ಚರ್ಮಗಂಟಿಗೆ ಬಲಿಯಾದ ಜಾನುವಾರಿಗೆ ಪರಿಹಾರ: ಸಿಎಂ ಬೊಮ್ಮಾಯಿ ಘೋಷಣೆ

Published : Sep 30, 2022, 04:50 AM IST
ಚರ್ಮಗಂಟಿಗೆ ಬಲಿಯಾದ ಜಾನುವಾರಿಗೆ ಪರಿಹಾರ: ಸಿಎಂ ಬೊಮ್ಮಾಯಿ ಘೋಷಣೆ

ಸಾರಾಂಶ

ಕೆಲ ಸಮಯದಿಂದ ಚರ್ಮ ಗಂಟು(ಲಂಪಿ ಸ್ಕಿನ್‌) ಕಾಯಿಲೆಯಿಂದ ಸಂಭವಿಸುತ್ತಿರುವ ಜಾನುವಾರುಗಳ ಸಾಲು ಸಾಲು ಸಾವಿನಿಂದ ಕಂಗೆಟ್ಟಿರುವ ಉತ್ತರ ಕರ್ನಾಟಕದ ರೈತರ ನೆರವಿಗೆ ಇದೀಗ ಸರ್ಕಾರ ಧಾವಿಸಿದೆ. 

ಹಾವೇರಿ (ಸೆ.30): ಕೆಲ ಸಮಯದಿಂದ ಚರ್ಮ ಗಂಟು(ಲಂಪಿ ಸ್ಕಿನ್‌) ಕಾಯಿಲೆಯಿಂದ ಸಂಭವಿಸುತ್ತಿರುವ ಜಾನುವಾರುಗಳ ಸಾಲು ಸಾಲು ಸಾವಿನಿಂದ ಕಂಗೆಟ್ಟಿರುವ ಉತ್ತರ ಕರ್ನಾಟಕದ ರೈತರ ನೆರವಿಗೆ ಇದೀಗ ಸರ್ಕಾರ ಧಾವಿಸಿದೆ. ಚರ್ಮಗಂಟು ಕಾಯಿಲೆಯಿಂದ ಸಾವಿಗೀಡಾಗುವ ಹಸುವಿಗೆ 20 ಸಾವಿರ, ಎತ್ತಿಗೆ 30 ಸಾವಿರ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಬ್ಯಾಡಗಿ ತಾಲೂಕಿನ ಅರಬಗೊಂಡ ಗ್ರಾಮದಲ್ಲಿ ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಮೆಗಾ ಡೈರಿ ನಿರ್ಮಾಣಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಚರ್ಮ ಗಂಟು ಬಾಧೆಗೆ ತುತ್ತಾದ ಜಾನುವಾರುಗಳಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡಲಿದೆ. ಗಂಟು ರೋಗದಿಂದ ರಾಸುಗಳ ಜೀವಹಾನಿಯಾದಾಗ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದರು.

ಯಾರು ಭಾರತ್ ಜೋಡೋ ಮಾಡಿದ್ದಾರೆ, ತೋಡೋ ಮಾಡಿದ್ದಾರೆಂದು ಎಲ್ಲರಿಗೂ ಗೊತ್ತಿದೆ: ಸಿಎಂ ಬೊಮ್ಮಾಯಿ

ನೇರ ಪಾವತಿ: ಇದೇ ವೇಳೆ, ಸರ್ಕಾರ ಮತ್ತು ರೈತರ ನಡುವೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಸಹಾಯಧನ, ಸಬ್ಸಿಡಿ ಹಾಗೂ ವಿವಿಧ ಯೋಜನೆಯ ಅನುದಾನವನ್ನು ನೇರವಾಗಿ ರೈತರ ಖಾತೆಗೆ ಜಮಾಮಾಡುವ ಪದ್ಧತಿ ಜಾರಿಗೊಳಿಸಲಾಗುವುದು ಎಂದು ಹೇಳಿದರು. ರೈತರ ಬೆಳೆಗಳಿಗೆ ನೀರು, ವಿದ್ಯುತ್‌ ಸಮಸ್ಯೆಯ ಅರಿವಿದೆ. ಇದನ್ನು ಬಗೆಹರಿಸಲು ಸರ್ಕಾರ ಪ್ರಾಮಾಣಿಕವಾಗಿ ಯತ್ನಿಸುತ್ತದೆ. ಈ ಭಾಗದಲ್ಲಿ 5 ತಾಸು ವಿದ್ಯುತ್‌ ಪೂರೈಕೆಯಾಗುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ನಾಳೆಯಿಂದಲೇ ಏಳು ತಾಸು ವಿದ್ಯುತ್‌ ಪೂರೈಸುವಂತೆ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.

ವರ್ಷಾಂತ್ಯದೊಳಗೆ ಯುಎಚ್‌ಟಿ ಪ್ಲಾಂಟ್‌: ಹಾವೇರಿ ಬಳಿಯ ಜಂಗಮನಕೊಪ್ಪದಲ್ಲಿ ಒಂದು ಲಕ್ಷ ಲೀಟರ್‌ ಸಾಮರ್ಥ್ಯದ ಯುಎಚ್‌ಟಿ. (ಅಲ್ಟಾ್ರ ಹೈ ಟೆಂಪರೇಚರ್‌ ಪ್ರೊಸೆಸಿಂಗ್‌) ಪ್ಲಾಂಟ್‌ ಕಾಮಗಾರಿ ಆರಂಭಿಸಲಾಗಿದೆ. ಡಿಸೆಂಬರ್‌ ಒಳಗಾಗಿ ಘಟಕವನ್ನು ಉದ್ಘಾಟಿಸಿ ಕಾರ್ಯಾರಂಭಗೊಳಿಸಲಾಗುವುದು. ಪೌಚ್‌ನಲ್ಲಿ ಹಾಲು ಪ್ಯಾಕ್‌ ಮಾಡಲು ಹೆಚ್ಚುವರಿಯಾಗಿ .20 ಕೋಟಿ ಬಿಡುಗಡೆ ಮಾಡಲಾಗಿದೆ. ಒಟ್ಟು 1.50 ಲಕ್ಷ ಲೀಟರ್‌ ಹಾಲು ಪ್ಯಾಕ್‌ ಮಾಡಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

2 ಪ್ರವಾಸಿ ಸರ್ಕಿಟ್‌ 2 ತಿಂಗಳಲ್ಲಿ ಶುರು: ಸಿಎಂ ಬೊಮ್ಮಾಯಿ

70 ಕೋಟಿ ವೆಚ್ಚದ ಮೆಗಾ ಡೈರಿ: ಧಾರವಾಡ ಹಾಲು ಒಕ್ಕೂಟದಿಂದ ಪ್ರತ್ಯೇಕಗೊಂಡಿರುವ ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟಕ್ಕೆ ಮೆಗಾ ಡೈರಿ ಸ್ಥಾಪಿಸಬೇಕೆಂಬ ಬೇಡಿಕೆ ಬಹುದಿನಗಳಿಂದ ಇತ್ತು. ಇದೀಗ ಮುಖ್ಯಮಂತ್ರಿ ಬೊಮ್ಮಾಯಿ ಅವರು ಬ್ಯಾಡಗಿ ತಾಲೂಕಿನ ಅರಬಗೊಂಡ ಗ್ರಾಮದಲ್ಲಿ 70 ಕೋಟಿ ವೆಚ್ಚದ ಮೆಗಾಡೈರಿ ನಿರ್ಮಾಣ ಕಾರ್ಯಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಈ ಮೆಗಾ ಡೈರಿಯಿಂದ ಹಾವೇರಿ ಒಕ್ಕೂಟವು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಲಾಭ ನಿರೀಕ್ಷಿಸಬಹುದಾಗಿದೆ. ಮೆಗಾ ಡೈರಿ ಯೋಜನೆ ಮೂರು ಲಕ್ಷ ಲೀಟರ್‌ವರೆಗೆ ಹಾಲು ಉತ್ಪಾದಿಸಿ ಮೌಲ್ಯವರ್ಧನೆ ಮಾಡುವ ಸಾಮರ್ಥ್ಯ ಹೊಂದಿದೆ. ಇಲ್ಲೇ ಪ್ಯಾಕ್‌ಮಾಡಿ ಮಾರಾಟ ಮಾಡಿದರೆ ಹೆಚ್ಚು ಲಾಭ ಸಿಗಲಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಸಿಲಿಗೆ ಬಳಲಿರೋ ಸಿಲಿಕಾನ್‌ ಸಿಟಿ ಮಂದಿಗೆ ಗುಡ್‌ನ್ಯೂಸ್ : ಬೆಂಗಳೂರಿಗೆ ಬರಲಿದೆ ಮಳೆ
ಬಿಬಿಎಂಪಿ ಬ್ರಹ್ಮಾಂಡ ಭ್ರಷ್ಟಾಚಾರ..! ₹20,000 ಕೋಟಿ ಟಿಡಿಆರ್‌ ಕೇಸ್‌ ದಾಖಲೆ ನಾಪತ್ತೆ! ಇ.ಡಿಗೆ ದೂರು