ಲೋಕಾಯುಕ್ತ ದಾಳಿ: 14 ಭ್ರಷ್ಟ ಅಧಿಕಾರಿಗಳ ಬಳಿ 48 ಕೋಟಿ ಆಸ್ತಿ ಪತ್ತೆ

By Kannadaprabha NewsFirst Published Jun 2, 2023, 9:13 AM IST
Highlights

ಲೋಕಾಯುಕ್ತ ಪೊಲೀಸರು ಬುಧವಾರ ರಾಜ್ಯದ ವಿವಿಧೆಡೆ 15 ಸರ್ಕಾರಿ ನೌಕರರಿಗೆ ಸೇರಿದ 57 ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. 

ಬೆಂಗಳೂರು(ಜೂ.02):  ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿ ಕಾರ್ಯಾಚರಣೆಯಲ್ಲಿ ಒಟ್ಟು 48.74 ಕೋಟಿ ರು. ಗಿಂತ ಹೆಚ್ಚಿನ ಆಸ್ತಿ ಮೌಲ್ಯ ಪತ್ತೆಯಾಗಿದ್ದು, ತನಿಖೆ ಪ್ರಕ್ರಿಯೆ ಮುಂದುವರಿಸಲಾಗಿದೆ. ಲೋಕಾಯುಕ್ತ ಪೊಲೀಸರು ಬುಧವಾರ ರಾಜ್ಯದ ವಿವಿಧೆಡೆ 15 ಸರ್ಕಾರಿ ನೌಕರರಿಗೆ ಸೇರಿದ 57 ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಅಕ್ರಮ ಆಸ್ತಿ ಗಳಿಕೆ ಮಾಡಿರುವ ಅಧಿಕಾರಿಗಳು ಮತ್ತು ಅವರ ಆಸ್ತಿ ಮೌಲ್ಯದ ಮಾಹಿತಿ ಇಂತಿದೆ:

1. ಎಚ್‌.ಜೆ. ರಮೇಶ್‌, ಬೆಸ್ಕಾಂ ಮುಖ್ಯ ಎಂಜಿನಿಯರ್‌:

1.4 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಒಂದು ಮನೆ, ಬಿಇಎಂಎಲ್‌ ಲೇಔಟ್‌ನಲ್ಲಿ ನಿರ್ಮಾಣ ಹಂತದ ಮನೆ, ದಾವಣಗೆರೆಯಲ್ಲಿ ಒಂದು ನಿವೇಶನ, ದೇವನಹಳ್ಳಿ ಏರೋಸ್ಪೇಸ್‌ ಸೆಕ್ಟರ್‌ನಲ್ಲಿ ಒಂದು ಪ್ಲಾಟ್‌, ದಾಬಸ್‌ಪೇಟೆಯಲ್ಲಿ 0.75 ಎಕರೆ ಜಾಗ ಇರುವುದು ಗೊತ್ತಾಗಿದೆ. ಒಟ್ಟು 5.6 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಕೊಪ್ಪಳದಲ್ಲಿ ಲೋಕಾಯುಕ್ತರ ದಾಳಿ ಪ್ರಕರಣ: ಇಂದೂ ಕೂಡ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ

2. ಟಿ.ವಿ.ನಾರಾಯಣಪ್ಪ, ಕಾರ್ಖಾನೆಗಳ ಉಪನಿರ್ದೇಶಕ, ಕಾರ್ಮಿಕ ಭವನ:

ಬೆಂಗಳೂರಿನ ಹೆಜ್ಜಾಲದ ನ್ಯಾಯಾಂಗ ಲೇಔಟ್‌ನಲ್ಲಿ ಒಂದು, ವಿಜಯನಗರದಲ್ಲಿ ಒಂದು ಮನೆ, ಕೆ.ಆರ್‌.ಪುರದಲ್ಲಿ ಎರಡು ಮನೆ, ಮುಳಬಾಗಿಲಿನಲ್ಲಿ 10 ಎಕರೆ ಜಾಗ, 22 ಲಕ್ಷ ರು. ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಒಟ್ಟು 2.5 ಕೋಟಿ ರು. ಮೌಲ್ಯದ ಆಸ್ತಿ ಸಿಕ್ಕಿದೆ.

3. ಎಸ್‌.ಡಿ.ರಂಗಸ್ವಾಮಿ, ಕಾರ್ಯದರ್ಶಿ, ಕಿಟ್ಟನಹಳ್ಳಿ ಗ್ರಾ.ಪಂ.:

ದೊಡ್ಡಬಳ್ಳಾಪುರ ತಾಲೂಕಿನ ಸೋತೆನಹಳ್ಳಿಯಲ್ಲಿ 3.24 ಎಕರೆ ಕೃಷಿ ಭೂಮಿ, ಗುಂಜೂರಿನಲ್ಲಿ 1.18 ಎಕರೆ ಕೃಷಿ ಭೂಮಿ, ಮೈಕಲಹಳ್ಳಿಯಲ್ಲಿ 2.6 ಎಕರೆ ಕೃಷಿ ಭೂಮಿ, ಒಂದು ಪೌಲ್ಟಿ್ರ ಫಾರಂ, 60*60 ಅಳತೆಯ ಜಾಗದಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ 10 ಮನೆಯಿಂದ ಬಾಡಿಗೆ, ಒಂದು ವಾಣಿಜ್ಯ ಮಳಿಗೆ, ಕಾರು, ದ್ವಿಚಕ್ರ ವಾಹನ ಇರುವುದು ಗೊತ್ತಾಗಿದೆ. ಒಟ್ಟು 2.5 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.

4. ಎನ್‌.ಜಿ.ಪ್ರಮೋದ್‌ ಕುಮಾರ್‌, ಕಾರ್ಯನಿರ್ವಾಹಕ ಎಂಜಿನಿಯರ್‌, ಬಿಬಿಎಂಪಿ, ಬೊಮ್ಮನಹಳ್ಳಿ ವಲಯ:

ಮಂಡ್ಯದ ದೇವರಹಳ್ಳಿಯಲ್ಲಿ ಅಪಾರ್ಚ್‌ಮೆಂಟ್‌, 1.20 ಎಕರೆ ಜಾಗ, ಮೈಸೂರಿನಲ್ಲಿ ನಿವೇಶನ, ವಿಜಯನಗರದಲ್ಲಿ ಎರಡು ನಿವೇಶನ, ಬೆಂಗಳೂರಿನಲ್ಲಿ ಒಂದು ನಿವೇಶನ, ಒಂದು ಫ್ಲಾಟ್‌, 857 ಗ್ರಾಂ ಚಿನ್ನ, 749 ಗ್ರಾಂ ಬೆಳ್ಳಿ, 1.40 ಲಕ್ಷ ರು. ನಗದು ಸಿಕ್ಕಿದೆ. ಒಟ್ಟು 8 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.

5. ಎನ್‌.ಮುತ್ತು, ಮುಖ್ಯ ಲೆಕ್ಕಾಧಿಕಾರಿ, ಮೂಡಾ:

ಬ್ಯಾಂಕ್‌ ಖಾತೆಯಲ್ಲಿ 36.50 ಲಕ್ಷ ರು., 435 ಗ್ರಾಂ ಚಿನ್ನ, 1.7 ಕೆಜಿ ಬೆಳ್ಳಿ, ವಿಜಯನಗರದಲ್ಲಿ ನಿರ್ಮಾಣದ ಹಂತದ ಕಟ್ಟಡ, ಬಸವನಪುರದಲ್ಲಿ ಮೂರು ಮಹಡಿಯ ಕಟ್ಟಡ ಸಿಕ್ಕಿದೆ. ಒಟ್ಟು 2.70 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಒಟ್ಟು 2.70 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.

6. ಜೆ.ಮಹೇಶ್‌, ಉಪ ಆಯುಕ್ತ, ಮೈಸೂರು ನಗರ ಪಾಲಿಕೆ:

24 ಲಕ್ಷ ರು. ಮೌಲ್ಯದ ಚಿನ್ನ, 4 ಲಕ್ಷ ರು. ಮೌಲ್ಯದ ಬೆಳ್ಳಿ, ಒಂದು 17 ಲಕ್ಷ ರು. ಮೌಲ್ಯದ ಬಿಎಂಡಬ್ಲ್ಯೂ ಕಾರ್‌, ಒಂದು 18 ಲಕ್ಷ ರು. ಮೌಲ್ಯದ ಕ್ರೆಟಾ ಕಾರ್‌, ಕುವೆಂಪುನಗರದಲ್ಲಿ ಮನೆ, ನಂಜನಗೂಡಿನಲ್ಲಿ ಫಾರಂಹೌಸ್‌, ಎಂಟು ಎಕರೆ ಕೃಷಿ ಭೂಮಿ ಇರುವುದು ಗೊತ್ತಾಗಿದೆ. ಒಟ್ಟು 2.5 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.

7. ಎ.ನಾಗೇಶ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಮೂಡಾ:

ರಾಮಕೃಷ್ಣನಗರದಲ್ಲಿ ಮನೆ, ರಾಮಯ್ಯ ರಾಯಲ್‌ ನಗರದಲ್ಲಿ ನಿವೇಶನ, ಸಿದ್ಧಾರ್ಥನಗರದಲ್ಲಿ ಒಂದು ವಾಣಿಜ್ಯ ಮಳಿಗೆ, ದೀಪಾ ಹೌಸಿಂಗ್‌ ಸೊಸೈಟಿಯಲ್ಲಿ ನಿವೇಶನ, ರತನಹಳ್ಳಿಯಲ್ಲಿ 2.13 ಎಕರೆ ಭೂಮಿ, ಒಂದು ಕೆಜಿ ಚಿನ್ನ, 900 ಗ್ರಾಂ ಬೆಳ್ಳಿ ಸಿಕ್ಕಿದೆ. ಒಟ್ಟು 2.30 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ.

8. ಎಂ.ಶಂಕರಮೂರ್ತಿ, ಹಿರಿಯ ಸಬ್‌ ರಿಜಿಸ್ಟ್ರಾರ್‌, ನಂಜನಗೂಡು:

ನಾಲ್ಕು ಕಾರುಗಳು, ನಾಲ್ಕು ದ್ವಿಚಕ್ರ ವಾಹನಗಳು, ಐದು ನಿವೇಶನ, ಅಜ್ಜಿಪುರದಲ್ಲಿ 25 ಎಕರೆ ಕೃಷಿ ಭೂಮಿ, ಮೈಸೂರು ನಗರದಲ್ಲಿ ಎರಡು ನಿವೇಶನ, ಕೊಳ್ಳೇಗಾಲದಲ್ಲಿ ಎರಡು ನಿವೇಶನ, ಅಜ್ಜಿಪುರದಲ್ಲಿ ಒಂದು ನಿವೇಶನ, ಒಂದು ಮನೆ, ಮೈಸೂರಿನಲ್ಲಿ ಒಂದು ಮನೆ ಇರುವುದು ಗೊತ್ತಾಗಿದೆ. ಒಟ್ಟು 2.63 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ.

9. ಶಂಕರ ನಾಯ್ಕ, ಕಿರಿಯ ಎಂಜಿನಿಯರ್‌, ಆರ್‌ಡಿಪಿಆರ್‌, ಶಿಕಾರಿಪುರ:

ಇನ್ನೂ ಶೋಧ ಕಾರ್ಯ ಮುಂದುವರೆದಿದೆ.

10. ಕೆ.ಪ್ರಶಾಂತ್‌, ಸೂಪರಿಂಟೆಂಡೆಂಟ್‌ ಎಂಜಿನಿಯರ್‌, ತುಂಗಾ ಮೇಲ್ದಂಡೆ ಯೋಜನೆ, ಶಿವಮೊಗ್ಗ:

26.36 ಲಕ್ಷ ರು. ನಗದು, 3.363 ಕೆಜಿ ಚಿನ್ನ, 23 ಕೆಜಿ ಬೆಳ್ಳಿ, ಶೆಟ್ಟಿಹಳ್ಳಿಯಲ್ಲಿ 5.22 ಎಕರೆ ಭೂಮಿ, ಒಂದು ಫಾರಂ ಹೌಸ್‌, ಭದ್ರಾವತಿಯಲ್ಲಿ 3.21 ಎಕರೆ ಜಾಗ, ಬ್ಯಾಂಕ್‌ ಖಾತೆಯಲ್ಲಿ 50 ಲಕ್ಷ ರು. ಇದೆ. ಒಟ್ಟು 3.20 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ.

11. ಬಿ.ಆರ್‌.ಕುಮಾರ್‌, ಕಾರ್ಮಿಕ ಅಧಿಕಾರಿ, ಮಣಿಪಾಲ:

272 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ, ಎರಡು ಕಾರ್‌ಗಳು, ಮೂರು ಲಕ್ಷ ರು. ನಗದು, ಬ್ಯಾಂಕ್‌ಗಳಲ್ಲಿ 4 ಲಕ್ಷ ರು. ನಿಶ್ಚಿತ ಠೇವಣಿ, ಉಡುಪಿಯಲ್ಲಿ ಒಂದು ಮನೆ, ಒಂದು ನಿವೇಶನ, ಮೈಸೂರಿನಲ್ಲಿ ಒಂದು ನಿವೇಶನ, ಹಾಸನದಲ್ಲಿ ಎರಡು ನಿವೇಶನ, ಅರಕಲಗೂಡಿನಲ್ಲಿ ಎರಡು ಎಕರೆ ಜಾಗ ಇರುವುದು ಗೊತ್ತಾಗಿದೆ. ಒಟ್ಟು 1.40 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ.

12. ಎ.ಎಂ.ನಿರಂಜನ, ಹಿರಿಯ ಭೂವಿಜ್ಞಾನಿ, ಬೆಂಗಳೂರು:

ಒಂದು ಕೆಜಿ ಚಿನ್ನ, 3.7 ಕೆಜಿ ಬೆಳ್ಳಿ, ಎರಡು ಕಾರ್‌ಗಳು, ಮೆಡಿಕ್ವೆಸ್ಟ್‌ ಹೆಲ್ತ್‌ಕೇರ್‌ ಮತ್ತು ಡಯಾಗ್ನೋಸ್ಟಿಕ್‌ ಪ್ರಯೋಗಾಲಯದಲ್ಲಿ ಒಂದು ಕೋಟಿ ರು. ಹೂಡಿಕೆ, ಮಂಗಳೂರಿನಲ್ಲಿ ಮೂರು ಎಕರೆ ಜಾಗ, ಕುಶಾಲನಗರದಲ್ಲಿ 50*80 ಅಳತೆಯ ನಿವೇಶನ. ಒಟ್ಟು 3.66 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ.

13. ವಾಗೀಶ್‌ ಬಸವಾನಂದ ಶೆಟ್ಟರ್‌, ಯೋಜನೆ ಎಂಜಿನಿಯರ್‌, ನಿರ್ಮಿತಿ ಕೇಂದ್ರ, ಹಾವೇರಿ ಉಪವಿಭಾಗ:

500 ಗ್ರಾಂ ಚಿನ್ನ, ಎರಡು ಕೆಜಿ ಬೆಳ್ಳಿ, 18.30 ಲಕ್ಷ ರು. ನಗದು, ಮೂರು ಕಾರ್‌ಗಳು, ಎರಡು ದ್ವಿಚಕ್ರ ವಾಹನ, ಎರಡು ಟ್ರಾಕ್ಟರ್‌, ರಾಣೆಬೆನ್ನೂರಿನಲ್ಲಿ 14 ನಿವೇಶನ, ಹಾವೇರಿಯಲ್ಲಿ ಎರಡು ನಿವೇಶನ, ರಾಣೆಬೆನ್ನೂರಿನಲ್ಲಿ 8 ಮನೆ, 65 ಎಕರೆ ಕೃಷಿ ಭೂಮಿ ಇರುವುದು ಗೊತ್ತಾಗಿದೆ. ಒಟ್ಟು 4.75 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಬೆಳ್ಳಂಬೆಳಗ್ಗೆ ಲೋಕಾಯುಕ್ತರ ಶಾಕ್: ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ

14. ಜರನಪ್ಪ ಎಂ.ಚಿಂಚಿಳಿಕರ್‌, ಕಾರ್ಯನಿರ್ವಾಹಕ ಎಂಜಿನಿಯರ್‌, ಕೆಆರ್‌ಐಡಿಎಲ್‌, ಕೊಪ್ಪಳ:

ಕಲಬುರಗಿಯಲ್ಲಿ ನಿರ್ಮಾಣ ಹಂತದ ಕಟ್ಟಡ, ಬೀದರ್‌ನಲ್ಲಿ ಒಂದು ಕಟ್ಟಡ, ಒಂದು ಫಾರಂ ಹೌಸ್‌, ಕೊಪ್ಪಳದಲ್ಲಿ ಮನೆ, 1.5 ಕೋಟಿ ರು. ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ, ಒಂದು ಲಾಕರ್‌ ಶೋಧಿಸಬೇಕಿದೆ. ಒಟ್ಟು 3.5 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ.

15. ಸಿ.ಎನ್‌.ಮೂರ್ತಿ, ಕಾರ್ಯನಿರ್ವಾಹಕ ಎಂಜಿನಿಯರ್‌, ಕೆಐಎಡಿಬಿ, ಮೈಸೂರು:

ಒಂದು ಕೆಜಿ ಚಿನ್ನ, ಮೂರು ಕೆಜಿ ಬೆಳ್ಳಿ, 7.76 ಲಕ್ಷ ರು.ನಗದು, ಎರಡು ಕಾರ್‌ಗಳು, ಒಂದು ದ್ವಿಚಕ್ರ ವಾಹನ, ತುಮಕೂರಿನಲ್ಲಿ ಐದು ನಿವೇಶನ, ಎರಡು ಮನೆ, ಹೆಬ್ಬಾಳದಲ್ಲಿ ಒಂದು ನಿವೇಶನ ಸಿಕ್ಕಿದೆ. ಒಟ್ಟು 3.5 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.

click me!