ್ಟು ನೀಡಿದೆ. ಒಂದೇ ಒಂದು ಹಿಂಸೆ ಇಲ್ಲದೇ ಈ ವರ್ಷ 518 ಪಥಸಂಚಲನ ನಡೆದಿದೆ ಎಂದು ಪರಂ ಅವರೇ ಹೇಳಿದ್ದಾರೆ.
- ಬಿ.ಎಲ್. ಸಂತೋಷ್, ಬಿಜೆಪಿ ಸಂಘಟನಾ ಕಾರ್ಯದರ್ಶಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ