
ಮಂಜುನಾಥ ಕೆ.
ಬೆಂಗಳೂರು (ಡಿ.20): ರಾಜ್ಯದಲ್ಲಿ ಅಕ್ರಮ ವಿದೇಶಿ ವಲಸಿಗರು ಎಷ್ಟಿರಬಹುದು? ಲಕ್ಷಾಂತರ ಅಥವಾ ಕನಿಷ್ಠ ಪಕ್ಷ ಸಾವಿರಾರು ಎಂದು ನೀವು ಭಾವಿಸಬಹುದು. ಆದರೆ, ನಮ್ಮ ಗೃಹ ಇಲಾಖೆ ನೀಡುವ ಅಧಿಕೃತ ಮಾಹಿತಿ ಕೇವಲ 485...! ವೋಟ್ ಬ್ಯಾಂಕ್ ಆಗಿರುವ ಬಾಂಗ್ಲಾ ದೇಶಿಯನ್ನರು, ವಿದ್ಯಾರ್ಥಿ ವೀಸಾದಡಿ ನುಸುಳಿ ಡ್ರಗ್ಸ್ ದಂಧೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಕೀನ್ಯಾ, ಉರುಗ್ವೆ, ಉಗಾಂಡದಂತಹ ಆಫ್ರಿಕನ್ನರು, ಶ್ರೀಲಂಕನ್ ತಮಿಳಿಗರು ಸೇರಿದಂತೆ ನಗರದಲ್ಲಿ ಲಕ್ಷಾಂತರ ಮಂದಿ ಅಕ್ರಮ ವಿದೇಶಿ ವಲಸಿಗರು ನೆಲೆಸಿರುವುದು ಕಟು ಸತ್ಯ.
ಆದರೆ, ರಾಜ್ಯ ಗೃಹ ಇಲಾಖೆಯು ರಾಜ್ಯದಲ್ಲಿ ಈವರೆಗೂ ಒಟ್ಟು 485 ಮಂದಿ ಅಕ್ರಮ ವಿದೇಶಿ ವಲಸಿಗರನ್ನು ಪತ್ತೆ ಹಚ್ಚಲಾಗಿದ್ದು, 308 ಅಕ್ರಮ ವಿದೇಶಿ ವಲಸಿಗರನ್ನು ಗಡಿಪಾರು ಮಾಡಲಾಗಿದೆ. 177 ಮಂದಿ ಅಕ್ರಮ ವಿದೇಶಿಗರು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಕೆಲವರನ್ನು ವಿದೇಶಿಯರ ನಿರ್ಬಂಧ ಕೇಂದ್ರದಲ್ಲಿ ಇರಿಸಲಾಗಿದೆ ಎಂಬ ಅಧಿಕೃತ ಅಂಕಿ-ಅಂಶ ನೀಡುತ್ತಿದೆ. ಈ ಪೈಕಿ 177 ಅಕ್ರಮ ವಿದೇಶಿಯರು ನಕಲಿ ಆಧಾರ್ ಕಾಡ್೯ ಸೇರಿದಂತೆ ಇನ್ನಿತರ ನಕಲಿ ದಾಖಲೆ ಸೃಷ್ಟಿಸಿಕೊಂಡು ವಾಸವಾಗಿದ್ದಾರೆ. ಇವರಿಗೆ ನಕಲಿ ಆಧಾರ್ ಮಾಡಿಕೊಟ್ಟ ಐದು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಅಕ್ರಮ ವಲಸಿಗರ ವಿರುದ್ಧ ಒಟ್ಟು 51 ಪ್ರಕರಣಗಳು ದಾಖಲಾಗಿವೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪತ್ತೆಯಾಗಿರುವ 485 ಮಂದಿ ಅಕ್ರಮ ವಿದೇಶಿ ವಲಸಿಗರ ಪೈಕಿ 344 ಮಂದಿ ಬೆಂಗಳೂರಿನಲ್ಲೇ ಪತ್ತೆಯಾಗಿದ್ದಾರೆ. ಹೆಣ್ಣೂರು, ನಾಗವಾರ, ವೈಟ್ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮತ್ತು ನಗರದ ಹೊರವಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ನೆಲೆಸಿದ್ದಾರೆ. ಇವರು ಮಾದಕವಸ್ತು ಮಾರಾಟ, ವೇಶ್ಯಾವಾಟಿಕೆ ಮತ್ತು ಸೈಬರ್ ಕ್ರೈಂ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನುತ್ತವೆ ಗೃಹ ಇಲಾಖೆ ಮೂಲಗಳು. ಆದರೆ, ರಾಜ್ಯದಲ್ಲಿ ಅಕ್ರಮ ವಲಸಿಗರ ಆಟಾಟೋಪದ ಬಗ್ಗೆ ಮಾಹಿತಿ ಹೊಂದಿರುವ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರ ರಾಜ್ಯದಲ್ಲಿ ಸುಮಾರು 15 ರಿಂದ 20 ಲಕ್ಷದಷ್ಟು ಅಕ್ರಮ ವಿದೇಶಿಗರು ಇರುವ ಅಂದಾಜಿದೆ.
ಅಕ್ರಮ ವಿದೇಶಿ ವಲಸಿಗರು ಕಾನೂನು ಬಾಹಿರವಾಗಿ ದೇಶದ ಗಡಿಗಳನ್ನು ದಾಟಿ ಬಂದು ನಮ್ಮ ದೇಶದಲ್ಲಿ ಅಕ್ರಮವಾಗಿ ನೆಲೆಸುತ್ತಾರೆ. ನಕಲಿ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ನಕಲಿ ಗುರುತಿನ ಚೀಟಿಗಳನ್ನು ಪಡೆದು ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇವರು ಹೆಚ್ಚಾಗಿ ಮಾದಕವಸ್ತು ಮಾರಾಟದಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ.
ಮತ್ತೊಂದೆಡೆ ವಿದೇಶಿಗರು ವ್ಯವಹಾರ, ಶಿಕ್ಷಣ, ವೈದ್ಯಕೀಯ ಪ್ರವಾಸ ಹೀಗೆ ವಿವಿಧ ಮಾದರಿಯ ವೀಸಾಗಳನ್ನು ಪಡೆದು ನೈಜಿರಿಯಾ, ಕಾಂಗೋ, ಉಗಾಂಡ ಮತ್ತಿತರ ದೇಶಗಳ ಪ್ರಜೆಗಳು ತಮ್ಮ ವೀಸಾ ಅವಧಿ ಮುಗಿದಿದ್ದರೂ ರಾಜ್ಯದಲ್ಲಿ ಅಕ್ರಮವಾಗಿ ಲಕ್ಷಾಂತರ ಮಂದಿ ನೆಲೆಸಿದ್ದಾರೆ.
ರಾಜ್ಯದಲ್ಲಿ ವೀಸಾ ಅವಧಿ ಮೀರಿ ವಾಸವಾಗಿರುವ ಹಾಗೂ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು ಪತ್ತೆಯಾದಲ್ಲಿ ಅಂತಹ ಆರೋಪಿಗಳನ್ನು ಅವರ ದೇಶದ ವಿದೇಶಿ ಸಚಿವಾಲಯದ ಮೂಲಕ ಆಯಾ ದೇಶಗಳಿಗೆ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ನೀಡಲಾಗುತ್ತದೆ. ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೂ ಸಂಬಂಧಪಟ್ಟ ಇಲಾಖೆಯಿಂದ ನಿರ್ಗಮನ ಪರವಾನಗಿಯನ್ನು (ಎಕ್ಸಿಟ್ ಪರ್ಮಿಟ್) ಪಡೆಯುವವರೆಗೆ ವಿದೇಶಿಯರ ನಿರ್ಬಂಧ ಕೇಂದ್ರದಲ್ಲಿ ಇರಿಸಲಾಗುತ್ತದೆ. ಇದಕ್ಕಾಗಿ ನೆಲಮಂಗಲ ಸಮೀಪದ ಸೊಂಡೇಕೊಪ್ಪದಲ್ಲಿ ಇಡೀ ರಾಜ್ಯಕ್ಕೆ ಕೇವಲ ಒಂದೇ ಒಂದು ವಿದೇಶಿಯರ ನಿರ್ಬಂಧ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿನ ಸಾಮರ್ಥ್ಯ 40 ಮಂದಿ ಮಾತ್ರ ಇರಿಸಬಹುದಾಗಿದೆ.
ರಾಜ್ಯದಲ್ಲಿನ ಅಕ್ರಮ ವಿದೇಶಿ ವಲಸಿಗರ ಜಿಲ್ಲಾವಾರು ಮಾಹಿತಿ:
ಘಟಕ ಅಕ್ರಮ ವಿದೇಶಿ ವಲಸಿಗರ ಸಂಖ್ಯೆ
ಒಟ್ಟು 485
ಅಕ್ರಮ ವಲಸಿಗರ ವಿರುದ್ಧ 37 ಅಪರಾಧ ಪ್ರಕರಣ ದಾಖಲಾಗಿರುವ ಬಗ್ಗೆ ಜಿಲ್ಲಾವಾರು ಮಾಹಿತಿ:
ಘಟಕ ಅಪರಾಧ ಕೃತ್ಯಗಳಲ್ಲಿ ಭಾಗಿ ದಾಖಲಾದ ಪ್ರಕರಣ ಸಂಖ್ಯೆ
ಒಟ್ಟು 37 157
ರಾಜಧಾನಿ ಬೆಂಗಳೂರಿಗೆ ವಿದೇಶಿಗರು ವ್ಯವಹಾರ, ಶಿಕ್ಷಣ, ವೈದ್ಯಕೀಯ ಪ್ರವಾಸ ಹೀಗೆ ವಿವಿಧ ಮಾದರಿಯ ವೀಸಾಗಳನ್ನು ಪಡೆದು ಬರುತ್ತಾರೆ. ವೀಸಾ ಅವಧಿ ಮುಗಿದರೂ ಅವರ ದೇಶಕ್ಕೆ ಹಿಂತಿರುಗದೆ ಇಲ್ಲಿಯೇ ಅಕ್ರಮವಾಗಿ ನೆಲೆಸುತ್ತಾರೆ. ಅಕ್ರಮ ವಿದೇಶಿ ವಲಸಿಗರ ಪೈಕಿ ಇದುವರೆಗೂ ಬೆಂಗಳೂರಿನಲ್ಲಿಯೇ 400 ಮಂದಿಯನ್ನು ಪತ್ತೆ ಹಚ್ಚಿ ಗಡಿಪಾರು(ಡಿ-ಪೋರ್ಟ್) ಮಾಡಲಾಗಿದೆ.
-ಸೀಮಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಆಯುಕ್ತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ