HESCOM Golmal: 86 ಕೋಟಿ ಅಕ್ರಮ: 20 ಮಂದಿ ಸಸ್ಪೆಂಡ್‌: ಸಚಿವ ಸುನಿಲ್‌

By Kannadaprabha NewsFirst Published Jan 27, 2022, 8:39 AM IST
Highlights

*   7 ಅಧಿಕಾರಿಗಳ ವರ್ಗಾವಣೆ: ತನಿಖೆ ನಡೆಸಿ ‘ಶಿಕ್ಷೆ’ ನೀಡಿದ ಇಂಧನ ಸಚಿವ ಸುನಿಲ್‌
*  ಅವ್ಯವಹಾರ ಎಸಗಿರುವುದು ಇಲಾಖೆ ನಡೆಸಿದ ಆಂತರಿಕ ತನಿಖೆಯಿಂದ ಸ್ಪಷ್ಟ
*  ಅವ್ಯವಹಾರಕ್ಕೆ ಪ್ರೇರಣೆ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ 

ಬೆಂಗಳೂರು(ಜ.27):  ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ (HESCOM) ವ್ಯಾಪ್ತಿಯ ಅಥಣಿ ವಿಭಾಗದಲ್ಲಿನ ಕಾಮಗಾರಿಗಳಲ್ಲಿ ನಡೆದ ಅವ್ಯವಹಾರ ಸಂಬಂಧ ತನಿಖೆ ನಡೆಸಿರುವ ಇಂಧನ ಇಲಾಖೆ(Department of Energy) ಅಕ್ರಮಕ್ಕೆ ಕಾರಣರಾದ 20 ಅಧಿಕಾರಿಗಳನ್ನು ಅಮಾನತುಗೊಳಿಸಿ(Suspend) ಏಳು ಜನರಿಗೆ ವರ್ಗಾವಣೆ ಶಿಕ್ಷೆ ನೀಡಿದೆ.

ಸುಮಾರು 86 ಕೋಟಿ ರು. ಮೊತ್ತದ ಅವ್ಯವಹಾರಕ್ಕೆ(Scam) ಅಧಿಕಾರಿಗಳು ಕಾರಣರಾಗಿದ್ದು, ಈ ಸಂಬಂಧ ತನಿಖಾ ತಂಡ ನೀಡಿದ ವರದಿಯ ಅನ್ವಯ ಹೆಚ್ಚುವರಿ ಕಾರ್ಯನಿರ್ವಾಹಕ ಇಂಜಿನಿಯರ್‌ ಸೇರಿ 20 ಜನರನ್ನು ಅಮಾನತುಗೊಳಿಸುವಂತೆ ಕನ್ನಡ ಮತ್ತು ಸಂಸ್ಕೃತಿ, ಇಂಧನ ಇಲಾಖೆ ಸಚಿವ ವಿ.ಸುನಿಲ್‌ ಕುಮಾರ್‌(Sunil Kumar) ಆದೇಶ ಹೊರಡಿಸಿದ್ದಾರೆ.

Corruption in Energy Dept: ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭಾರೀ ಅಕ್ರಮ: ಸುನಿಲ್‌ ಕುಮಾರ್!

2018ರಿಂದ 2021ರ ಅವಧಿಯಲ್ಲಿ ನಡೆದ ಯುಎನ್‌ಐಪಿ, ಕಾಪೆಕ್ಸ್‌, ಗಂಗಾ ಕಲ್ಯಾಣ, ನೀರು ಸರಬರಾಜು, ಓಟಿಎಂ, ಪ್ರಧಾನಮಂತ್ರಿ ಗ್ರಾಮೀಣ ವಿದ್ಯುದೀಕರಣ ಯೋಜನೆ ಸೇರಿದಂತೆ ನಾಗರಿಕರಿಕರಿಗೆ ನೇರವಾಗಿ ಸಂಬಂಧಪಟ್ಟ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿರುವುದು ಇಲಾಖೆ ನಡೆಸಿದ ಆಂತರಿಕ ತನಿಖೆಯಿಂದ ಸ್ಪಷ್ಟವಾಗಿದೆ.

ಏನಿದು ಅವ್ಯವಹಾರ:

2018ರಿಂದ 2021ರ ಅವಧಿಗೆ ಅನ್ವಯವಾಗುವಂತೆ ಹೆಸ್ಕಾಂನ ಅಥಣಿ(Athani) ವಿಭಾಗದಲ್ಲಿ ವಿವಿಧ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಟೆಂಡರ್‌(Tender) ಕರೆಯಲಾಗಿತ್ತು. ಆದರೆ ಇದರಲ್ಲಿ ಅವ್ಯವಹಾರವಾಗಿದೆ. ಸಂಸ್ಥೆಗೆ ಆರ್ಥಿಕ ನಷ್ಟವುಂಟು ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಹಾಗೂ ಅನೇಕ ಸಂಘಟನೆಗಳಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ತಾಂತ್ರಿಕ ನಿರ್ದೇಶಕ, ಹಣಕಾಸು ಅಧಿಕಾರಿಗಳ ತಂಡ ಆಗಸ್ಟ್‌ 14ರಂದು ಸ್ಥಳ ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಅವ್ಯವಹಾರ ನಡೆದಿರುವುದು ಖಾತ್ರಿಯಾಗಿತ್ತು. ಈ ಹಗರಣಕ್ಕೆ ಕಾರಣರಾದ ಅಥಣಿ ವಿಭಾಗದ ಪ್ರಭಾರಿ ಕಾರ್ಯನಿರ್ವಾಹಕ ಎಂಜಿನಿಯರ್‌, ನಾಲ್ವರು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, 12 ಶಾಖಾಧಿಕಾರಿಗಳು, ಒಬ್ಬ ಲೆಕ್ಕಾಧಿಕಾರಿ, 1 ಸಹಾಯಕ ಲೆಕ್ಕಾಧಿಕಾರಿ ಹಾಗೂ ಒಬ್ಬ ಕೇಸ್‌ ವರ್ಕರ್‌ ಸೇರಿ 20 ಜನರನ್ನು ಅಮಾನತುಗೊಳಿಸುವಂತೆ ಸಚಿವ ಸುನಿಲ್‌ಕುಮಾರ್‌ ನೀಡಿದ ಸೂಚನೆ ಅನ್ವಯ ಹೆಸ್ಕಾಂ ಆದೇಶ ಹೊರಡಿಸಿದೆ. ಅವ್ಯವಹಾರಕ್ಕೆ ಪರೋಕ್ಷವಾಗಿ ಸಹಕರಿಸಿದ ಏಳು ಮಂದಿಯನ್ನು ವರ್ಗಾವಣೆ(Transfer) ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಶಾಖಾವಾರು ವರದಿ ನೀಡುವಂತೆ ಸೂಚನೆ ನೀಡುವ ಜತೆಗೆ ಆಂತರಿಕ ತನಿಖೆಗೆ ಸೂಚನೆ ನೀಡಲಾಗಿತ್ತು. ತನಿಖಾ ಸಂದರ್ಭದಲ್ಲಿ ಅಧಿಕಾರಿಗಳ ಕೈವಾಡದಿಂದಲೇ ಅವ್ಯವಹಾರ ಹಾಗೂ ಆರ್ಥಿಕ ನಷ್ಟ ವುಂಟಾಗಿರುವುದು ದೃಢಪಟ್ಟಿದೆ. ಒಟ್ಟಾರೆ 29.72 ಕೋಟಿ ರು.ಗಳನ್ನು ಕಾಮಗಾರಿ ನಿರ್ವಹಣೆ ಮಾಡದೆ ಹಣ ಪಾವತಿ ಮಾಡಿದ್ದು, ನಿಯಮ ಬಾಹಿರವಾಗಿ ಇಲಾಖೆಯ 57.16 ಕೋಟಿ ರು. ಹಣ ವೆಚ್ಚ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ 25,000 ಬಡಜನರ ಮನೆಗೆ ವಿದ್ಯುತ್‌ ಸಂಪರ್ಕವೇ ಇಲ್ಲ

20 ಅಧಿಕಾರಿಗಳ ಅಮಾನತು:

ಇಂಧನ ಇಲಾಖೆಯಲ್ಲಿ ಯಾವುದೇ ಕಾರಣಕ್ಕೂ ಅವ್ಯವಹಾರ ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲ. ಭ್ರಷ್ಟಾಚಾರ ಹಾಗೂ ಅವ್ಯವಹಾರಕ್ಕೆ ಪ್ರೇರಣೆ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ ಅಂತ ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ತಿಳಿಸಿದ್ದಾರೆ. 

ವಿದ್ಯುತ್‌ ದರ ಏರಿಕೆ ಅನಿವಾರ್ಯ: 

ಬೆಂಗಳೂರು: ಸದ್ಯದ ಪರಿಸ್ಥಿತಿಯಲ್ಲಿ ವಿದ್ಯುತ್‌ ದರ ಏರಿಕೆ ಅನಿವಾರ್ಯ ಎಂದು ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ಹೇಳಿದ್ದರು. ವಿಧಾನಸೌಧದಲ್ಲಿ ಜ.21 ರಂದು ಸುದ್ದಿಗೋಷ್ಠಿ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇವತ್ತಿನ ಸಂದರ್ಭದಲ್ಲಿ ವಿದ್ಯುತ್‌ ದರ(Power Tariff Hike) ಏರಿಕೆ ಅನಿವಾರ್ಯವಾಗಿದೆ. ಇಂಧನ ಇಲಾಖೆಯಿಂದ ಕೆಲವೊಂದಷ್ಟು ಹೊಸ ಯೋಜನೆ ಕೈಗೆತ್ತಿಕೊಳ್ಳುತ್ತಿದ್ದೇವೆ. ಇವಕ್ಕೆ ಸಾಕಷ್ಟು ಅನುದಾನ ಅಗತ್ಯವಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ, ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿ ಬೇರೆ ಬೇರೆ ಇಲಾಖೆಗಳಿಂದ ನಮ್ಮ ಇಲಾಖೆಗೆ ಒಟ್ಟು 12 ಸಾವಿರ ಕೋಟಿ ರು. ನಷ್ಟು ಹಣ ಬರುವುದು ಬಾಕಿ ಇದೆ. ಕರ್ನಾಟಕ ವಿದ್ಯುತ್‌ ಶಕ್ತಿ ನಿಯಂತ್ರಣ ಆಯೋಗ ಶಿಫಾರಸು ಮಾಡಿದರೆ ದರ ಏರಿಕೆ ಮಾಡುವುದು ಅನಿವಾರ್ಯ. ಅವರು ಮೊದಲು ವರದಿ ಕೊಡಲಿ. ವರದಿ ಕೊಟ್ಟ ಬಳಿಕ ಎಷ್ಟು ದರ ಏರಿಕೆ ಮಾಡಬೇಕು ಏನು ಎಂಬುದನ್ನು ನಿರ್ಧರಿಸುತ್ತೇವೆ ಎಂದು ತಿಳಿಸಿದ್ದರು.
 

click me!